ಹದಿನೈದನೇ ಹಣಕಾಸಿನ ಆಯೋಗದಿಂದ 2021ರಿಂದ 26ರ ವರೆಗಿನ ವರದಿ ರಾಷ್ಟ್ರಪತಿಗೆ ಸಲ್ಲಿಕೆ
ಎನ್.ಕೆ. ಸಿಂಗ್ ಅಧ್ಯಕ್ಷತೆಯಲ್ಲಿ ಹದಿನೈದನೇ ಹಣಕಾಸಿನ ಆಯೋಗದಿಂದ ಸೋಮವಾರ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಗೆ ವರದಿ ಸಲ್ಲಿಸಲಾಗಿದೆ. 2021- 22ರಿಂದ 2025- 26ರ ತನಕದ ಅವಧಿಗೆ ವರದಿ ನೀಡಲಾಗಿದೆ ಎಂದು ಸರ್ಕಾರದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಆಯೋಗದ ಸದಸ್ಯರಾದ ಅಜಯ್ ನಾರಾಯಣ್ ಝಾ, ಪ್ರೊ. ಅನೂಪ್ ಸಿಂಗ್, ಡಾ. ಅಶೋಕ್ ಲಾಹಿರಿ ಮತ್ತು ಡಾ. ರಮೇಶ್ ಚಾಂದ್ ಆವರು ಆಯೋಗದ ಕಾರ್ಯದರ್ಶಿ ಅರವಿಂದ್ ಮೆಹ್ತಾ ಜತೆಗೆ ಇದ್ದರು. "ಕೋವಿಡ್ ಸಮಯದಲ್ಲಿ ಹಣಕಾಸು ಆಯೋಗ" ಎಂಬ ಶೀರ್ಷಿಕೆ ಅಡಿಯಲ್ಲಿ ವರದಿಯನ್ನು ರಾಷ್ಟ್ರಪತಿಗೆ ನೀಡಲಾಗಿದೆ.
ಅಪನಗದೀಕರಣಕ್ಕೆ ನಾಲ್ಕು ವರ್ಷ: ಇದರಿಂದ ಮಾಡಿದ ಸಾಧನೆ ಏನು?
ಆಯೋಗದಿಂದ ಐದು ವರ್ಷಕ್ಕೆ 2021- 22ರಿಂದ 2025- 26ರ ತನಕದ ಅವಧಿಗೆ ವರದಿಯನ್ನು ಅಕ್ಟೋಬರ್ 30, 2020ರೊಳಗೆ ಸಲ್ಲಿಸಬೇಕಿತ್ತು. ಈ ವರದಿಯಲ್ಲಿ ವಿವಿಧ ಶಿಫಾರಸುಗಳು ಒಳಗೊಂಡಿವೆ. ರಾಜ್ಯಗಳಲ್ಲಿನ ವಿದ್ಯುತ್ ವಲಯ, ನೇರ ಅನುಕೂಲ ವರ್ಗಾವಣೆ, ಘನತ್ಯಾಜ್ಯ ನಿರ್ವಹಣೆಗೆ ಹೇಗೆ ಪ್ರೋತ್ಸಾಹಧನವನ್ನು ಬಳಸಿಕೊಳ್ಳಲಾಗುತ್ತಿದೆ ಎಂಬಿತ್ಯಾದಿ ಮೌಲ್ಯಮಾಪನ ಇವೆ.
ರಕ್ಷಣೆ ಮತ್ತು ಆಂತರಿಕ ಭದ್ರತೆಗೆ ಇರುವ ಹಣಕಾಸು ಲಭ್ಯತೆ ಬಗ್ಗೆ ಕೂಡ ಪರಿಶೀಲನೆ ನಡೆಸುವಂತೆ ಕೇಳಲಾಗಿತ್ತು. ಈ ವರದಿಯಲ್ಲಿ ನಾಲ್ಕು ಸಂಪುಟಗಳು ಒಳಗೊಂಡಿವೆ. ಒಂದು ಮತ್ತು ಎರಡಲ್ಲಿ ಮುಖ್ಯ ವರದಿ ಹಾಗೂ ಸಂಬಂಧಪಟ್ಟ ಅಡಕಗಳು ಒಳಗೊಂಡಿವೆ. ಇನ್ನು ಮೂರನೇ ಭಾಗ ಕೇಂದ್ರ ಸರ್ಕಾರಕ್ಕೆ ಮೀಸಲಾಗಿದ್ದು, ಪ್ರಮುಖ ಇಲಾಖೆಗಳನ್ನು ಆಳವಾಗಿ ಪರೀಕ್ಷಿಸಲಾಗಿದೆ. ನಾಲ್ಕನೇ ಸಂಪುಟ ರಾಜ್ಯಗಳಿಗೆ ಸಂಬಂಧಿಸಿದವು.
ಇವುಗಳನ್ನು ಸಂಸತ್ ನಲ್ಲಿ ಕೇಂದ್ರದಿಂದ ಮಂಡನೆ ಮಾಡಿದ ಮೇಲೆ ಸಾರ್ವಜನಿಕವಾಗಿ ಲಭ್ಯ ಆಗಲಿವೆ. ಕಳೆದ ವರ್ಷದ ವರದಿಯನ್ನು ಜನವರಿ ಕೊನೆಯಲ್ಲಿ ಸಂಸತ್ ನಲ್ಲಿ ಮಂಡಿಸಲಾಗಿತ್ತು.