ಸಾಲಕ್ಕೆ ಜಾಮೀನು ನಿಂತವರು, ನಿಲ್ಲುವವರು ತಿಳಿಯಬೇಕಾದ ಸಂಗತಿಗಳು

ನೀವು ಯಾರಿಗಾದರೂ ಬ್ಯಾಂಕ್ ಸಾಲಕ್ಕೆ ಜಾಮೀನಾಗಿ ನಿಂತಿದ್ದೀರಾ? ಅಥವಾ ಜಾಮೀನು ನಿಲ್ಲುವಂತೆ ಕೇಳುತ್ತಿದ್ದಾರಾ? ಮುಂದೆ ಯಾರಾದರೂ ನಿಮ್ಮನ್ನು ಜಾಮೀನು ನಿಲ್ಲುವಂತೆ ಕೇಳಬಹುದು. ಈ ಮೂರು ಸನ್ನಿವೇಶದಲ್ಲಿ ಯಾವುದೇ ಒಂದು ಎದುರಾಗಿದ್ದರೂ ಅಥವಾ ಎದುರಾಗಬಹುದಾದರೂ ಈ ಲೇಖನವನ್ನು ಕಡ್ಡಾಯವಾಗಿ ನೀವು ಓದಬೇಕು.

ಏಕೆಂದರೆ, ಆರ್ಥಿಕತೆ ಮುಂಚಿನ ಜೋಶ್ ನಲ್ಲಿ ಇಲ್ಲ. ಕೊರೊನಾದ ಹೊಡೆತಕ್ಕೆ ಕೆಲಸ ಕಳೆದುಕೊಳ್ಳುತ್ತಿರುವುದು, ವೇತನಕ್ಕೆ ಕತ್ತರಿ ಬೀಳುತ್ತಿರುವುದು ಸಾಮಾನ್ಯ ವಿದ್ಯಮಾನ ಎಂಬಂತಾಗಿದೆ. ಇದರಿಂದಾಗಿ ಬ್ಯಾಂಕ್ ಗಳಿಗೆ ಸಾಲ ಮರುಪಾವತಿ ಆಗುತ್ತಿಲ್ಲ. ಈಗಂತೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆಗಸ್ಟ್ ತನಕ ಸಾಲ ಮರುಪಾವತಿಯಿಂದ (ಇಎಂಐ) ವಿನಾಯಿತಿ ನೀಡಿದೆ.

ಆದರೆ, ತಜ್ಞರೇ ಹೇಳುತ್ತಿದ್ದಾರೆ: ಹೀಗೆ ಇಎಂಐ ಪಾವತಿ ಮುಂದಕ್ಕೆ ಹಾಕಿದರೆ ಸಾಲ ವಾಪಸ್ ಬರುತ್ತದೆ ಅಂತೇನೂ ಅಲ್ಲ. ಯಾವಾಗ ಸಾಲವು ಬ್ಯಾಂಕ್ ಗಳಿಗೆ ಮರುಪಾವತಿ ಆಗುವುದಿಲ್ಲವೋ ಸಂಬಂಧಿಕರು, ಸ್ನೇಹಿತರಿಗೆ ಜಾಮೀನು ನಿಂತಿರುವವರು ಬಲೇ ಸಂಕಷ್ಟದಲ್ಲಿ ಸಿಲುಕಿಕೊಳ್ಳುತ್ತಾರೆ.

ಸಾಲಕ್ಕೆ ಜಾಮೀನು ನಿಂತವರಿಗೆ ಅವುಗಳನ್ನು ಮರುಪಾವತಿಸುವಂತೆ ಬ್ಯಾಂಕ್ ಗಳಿಗೆ ಸೂಚನೆ ನೀಡುವುದಿಲ್ಲ. ಆದರೆ ಸಾಲ ಪಡೆಯುವುದಕ್ಕೆ ಅಡಮಾನ ಅಥವಾ ಗಿರವಿ ಇಟ್ಟಿ ವಸ್ತುವಿನ ಬೆಲೆ ಸಾಲದ ಮೊತ್ತಕ್ಕೆ ಸರಿಹೋಗುವುದಿಲ್ಲ ಅಥವಾ ಸಾಲ ಪಡೆದವರು ಹಣ ಮರುಪಾವತಿಸುವ ಸ್ಥಿತಿಯಲ್ಲಿ ಇಲ್ಲ ಎಂದಾಗ ಜಾಮೀನು ನಿಂತವರ ಜವಾಬ್ದಾರಿ ಜಾಸ್ತಿಯಾಗುತ್ತದೆ.

ಗ್ಯಾರಂಟರ್ ಹಾಗೂ ಬ್ಯಾಂಕ್ ಒಂದೇ ಸ್ಥಿತಿಯಲ್ಲಿ

ಗ್ಯಾರಂಟರ್ ಹಾಗೂ ಬ್ಯಾಂಕ್ ಒಂದೇ ಸ್ಥಿತಿಯಲ್ಲಿ

ಸಾಲ ಪಡೆಯುವವರು ಸಾಮಾನ್ಯವಾಗಿ ಸಂಬಂಧಿಕರು ಅಥವಾ ಆಪ್ತ ಸ್ನೇಹಿತರನ್ನೇ ಗ್ಯಾರಂಟರ್ ಮಾಡಿಕೊಳ್ಳುತ್ತಾರೆ. ಹಾಗೆ ಜಾಮೀನಾಗಿ ನಿಲ್ಲುವಂತೆ ನಿಮ್ಮನ್ನು ಕೇಳಿಕೊಂಡರೆ, ಮೊದಲಿಗೆ ಆ ವ್ಯಕ್ತಿಯ ಸಾಲ ಮರುಪಾವತಿಸುವ ಸಾಮರ್ಥ್ಯವನ್ನು ಅಳೆಯಿರಿ. ಏಕೆಂದರೆ ಗ್ಯಾರಂಟರ್ ಮತ್ತು ಬ್ಯಾಂಕ್ ಎರಡೂ ಒಂದೇ ಎಂಬಂತೆ ನಡೆದುಕೊಳ್ಳಬೇಕು. ಸಾಲ ಪಡೆಯುವ ವ್ಯಕ್ತಿಯ ಮರುಪಾವತಿ ಸಾಮರ್ಥ್ಯ ಅಳೆದ ನಂತರವೇ ಹಾಗೂ ಸಾಲ ಹಿಂತಿರುಗಿಸುವ ಪ್ರಾಮಾಣಿಕತೆ ಇದೆ ಎಂಬುದು ಖಾತ್ರಿ ಆದ ನಂತರವಷ್ಟೇ ಜಾಮೀನು ನೀಡಬಹುದಾ ಎಂದು ತೀರ್ಮಾನಿಸಬೇಕು. ಒಂದು ವೇಳೆ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳದಿದ್ದರೆ ಸಾಲಕ್ಕೆ ಗ್ಯಾರಂಟಿ ನೀಡಿರುವುದು ದುಃಸ್ವಪ್ನವಾಗಿ ಬಿಡುತ್ತದೆ. ಬಹಳ ಜನಕ್ಕೆ ಒಂದು ಬಗೆಯ ಸಂಕೋಚ. ಎಲ್ಲಿ ಗ್ಯಾರಂಟಿ ನೀಡುವುದಿಲ್ಲ ಎಂದುಬಿಟ್ಟರೆ ಸಂಬಂಧ ಹಾಳಾಗುತ್ತದೋ ಎಂಬ ಅಂಜಿಕೆ. ಆದರೆ ಬಹುತೇಕ ಸಂದರ್ಭದಲ್ಲಿ ಗ್ಯಾರಂಟರ್ ಆದ ಮೇಲೆ ಸಂಬಂಧ, ಸ್ನೇಹದಲ್ಲಿ ಬಿರುಕು ಬಂದಿರುವುದು ಉದಾಹರಣೆಯಾಗಿ ದೊರೆಯುತ್ತದೆ.

ಸಾಲ ಪಡೆದವರು ಹಾಗೂ ಗ್ಯಾರಂಟರ್ ದು ಸಮಾನ ಜವಾಬ್ದಾರಿ

ಸಾಲ ಪಡೆದವರು ಹಾಗೂ ಗ್ಯಾರಂಟರ್ ದು ಸಮಾನ ಜವಾಬ್ದಾರಿ

ಬಹಳ ಜನಕ್ಕೆ ಗೊತ್ತಿರುವ ವಿಚಾರ ಏನೆಂದರೆ, ಒಂದು ವೇಳೆ ಸಾಲ ಪಡೆದ ವ್ಯಕ್ತಿ ಹಣ ಹಿಂತಿರುಗಿಸದಿದ್ದರೆ ಅದಕ್ಕೆ ತಾವೇ ಜವಾಬ್ದಾರರು ಎಂಬ ಸ್ಪಷ್ಟತೆ ಇರುತ್ತದೆ. ಆದರೆ ಇನ್ನೊಬ್ಬರಿಗೆ ಜಾಮೀನಾಗಿ ನಿಂತಾಗ ನೀವೇ ಸಾಲ ಪಡೆಯುವಾಗಿನ ಅರ್ಹತೆ ಕೂಡ ಆಧಾರಪಟ್ಟಿರುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಜವಾಬ್ದಾರಿ ವಿಚಾರಕ್ಕೆ ಬಂದರೆ ಸಾಲ ಪಡೆದ ವ್ಯಕ್ತಿಗೂ ಗ್ಯಾರಂಟರ್ ಗೂ ಏನೂ ವ್ಯತ್ಯಾಸ ಇಲ್ಲ. ವ್ಯತ್ಯಾಸ ಏನಿದ್ದರೂ ಸಾಲ ಪಡೆದ ವ್ಯಕ್ತಿಯ ಕೈಗೆ ಹಣ ಸೇರುತ್ತದೆ, ಅಷ್ಟೇ. ಮತ್ತೊಬ್ಬ ವ್ಯಕ್ತಿಗೆ ಜಾಮೀನಾಗಿ ನಿಂತಾಗ ಸಾಲದ ಸ್ವಲ್ಪ ಭಾಗಕ್ಕೆ ಗ್ಯಾರಂಟರ್ ಕೂಡ ಜವಾಬ್ದಾರರಾಗಿರುತ್ತಾರೆ. ಆ ಕಾರಣಕ್ಕೆ ಮುಂದೆ ಗ್ಯಾರಂಟರ್ ಸಾಲಕ್ಕೆ ಅರ್ಜಿ ಹಾಕಿಕೊಂಡಾಗ ಅರ್ಹತೆಯನ್ನು ಕಡಿಮೆ ಮಾಡಲಾಗುತ್ತದೆ. ಆದ್ದರಿಂದ ಗ್ಯಾರಂಟರ್ ಆಗುವ ಮುನ್ನ ಭವಿಷ್ಯದಲ್ಲಿ ತನ್ನ ಸಾಲದ ಅಗತ್ಯವನ್ನೂ ಗಮನದಲ್ಲಿ ಇರಿಸಿಕೊಳ್ಳಬೇಕು. ಸಾಲ ಪಡೆದ ವ್ಯಕ್ತಿ ಹಣ ಹಿಂತಿರುಗಿಸದಿದ್ದರೂ ಗ್ಯಾರಂಟರ್ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ. ಸಾಲ ಪಡೆದ ವ್ಯಕ್ತಿ ಸರಿಯಾಗಿ ಇಎಂಐ ಪಾವತಿ ಮಾಡದಿದ್ದರೂ ಅದರಿಂದ ಗ್ಯಾರಂಟರ್ ಕ್ರೆಡಿಟ್ ಸ್ಕೋರ್ ಕಡಿಮೆ ಆಗುತ್ತದೆ.

ಕಾನೂನು ಏನು ಹೇಳುತ್ತದೆ?

ಕಾನೂನು ಏನು ಹೇಳುತ್ತದೆ?

ಗ್ಯಾರಂಟರ್ ಆದವರ ಜವಾಬ್ದಾರಿ ಸಾಲ ಪಡೆದ ಮೊತ್ತಕ್ಕೆ ಮಾತ್ರ ಸೀಮಿತ ಆಗಿರುವುದಿಲ್ಲ. ಇಂಡಿಯನ್ ಕಾಂಟ್ರ್ಯಾಕ್ಟ್ ಕಾಯ್ದೆ "ಶ್ಯೂರಿಟಿ" ಎಂಬ ಪದವನ್ನು ಗ್ಯಾರಂಟರ್ ಗೆ ಬಳಸುತ್ತದೆ. ಇಂಡಿಯನ್ ಕಾಂಟ್ರ್ಯಾಕ್ಟ್ ಕಾಯ್ದೆ ಸೆಕ್ಷನ್ 128 ತುಂಬ ಸ್ಪಷ್ಟವಾಗಿ ಈ ಬಗ್ಗೆ ತಿಳಿಸುತ್ತದೆ. ಸಾಲಗಾರ ಪಡೆದ ಅಸಲು ಮೊತ್ತಕ್ಕೆ ಮಾತ್ರವಲ್ಲ, ಬಡ್ಡಿ ಮತ್ತು ಇತರ ಯಾವುದೇ ಶುಲ್ಕಕ್ಕೂ ಗ್ಯಾರಂಟರ್ ಜವಾಬ್ದಾರಿ. ಬಹಳ ಮಂದಿ ಗ್ಯಾರಂಟರ್ ಗಳು ಏನೆಂದುಕೊಳ್ಳುತ್ತಾರೆ ಅಂದರೆ, ಸಾಲಗಾರನಿಂದ ಹಣ ವಸೂಲಿ ಮಾಡುವ ಎಲ್ಲ ಆಯ್ಕೆಗಳು ಮುಗಿದ ಮೇಲೆ ಅಷ್ಟೇ ತಮ್ಮ ವಿರುದ್ಧ ಬ್ಯಾಂಕ್ ಗಳು ಕ್ರಮ ಕೈಗೊಳ್ಳುತ್ತವೆ ಎಂಬ ಧೈರ್ಯದಲ್ಲಿ ಇರುತ್ತಾರೆ. ನೆನಪಿರಲಿ, ಸಾಲ ಪಡೆದವರ ವಿರುದ್ಧ ಕ್ರಮ ಕೈಗೊಳ್ಳುವ ಮುಂಚೆಯೇ ಗ್ಯಾರಂಟರ್ ಮೇಲೆ ಕ್ರಮ ತೆಗೆದುಕೊಳ್ಳಬಹುದು. ಸಾಲ ಪಡೆದ ವ್ಯಕ್ತಿಯಿಂದ ವಸೂಲಿ ಮಾಡುವುದು ಅಸಾಧ್ಯ ಎಂಬ ಭಾವನೆ ಬ್ಯಾಂಕ್ ಗಳಿಗೆ ಬಂದರೆ, ಆಗ ಗ್ಯಾರಂಟರ್ ಅನ್ನೇ ಗುರಿ ಮಾಡಿಕೊಳ್ಳಬಹುದು. ಅಂಥ ಸಂದರ್ಭದಲ್ಲಿ ಗ್ಯಾರಂಟರ್ ಆಸ್ತಿಯನ್ನು ವಶ ಮಾಡಬಹುದು. ಅಥವಾ ಅದೇ ಬ್ಯಾಂಕ್ ನಲ್ಲಿ ಗ್ಯಾರಂಟರ್ ಹಣ ಉಳಿತಾಯ ಖಾತೆ, ಫಿಕ್ಸೆಡ್ ಡೆಪಾಸಿಟ್ ನಲ್ಲಿ ಇರುವುದನ್ನು ಸಹ ವಶಕ್ಕೆ ಪಡೆಯಬಹುದು.

ಗ್ಯಾರಂಟರ್ ಜವಾಬ್ದಾರಿಗಳೇನು?

ಗ್ಯಾರಂಟರ್ ಜವಾಬ್ದಾರಿಗಳೇನು?

ನೀವು ಈಗಾಗಲೇ ಗ್ಯಾರಂಟರ್ ಆಗಿದ್ದಲ್ಲಿ ಎಚ್ಚರಿಕೆಯಿಂದ ಇರಬೇಕು. ಸಾಲ ಮರುಪಾವತಿ ಸರಿಯಾಗಿ ಆಗುತ್ತಿದೆಯಾ ಎಂಬ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಒಂದು ವೇಳೆ ಸಾಲ ಮರುಪಾವತಿ ಮಾಡಲು ಆ ವ್ಯಕ್ತಿಗೆ ಆಗದೇ ಇದ್ದಲ್ಲಿ, ಆತನ ಸಮಸ್ಯೆ ಬಗ್ಗೆ ತಿಳಿದುಕೊಂಡು, ಅದರಿಂದ ಆಚೆ ಬರುವ ಮಾರ್ಗವನ್ನು ಸೂಚಿಸಬೇಕು. ಸಾಲ ಮರುಪಾವತಿ ಬಗ್ಗೆ ಬ್ಯಾಂಕ್ ನಿಂದಲೂ ನಿಯಮಿತವಾಗಿ ಮಾಹಿತಿ ಪಡೆಯುವ ಅವಕಾಶ ಇದೆ. ಇದರ ಜತೆ ಗ್ಯಾರಂಟರ್ ಆಗಿ ಇರುವವರ ಕ್ರೆಡಿಟ್ ಸ್ಕೋರ್ ಸಹ ಆಗಾಗ ಪರಿಶೀಲಿಸಬೇಕು. ಅನುಮಾನ ಮೂಡುವಂತೆ ಕ್ರೆಡಿಟ್ ಸ್ಕೋರ್ ನಲ್ಲಿ ಭಾರೀ ಇಳಿಕೆ ಆಗಿದ್ದಲ್ಲಿ ತಕ್ಷಣ ಎಚ್ಚೆತ್ತುಕೊಳ್ಳಬೇಕು. ಕ್ರೆಡಿಟ್ ಬ್ಯುರೋಗಳು ಸ್ಕೋರ್ ಪರಿಶೀಲಿಸಿದರೆ ಮಾತ್ರ ಅಂಕ ಕಡಿಮೆ ಆಗುತ್ತದೆ ವಿನಾ ಸ್ವಂತ ಕ್ರೆಡಿಟ್ ಸ್ಕೋರ್ ಪರಿಶೀಲಿಸಿದರೆ ಯಾವುದೇ ಪಾಯಿಂಟ್ ಕಡಿತ ಆಗುವುದಿಲ್ಲ. ಬಹಳ ಸಂದರ್ಭಗಳಲ್ಲಿ ಉದ್ದೇಶಪೂರ್ವಕವಾಗಿ ಯಾರೂ ಸಾಲ ಮರುಪಾವತಿಸದೆ ಇರುವುದಿಲ್ಲ. ಆದರೆ ಸನ್ನಿವೇಶದಿಂದ ಹಾಗಾಗಿರುತ್ತದೆ. ಆದ್ದರಿಂದ ಗ್ಯಾರಂಟರ್ ಆದವರೇ ಸಾಲ ಸುರಕ್ಷತೆ ವಿಮೆ ಖರೀದಿಗೆ ಸಾಲಗಾರರಿಗೆ ಸೂಚಿಸಬೇಕು. ಏಕೆಂದರೆ, ಸಾಲ ಪಡೆದ ವ್ಯಕ್ತಿ ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾದಲ್ಲಿ ಅಥವಾ ತೀರಿಕೊಂಡಲ್ಲಿ ಆ ಇನ್ಷೂರೆನ್ಸ್ ಸಹಾಯಕ್ಕೆ ಬರುತ್ತದೆ.

ಜವಾಬ್ದಾರಿಯಿಂದ ಹೊರ ಬರುವುದು ಹೇಗೆ?

ಜವಾಬ್ದಾರಿಯಿಂದ ಹೊರ ಬರುವುದು ಹೇಗೆ?

ಗ್ಯಾರಂಟರ್ ಎಂಬ ಜವಾಬ್ದಾರಿಯಿಂದ ಹೊರಬೀಳಲು ಹಲಬು ಕಾರಣಗಳು ಇರುತ್ತವೆ. ಅದರಲ್ಲಿ ಒಂದು, ಗ್ಯಾರಂಟರ್ ಆದವರು ತಾವು ಸಾಲ ಪಡೆಯುತ್ತಿದ್ದೇನೆ ಎನ್ನುವುದು. ಕೆಲ ಬ್ಯಾಂಕ್ ಗಳು ಗ್ಯಾರಂಟರ್ ಎಂಬ ಜವಾಬ್ದಾರಿಯಿಂದ ಹಿಂದೆ ಸರಿಯಲು ಅವಕಾಶ ನೀಡುವುದಿಲ್ಲ. ಆಗ ಹೆಚ್ಚುವರಿಯಾಗಿ ಅಥವಾ ಮತ್ತೊಬ್ಬರು ಗ್ಯಾರಂಟರ್ ಆಗಿ ನಿಲ್ಲಬೇಕು. ಹೀಗೆ ಮತ್ತೊಬ್ಬರು ಗ್ಯಾರಂಟರ್ ಆಗಿ ಬಂದರೂ ಆ ಜವಾಬ್ದಾರಿಯಿಂದ ಹೊರಬರುವುದಕ್ಕೆ ಬ್ಯಾಂಕ್ ಗಳು ಅವಕಾಶ ನೀಡದೇ ಇರಬಹುದು. ಸಾಲ ಪಡೆದ ವ್ಯಕ್ತಿ ಪದೇ ಪದೇ ಕಂತು ತಪ್ಪಿಸುತ್ತಿದ್ದಲ್ಲಿ ಸಮಾಜದ ಪ್ರಭಾವಿಗಳು, ಗಣ್ಯರಿಂದ, ಸ್ನೇಹಿತರಿಂದ, ಕುಟುಂಬ ಸದಸ್ಯರಿಂದ ಒತ್ತಡ ಹಾಕಿಸಬಹುದು. ಒಂದು ವೇಳೆ ಸಾಲವೇ ವಾಪಸ್ ಮಾಡದಿದ್ದಾಗ ಕಾಯ್ದೆಯೇ ಹೇಳುವಂತೆ, ಹಣವನ್ನು ಸಾಲ ಪಡೆದ ವ್ಯಕ್ತಿಯಿಂದ ವಾಪಸ್ ಪಡೆಯುವ ಹಕ್ಕು ಗ್ಯಾರಂಟರ್ ಗೆ ಇರುತ್ತದೆ. ಈ ಸನ್ನಿವೇಶದಲ್ಲಿ ಸಬ್ ರೋಗೇಶನ್ ಎಂಬ ಪದವನ್ನು ಬಳಸಲಾಗುತ್ತದೆ. ಅಂದರೆ, ಬೇರೊಬ್ಬ ವ್ಯಕ್ತಿಯ ಸ್ಥಾನದಲ್ಲಿ ನಿಂತು, ಗ್ಯಾರಂಟರ್ ಈಗ ಸಾಲ ನೀಡಿದ ವ್ಯಕ್ತಿಯ ಸ್ಥಾನದಲ್ಲಿ ನಿಲ್ಲುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+