ಷೇರುಪೇಟೆಯ ವಹಿವಾಟಿನಲ್ಲಿ ಇತ್ತೀಚಿಗೆ ವಿಸ್ಮಯಕಾರಿ ಚಲನೆಯನ್ನು ಕಾಣಬಹುದಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಿಸಿದ 25 ಬೇಸಿಸ್ ಪಾಯಿಂಟುಗಳ ಬಡ್ಡಿದರ ಕಡಿತವನ್ನು ಹೆಚ್ಚಿನವರು ಗ್ರಾಹಕರ ಗೃಹ, ವಾಹನ ಮುಂತಾದ ಸಾಲಗಳ ಮೇಲಿನ ಬಡ್ಡಿದರವು ಕಡಿಮೆಯಾಗಿ ಲಾಭದಾಯಿಕವಾಗಿದೆ ಎಂದು ವಿಶ್ಲೇಷಿಸುವರು.
ಆದರೆ, ಇದು ಕೆಲವು ಕಾರ್ಪೊರೇಟ್ ಗಳಿಗೆ ವರದಾನವಾಗಿದೆ. ಕಾರ್ಪೊರೇಟ್ ಗಳು ಬ್ಯಾಂಕ್ ಗಳಿಂದ ಪಡೆವ ಸಾಲಕ್ಕೆ ಹೆಚ್ಚಿನ ಬಡ್ಡಿ ನೀಡಬೇಕಾಗಿದೆ. ಆದರೆ ಈಗ ಬ್ಯಾಂಕ್ ಗಳು ಸಾರ್ವಜನಿಕರಿಂದ ಪಡೆಯುವ ಠೇವಣಿಗಳ ಮೇಲೆ ನೀಡುವ ಬಡ್ಡಿದರವು ಪ್ರತಿ ಬಾರಿ ಆರ್ ಬಿಐ ಬಡ್ಡಿ ದರವನ್ನು ಇಳಿಸಿದಾಗಲೂ ಕಡಿಮೆಯಾಗುತ್ತಿದೆ.
ಇದು ಬ್ಯಾಂಕ್ ಗಳ ಠೇವಣಿಗೆ ಪರ್ಯಾಯವಾದ ಆದಾಯದ ಯೋಜನೆಯನ್ನು ಅನ್ವೇಷಣೆ ಮಾಡಲು ಗ್ರಾಹಕರಿಗೆ ಪ್ರೇರಣೆಯಾಗಿದೆ. ಕಾರ್ಪೊರೇಟ್ ಗಳು ವಿಶೇಷವಾಗಿ ನಾನ್ ಬ್ಯಾಂಕಿಂಗ್ ಸೆಕ್ಟರ್ ನ ಕಂಪೆನಿಗಳು ಬ್ಯಾಂಕ್ ಬಡ್ಡಿ ದರಕ್ಕಿಂತ ಸ್ವಲ್ಪ ಹೆಚ್ಚಿನ ಬಡ್ಡಿ ನೀಡುವ ಬಾಂಡ್ / ಎನ್ ಸಿಡಿ ಗಳನ್ನೂ ತೇಲಿಬಿಟ್ಟು ಸಾರ್ವಜನಿಕರಿಂದ ಠೇವಣಿಗಳನ್ನು ಪಡೆದುಕೊಳ್ಳುತ್ತಿವೆ.
ಒಂದು ರೀತಿಯಲ್ಲಿ ಬ್ಯಾಂಕ್ ಗಳ ಠೇವಣಿಯನ್ನು ಈ ಕಾರ್ಪೊರೇಟ್ ಗಳು ತಮ್ಮತ್ತ ಆಕರ್ಷಿಸುವುದರಲ್ಲಿ ಸಫಲವಾಗಿವೆ. ಈ ಮೂಲಕ ಕಾರ್ಪೊರೇಟ್ ಗಳು ತಮ್ಮ ಕಂಪೆನಿಯಿಂದ ಆಗುತ್ತಿದ್ದ ಬಡ್ಡಿ ರೂಪದ ಹೊರಹರಿವನ್ನು ಕಡಿತಗೊಳುವುದಲ್ಲದೆ ತಮ್ಮ ಬ್ಯಾಲನ್ಸ್ ಶೀಟ್ ಗಳನ್ನೂ ಆಕರ್ಷಣೀಯವಾಗಿಸಲು ಪ್ರಯತ್ನಿಸಿವೆ.
ಇದು ಒಂದು ಕಡೆಯ ಚಿತ್ರಣವಾದರೆ, ಮತ್ತೊಂದೆಡೆ ಸತತವಾಗಿ ಕುಸಿಯುತ್ತಿರುವ ಬ್ಯಾಂಕ್ ಬಡ್ಡಿದರ ಇಳಿಕೆಯು ದೇಶದ ಉದ್ದಗಲಕ್ಕೂ ಇರುವ ನಿವೃತ್ತರು, ವಯೋವೃದ್ಧರು, ನಿಶ್ಚಿತ ಆದಾಯವನ್ನು ಅವಲಂಭಿಸಿರುವವರು ಹೆಚ್ಚಾಗಿ ಬ್ಯಾಂಕ್ ಬಡ್ಡಿದರದ ಮೇಲೆ ಅವಲಂಬಿತರಾಗಿರುವವರಿಗೆ ಭಾರಿ ಅನನುಕೂಲವಾಗಿರುತ್ತದೆ.
ಹಾಗಾಗಿ ಈ ವರ್ಗದ ಜನತೆಯ ಅಗತ್ಯತೆಯನ್ನರಿತ ಕಾರ್ಪೊರೇಟ್ ಗಳು ಇದರ ಪ್ರಯೋಜನ ಪಡೆಯಲು 'ಸೆಕ್ಯೂರ್ಡ್' ಎಂಬ ನಾಮಾಂಕಿತದಡಿ ನಾನ್ ಕನ್ವರ್ಟಬಲ್ ಡಿಬೆಂಚರ್ ಗಳನ್ನು ತೇಲಿ ಬಿಡುತ್ತಿವೆ/ ಬಿಟ್ಟಿವೆ. ಈ ಸಂದರ್ಭದಲ್ಲಿ ಗ್ರಾಹಕರು ಸೆಕ್ಯೂರ್ಡ್ ಪದದ ವ್ಯಾಮೋಹ ಬಿಟ್ಟು, ಹೂಡಿಕೆಗೆ ಆಯ್ಕೆ ಮಾಡಿಕೊಳ್ಳುವ ಕಂಪನಿಗಳ ಅಂತರ್ಗತ ಅಂಶಗಳನ್ನು ಅರಿತು ನಿರ್ಧರಿಸಬೇಕು.
ಕಂಪೆನಿಯು ಆರೋಗ್ಯಕರವಾದುದಾದರೆ ಹೂಡಿಕೆ ಹಣ ಸುಭದ್ರ. ಆದರೆ ಹೂಡಿಕೆ ಮಾಡಲಿರುವ ಕಂಪೆನಿಯು ಆಂತರಿಕವಾಗಿ ರೋಗಗ್ರಸ್ತವಾಗಿದ್ದಲ್ಲಿ ಆ ಕಂಪೆನಿ ನೀಡುವ ಸೆಕ್ಯೂರ್ಡ್ ಪತ್ರಗಳಿಗೆ ಅರ್ಥವಿಲ್ಲ ಮತ್ತು ಹೂಡಿಕೆಯು ಅಪಾಯಕಾರಿಯಾಗಿರುತ್ತದೆ.
ದಿವಾನ್ ಹೌಸಿಂಗ್ ಫೈನಾನ್ಸ್ ಎನ್ ಸಿಡಿ ಅರ್ಧ ಬೆಲೆಗೆ
ಒಂದು ವರ್ಷದ ಹಿಂದೆ ವಿತರಿಸಲ್ಪಟ್ಟ ದಿವಾನ್ ಹೌಸಿಂಗ್ ಫೈನಾನ್ಸ್ ನ ಎನ್ ಸಿಡಿಗಳು ಈಗ ಸುಮಾರು ಅರ್ಧ ಬೆಲೆಯಲ್ಲಿ ಮಾರಾಟವಾಗುತ್ತಿವೆ. ಅಂದರೆ ಹೂಡಿಕೆಯ ಹಣವು ಅರ್ಧ ಖೋತಾ ಆದಂತೆ. ಈ ಕಂಪೆನಿ ವಿತರಿಸಬೇಕಾದ ಬಾಂಡ್ ಗಳ ಬಡ್ಡಿಯನ್ನು ನೀಡಲಾಗಲಿಲ್ಲ ಎಂಬ ಕಾರಣವೂ ಈ ಕಂಪೆನಿಯ ಸೆಕ್ಯುರಿಟೀಸ್ ಅನ್ನು ಜಂಕ್ ಗ್ರೇಡ್ ಗೆ ರೇಟಿಂಗ್ ಸಂಸ್ಥೆ ಇಳಿಸಿದ ಕಾರಣ ಈ ಕಂಪೆನಿಯ ಷೇರಿನ ಬೆಲೆ ಭಾರಿ ಕುಸಿತಕ್ಕೊಳಗಾಗಿದೆ. ಈ ಕಂಪೆನಿ ವಿತರಿಸಿದ 'ಸೆಕ್ಯೂರ್ಡ್' ಬಾಂಡ್ ಗಳು ಅನಾಥವಾಗಿವೆ. ಸೆಕ್ಯೂರ್ಡ್ ಎಂಬ ಪದಕ್ಕೆ ಮರುಳಾಗಬೇಡಿರಿ. ಬದಲಾದ ಪರಿಸ್ಥಿತಿಯನ್ನಾಧರಿಸಿ, ತುಲನಾತ್ಮಕ ನಿರ್ಧಾರದ ಅಗತ್ಯವಿದೆ.
'ಸೆಬಿ' ನೋಟಿಸ್ ಜಾರಿಗೊಳಿಸಿದೆ
ಈ ಕಂಪೆನಿಯ ಸಾಲಪತ್ರಗಳಲ್ಲಿ ಅನೇಕ ಮ್ಯುಚುಯಲ್ ಫಂಡ್ ಗಳು ಸಹ ತಮ್ಮ ವಿವಿಧ ಯೋಜನೆಗಳಡಿ ಸಂಗ್ರಹಿಸಿರುವ ಹಣವನ್ನು ಈ ಕಂಪೆನಿಯ ಸೆಕ್ಯುರಿಟೀಸ್ ಗಳಲ್ಲಿ ತೊಡಗಿಸಿವೆ. ಅವು ಸಹ ಈಗ ಆಪತ್ತಿನಲ್ಲಿವೆ. ಅನೇಕ ಫಂಡ್ ಹೌಸ್ ಗಳು ತಮ್ಮ ಧನದಾಹಿತ್ವದ ಕಾರಣ ಕಾನೂನುಬಾಹಿರ ಚಟುವಟಿಕೆ ನಡೆಸಿ ತೊಂದರೆಗೊಳಗಾಗುವುದನ್ನು ಕಂಡಿದ್ದೇವೆ. 2013ರಲ್ಲಿ ಪ್ರಮುಖ ಫಂಡ್ ಹೌಸ್ ಗಳು ತಮಗೆ ದೊರೆತ ಅಪ್ರಕಟಿತ, ಆಂತರಿಕ ಬೆಳವಣಿಗೆಯನ್ನಾಧರಿಸಿ ನಡೆಸಿದ ಚಟುಟಿಕೆಗಳು ತನಿಖೆ ನಡೆಸಿ, ಅವುಗಳಿಗೆ ಮಾರ್ಕೆಟ್ ರೇಗುಲೇಟರ್ 'ಸೆಬಿ' ನೋಟಿಸ್ ಜಾರಿಗೊಳಿಸಿದೆ. ಅಂದರೆ ಹಣ ಗಳಿಸಬೇಕೆಂಬ ಸ್ಪರ್ಧಾತ್ಮಕ ಭಾವನೆಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳಿಗೆ ದಾರಿ ಮಾಡಿಕೊಡುವ ಪ್ರವೃತ್ತಿ ಆರೋಗ್ಯಕರವಲ್ಲ.
ಅಲಂಕಾರಿಕ ಪ್ರಚಾರಕ್ಕೆ ಬಲಿಯಾಗದಿರಿ
ಮೂಲಭೂತವಾಗಿ ಕಂಪೆನಿಗಳು ನೀಡುವ ಪ್ರಚಾರವನ್ನು ಸಮತೋಲನ ಚಿತ್ತದಿಂದ ತೂಗಿ, ನಂತರ ನಿರ್ಧರಿಸಬೇಕು. ಅಲಂಕಾರಿಕ ಪ್ರಚಾರಕ್ಕೆ ಬಲಿಯಾದಲ್ಲಿ ಹೂಡಿಕೆ ಹಣ ಕರಗಿಹೋಗುತ್ತದೆ. ಸೆಕ್ಯೂರ್ಡ್, ಅನ್ ಸೆಕ್ಯೂರ್ಡ್, ವಿವಿಧ ಸಂಸ್ಥೆಗಳ ರೇಟಿಂಗ್, ವಿವಿಧ ಹೆಸರಾಂತ ಕಂಪೆನಿಗಳ ಭಾಗವಹಿಸುವಿಕೆ, ವೈವಿಧ್ಯಮಯ ಆಕರ್ಷಕ ಯೋಜನೆಗಳ ಉದ್ದೇಶ ಮುಂತಾದವುಗಳೆಲ್ಲ ಕೇವಲ ಪ್ರಚಾರಕ್ಕೆ ಮಾತ್ರ. ಅವು ಅಂದಿಗೆ ಮಾತ್ರ ಅನ್ವಯವಾಗುತ್ತವೆ. ಮುಂದೆ ಕಂಪೆನಿ ಆಪತ್ತಿಗೊಳಗಾದರೆ ಸೆಕ್ಯೂರ್ಡ್ ಪದವು ಅರ್ಥಹೀನ, ಪಡೆದ ರೇಟಿಂಗ್ ಶಕ್ತಿಹೀನ. ಒಂದು ಕಂಪೆನಿಯು ತನ್ನ ಹಣಕಾಸಿನ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂದರೆ ಅದರ ಫಲಶ್ರುತಿಯು ಇತರೆ ಆರೋಗ್ಯಕರ ಕಂಪೆನಿಗಳ ಮೇಲೂ ಪ್ರಭಾವಿಯಾಗುವುದು.
ಐಎಲ್ ಅಂಡ್ ಎಫ್ ಎಸ್ 90 ಸಾವಿರ ಕೋಟಿ ಗೊಂದಲ
ಆ ಕಾರಣಕ್ಕೆ ಸಂಪದ್ಭರಿತ ಕಂಪೆನಿಯು ತನ್ನಲ್ಲಿರುವ ಹೆಚ್ಚುವರಿ ಹಣವನ್ನು ಅಧಿಕ ಲಾಭ ಗಳಿಕೆಯ ದೃಷ್ಟಿಯಿಂದ ಮತ್ತೊಂದು ಕಂಪೆನಿಯಲ್ಲಿ ಹೂಡಿಕೆ ಮಾಡುವುದು ವ್ಯವಹಾರಿಕತೆಯಾಗಿದೆ. ಬ್ಯಾಂಕ್ ಬಡ್ಡಿ ದರ ಅತಿ ಕಡಿಮೆಯಾದ್ದರಿಂದ ಪರ್ಯಾಯವಾಗಿ ಕಾರ್ಪೊರೇಟ್ ಬಾಂಡ್ ಗಳು, ಕಮರ್ಷಿಯಲ್ ಪೇಪರ್, ಎನ್ ಸಿ ಡಿ ಮುಂತಾದವುಗಳಲ್ಲಿ ಹೂಡಿಕೆ ಮಾಡುವುವು. ಒಂದು ವೇಳೆ ಮ್ಯುಚುಯಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಿ, ಅವು ಈ ಹಣವನ್ನು ಕಾರ್ಪೊರೇಟ್ ಬಾಂಡ್ ಗಳಲ್ಲಿ ಹೂಡಿಕೆ ಮಾಡಿದಲ್ಲಿ, ಹಣ ಪಡೆದ ಮೂಲ ಕಂಪೆನಿ ಸರಿಯಾಗಿ ಕಾರ್ಯ ನಿರ್ವಹಿಸಿದಲ್ಲಿ ಮಾತ್ರ ಆ ಹಣ ಸುಭದ್ರ, ಇಲ್ಲದಿದ್ದಲ್ಲಿ ಅದು ಹೆಚ್ಚಿನ ಅಪಾಯಕ್ಕೊಳಗಾಗಿ, ಆರೋಗ್ಯಕರ ಕಂಪೆನಿಯು ಸಹ ರೋಗಗ್ರಸ್ತವಾಗುತ್ತದೆ. ಐಎಲ್ ಅಂಡ್ ಎಫ್ ಎಸ್ ನ ರೂ.90 ಸಾವಿರ ಕೋಟಿಗೂ ಹೆಚ್ಚಿನ ಗೊಂದಲದಿಂದ ಅನೇಕ ಕಂಪೆನಿಗಳು ತಮ್ಮ ಅಸ್ತಿತ್ವಕ್ಕೆ ಆಪತ್ತು ತಂದುಕೊಂಡಿವೆ. ಅಂತಿಮವಾಗಿ ಹೂಡಿಕೆ ಸುಭದ್ರ ಆಗಿರಬೇಕಾದರೆ ಹೂಡಿಕೆ ಪಡೆಯುವ ಮೂಲ ಕಂಪೆನಿ ಆಂತರಿಕವಾಗಿ ಸುಭದ್ರವಾಗಿದ್ದು, ಅದು ಕೈಗೊಳ್ಳುವ ನಿರ್ಧಾರಗಳು ಸರಿ ಇರಬೇಕು.


Click it and Unblock the Notifications