ಬೆಂಗಳೂರು, ಆಗಸ್ಟ್ 16: ಭಾರತದ ಐಟಿ ಸಿಟಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದು. ಬೆಂಗಳೂರು ತನ್ನ ವೈವಿಧ್ಯತೆಯಷ್ಟೇ ಶ್ರೀಮಂತ ನಗರವಾಗಿದೆ, ಸಾಂಸ್ಕೃತಿಕ ವೈವಿಧ್ಯತೆ ಮತ್ತು ಅತ್ಯಾಧುನಿಕ ತಂತ್ರಜ್ಞಾನಗಳ ಅತ್ಯುತ್ತಮ ಮಿಶ್ರಣವಾಗಿದೆ. ಇದು ನಿರಂತರವಾಗಿ ವಿಕಸನಗೊಳ್ಳುತ್ತಿರುವ ನಗರವಾಗಿದೆ. ಇಷ್ಟೇ ಅಲ್ಲದೇ ವಿದೇಶಿ ಹೂಡಿಕೆದಾರರು ಮತ್ತು MNC ಗಳ ನೆಚ್ಚಿನ ತಾಣ ಬೆಂಗಳೂರಾಗಿದೆ. ಆದರೆ ಇಷ್ಟೆಲ್ಲ ಪ್ರಗತಿ ಸಾಧಿಸಿದರೂ, ದೇಶದ ಆರ್ಥಿಕತೆಯಲ್ಲಿ ಮಹತ್ವದ ಪಾಲು ನೀಡುತ್ತಿದ್ದರೂ ಬೆಂಗಳೂರಿಗೆ 'ಮೆಟ್ರೋ ಸಿಟಿ' ಮಾನ್ಯತೆ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದೆ ಎನ್ನುವುದು ಬೇಸರದ ಸಂಗತಿಯಾಗಿದೆ. ಒಂದು ವೇಳೆ ಬೆಂಗಳೂರು ನಗರವನ್ನು 'ಮೆಟ್ರೋ ಸಿಟಿ'ಯಾಗಿ ಮೇಲ್ದರ್ಜೆಗೇರಿಸಿದರೆ ಅನೇಕ ಲಾಭಗಳಿವೆ.
ಮುಂಬೈ, ಚೆನ್ನೈ, ಕೋಲ್ಕತಾ ಮತ್ತು ದೆಹಲಿಗಳನ್ನು ಮೆಟ್ರೋ ನಗರಗಳು ಎಂದು ಪರಿಗಣಿಸಲಾಗಿದೆ. ಚೆನ್ನೈ ಮತ್ತು ಕೋಲ್ಕತ್ತಾಗೆ ಹೋಲಿಸಿದರೆ ಬೆಂಗಳೂರು ಅತಿ ಹೆಚ್ಚಿನ ಅಭಿವೃದ್ಧಿ ಸಾಧಿಸಿದೆ. ಆದರೆ, ಈ ನಗರಗಳಿಗೆ ಸಿಕ್ಕಿರುವ ಮಾನ್ಯತೆ ನಮ್ಮ ರಾಜ್ಯ ರಾಜಧಾನಿಗೆ ಸಿಕ್ಕಿಲ್ಲ ಎನ್ನುವುದು ವಿಪರ್ಯಾಸದ ಸಂಗತಿಯಾಗಿದೆ.

"ಬೆಂಗಳೂರಿಗೆ ಮೆಟ್ರೋ ಸಿಟಿ ಸ್ಥಾನಮಾನ ಸಿಕ್ಕರೆ ಸಂಬಳ ಪಡೆಯುವ ಮತ್ತು ಆದಾಯ ತೆರಿಗೆ ಪಾವತಿಸುವ ಜನರ ದೊಡ್ಡ ವರ್ಗಕ್ಕೆ ಇದರಿಂದ ಲಾಭವಾಗಲಿದೆ. ಮೆಟ್ರೋ ಸ್ಥಾನಮಾನ ಪಡೆದಿರುವ ನಗರಗಳಿಗೆ ಮನೆ ಬಾಡಿಗೆ ಭತ್ಯೆ (ಎಚ್ಆರ್ಎ) ತೆರಿಗೆವಿನಾಯತಿ ಸೇರಿ ಹಲವು ಲಾಭಗಳು ಸಿಗಲಿದೆ. ಆ ನಗರದ ಉದ್ಯೋಗಿಗಳು ತಮ್ಮ ಮೂಲ ವೇತನದ ಶೇ.50ರಷ್ಟನ್ನು ಮನೆ ಬಾಡಿಗೆ ಭತ್ಯೆ ತೆರಿಗೆ ವಿನಾಯಿತು ಎಂದು ಕ್ಲೇಮ್ ಮಾಡಬಹುದಾಗಿದೆ. ಮೆಟ್ರೋ ಮಾನ್ಯತೆ ಇಲ್ಲದ ನಗರಗಳ ನಿವಾಸಿಗಳು ತಮ್ಮ ಮೂಲವೇತನದ ಶೇ.40ರಷ್ಟನ್ನು ಮಾತ್ರ ಎಚ್ಆರ್ಎ ತೆರಿಗೆ ವಿನಾಯಿತಿ ಎಂದು ಕ್ಲೇಮ್ ಮಾಡಲು ಸಾಧ್ಯವಾಗುತ್ತದೆ"ಎಂದು ನಾಗರಿಕ ಕಾರ್ಯಕರ್ತರಾದ ಶ್ರೀನಿವಾಸ್ ಅಲವಿಲ್ಲಿ ಹೇಳುತ್ತಾರೆ.
"ಸಾಮಾನ್ಯವಾಗಿ ಜನಗಣತಿ ಡೇಟಾ ಮತ್ತು ಜನಸಂಖ್ಯೆಯ ಆಧಾರದ ಮೇಲೆ ಸ್ಥಳಗಳನ್ನು ಗ್ರಾಮಗಳು, ಪಟ್ಟಣಗಳು, ನಗರಗಳು ಮತ್ತು ಮಹಾನಗರಗಳಾಗಿ ವರ್ಗೀಕರಿಸಲಾಗುತ್ತಾದೆ. ಆದರೆ ಭಾರತದಲ್ಲಿ ಈ ವ್ಯಾಖ್ಯಾನಗಳನ್ನು ಅನುಸರಿಸುವುದಿಲ್ಲ. ಭಾರತದಲ್ಲಿ, 1960 ರ ದಶಕದಲ್ಲಿ ರಚಿಸಲಾದ ಆದಾಯ ತೆರಿಗೆ ನಿಯಮಗಳ ಆಧಾರದ ಮೇಲೆ ವರ್ಗೀಕರಣವನ್ನು ಮಾಡಲಾಗಿದೆ ಈಗ, ಐಟಿ ನಿಯಮಗಳನ್ನು ಮರು ವ್ಯಾಖ್ಯಾನಿಸುವುದು ಕಷ್ಟ," ಅವರು ಸೇರಿಸುತ್ತಾರೆ. ಮುಂಬೈ, ಚೆನ್ನೈ, ನವದೆಹಲಿ ಮತ್ತು ಕೋಲ್ಕತ್ತಾವನ್ನು ದಶಕಗಳ ಹಿಂದೆ ಮೆಟ್ರೋ ಎಂದು ವರ್ಗೀಕರಿಸಲಾಗಿದೆ" ಎಂದು ಅಲವಿಲ್ಲಿ ವಿವರಿಸುತ್ತಾರೆ.
"ಆದರೆ ಇನ್ನು ಮುಂದೆ ಬೆಂಗಳೂರನ್ನು ಮೆಟ್ರೋ ಸಿಟಿಯಿಂದ ಹೊರಗಿಡುವುದರಲ್ಲಿ ಅರ್ಥವಿಲ್ಲ. "ಜನಸಂಖ್ಯೆ ಮತ್ತು ಬೆಳವಣಿಗೆಗೆ ಸಂಬಂಧಿಸಿದಂತೆ, ಬೆಂಗಳೂರು ಮೆಟ್ರೋ ಅಲ್ಲದಿದ್ದರೆ, ಏನೆಂದು ನನಗೆ ತಿಳಿದಿಲ್ಲ. ಬೆಂಗಳೂರು ಬೃಹತ್ ಐಟಿ ಮತ್ತು ಸ್ಟಾರ್ಟ್ಅಪ್ ಹಬ್ ಆಗಿ ಬೆಳೆಯುತ್ತಿದೆ. ಹೆಚ್ಚಿನ ಜನಸಂಖ್ಯಾ ಸಾಂದ್ರತೆ, ಗಮನಾರ್ಹ ಆರ್ಥಿಕ ಚಟುವಟಿಕೆ ಮತ್ತು ವೇಗದ ಜೀವನಶೈಲಿಯಂತಹ ಇತರ ಮೆಟ್ರೋ ನಗರಗಳ ಎಲ್ಲ ಲಕ್ಷಣಗಳನ್ನು ಬೆಂಗಳೂರು ಹೊಂದಿದೆ. ಇದು ಆರ್ಥಿಕ ಬೆಳವಣಿಗೆಯ ಎಂಜಿನ್ ಮತ್ತು ಭಾರತದ ಅತಿ ಹೆಚ್ಚು ನೇರ ತೆರಿಗೆದಾರರ ನಗರವಾಗಿದೆ"ಎಂದು ಅವರು ಹೇಳುತ್ತಾರೆ.
ತೆರಿಗೆ ವಿನಾಯಿತಿಗಳ ಹೊರತಾಗಿ, ಬೆಂಗಳೂರು ಮತ್ತು ಇತರ ಮೆಟ್ರೋ ನಗರಗಳು ನಾಗರಿಕರಿಗೆ ಉತ್ತಮ ಸೇವೆ ಸಲ್ಲಿಸಲು ಮೆಟ್ರೋಪಾಲಿಟನ್ ಆಡಳಿತ ವ್ಯವಸ್ಥೆಗಳನ್ನು ಸಶಕ್ತಗೊಳಿಸಲು ಅರ್ಹವಾಗಿವೆ ಎಂದು ಅಲವಿಲ್ಲಿ ಅವರ ನಂಬಿಕೆಯಾಗಿದೆ.
ಬೆಂಗಳೂರಲ್ಲಿ ಮನೆಗಳ ಬಾಡಿಗೆ ದರಗಳೂ ತುಟ್ಟಿಯಾಗಿರುವುದರಿಂದ ಎಚ್ಆರ್ಎ ವಿನಾಯಿತಿ ಪಡೆದುಕೊಳ್ಳಲು ನಗರಿಗೆ ಮೆಟ್ರೋ ಸ್ಥಾನ ನೀಡಬೇಕೆಂದು ಬೇಡಿಕೆ ಇಡಲಾಗಿತ್ತು. ಆದರೆ, ಕೇಂದ್ರ ಇದನ್ನು ನಿರಾಕರಿಸಿದೆ. ತೆರಿಗೆ ದರಗಳನ್ನು ತರ್ಕಬದ್ಧಗೊಳಿಸುವುದು, ವಿನಾಯಿತಿ ಹಾಗೂ ಕಡಿತಗಳಿಂದ ದೂರ ಸರಿವುದು ಸರ್ಕಾರದ ಘೋಷಿತ ನೀತಿ. ಹಾಗಾಗಿ ಹೆಚ್ಚಿನ ನಗರಗಳಿಗೆ ಮೆಟ್ರೋ ಮಾನ್ಯತೆ ನೀಡಲಾಗಲ್ಲ. ಸರ್ಕಾರದ ಪ್ರಸ್ತುತದ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಹಾಗೂ ಮೆಟ್ರೋ ನಗರಗಳ ಪಟ್ಟಿಗೆ ಹೊಸ ನಗರದ ಸೇರ್ಪಡೆಯ ಯಾವ ಅಲೋಚನೆಯೂ ಇಲ್ಲ ಎಂದು ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಸಂಸತ್ಗೆ ತಿಳಿಸಿದ್ದಾರೆ.


Click it and Unblock the Notifications