ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆಗಳಡಿ ವಿಮಾ ಪ್ರಯೋಜನ ಪಡೆಯೋದು ಹೇಗೆ?
ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ (PMJJBY) ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ (PMSBY). ಈ ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಈಗಾಗಲೇ ಸುಮಾರು ಹತ್ತು ಕೋಟಿ ಜನರು ಪಾಲ್ಗೊಂಡಿದ್ದಾರೆ.
ಕೇಂದ್ರ ಸರ್ಕಾರ ಈಗಾಗಲೇ ಎರಡು ಮಹತ್ವಾಕಾಂಕ್ಷಿ ವಿಮಾ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಅವೆಂದರೆ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ (PMJJBY) ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ (PMSBY). ಈ ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಈಗಾಗಲೇ ಸುಮಾರು ಹತ್ತು ಕೋಟಿ ಜನರು ಪಾಲ್ಗೊಂಡಿದ್ದಾರೆ.
PMJJBY ಒಂದು ಜೀವನ ವಿಮೆ ಯೋಜನೆಯಾಗಿದೆ (ಅವಧಿ ಆಧಾರಿತ). ಈ ಯೋಜನೆಯಲ್ಲಿ ನೈಸರ್ಗಿಕ ಹಾಗೂ ಅಪಘಾತದಲ್ಲಿ ಆದ ಸಾವುಗಳ ಸಾಧ್ಯತೆಯನ್ನು ಪರಿಗಣಿಸಲಾಗಿದೆ. ಈ ಸರ್ಕಾರಿ ಯೋಜನೆಯಲ್ಲಿ ಪಡೆಯಬಹುದಾದ ಗರಿಷ್ಟ ಮೊತ್ತವೆಂದರೆ ಎರಡು ಲಕ್ಷ ರೂಪಾಯಿಗಳು. ಇದರ ಪ್ರೀಮಿಯಂ ಅಂದರೆ ನಿಯಮಿತವಾಗಿ ಕಟ್ಟಬೇಕಾದ ಕಂತು ವರ್ಷಕ್ಕೆ ಕೇವಲ ರೂ. 330 ಮಾತ್ರ. ಅಂದರೆ ದಿನಕ್ಕೆ ಒಂದು ರೂಪಾಯಿಗೂ ಕಡಿಮೆ. ಈ ಯೋಜನೆ 18-50 ವರ್ಷ ವಯಸ್ಸಿನವರಿಗೆ ಅನ್ವಯವಾಗುತ್ತದೆ.
PMSBY ಅಪಘಾತಕ್ಕೆ ಸಂಬಂಧಿಸಿದ ವಿಮಾ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಒಂದು ವೇಳೆ ವಿಮೆ ಪಡೆಯುವ ವ್ಯಕ್ತಿ ಅಪಘಾತದಲ್ಲಿ ಮರಣ ಹೊಂದಿದರೆ ವಿಮೆಯ ಫಲ ಪಡೆಯಲು ನೇಮಕಗೊಂಡಿರುವ ನಾಮಿನಿ ವ್ಯಕ್ತಿಗೆ ರೂ. ಎರಡು ಲಕ್ಷ ಲಭಿಸುತ್ತದೆ. ಒಂದು ವೇಳೆ ಶಾಶ್ವತ ಅಂಗವಿಕಲತೆ ಉಂಟಾದರೆ ಒಂದು ಲಕ್ಷ ರೂಪಾಯಿ ಸಿಗಲಿದೆ. ಅಟಲ್ ಪಿಂಚಣಿ ಯೋಜನೆ(APY) ಮಾಡಿಸುವುದು ಹೇಗೆ?
ಇಂದಿನ ಲೇಖನದಲ್ಲಿ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ (PMJJBY) ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ (PMSBY) ಪ್ರಯೋಜನವನ್ನು ಪಡೆಯುವುದು ಹೇಗೆ? ಇದಕ್ಕೆ ಯಾವ ದಾಖಲೆಗಳ ಅಗತ್ಯವಿದೆ ಎಂಬುದನ್ನು ಅರಿಯೋಣ ಬನ್ನಿ..
PMJJBY- ಇನ್ಸೂರೆನ್ಸ್ ಕ್ಲೈಮ್ ಮಾಡುವ ಕಾರ್ಯವಿಧಾನ:
PMJJBY ವಿಮಾ ಯೋಜನೆಯಲ್ಲಿ ವಿಮೆ ಮಾಡಿಸಿದ ವ್ಯಕ್ತಿ ಮರಣ ಹೊಂದಿದರೆ ಪಡೆಯಬಹುದಾದ ರೂ. 2,00,000/- ಮೊತ್ತವನ್ನು ಸಂಬಂಧಿತ ವಿಮಾ ಸಂಸ್ಥೆ ಭರಿಸಲು ಬದ್ದವಾಗಿರುತ್ತದೆ. ಈ ಯೋಜನೆಯ ಅನ್ವಯ ಹಣ ಪಡೆಯಬೇಕಾದರೆ ಅನುಸರಿಸಬೇಕಾದ ಕಾರ್ಯಗತಿ ಹೀಗಿದೆ:
PMJJBY ವಿಮೆಯ ಹಕ್ಕುದಾರ ಅನುಸರಿಸಬೇಕಾದ ಹಂತಗಳು:
1. ಮೊದಲು ಹಕ್ಕುದಾರ ವಿಮೆ ಮಾಡಿಸಿದ ವ್ಯಕ್ತಿ ಯಾವ ಬ್ಯಾಂಕಿನಲ್ಲಿ ತನ್ನ ಉಳಿತಾಯ ಖಾತೆಯನ್ನು ಹೊಂದಿದ್ದನೋ ಆ ಬ್ಯಾಂಕಿಗೆ ಭೇಟಿ ನೀಡಬೇಕು. ಈ ಖಾತೆಯ ಮೂಲಕವೇ ಆತ/ಆಕೆ PMJJBY ಯೋಜನೆಯ ಪ್ರಯೋಜನ ಪಡೆಯಲು ಸಾಧ್ಯ. ಮೃತ ವ್ಯಕ್ತಿಯ ಮರಣ ಪ್ರಮಾಣ ಪತ್ರ ಅಗತ್ಯವಿರುವ ಪ್ರಮುಖ ದಾಖಲೆಯಾಗಿದೆ.
2. ಹಕ್ಕುದಾರ ಬ್ಯಾಂಕಿನಿಂದ ಅಥವಾ ಇತರ ನೇಮಕಗೊಂಡ ವಿಮಾ ಸಂಸ್ಥೆಯಿಂದ ಉದಾಹರಣೆಗೆ ವಿಮಾ ಸಂಸ್ಥೆಯ ಶಾಖೆ, ಆಸ್ಪತ್ರೆ, ವಿಮಾ ಏಜೆಂಟ್ ಮೊದಲಾದವರಿಂದ ಹಕ್ಕು ಕೋರಿಕಾ ಅರ್ಜಿ (Claim Form) ಹಾಗೂ ವಿಮೋಚನಾ ರಸೀದಿ (Discharge receipt) ಯನ್ನು ಪಡೆದುಕೊಳ್ಳಬೇಕು.
3. ಹಕ್ಕುದಾರ ಈ ಅರ್ಜಿಪತ್ರಗಳಲ್ಲಿ ಅಗತ್ಯವಾದ ಎಲ್ಲಾ ಮಾಹಿತಿಗಳನ್ನು ಬರೆದು ಒದಗಿಸಬೇಕು. ಈ ಪತ್ರಗಳ ಜೊತೆಯಲ್ಲಿ ಮರಣ ಪ್ರಮಾಣ ಪತ್ರ ಹಾಗೂ ಒಂದು ವೇಳೆ ವಿಮೆ ಮಾಡಿಸಿದ ವ್ಯಕ್ತಿಯ ಖಾತೆಯ ಚೆಕ್ ಹಾಳೆಗಳಿದ್ದರೆ ಅದನ್ನು ಅಸಿಂಧುಗೊಳಿಸಿದ (cancelled cheque) ಪ್ರತಿಯನ್ನು ಲಗತ್ತಿಸಬೇಕು, ಅಥವಾ PMJJBY ಯೋಜನೆಯಲ್ಲಿ ಭಾಗಿಯಾಗಿರುವ ಖಾತೆಯ ವಿವರಗಳನ್ನು ಲಗತ್ತಿಸಬೇಕು. ಒಂದು ವೇಳೆ ಹಕ್ಕುದಾರ ಅಪ್ರಾಪ್ತ ವಯಸ್ಕನಾಗಿದ್ದರೆ ಇವರ ಪರವಾಗಿ ಪೋಷಕರು ಅಥವಾ ನೇಮಿಸಲ್ಪಟ್ಟ ವ್ಯಕ್ತಿ ಈ ದಾಖಲೆಗಳನ್ನು ಭರ್ತಿ ಮಾಡಿ ಸಲ್ಲಿಸಬಹುದು. (https://www.relakhs.com/wp-content/uploads/2015/06/Claim-Form-for-PMJJBY.pdf)
ಈ ದಾಖಲೆ ಪತ್ರಗಳನ್ನು ಪಡೆದ ಬಳಿಕ ಬ್ಯಾಂಕ್ ಸಿಬ್ಬಂದಿ ಮೊದಲು ವಿಮೆ ಪಡೆದಿದ್ದ ವ್ಯಕ್ತಿ ಮರಣ ಹೊಂದಿದ ಸಮಯದಲ್ಲಿ ಖಾತೆ ಚಲಾವಣೆಯಲ್ಲಿತ್ತೋ ಇಲ್ಲವೋ ಎಂದು ಮೊದಲು ಪರಿಶೀಲಿಸುತ್ತಾರೆ. ಈ ಸಮಯದಲ್ಲಿ ವಿಮಾ ಯೋಜನೆ ಅನ್ವಯವಾಗುತ್ತದೆ ಎಂದು ಖಾತ್ರಿಯಾದರೆ ಮುಂದಿನ ಹಂತದಲ್ಲಿ ಬ್ಯಾಂಕ್ ಸಿಬ್ಬಂದಿ ಈ ದಾಖಲೆಗಳ ಹಾಗೂ ಹಕ್ಕುದಾರನ/ಳ ವಿವರಗಳನ್ನು ತಮ್ಮ ದಾಖಲೆಯಲ್ಲಿರುವ ವಿವರಗಳೊಂದಿಗೆ ಪರಿಶೀಲಿಸಿ ಎಲ್ಲವೂ ಸಮರ್ಪಕವಾಗಿದೆ ಎಂದು ಕಂಡು ಬಂದ ಬಳಿಕವೇ ಈ ದಾಖಲೆಗಳನ್ನು, ಅಂದರೆ ಮರಣ ಪ್ರಮಾಣ ಪತ್ರ, ಭರ್ತಿ ಮಾಡಿದ ಅರ್ಜಿ, ವಿಮೋಚನಾ ಪತ್ರ ಹಾಗೂ ಅಸಿಂಧುಗೊಳಿಸಿದ ಚೆಕ್ ಹಾಳೆಗಳ ಪ್ರತಿಗಳನ್ನು ಸಂಬಂಧಿತ ವಿಮಾ ಸಂಸ್ಥೆಗೆ ಕಳುಹಿಸಿ ಕೊಡುತ್ತಾರೆ.
ದೊರಕುವ ಗರಿಷ್ಟ ಅವಧಿ:
ಈ ಪ್ರಕ್ರಿಯೆ ಪೂರ್ಣಗೊಳ್ಳಲು, ಅಂದರೆ ಭರ್ತಿ ಮಾಡಿದ ಹಕ್ಕು ಕೋರಿಕಾ ಅರ್ಜಿ ಮತ್ತು ಸಂಬಂಧಿತ ದಾಖಲೆಗಳನ್ನು ವಿಮಾ ಸಂಸ್ಥೆಗೆ ಸಲ್ಲಿಸಲು ಬ್ಯಾಂಕಿಗೆ ದೊರಕುವ ಗರಿಷ್ಟ ಅವಧಿ ಎಂದರೆ ಮೂವತ್ತು ದಿನಗಳಾಗಿವೆ.
ಈ ದಾಖಲೆಗಳನ್ನು ಪಡೆದ ವಿಮಾ ಸಂಸ್ಥೆ ಅರ್ಜಿ ಹಾಗೂ ಲಗತ್ತಿಸಿದ ಎಲ್ಲಾ ದಾಖಲೆಗಳು ಸಮರ್ಪಕವಾಗಿವೆಯೇ ಎಂದು ಪರಿಶೀಲಿಸುತ್ತದೆ. ಎಲ್ಲಾ ದಾಖಲೆಗಳು ಸರಿ ಇದೆ ಎಂದು ಖಚಿತಪಡಿಸಿಕೊಂಡ ಬಳಿಕ ಈ ಖಾತೆಗೆ ಸಂಬಂಧಿಸಿದ ಕಛೇರಿಯ ಸಿಬ್ಬಂದಿ ವಿಮೆ ಮಾಡಿಸಿದ ವ್ಯಕ್ತಿಯ ವಿಮಾ ವ್ಯಾಪ್ತಿ ಸಿಂಧುವಾಗಿದೆಯೇ ಹಾಗೂ ಈ ಖಾತೆಯ ಹೊರತಾಗಿ ಬೇರೆ ಖಾತೆಯಿಂದ ಹಕ್ಕುದಾರನಿಗೆ ವಿಮೆಯ ಮೊತ್ತ ಸಿಗುವ ಸಾಧ್ಯತೆಗಳು ಇಲ್ಲವೆನ್ನುವುದನ್ನೂ ಪರಿಶೀಲಿಸಿ ಖಚಿತಪಡಿಸಿಕೊಳ್ಳುತ್ತಾರೆ. ಒಂದು ವೇಳೆ ಈಗಾಗಲೇ ಹಕ್ಕುದಾರ ಈ ಖಾತೆಯಿಂದ ಬೇರಾವುದಾದರು ವಿಮೆಯ ಮೊತ್ತವನ್ನು ಪಡೆದಿದ್ದರೆ ಈ ವಿವರಗಳ ಪ್ರತಿಯನ್ನು ಹಕ್ಕುದಾರನಿಗೂ, ಇನ್ನೊಂದು ಪ್ರತಿಯನ್ನು ಈ ಖಾತೆ ಹೊಂದಿರುವ ಬ್ಯಾಂಕಿಗೂ ಒದಗಿಸಲಾಗುತ್ತದೆ.
ಒಂದು ವೇಳೆ ಮರಣದ ಸಮಯದಲ್ಲಿ ವಿಮೆ ಮಾಡಿಸಿದ ವ್ಯಕ್ತಿಯ ವಿಮೆಯ ವ್ಯಾಪ್ತಿ ಅವಧಿ ಮೀರಿಲ್ಲದೇ ಇದ್ದರೆ ಹಾಗೂ ಇದರ ಪ್ರತಿಫಲವನ್ನು ಒದಗಿಸದೇ ಇದ್ದರೆ ವಿಮೆಯ ಫಲದ ಮೊತ್ತವನ್ನು ಹಕ್ಕುದಾರನ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಹಾಗೂ ಈ ಬಗ್ಗೆ ಸೂಚನೆ ನೀಡುವ ಪತ್ರವನ್ನು ಹಕ್ಕುದಾರನಿಗೆ ಕಳುಹಿಸಿಕೊಡಲಾಗುತ್ತದೆ ಹಾಗೂ ಇದರ ಒಂದು ಪ್ರತಿಯನ್ನು ಬ್ಯಾಂಕಿಗೂ ಕಳುಹಿಸಿಕೊಡಲಾಗುತ್ತದೆ.
ಗರಿಷ್ಟ ಅವಧಿ: ಈ ಪ್ರಕ್ರಿಯೆಗೆ ವಿಮಾ ಸಂಸ್ಥೆಗೆ ಲಭಿಸುವ ಗರಿಷ್ಟ ಅವಧಿ ಎಂದರೆ ಮೂವತ್ತು ದಿನಗಳು. ಅಂದರೆ ಬ್ಯಾಂಕಿನಿಂದ ವಿವರಗಳ ದಾಖಲೆಗಳು ಲಭ್ಯವಾದ ದಿನದಂದು ಪ್ರಾರಂಭಿಸಿ ಮೂವತ್ತು ದಿನಗಳ ಒಳಗೆ ಹಕ್ಕು ಕೋರಿಕೆ ಅರ್ಜಿಯನ್ನು ಅನುಮೋದಿಸಿ ವಿಮೆಯ ಮೊತ್ತವನ್ನು ಹಕ್ಕುದಾರನ ಖಾತೆಗೆ ವರ್ಗಾಯಿಸಬೇಕಾಗುತ್ತದೆ.
ಒಂದು ವೇಳೆ ಹಕ್ಕುದಾರ ತನ್ನ ಅರ್ಜಿಯನ್ನು ಬ್ಯಾಂಕಿಗೆ ನೀಡುವ ಬದಲು ಇತರ ವಿಮಾ ಸಂಸ್ಥೆಯ ಕಛೇರಿಗೆ ಒದಗಿಸಿದರೆ ಈ ವಿಮಾ ಸಂಸ್ಥೆ ಮೊದಲು ಈ ದಾಖಲೆಗಳನ್ನು ಸಂಬಂಧಿತ ಬ್ಯಾಂಕಿಗೆ ಕಳುಹಿಸಿ ಕೊಡುತ್ತದೆ ಹಾಗೂ ಅರ್ಜಿ ಪತ್ರದಲ್ಲಿ ಒದಗಿಸಿರುವ ಮಾಹಿತಿಗಳು ಸರಿಯಾಗಿವೆಯೇ ಎಂದು ಪರಿಶೀಲಿಸಲು ಕೇಳಿಕೊಳ್ಳುತ್ತದೆ. ಈ ವಿವರಗಳನ್ನು ಪರಿಶೀಲಿಸಿ ಎಲ್ಲವೂ ಸರಿ ಇದೆ ಎಂದು ಬ್ಯಾಂಕ್ ತನ್ನ ಅನುಮೋದನೆಯನ್ನು ಲಿಖಿತ ರೂಪದಲ್ಲಿ ದೃಢೀಕರಿಸಿದ ಬಳಿಕ ಈ ದಾಖಲೆಗಳನ್ನು ವಿಮಾ ಸಂಸ್ಥೆಗೆ ಕಳುಹಿಸಿಕೊಡುತ್ತದೆ. ಈ ದೃಢೀಕೃತ ದಾಖಲೆಗಳನ್ನು ಮಾತ್ರವೇ ವಿಮಾ ಸಂಸ್ಥೆ ಪರಿಗಣಿಸಿ ಮುಂದಿನ ಕಾರ್ಯವನ್ನು ನಿರ್ವಹಿಸುತ್ತದೆ. ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ ಯಾಕೆ ಮಾಡಿಸಬೇಕು?
2. PMSBY - ಇನ್ಸೂರೆನ್ಸ್ ಕ್ಲೈಮ್ ಮಾಡುವ ಕಾರ್ಯವಿಧಾನ:
ಈ ಯೋಜನೆಯ ಪ್ರಯೋಜನೆಗಳನ್ನು ಸಂಬಂಧಿತ ವಿಮಾ ಸಂಸ್ಥೆಯೇ ಇತ್ಯರ್ಥಗೊಳಿಸುತ್ತದೆ. ಇದರ ಫಲವನ್ನು ಪಡೆಯಲು ಈ ಹಂತಗಳನ್ನು ಅನುಸರಿಸಬೇಕು:
1. ಈ ಯೋಜನೆಯಲ್ಲಿ ವಿಮೆ ಮಾಡಿಸಿದ ವ್ಯಕ್ತಿ ಅಪಘಾತಕ್ಕೆ ಒಳಗಾದ ಕ್ಷಣದಿಂದಲೇ ಈ ವಿಮೆಯ ಫಲವನ್ನು ಪಡೆಯಲು ಅರ್ಹನಾಗಿರುತ್ತಾನೆ. ವಿಮೆ ಮಾಡಿಸಿದ ವ್ಯಕ್ತಿ (ಅಥವಾ ಒಂದು ವೇಳೆ ಅಪಘಾತದಲ್ಲಿ ಮರಣ ಸಂಬಂಧಿಸಿದ್ದರೆ ಈ ವ್ಯಕ್ತಿಯ ಹಕ್ಕುದಾರ) ಮುಂದಿನ ದಿನಗಳಲ್ಲಿ ತಾನು ಉಳಿತಾಯ ಖಾತೆ ಹೊಂದಿರುವ ಬ್ಯಾಂಕಿನ ಶಾಖೆಯನ್ನು ಸಂಪರ್ಕಿಸಬೇಕು. ಈ ಯೋಜನೆಯಲ್ಲಿ ವಿಮೆ ಮಾಡಿಸಿದ ವ್ಯಕ್ತಿಯ ಬ್ಯಾಂಕ್ ಖಾತೆಯಿಂದ ಈ ವಿಮೆಯ ಕಂತು ಅಥವಾ ಪ್ರೀಮಿಯಂ ಸ್ವಯಂಚಾಲಿತವಾಗಿ ವಿಮಾ ಸಂಸ್ಥೆಗೆ ನೀಡುವಂತೆ ಮೊದಲೇ ವ್ಯವಸ್ಥೆ ಮಾಡಿರುವುದು ಅಗತ್ಯ. ವಿಮೆದಾರ ಅಥವಾ ಹಕ್ಕುದಾರ ಭರ್ತಿ ಮಾಡಿದ ಅರ್ಜಿಯನ್ನು ವಿಮಾ ಸಂಸ್ಥೆಗೆ ಒದಗಿಸಬೇಕು.
2. ಇದಕ್ಕಾಗಿ ಅಗತ್ಯವಿರುವ ಅರ್ಜಿ ನಮೂನೆಯನ್ನು ಖಾತೆ ಹೊಂದಿರುವ ಬ್ಯಾಂಕಿನಲ್ಲಿಯೇ ಪಡೆಯಬಹುದು ಅಥವಾ ಇತರ ನೇಮಕಗೊಂಡಿರುವ ಸಂಸ್ಥೆಗಳಾದ ವಿಮಾ ಸಂಸ್ಥೆಗಳ ಶಾಖೆಗಳು, ಆಸ್ಪತ್ರೆಗಳು, ವಿಮಾ ಏಜೆಂಟರು ಮೊದಲಾದವರಿಂದಲೂ ಪಡೆಯಬಹುದು. ವಿಮಾ ಸಂಸ್ಥೆಯ ಅಂತರ್ಜಾಲ ತಾಣದಿಂದಲೂ ಈ ನಮೂನೆಯನ್ನು ಇಳಿಸಿಕೊಳ್ಳಬಹುದು. (https://www.relakhs.com/wp-content/uploads/2015/06/Claim-Form-for-PMSBY.pdf)
ಅರ್ಜಿಯಲ್ಲಿ ಅಗತ್ಯವಿರುವ ಎಲ್ಲಾ ವಿವರ ತುಂಬಬೇಕು
3. ಈ ಅರ್ಜಿಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ವಿಮೆ ಮಾಡಿಸಿದ ವ್ಯಕ್ತಿ ಅಥವಾ ಹಕ್ಕುದಾರ ಅಥವಾ ಇವರ ಪರವಾಗಿ ನೇಮಕಗೊಂಡಿರುವ ವ್ಯಕ್ತಿ ಭರ್ತಿ ಮಾಡಿ ಅಪಘಾತ ಸಂಭವಿಸಿದ ಗರಿಷ್ಟ ಮೂವತ್ತು ದಿನಗಳ ಒಳಗಾಗಿ ಸಂಬಂಧಿತ ವಿಮಾ ಸಂಸ್ಥೆಗೆ ಒದಗಿಸಬೇಕಾಗುತ್ತದೆ. ಅಪಘಾತದ ಗಂಭೀರ ಪರಿಣಾಮವನ್ನು ಅನುಸರಿಸಿ ಈ ಅವಧಿಯನ್ನು ಮುಂದುವರೆಸಲೂಬಹುದು.
4. ಈ ಅರ್ಜಿಯ ಜೊತೆಗೆ ಸಂಬಂಧಿತ ದಾಖಲೆಗಳನ್ನು ಲಗತ್ತಿಸಬೇಕು. ಒಂದು ವೇಳೆ ಅಪಘಾತದಲ್ಲಿ ವಿಮೆ ಮಾಡಿಸಿದ್ದ ವ್ಯಕ್ತಿ ಮರಣ ಹೊಂದಿದ್ದರೆ ಮರಣ ಪ್ರಮಾಣ ಪತ್ರ/ಶವಪರೀಕ್ಷೆ ವಿವರ , ಅಪಘಾತದ ಬಗ್ಗೆ ಪೋಲೀಸ್ ಇಲಾಖೆ ನೀಡುವ ಎಫ್ಐಆರ್/ಪಂಚನಾಮೆ, ಒಂದು ವೇಳೆ ಶಾಶ್ವತ ಅಂಗವೈಕಲ್ಯ ಸಂಭವಿಸಿದ್ದರೆ ಇದನ್ನು ದೃಢೀಕರಿಸುವ ವೈದ್ಯರ ಅಥವಾ ನಾಗರಿಕ ಶಸ್ತ್ರಚಿಕಿತ್ಸಕರ ಪ್ರಮಾಣ ಪತ್ರಗಳನ್ನೂ ಲಗತ್ತಿಸಬೇಕು. ಇದರೊಂದಿಗೆ ಲಗತ್ತಿಸಿದ ವಿವರಗಳಿಗೆ ಸಮರ್ಪಕವಾಗಿರುವ ಡಿಸ್ಚಾರ್ಜ್ ಪ್ರಮಾಣಪತ್ರ (discharge certificate) ವನ್ನೂ ವಿಮೆ ಮಾಡಿಸಿದ ವ್ಯಕ್ತಿ ಅಥವಾ ಹಕ್ಕುದಾರ ನೀಡಬೇಕಾಗುತ್ತದೆ.
5. ಗರಿಷ್ಟ ಮೂವತ್ತು ದಿನಗಳ ಅವಧಿ
ಬ್ಯಾಂಕಿನ ಸಂಬಂಧಿತ ಸಿಬ್ಬಂದಿ ಈ ದಾಖಲೆಗಳನ್ನು ಬ್ಯಾಂಕಿನ ಖಾತೆಯ ವಿವರಗಳೊಂದಿಗೆ ಹಾಗೂ ವಿಮೆಯ ಕಂತು ಸ್ವಯಂಚಾಲಿತವಾಗಿ ವಿಮಾ ಸಂಸ್ಥೆಗೆ ನೀಡಲ್ಪಡುತ್ತಿತ್ತು ಎಂಬುದನ್ನು ಖಚಿತಪಡಿಸುವ ದಾಖಲೆಗಳೊಂದಿಗೆ ಹಾಗೂ ಅರ್ಜಿಯಲ್ಲಿ ಒದಗಿಸಿರುವ ವಿವರಗಳು ಬ್ಯಾಂಕಿನ ದಾಖಲೆಗಳಲ್ಲಿರುವ ವಿವರಗಳೊಂದಿಗೆ ತಾಳೆ ಹೊಂದುತ್ತವೆ ಎಂದು ಖಚಿತಪಡಿಸಿಕೊಳ್ಳಲಾಗುತ್ತದೆ. ಬಳಿಕ ಅಧಿಕೃತ ಸಹಿ ಮತ್ತು ಬ್ಯಾಂಕಿನ ಮುದ್ರೆಯೊಂದಿಗೆ ಈ ದಾಖಲೆಗಳನ್ನು ವಿಮಾ ಸಂಸ್ಥೆಗೆ ಒದಗಿಸುತ್ತದೆ. ಈ ಪ್ರಕ್ರಿಯೆಗೆ ಬ್ಯಾಂಕ್ ತೆಗೆದುಕೊಳ್ಳುವ ಗರಿಷ್ಟ ಸಮಯವೆಂದರೆ ಅರ್ಜಿ ಸ್ವೀಕರಿಸಿದ ದಿನದಿಂದ ಪ್ರಾರಂಭಿಸಿ ಮೂವತ್ತು ದಿನಗಳು.
6. ವಿಮೆದಾರ ತನ್ನ ವಿಮೆಯ ಇದುವರೆಗಿನ ಎಲ್ಲಾ ಕಂತುಗಳು ಸಂದಾಯವಾಗಿದೆ ಹಾಗೂ ತನ್ನ ಮೂಲ ವಿಮಾ ಪಾಲಿಸಿಯಲ್ಲಿ ನೇಮಿಸಲ್ಪಟ್ಟ ಸದಸ್ಯರ ಪಟ್ಟಿಯಲ್ಲಿ ಹಕ್ಕುದಾರನ ಹೆಸರು ಇರುವುದು ಖಚಿತಪಡಿಸಬೇಕಾಗುತ್ತದೆ.
7. ಬ್ಯಾಂಕಿನಿಂದ ಖಚಿತಪಡಿಸಿದ ದಾಖಲೆಗಳು ವಿಮಾ ಸಂಸ್ಥೆಗೆ ಲಭ್ಯವಾದ ಬಳಿಕ ಮೂವತ್ತು ದಿನಗಳ ಒಳಗೆ ವಿಮೆದಾರನ ಮೂಲ ವಿಮೆಯನ್ನು ಬ್ಯಾಂಕಿಗೆ ಒದಗಿಸಬೇಕಾಗುತ್ತದೆ.
8. ಎಲ್ಲಾ ದಾಖಲೆಗಳು ಸರಿಯಾಗಿದ್ದರೆ ಹಕ್ಕುದಾರನ ಅಥವಾ ವಿಮೆದಾರನ (ಸಂದರ್ಭಕ್ಕೆ ಅನುಸಾರವಾಗಿ) ಖಾತೆಗೆ ವಿಮೆಯ ನಿಗದಿತ ಮೊತ್ತವನ್ನು ವರ್ಗಾಯಿಸುತ್ತದೆ.
9. ಒಂದು ವೇಳೆ ವಿಮೆದಾರ ತನ್ನ ವಿಮಾ ಪಾಲಿಸಿಯಲ್ಲಿ ತನ್ನ ಮರಣಾನಂತರದ ಹಕ್ಕುದಾರನ/ಳ ಹೆಸರನ್ನು ನಮೂದಿಸದೇ ಇದ್ದರೆ ಹಾಗೂ ಅಪಘಾತದಲ್ಲಿ ಮರಣ ಸಂಭವಿಸಿದ್ದರೆ ಈ ವಿಮೆಯ ಮೊತ್ತವನ್ನು ವಿಮೆದಾರನ ಹತ್ತಿರದ ಸಂಬಂಧಿಗಳಿಗೆ ಒದಗಿಸಲಾಗುತ್ತದೆ. ಇದಕ್ಕಾಗಿ ಸಂಬಂಧಿಗಳು ತಮ್ಮ ಸ್ಥಳದ ನ್ಯಾಯಾಲಯ ಅಥವಾ ಪ್ರಾಧಿಕಾರದಿಂದ ತಮ್ಮ ಸಂಬಂಧವನ್ನು ದೃಢೀಕರಿಸುವ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.
10. ವಿಮೆದಾರ/ಹಕ್ಕುದಾರನಿಂದ ಪೂರ್ಣಗೊಂಡ ಅರ್ಜಿ ಹಾಗೂ ದಾಖಲೆಗಳನ್ನು ಪಡೆದ ಬಳಿಕ ತನ್ನ ದೃಢೀಕರಣವನ್ನು ವಿಮಾ ಸಂಸ್ಥೆಗೆ ನೀಡಲು ಗರಿಷ್ಟ ಕಾಲಾವಧಿ ಮೂವತ್ತು ದಿನಗಳು. ಇದೇ ರೀತಿಯಾಗಿ ವಿಮಾ ಸಂಸ್ಥೆಗೆ ಬ್ಯಾಂಕಿನಿಂದ ದೃಢೀಕೃತ ದಾಖಲೆಗಳನ್ನು ಪಡೆದ ಬಳಿಕ ಹಕ್ಕುದಾರ/ವಿಮೆದಾರನ ಖಾತೆಗೆ ಹಣ ವರ್ಗಾಯಿಸಲು ಇರುವ ಗರಿಷ್ಟ ಕಾಲಾವಧಿ ಮೂವತ್ತು ದಿನಗಳು.
ಕೊನೆ ಮಾತು
ಒಂದು ವೇಳೆ ನೀವು ಸಹಾ ಈ ಯೋಜನೆಗಳಲ್ಲಿ ಭಾಗಿಯಾಗಿದ್ದರೆ ಅಥವಾ ಇತರರಿಗೆ ಈ ಯೋಜನೆಯಲ್ಲಿ ಭಾಗಿಯಾಗಲು ನೆರವಾಗಿದ್ದರೆ, ನಿಮ್ಮ ವಿಮೆಯ ಬಗ್ಗೆ ಹಕ್ಕುದಾರರಿಗೆ ಈ ಪ್ರಕ್ರಿಯೆಯ ಬಗ್ಗೆ ವಿವರಿಸಿ ಅರಿವು ಮೂಡಿಸಿ. ಇದರಿಂದ ಅಗತ್ಯಬಿದ್ದಾಗ PMJJBY ಹಾಗೂ PMSBY ಯೋಜನೆಯ ಪ್ರತಿಫಲವನ್ನು ಪಡೆಯಲು ಅವರಿಗೆ ಸುಲಭವಾಗುತ್ತದೆ.