15 ಸಾವಿರ ಕೋಟಿ ಸಂಗ್ರಹದ ಗುರಿ ಇದ್ದದ್ದು, ಎರಡು ಲಕ್ಷ ಕೋಟಿ ಬಂದದ್ದು ಹೇಗೆ?
ಷೇರುಪೇಟೆಯು ವಿಸ್ಮಯಕಾರಿ ಬದಲಾವಣೆಗಳನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಪ್ರದರ್ಶಿಸಲ್ಪಡುತ್ತಿದೆ. ಆದರೆ ಅದನ್ನು ಸಹಜ ರೀತಿಯಲ್ಲಿ ಪ್ರದರ್ಶಿಸಲು ಅನುವು ಮಾಡಿಕೊಟ್ಟಲ್ಲಿ ಈಗಿನ ಕೃತಕ ವಾತಾವರಣವಿಲ್ಲದೆ ತನ್ನ ಪ್ರಭಾವ ಬೀರುತ್ತದೆ. ಮಗುವನ್ನು ಚಿವುಟಿ ಅಳಿಸಿ, ನಂತರ ಅದನ್ನು ಸುಧಾರಿಸುವ ರೀತಿಯಲ್ಲಿ ಮಾಡುವುದರಿಂದ ಸಹಜತೆ ಮಾಯವಾಗಿದೆ.
ಭ್ರಮೆಯೇ ಬ್ರಹ್ಮಾಂಡ ಎನ್ನುವ ಈಗಿನ ದಿನಗಳಲ್ಲಿ ನಿಖರವಾಗಿ ಪೇಟೆಯ ಚಲನೆಯನ್ನು ಮುಂಚಿತವಾಗಿ ವ್ಯಾಖ್ಯಾನ ಮಾಡಲು ಸಾಧ್ಯವಿಲ್ಲದಂತಾಗಿದೆ. ಈಗಿನ ವ್ಯಾವಹಾರಿಕ ಜಗತ್ತಿನಲ್ಲಿ ಕಾರ್ಪೊರೇಟ್ ಗಳಿಗೆ ಸ್ವಲ್ಪ ಸಲುಗೆ ಕೊಟ್ಟಲ್ಲಿ ದುರುಪಯೋಗ ಹೆಚ್ಚಾಗುತ್ತದೆ ಎಂಬುದಕ್ಕೆ ಐಪಿಒಗಳೇ ಸಾಕ್ಷಿ.
ಈ ತಿಂಗಳ, ಅಂದರೆ ಜೂನ್ ಇಪ್ಪತ್ತರಂದು ಭಾರತೀಯ ರಿಸರ್ವ್ ಬ್ಯಾಂಕ್ ರು.12,500 ಕೋಟಿ ಮೌಲ್ಯದ ಬಾಂಡ್ ಗಳನ್ನು ಖರೀದಿಸುವ ಮೂಲಕ ಪೇಟೆಯ ಚಲಾವಣೆಗೆ ಹಣ ಬಿಡುಗಡೆ ಮಾಡಿ, ಬೇಡಿಕೆಯ ಒತ್ತಡವನ್ನು ಕಡಿಮೆ ಮಾಡಲಿದೆ ಎಂದು ಪ್ರಕಟಿಸಿದೆ.
ಇದು ಒಂದು ರೀತಿಯಾದರೆ, ಇದಕ್ಕೆ ವಿರುದ್ಧವಾಗಿ ಪೇಟೆಯಲ್ಲಿ ಚಲಾವಣೆಯಲ್ಲಿರುವ ಹಣ ಹೆಚ್ಚಾದಲ್ಲಿ, ಹಣದುಬ್ಬರವನ್ನು ನಿಯಂತ್ರಿಸಲು ಕೆಲವು ಬಾರಿ ಬಾಂಡ್ ಗಳನ್ನು ವಿತರಿಸಿ, ಹಣದ ಚಲಾವಣೆಯನ್ನು ಮೊಟಕುಗೊಳಿಸುತ್ತದೆ. ಇದು ಆರ್ ಬಿಐನ ಚಟುವಟಿಕೆಯ ಭಾಗವಾಗಿದೆ. ಈ ಕ್ರಮವನ್ನು ಪೇಟೆಯ ಚಟುವಟಿಕೆಯಿಂದಲೇ ಸಹಜವಾಗಿ ನಿಯಂತ್ರಿಸಬಹುದು ಎಂಬುದಕ್ಕೆ ಕೋಲ್ ಇಂಡಿಯಾ ಐಪಿಒ ಉತ್ತಮ ಉದಾಹರಣೆಯಾಗಿದೆ.
ಆರ್ಥಿಕ ಸ್ಥಿರತೆಯನ್ನು ಸ್ಥಾಪಿಸುವಂತಹ ಕ್ರಮ
2010ರಲ್ಲಿ ನವರತ್ನ ಕಂಪೆನಿ ಕೋಲ್ ಇಂಡಿಯಾ ರು.15 ಸಾವಿರ ಕೋಟಿ ಸಂಗ್ರಹಣೆಯ ಉದ್ದೇಶದಿಂದ, ತನ್ನ ಚೊಚ್ಚಲ ಆರಂಭಿಕ ಷೇರು ವಿತರಣೆ ಮಾಡಿತು. ಆ ಸಂದರ್ಭದಲ್ಲಿ ಸಾರ್ವಜನಿಕ ಸ್ಪಂದನ ಹೆಚ್ಚಾಗಿ, ಸುಮಾರು ಎರಡು ಲಕ್ಷ ಕೋಟಿ ಸಂಗ್ರಹಣೆಯಾಯಿತು. ಅಂದರೆ ಸುಮಾರು ರು.1.85 ಲಕ್ಷ ಕೋಟಿ ಹೆಚ್ಚು ಸಂಗ್ರಹವಾಗಿ, ಅಷ್ಟು ಹಣ ಪೇಟೆಯಿಂದ ಸ್ವಲ್ಪ ಸಮಯದವರೆಗೂ ದೂರ ಸರಿಯಿತು. ಆರಂಭಿಕ ಷೇರು ವಿತರಣೆಗಳಲ್ಲಿ ಜನ ಸಾಮಾನ್ಯರು ಭಾಗವಹಿಸುವುದರಿಂದ ಕಾರ್ಪೊರೇಟ್ ಗಳು ಸಹಜ, ಅರ್ಹ ಬೆಲೆಯಲ್ಲಿ ವಿತರಣೆ ಮಾಡಲು ಮುಂದಾದರೆ ಹೂಡಿಕೆಗೂ ಪ್ರೋತ್ಸಾಹಿಸುವದರ ಜೊತೆಗೆ ಹಣದುಬ್ಬರದ ನಿಯಂತ್ರಣವು ತನ್ನಷ್ಟಕ್ಕೆ ತಾನೇ ನಿಯಂತ್ರಿಸಲು ಸಾಧ್ಯವಾಗುತ್ತದೆ. ಇದು ಸಾರ್ವಜನಿಕರ ಭಾಗಿತ್ವದಿಂದ ಆರ್ಥಿಕ ಸ್ಥಿರತೆಯನ್ನು ಸ್ಥಾಪಿಸುವಂತಹ ಕ್ರಮವಾಗಿದೆ.
1,100ರಂತೆ ವಿತರಿಸಿದ ಷೇರು ರು.80 ತಲುಪಿದೆ
2005ರಲ್ಲಿ ಜೆಟ್ ಏರ್ ವೇಸ್ ಕಂಪೆನಿಯು ಪ್ರತಿ ಷೇರಿಗೆ ರು.1,100ರಂತೆ ಆರಂಭಿಕ ಷೇರು ವಿತರಿಸಿತ್ತು. ಆಗ ಆ ವಿತರಣೆಗೆ ಹದಿನಾರು ಪಟ್ಟು ಹೆಚ್ಚು ಸಂಗ್ರಹವಾಗಿತ್ತು. ಆದರೆ ನಂತರದ ದಿನಗಳಲ್ಲಿ, ಪೇಟೆಯಲ್ಲಿ ವಿತರಣೆ ಬೆಲೆ ಸಹ ತಲುಪಲಾಗದೆ, ಈಗ ರು.80ರ ಸಮೀಪಕ್ಕೆ ಕುಸಿದಿದೆ. ಇದು ಪೇಟೆಯಲ್ಲಿ ಹರಿದಾಡುವ ಹಣವನ್ನು ಹೀರಿಕೊಂಡಿದ್ದು, ಹಣದುಬ್ಬರವನ್ನು ನಿಯಂತ್ರಿಸುವುದಾದರೂ ನಕಾರಾತ್ಮಕವಾದ ರೀತಿಯಲ್ಲಿ ಹೂಡಿಕೆದಾರರು ಹಾನಿಗೊಳಗಾಗಿದ್ದಾರೆ. ಈಗಿನ ದಿನಗಳಲ್ಲಿ ಸಾಕ್ಷರತೆ ಹೆಚ್ಚಾಗಿದ್ದರೂ ಆರ್ಥಿಕ ಸಾಕ್ಷರತೆಯನ್ನು ಹೆಚ್ಚಿಸಲು ಮರ್ಚಂಟ್ ಬ್ಯಾಂಕರ್ / ಕಂಪೆನಿಗಳ ದುರಾಸೆಗಳಿಗೆ ಬ್ರೇಕ್ ಹಾಕಬೇಕಾದರೆ, ರೀಟೇಲ್ ಹೂಡಿಕೆದಾರರಲ್ಲಿ ನಂಬಿಕೆ ಮೂಡಿಸಲು ಸೂಕ್ತವಾದ ನಿಯಮ, ನಿಯಂತ್ರಣ ಅಥವಾ ತಿದ್ದುಪಡಿ ಜಾರಿಗೊಳಿಸುವುದು ಅನಿವಾರ್ಯವಾಗಿದೆ.
ಹೂಡಿಕೆದಾರರ ಬಂಡವಾಳ ಕರಗಿಸಿವೆ
2007ರಿಂದ ರೇಟಿಂಗ್ ಪಡೆದು, ಆರಂಭಿಕ ಷೇರು ವಿತರಣೆ ಮಾಡುವ ನಿಯಮ ಜಾರಿಯಾದ ಮೇಲೂ ಕಾರ್ಪೊರೇಟ್ ಗಳು ನಿಗದಿಪಡಿಸುವ ವಿತರಣಾ ಬೆಲೆಗಳು ಅತಿ ಹೆಚ್ಚಾಗಿದ್ದು, ವಿತರಣೆಯಾದ ನಂತರದ ವರ್ಷಗಳಲ್ಲಿ ಈ ಕಂಪೆನಿಗಳ ಷೇರುಗಳು ಕಂಡ ಅತಿಯಾದ ಕುಸಿತವು ಹೇಗೆ ಹೂಡಿಕೆದಾರರ ಬಂಡವಾಳವನ್ನು ಕರಗಿಸಿವೆ. ರೇಟಿಂಗ್ ಎಂಬುದು ಕೇವಲ ಕಣ್ಣೊರೆಸುವ ತಂತ್ರದಂತಾಗಿ ಅದರ ಘನತೆಯನ್ನು ಕಳೆದುಕೊಂಡಿದೆ. ಜಾಗತೀಕರಣದ ನಂತರದ ಎರಡೂವರೆ ದಶಕಗಳ ಮೇಲಾದರೂ ಸ್ಥಳೀಯ- ಸಣ್ಣ ಹೂಡಿಕೆದಾರರಿಗೆ ಅನುಕೂಲಕರವಾಗುವಂತಹ, ಸಹಜ ಹಾಗೂ ಕಾರ್ಪೊರೇಟ್ ಗಳ ದುರಾಸೆಗೆ ಬ್ರೇಕ್ ಹಾಕುವ ರೀತಿಯ ನಿಯಮಾವಳಿ ಜಾರಿಗೊಳಿಸುವುದು ಅನಿವಾರ್ಯ ಅಲ್ಲವೇ?
ಎಲ್ಲ ನಗದನ್ನು ಹೂಡಿಕೆ ಮಾಡುವುದು ಅಪಾಯಕಾರಿ
ಐಪಿಒಗಳಲ್ಲಿ ಷೇರು ಖರೀದಿ ಮಾಡಿದರೆ ಲಾಭ ನಿಶ್ಚಿತ ಎಂದು ಯೋಚಿಸುವ ಹೂಡಿಕೆದಾರರು ಈಗಲೂ ಇದ್ದಾರೆ. ಯಾವ ಕಂಪೆನಿ ಮತ್ತು ಅದರ ವ್ಯವಹಾರ ಏನು ಇತ್ಯಾದಿ ವಿಚಾರಗಳು ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ಸುಮ್ಮನೆ ದುಡ್ಡು ಹಾಕಿದರೆ ಯಾವ ಐಪಿಒನಿಂದಲೂ ಬಂಡವಾಳ ರಕ್ಷಿಸಲು ಸಾಧ್ಯವಿಲ್ಲ. ಹೂಡಿಕೆದಾರರು ನಗದು ತಮ್ಮ ಬಳಿ ಇಟ್ಟುಕೊಳ್ಳುವುದು ಹಾಗೂ ಸೂಕ್ತ ಸಮಯದಲ್ಲಿ ಅಲ್ಪ ಪ್ರಮಾಣದಲ್ಲಿ ಹೂಡಿಕೆ ಮಾಡುವುದು ಅತ್ಯುತ್ತಮ. ಏಕೆಂದರೆ, ಎಷ್ಟೋ ಮಂದಿ ಸಾಲ-ಸೋಲ ಮಾಡಿ, ತಂದು ಹಾಕುತ್ತಾರೆ. ಇನ್ನೂ ಹಲವರು ತಮ್ಮದೇ ಬಂಡವಾಳ ಎಲ್ಲವನ್ನೂ ತಪ್ಪಾದ ಕಂಪೆನಿಯಲ್ಲಿ ಹಾಕಿ, ಆ ನಂತರ ಅವಕಾಶ ಸೃಷ್ಟಿಯಾದಾಗ ಹಣ ಇಲ್ಲದೆ ಕೈಕೈ ಹಿಸುಕಿಕೊಳ್ಳುವಂತಾಗುತ್ತದೆ.