ಬೆಂಗಳೂರು, ಜುಲೈ 21: ದೇಶದಲ್ಲಿ ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಜನರ ಆದಾಯ ಗಳಿಕೆ ಹಾಗೂ ಉಳಿತಾಯದಲ್ಲಿ ಸಾಕಷ್ಟು ಕುಸಿತ ಕಂಡಿರುವುದಾಗಿ ವರದಿಯಾಗಿದೆ. ಸಂಶೋಧನಾ ಸಂಸ್ಥೆಯಾದ ಲೋಕಲ್ ಸರ್ಕಲ್ಸ್ ಏಜೆನ್ಸಿ ನಡೆಸಿರುವ ಸಮೀಕ್ಷೆ ಪ್ರಕಾರ, ದೇಶದಲ್ಲಿ ಶೇ.48ರಷ್ಟು ಜನರ ಆದಾಯದ ಗಳಿಕೆ ಹಾಗೂ ಉಳಿತಾಯ ಪ್ರಮಾಣದಲ್ಲಿ ಇಳಿಕೆ ಕಂಡುಬಂದಿದೆ.
ಏಜೆನ್ಸಿಯು ಭಾರತದ ದೇಶದ 327 ಜಿಲ್ಲೆಗಳಿಂದ ಸುಮಾರು 21 ಸಾವಿರ ಮಂದಿಯನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಈ ಪೈಕಿ ಶೇ.67ರಷ್ಟು ಮಂದಿ ಪುರುಷರು ಹಾಗೂ ಶೇ.33ರಷ್ಟು ಮಹಿಳೆಯರಾಗಿದ್ದಾರೆ. ಅದರಲ್ಲಿ ಒಟ್ಟು ಸಮೀಕ್ಷೆಯ ಶೇ.44ರಷ್ಟು ಸಮೀಕ್ಷೆಗೆ ಅಭಿಪ್ರಾಯ ಕೊಟ್ಟವರು ಮೊದಲ ಹಂತದ ನಗರದ ಜನರಾಗಿದ್ದಾರೆ. ಅದೇರೀತಿ ಶೇ.32ರಷ್ಟು ಮಂದಿ 2ನೇ ಹಂತದ ಮಂದಿಯಾಗಿದ್ದು ಹಾಗೂ ಶೇ.24ರಷ್ಟು ಮಂದಿ ಮೂರನೇ ಹಾಗೂ 4ನೇ ಹಂತದ ಗ್ರಾಮೀಣ ಭಾಗದ ಜನರಾಗಿದ್ದಾರೆ.

ಈ ಸಮೀಕ್ಷೆಯಲ್ಲಿ ಕಂಡುಬಂದಿರುವ ಅಂಶಗಳ ಪ್ರಕಾರ, ದೇಶದಲ್ಲಿ ಹೆಚ್ಚಿನ ಜನರು ಕೂಡ ಆರ್ಥಿಕ ಹಿಂಜರಿತದ ಪರಿಣಾಮ ತಮ್ಮ ಉಳಿತಾಯದ ಪ್ರಮಾಣವನ್ನು ಗಮನಾರ್ಹವಾಗಿ ಕಡಿತಗೊಳಿಸಿದ್ದಾರೆ. 2024ರ ಜೂನ್ನಲ್ಲಿ ದೇಶದ ಚಿಲ್ಲರೆ ಹಣದುಬ್ಬರವು ಶೇ.5.08ಕ್ಕೆ ಏರಿಕೆಯಾಗಿದ್ದು, ಕಳೆದ ಮೂರು ತಿಂಗಳಿಗೆ ಹೋಲಿಸಿದರೆ ಅದು ಜಾಸ್ತಿಯಾಗಿದೆ.
ಈ ಸಮೀಕ್ಷೆಯಲ್ಲಿ ಹೆಚ್ಚಿನ ಜನರು ಕೂಡ ದೈನಂದಿನ ಅಗತ್ಯಗಳಾದ ಆಹಾರ, ಬಾಡಿಗೆ, ಶಿಕ್ಷಣ, ಸಾರಿಗೆ ಮುಂತಾದವುಗಳಲ್ಲಿ ಉಂಟಾಗಿರುವ ಬೆಲೆ ಏರಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಜನರ ಉಳಿತಾಯಕ್ಕೆ ಕತ್ತರಿ ಹಾಕುವ ಮೂಲಕ ತಮ್ಮ ಅಗತ್ಯಗಳನ್ನು ಪೂರೈಸುವುದಕ್ಕಾಗಿ ಸಾಲ ಪಡೆಯುವ ಅಥವಾ ಆಸ್ತಿಗಳನ್ನು ಮಾರಾಟ ಮಾಡುವ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದೆ ಎನ್ನುವ ಅಭಿಪ್ರಾಯ ನೀಡಿದ್ದಾರೆ. ಈ ಸಮೀಕ್ಷೆಯಲ್ಲಿ ಶೇ.15ರಷ್ಟು ಮಂದಿಯು ತಮ್ಮ ಉಳಿತಾಯದಲ್ಲಿ ಶೇ.25ರಷ್ಟು ಕಡಿತವಾಗಿರುವುದಾಗಿ ಹೇಳಿದ್ದು, ಮುಂದಿನ ಹಣಕಾಸು ವರ್ಷದಲ್ಲಿಯೂ ಆದಾಯ ಇಳಿಕೆಯಾಗುವುದಾಗಿ ಶೇ.7ರಷ್ಟು ಮಂದಿ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.
ಈ ಎಲ್ಲ ಅಂಶಗಳನ್ನು ಪರಿಗಣಿಸಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿರುವ ಮೋದಿಯ 3.0 ಸರ್ಕಾರದಲ್ಲಿ ಜನರು ಕೂಡ ತಮ್ಮ ಆದಾಯ ಹೆಚ್ಚಿಸಿಕೊಳ್ಳುವುದಕ್ಕೆ ಅನುಕೂಲವಾದ ಕ್ರಮ ಅಥವಾ ಭರವಸೆಗಳನ್ನು ನಿರೀಕ್ಷೆ ಮಾಡುತ್ತಿದ್ದಾರೆ. ತೆರಿಗೆ ಪಾವತಿಯಲ್ಲಿ ಹೆಚ್ಚಿನ ರಿಯಾಯಿತಿಯನ್ನು ಘೋಷಿಸುವುದನ್ನು ಜನರು ಎದುರು ನೋಡುತ್ತಿದ್ದಾರೆ.
ಬ್ಲೂಂವರ್ಗ್ ವರದಿಗಳ ಪ್ರಕಾರ, ವಾರ್ಷಿಕ 5ಲಕ್ಷ ರೂ.ನಿಂದ 15 ಲಕ್ಷ ರೂ. ಆದಾಯ ಹೊಂದಿರುವ ಜನರು ತಮ್ಮ ತೆರಿಗೆ ಪಾವತಿಯಲ್ಲಿ ತೆರಿಗೆ ಕ್ರಮಗಳನ್ನು ನಿರೀಕ್ಷೆ ಮಾಡುತ್ತಿದ್ದಾರೆ. 15 ಲಕ್ಷ ರೂ.ಗಿಂತ ಹೆಚ್ಚಿನ ಆದಾಯ ಮಿತಿಯಲ್ಲಿರುವ ಉದ್ಯಮಿಗಳು ಹಾಗೂ ವೇತನದಾರರಿಗೂ ತೆರಿಗೆ ವಿನಾಯಿತಿ ನೀರಿಕ್ಷೆಯಲ್ಲಿದ್ದಾರೆ ಎಂದು ವರದಿಯಾಗಿದೆ.


Click it and Unblock the Notifications