ಪ್ರಧಾನಿ ಮೋದಿ: 44 ಕೋಟಿ ಜನರಿಗೆ ಮನೆ, ಎಲ್ಪಿಜಿ, ನೀರು, ವಿದ್ಯುತ್ ಸಂಪರ್ಕ
ಬಡವರಿಗೆ, ಕೆಳ ಮಧ್ಯಮ ವರ್ಗದವರಿಗೆ, ಹಿಂದುಳಿದವರಿಗೆ, ಪ. ಪಂಗಡ, ಪ. ಜಾತಿ ಹೀಗೆ ಎಲ್ಲ ವರ್ಗದ 44 ಕೋಟಿ ಜನರಿಗೆ ಮನೆ ಸೌಲಭ್ಯ, ವಿದ್ಯುತ್, ನೀರು, ಎಲ್ಪಿಜಿ ಸಂಪರ್ಕ ಸೇರಿದಂತೆ ಹಲವಾರು ಯೋಜನೆಗಳ ಸೌಲಭ್ಯ ನೀಡಲು ಮುಂದಾಗಿದೆ.
ದೇಶದಾದ್ಯಂತ ಸಾಮಾಜಿಕ ಕ್ಷೇಮಾಭಿವೃದ್ಧಿ ಯೋಜನೆಗಳನ್ನು ಜಾರಿ ತರುವ ಮುಖಾಂತರ ಪ್ರಧಾನಿ ನರೇಂದ್ರ ಮೋದಿ ಮನೆಮಾತಾಗಿದ್ದಾರೆ. ಕೇಂದ್ರ ಸರ್ಕಾರ ಹಲವು ಜನ ಕಲ್ಯಾಣ ಯೋಜನೆಗಳನ್ನು ಘೋಷಿಸಿ ಆ ಮೂಲಕ ಕಾರ್ಯರೂಪದಲ್ಲಿ ತೊಡಗಿಸಿಕೊಂಡಿದೆ.
ಬಡವರಿಗೆ, ಕೆಳ ಮಧ್ಯಮ ವರ್ಗದವರಿಗೆ, ಹಿಂದುಳಿದವರಿಗೆ, ಪ. ಪಂಗಡ, ಪ. ಜಾತಿ ಹೀಗೆ ಎಲ್ಲ ವರ್ಗದ 44 ಕೋಟಿ ಜನರಿಗೆ ಮನೆ ಸೌಲಭ್ಯ, ವಿದ್ಯುತ್, ನೀರು, ಎಲ್ಪಿಜಿ ಸಂಪರ್ಕ ಸೇರಿದಂತೆ ಹಲವಾರು ಯೋಜನೆಗಳ ಸೌಲಭ್ಯ ನೀಡಲು ಮುಂದಾಗಿದೆ.
ಅಂತಹ ಪ್ರಮುಖ ಯೋಜನೆಗಳ ಸಂಕ್ಷಿಪ್ತ ನೋಟ ಇಲ್ಲಿದೆ.
1. ಪ್ರಧಾನಮಂತ್ರಿ ಅವಾಸ್ ಯೋಜನೆ
ಪ್ರಧಾನಮಂತ್ರಿ ಅವಾಸ್ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ನೇರವಾಗಿ ರೂ. 1.30 ಲಕ್ಷದಿಂದ 1.50 ಲಕ್ಷಗಳವರೆಗೆ ಗುಡ್ಡಗಾಡು ಮತ್ತು ಮೈದಾನದಂತಹ ಪ್ರದೇಶಗಳಲ್ಲಿ ವಾಸವಾಗಿರುವ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಿದೆ ಎಂದು ಗ್ರಾಮೀಣ ಅಭಿವೃದ್ಧಿ ಕಾರ್ಯದರ್ಶಿ ಅಮರಜೀತ್ ಸಿನ್ಹಾ ಹೇಳಿದ್ದಾರೆ.
2. ಶೌಚಾಲಯ ನಿರ್ಮಾಣಕ್ಕಾಗಿ 12 ಸಾವಿರ
ಅರ್ಹ ಫಲಾನುಭವಿಗಳಿಗೆ ಶೌಚಾಲಯ ನಿರ್ಮಾಣಕ್ಕಾಗಿ ಹೆಚ್ಚುವರಿ ರೂ. 12,000 ನೀಡಲಾಗುತ್ತದೆ. ಶೌಚಾಲಯ ಸೌಲಭ್ಯವನ್ನು ಈಗಾಗಲೇ ಸಂಬಂಧಿಸಿದ ಪಂಚಾಯಿತಿಗಳ ಮೂಲಕ ಒದಗಿಸಲಾಗುತ್ತಿದೆ.
3. ನರೇಗಾ ಯೋಜನೆಯಲ್ಲಿ ಉದ್ಯೋಗ
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ 90 ದಿನಗಳ ಉದ್ಯೋಗವನ್ನು ಕೇಂದ್ರ ಸರ್ಕಾರ ನೀಡುತ್ತಿದೆ.
ಸ್ವಂತ ಮನೆ ನಿರ್ಮಾಣ ಮಾಡಲು ಬಯಸುವ ಫಲಾನುಭವಿಗಳಿಗೆ ಮನರೇಗಾ ಅಡಿಯಲ್ಲಿ ಉದ್ಯೋಗ ಮಾಡಿ ರೂ. 18,000 ಗಳಿಸಿ ಮನೆ ಕಟ್ಟುವ ಕನಸನ್ನು ಸಾಕಾರಗೊಳಿಸಬಹುದು.
4. 44 ಕೋಟಿ ಜನರಿಗೆ ಮನೆ
ಈ ಮೊದಲು 33 ಕೋಟಿ ಫಲಾನುಭವಿಗಳಿಗೆ ಮನೆ ನೀಡುವುದಾಗಿ ಹೇಳಿದ್ದ ಸರ್ಕಾರ ಮುಂದಿನ ಹಣಕಾಸು ವರ್ಷದಲ್ಲಿ 44 ಕೋಟಿ ಮನೆಗಳನ್ನು ನೀಡುವುದಾಗಿ ತಿಳಿಸಿದೆ. ಪ್ರತಿಯೊಬ್ಬರಿಗೂ ಸ್ವಂತ ಮನೆ ಸಿಗುವಂತಾಗಬೇಕು ಎನ್ನುವುದು ಪ್ರಧಾನಿ ಮೋದಿಯವರ ಉದ್ದೇಶವಾಗಿದೆ.
5. SC ಮತ್ತು ST 60% ಫಲಾನುಭವಿಗಳು
ಮನೆ ನಿರ್ಮಾಣ ಫಲಾನುಭವಿಗಳ ಯಾದಿಯಲ್ಲಿ ಶೇ. 60ರಷ್ಟು ಪರಿಶಿಷ್ಟ ಜಾತಿ ಮತ್ತು ಪ. ಪಂಗಡ ಸಮುದಾಯಗಳ ಜನರಿದ್ದಾರೆ. SC ಮತ್ತು ST ಫಲಾನುಭವಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಈಗಾಗಲೇ ಮುಗಿದಿದೆ.
5. ನೇರ ಲಾಭ ವರ್ಗಾವಣೆ(direct benefit transfer)
ಪ್ರಧಾನಮಂತ್ರಿ ಅವಾಸ್ ಯೋಜನೆ ಅಡಿಯಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಪೂರ್ಣಗೊಂಡಿದೆ. ನೇರ ಲಾಭ ವರ್ಗಾವಣೆ(direct benefit transfer) ಮಾದರಿಯಲ್ಲಿ ಸೌಲಭ್ಯವನ್ನು ಕಂತುಗಳಲ್ಲಿ ಮೂರು ವರ್ಷಗಳ ಅವಧಿಯಲ್ಲಿ ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ ಎಂದು ಸಿನ್ಹಾ ಹೇಳಿದ್ದಾರೆ.
6. ನೀರು, ಎಲ್ಪಿಜಿ, ವಿದ್ಯುತ್ ಸಂಪರ್ಕ
ಇನ್ನೊಂದು ಮುಖ್ಯವಾದ ಯೋಜನೆಗಳಲ್ಲಿ ದೇಶದ ಬಡವರಿಗೆ, ನಿರ್ಗತಿಕರಿಗೆ, ಕೆಳ ಮಧ್ಯಮ ವರ್ಗದವರಿಗೆ ನೀರು ಸೌಲಭ್ಯ, ಎಲ್ಪಿಜಿ, ವಿದ್ಯುತ್ ಸಂಪರ್ಕ ನೀಡುವುದಾಗಿದೆ. ವಾರ್ಷಿಕ ಆದಾಯ ಹತ್ತು ಲಕ್ಷಕ್ಕಿಂತ ಹೆಚ್ಚಿದ್ದವರ ಅಡುಗೆ ಅನಿಲ ಸಬ್ಸಿಡಿಯನ್ನು(ಎಲ್ಪಿಜಿ) ಕಡ್ಡಾಯವಾಗಿ ನಿಲ್ಲಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 10 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿದವರ ಎಲ್ಪಿಜಿ ಸಬ್ಸಿಡಿ ನಿಲ್ಲಿಸುವ ಕೇಂದ್ರದ ನಿರ್ಧಾರವನ್ನು ಜಾರಿಗೊಳಿಸುವ ಉದ್ದೇಶದಿಂದ ತೆರಿಗೆ ಇಲಾಖೆ ಈ ನಿರ್ಧಾರಕ್ಕೆ ಮುಂದಾಗಿದೆ. ಈಗಾಗಲೇ ಅಧಿಕ ಆದಾಯ ಹೊಂದಿದ ಹಲವರು ಸರ್ಕಾರದ ಕೆಲ ಸಬ್ಸಿಡಿಗಳನ್ನು ಪಡೆಯುತ್ತಿದ್ದಾರೆ. ಈ ಕಾರಣದಿಂದ ಕೇಂದ್ರ ಹೆಚ್ಚು ಆದಾಯ ಹೊಂದಿರುವವರು ಪಡೆಯುತ್ತಿರುವ ಎಲ್ಪಿಜಿ ಸಬ್ಸಿಡಿ ಯನ್ನು ಕಡ್ಡಾಯವಾಗಿ ನಿಲ್ಲಿಸಲು ಮುಂದಾಗಿದೆ.
7. 4% ಬಡ್ಡಿ ಸಬ್ಸಿಡಿ
ನೋಟು ನಿಷೇಧದ ನಂತರ ಹೊಸ ವರ್ಷದ ಸಂದರ್ಭದಲ್ಲಿ ಹಲವು ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಿವೆ. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ವಸತಿ ಕಾರ್ಯಕ್ಕೆ ಉತ್ತೇಜನ ನೀಡಲು ಹೊಸ ವರ್ಷದ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವಾಸ್ ಯೋಜನೆ ಅಡಿಯಲ್ಲಿ ಸಾಲ ಪಡೆಯುವವರಿಗೆ ಶೇ. 4ರಷ್ಟು ಬಡ್ಡಿ ಸಹಾಯಧನವನ್ನು ಪ್ರಧಾನಿ ಮೋದಿಯವರು ಘೋಷಿಸಿದ್ದಾರೆ.