ಖಾಸಗೀಕರಣಗೊಳ್ಳುತ್ತವೆಯೇ ಸಾರ್ವಜನಿಕ ವಲಯದ ಈ ಪ್ರಮುಖ ಬ್ಯಾಂಕುಗಳು?
ಬೆಂಗಳೂರು; ಕೇಂದ್ರ ಸರ್ಕಾರ ದೇಶದ ಬ್ಯಾಂಕಿಂಗ್ ವ್ಯಸಸ್ಥೆ ಸುಧಾರಣೆಗಾಗಿ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಾ ಬರುತ್ತಿದೆ. ಇದರಲ್ಲಿ ಕೆಲ ಕ್ರಮಗಳು ಯಶಸ್ವಿಯಾದರೂ ಕೆಲ ಕ್ರಮಗಳಿಂದ ಕೇಂದ್ರ ಸರ್ಕಾರ ಕೈ ಸುಟ್ಟುಕೊಂಡಿದೆ.
ಕ್ರಾಂತಿಕಾರಿ ಎನ್ನುವಂತೆ ಎನ್ಡಿಎ ಸರ್ಕಾರ ಸಾರ್ವಜನಿಕ ವಲಯದ ಅನೇಕ ಬ್ಯಾಂಕ್ಗಳನ್ನು ಒಂದಕ್ಕೊಂದು ವಿಲೀನ ಮಾಡಿತ್ತು. ಇದೀಗ ಕೆಲ ಬ್ಯಾಂಕ್ಗಳ ಆರ್ಥಿಕ ದಿವಾಳಿತನ ತಪ್ಪಿಸಲು ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ಖಾಸಗೀಕರಣ ಮಾಡಲು ಹೊರಟಿದೆ. ಹಣಕಾಸು ತಜ್ಞರು, ಕೆಲ ಸಾರ್ವಜನಿಕ ಬ್ಯಾಂಕುಗಳು ಭವಿಷ್ಯದಲ್ಲಿ ಆರ್ಥಿಕ ದಿವಾಳಿ ಆಗಬಾರದು ಎಂದರೇ, ಅವುಗಳನ್ನು ಖಾಸಗೀಕರಣ ಮಾಡುವುದೇ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ ಎನ್ನಲಾಗಿದೆ.
ಎನ್ಡಿಎ ಸರ್ಕಾರದ ಖಾಸಗೀಕರಣ ನೀತಿ ಕುರಿತು 44 ಪರ್ಸೆಂಟ್ ಬೆಂಬಲ, 39 ಪರ್ಸೆಂಟ್ ಜನರ ವಿರೋಧ
ಆದರೆ, ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಅನೇಕ ಕಡೆಗಳಿಂದ ವಿರೋಧವೂ ವ್ಯಕ್ತವಾಗಿದೆ. ಹೀಗಾಗಿ ಸರ್ಕಾರದ ಮಟ್ಟದಲ್ಲಿರುವ ಈ ಪ್ರಸ್ತಾವನೆ, ಇನ್ನೂ ಅಂತಿಮ ರೂಪ ಪಡೆದುಕೊಂಡಿದಲ್ಲ.
ಯಾವ ಯಾವ ಬ್ಯಾಂಕುಗಳ ಖಾಸಗೀಕರಣ?
ಹಣಕಾಸು ಸಚಿವಾಲಯವು ಕೆಲ ಸಾರ್ವಜನಿಕ ಬ್ಯಾಂಕ್ಗಳನ್ನು ಖಾಸಗೀಕರಣಗೊಳಿಸಲು ಮಾತುಕತೆ ಆರಂಭಿಸಿದೆ. ಬ್ಯಾಂಕ್ ಆಫ್ ಮಹಾರಾಷ್ಟ್ರ, ಪಂಜಾಬ್ & ಸಿಂಧ್ ಬ್ಯಾಂಕ್, ಇಂಡಿಯನ್ ಓವರ್ಸೀಸ್ ಬ್ಯಾಂಕ್ಗಳನ್ನು ಖಾಸಗೀಕರಣ ಮಾಡಲು ಕೇಂದ್ರ ಹಣಕಾಸು ಸಚಿವಾಲಯ ಪ್ರಯತ್ನಕ್ಕೆ ಕೈ ಹಾಕಿದೆ. ನೀತಿ ಆಯೋಗದ ಸಲಹೆಗಳ ಅನುಸಾರ ಹಣಕಾಸು ಸಚಿವಾಲಯ ಈ ಮಹತ್ವದ ಕ್ರಮಕ್ಕೆ ಮುಂದಾಗಿದೆ.
ಬ್ಯಾಂಕ್ ದಿವಾಳಿಗೇಳುವುದನ್ನು ತಪ್ಪಿಸಲು
ಹಲವು ಬಾರೀ ಸಾರ್ವಜನಿಕ ವಲಯದ ಬ್ಯಾಂಕುಗಳು ವಸೂಲಾಗದ ಸಾಲಗಳಿಂದ (ಕೆಟ್ಟ ಸಾಲ) ದಿವಾಳಿ ಅಂಚಿಗೆ ಬಂದು ನಿಲ್ಲುತ್ತವೆ. ಈ ಸಂದರ್ಭದಲ್ಲಿ ಆರ್ಬಿಐ ಹಾಗೂ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ, ಸಾರ್ವಜನಿಕರ ತೆರಿಗೆ ಹಣದ ಸಹಾಯದಿಂದ ಬ್ಯಾಂಕುಗಳನ್ನು ಸರಿ ದಾರಿಗೆ ತರಲು ಯತ್ನಿಸುತ್ತವೆ. ಆದರೆ, ಈ ಕ್ರಮ ಸರಿಯಾದ್ದು ಅಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿರುವುದರಿಂದ ಕೆಲ ಬ್ಯಾಂಕುಗಳನ್ನು ಖಾಸಗೀಕರಣ ಮಾಡುವ ಉಪಾಯ ಹಣಕಾಸು ಸಚಿವಾಲಯಕ್ಕೆ ಹೊಳೆದಿದೆ.
ಖಾಸಗೀಕರಣಕ್ಕೆ ವಿರೋಧ
ಆದರೆ, ಸಾರ್ವಜನಿಕ ವಲಯದ ಬ್ಯಾಂಕಿಂಗ್ ಖಾಸಗೀಕರಣಕ್ಕೆ ವಿರೋಧವೂ ವ್ಯಕ್ತವಾಗಿದೆ. ಸಾರ್ವಜನಿಕ ಬ್ಯಾಂಕ್ಗಳನ್ನು ಖಾಸಗೀಕರಣಗೊಳಿಸುವುದು ಸೂಕ್ತವಲ್ಲ. ಸಾರ್ವಜನಿಕ ಬ್ಯಾಂಕ್ ಗಳು ಕೃಷಿ, ಎಂಎಸ್ಎಂಇ ಇತ್ಯಾದಿ ವಲಯಗಳಿಗೆ ಆದ್ಯತಾ ಸಾಲವನ್ನು ರಿಯಾಯಿತಿ ಬಡ್ಡಿ ದರದಲ್ಲಿ ನೀಡುತ್ತವೆ. ಜನ ಸಾಮಾನ್ಯರ ಠೇವಣಿಗಳಿಗೆ ಭದ್ರತೆಯೂ ಇಲ್ಲಿ ಹೆಚ್ಚು. ಸಾರ್ವಜನಿಕ ಬ್ಯಾಂಕ್ಗಳಲ್ಲಿ ವಸೂಲಾಗದ ಸಾಲ ಹೆಚ್ಚಲು ಕಾರಣ ರಾಜಕೀಯ ಹಸ್ತಕ್ಷೇಪ ಎನ್ನಲಾಗುತ್ತಿದೆ.
ಖಾಸಗಿ ಬ್ಯಾಂಕುಗಳಿಗಿಂತ ಸಾರ್ವಜನಿಕ ಬ್ಯಾಂಕುಗಳೇ ಹೆಚ್ಚು ಪರಿಣಾಮಕಾರಿ
ಈಗಾಗಲೇ ಮಾಡಿರುವ ಬ್ಯಾಂಕ್ಗಳ ವಿಲೀನದಿಂದ ನಿರೀಕ್ಷಿತ ಫಲಿತಾಂಶ ವ್ಯಕ್ತವಾಗಿಲ್ಲ. ಖಾಸಗೀಕರಣದಿಂದ ಠೇವಣಿದಾರರ ಸುರಕ್ಷತೆಗೆ ಧಕ್ಕೆಯಾಗುವ ಸಾಧ್ಯತೆಗಳೂ ಇಲ್ಲದಿಲ್ಲ. ಜನಸಾಮಾನ್ಯರಿಗಾಗಿ ಕೇಂದ್ರ ಪುರಸ್ಕೃತ ಯೋಜನೆಗಳನ್ನು ಖಾಸಗಿ ಬ್ಯಾಂಕುಗಳಿಗಿಂತ ಸಾರ್ವಜನಿಕ ಬ್ಯಾಂಕುಗಳೇ ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುತ್ತವೆ. ಹೀಗಾಗಿ ಖಾಸಗೀಕರಣ ಸಲ್ಲದು ಎಂದು ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.