ನವದೆಹಲಿ, ಜನವರಿ 25: ರೈತರು, ಸಣ್ಣ ಪ್ರಮಾಣದ ವ್ಯಾಪಾರಿಗಳು ಹಾಗೂ ಕೇಂದ್ರ ಸರಕಾರದ ಕೆಲವು ನೀತಿ ನಿಯಮಾವಳಿಯಿಂದ ಬೇಸರಗೊಂಡವರನ್ನು ಮನವೊಲಿಸುವುದು ಹೇಗೆ ಎಂಬ ಬಗ್ಗೆ ಬಜೆಟ್ ಮುಂಚಿತವಾಗಿ ಲೆಕ್ಕಾಚಾರ ಶುರುವಾಗಿದೆ. ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಸೋಲಿನಿಂದ ಬಿಜೆಪಿ ಎಚ್ಚೆತ್ತುಕೊಂಡಿದೆ. ಏಕೆಂದರೆ, ಈ ವರ್ಷ ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆ ಇದೆ.
ಗುರುವಾರವಷ್ಟೇ ಹೊರ ಬಂದಿರುವ ಎರಡು ಸಮೀಕ್ಷೆಗಳ ಪ್ರಕಾರ, ಬಿಜೆಪಿ ನೇತೃತ್ವದ ಮೈತ್ರಿ ಪಕ್ಷ ದೊಡ್ಡ ಮಟ್ಟದಲ್ಲಿ ಸ್ಥಾನಗಳನ್ನು ಗಳಿಸಬಹುದು. ಆದರೆ ಬಹುಮತ ಸಿಗುವುದು ಅನುಮಾನ. ಆದ್ದರಿಂದಲೇ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರಕಾರ ಮಧ್ಯಂತರ ಬಜೆಟ್ ನಲ್ಲಿ ಜನಪ್ರಿಯ ಘೋಷಣೆಗಳನ್ನು ಮಾಡುವ ಸಾಧ್ಯತೆ ಇದೆ.
ಕೇಂದ್ರದ ಮಧ್ಯಂತರ ಬಜೆಟ್ ಫೆಬ್ರವರಿ 01 ಕ್ಕೆ ಮಂಡನೆ
ಈಗಾಗಲೇ ಮೋದಿ ಸರಕಾರ ವಿತ್ತೀಯ ಕೊರತೆ ಗುರಿಯನ್ನು ಮೀರಿಹೋಗುವ ಅಪಾಯ ಎದುರಿಸುತ್ತದೆ. ಈ ವರದಿಯಲ್ಲಿ ಕೆಲವು ಸಂಭವನೀಯ ನಿರ್ಧಾರಗಳನ್ನು ಪಟ್ಟಿ ಮಾಡಲಾಗಿದೆ. ಇವುಗಳನ್ನು ಈ ಬಾರಿ ಬಜೆಟ್ ನಲ್ಲಿ ತರಬಹುದು ಎಂಬುದು ಸದ್ಯದ ನಿರೀಕ್ಷೆ ಹಾಗೂ ಲೆಕ್ಕಾಚಾರ. ಫೆಬ್ರವರಿ ಒಂದನೇ ತಾರೀಕಿನಂದು ಬಜೆಟ್. ಈಗ ತೆಗೆದುಕೊಳ್ಳುವ ನಿರ್ಧಾರ ಮುಂದಿನ ಸರಕಾರದ ಮೇಲೆ ಹೊರೆ ಆಗಲಿದೆ.
ಸಣ್ಣ ಮಟ್ಟದ ವ್ಯಾಪಾರಿಗಳಿಗೆ ದೊಡ್ಡ ಕೊಡುಗೆ
ನಿಮಗೆ ನೆನಪಿರುವುದಾದರೆ, ಜನವರಿ ಹತ್ತನೇ ತಾರೀಕು ಘೋಷಣೆ ಮಾಡಿದ ಪ್ರಕಾರ, ಸಣ್ಣ ಮಟ್ಟದ ವ್ಯಾಪಾರ ಮಾಡುವ ಇಪ್ಪತ್ತು ಲಕ್ಷ ಹೆಚ್ಚುವರಿ ವ್ಯಾಪಾರಿಗಳು ರಾಷ್ಟ್ರೀಯ ಮಾರಾಟ ತೆರಿಗೆಯಿಂದ ವಿನಾಯಿತಿ ಪಡೆದಿದ್ದಾರೆ. ಮುಂದಿನ ಏಪ್ರಿಲ್ ನಿಂದ ವಾರ್ಷಿಕ ಮಾರಾಟ ನಲವತ್ತು ಲಕ್ಷ ರುಪಾಯಿ ಇರುವ ವ್ಯಾಪಾರಿಗಳು ಜಿಎಸ್ ಟಿಯಿಂದ (ಸರಕು ಮತ್ತು ಸೇವಾ ತೆರಿಗೆ) ವಿನಾಯಿತಿ ಪಡೆಯಲಿದ್ದಾರೆ. ಸದ್ಯಕ್ಕೆ ಈ ವಿನಾಯಿತಿ ವರ್ಷಕ್ಕೆ ಇಪ್ಪತ್ತು ಲಕ್ಷ ರುಪಾಯಿ ಮಾತ್ರ ಇದೆ. ಇದರ ಜತೆಗೆ ಕಡಿಮೆ ಬಡ್ಡಿ ದರದ ಸಾಲ, ಉಚಿತ ಅಪಘಾತ ವಿಮಾ ಸೌಲಭ್ಯ ಒದಗಿಸುವ ಬಗ್ಗೆ ಸರಕಾರ ಚಿಂತಿಸುತ್ತಿದೆ.
1 ಲಕ್ಷ ಕೋಟಿಗೂ ಹೆಚ್ಚು ವೆಚ್ಚ
ಕೃಷಿಕರಿಗೆ ನೇರ ನಗದು ವರ್ಗಾವಣೆ ಹಾಗೂ ಬಡ್ಡಿರಹಿತ ಸಾಲ ನೀಡುವ ಬಗ್ಗೆ ಚಿಂತನೆ ನಡೆದಿದೆ. ಅಂಥ ಸಾಲಗಳನ್ನು ಸರಕಾರಿ ಬ್ಯಾಂಕ್ ಗಳಿಂದ ನೀಡಿದರೆ ಸರಕಾರ ಹಣಕಾಸು ಒದಗಿಸಲಿದೆ. ಇದರಿಂದ ಸರಕಾರಕ್ಕೆ ವರ್ಷಕ್ಕೆ 12 ಸಾವಿರ ಕೋಟಿ ವೆಚ್ಚವಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಬಡ್ಡಿ ರಹಿತ ಸಾಲದ ವಿಷಯದಲ್ಲಿ ಇನ್ನೊಂದು ಆಯ್ಕೆ ಇದೆ. ಪ್ರತಿ ಹೆಕ್ಟೇರ್ ಗೆ 2 ರಿಂದ 4 ಸಾವಿರ ರೈತರಿಗೆ ನೀಡಲಾಗುತ್ತದೆ. ಇದರಿಂದ ಸರಕಾರಕ್ಕೆ ಆಗಬಹುದಾದ ಅಂದಾಜು ವೆಚ್ಚ 1 ಲಕ್ಷ ಕೋಟಿಗೂ ಹೆಚ್ಚು. ಅಂದಹಾಗೆ ಕೃಷಿ ಸಾಲ ಮನ್ನಾ ಬಿಜೆಪಿಯ ಆಯ್ಕೆ ಅಲ್ಲ. ಆದರೆ ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಮಾಡಿದ ಸಾಲ ಮನ್ನಾ ಘೋಷಣೆಯಿಂದ ಆ ಪಕ್ಷಕ್ಕೆ ನೆರವಾಗಿದೆ. ಆದ್ದರಿಂದ ಈಗ ಬಿಜೆಪಿಯೂ ಆ ಬಗ್ಗೆ ಚಿಂತಿಸುತ್ತಿದೆ.
ಮಧ್ಯಂತರ ಬಜೆಟ್ ಮನವೊಲಿಕೆಯದ್ದಲ್ಲ, ಅನಾರೋಗ್ಯದ ಮಧ್ಯೆಯೂ ಜೇಟ್ಲಿ ಹೇಳಿದ್ದೇನು?
ಉದ್ಯೋಗ ಮೀಸಲಾತಿ ಯೋಜನೆ
ಉದ್ಯೋಗ ಹಾಗೂ ಶಿಕ್ಷಣದಲ್ಲಿ ಈಚೆಗೆ ಜಾರಿಗೆ ತಂದ ಮೇಲ್ಜಾತಿಯವರ ಮೀಸಲಾತಿ ಹತ್ತು ಪರ್ಸೆಂಟ್ ಅನ್ನು ಪರಿಣಾಮಕಾರಿಯಾಗಿ ಮಾಡುವ ನಿಟ್ಟಿನಲ್ಲಿ ಭಾರತವು ಕೋಟ್ಯಂತರ ರುಪಾಯಿ ವೆಚ್ಚ ಮಾಡುವ ಗುರಿ ಹಾಕಿಕೊಂಡಿದೆ. ಈಗಾಗಲೇ ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ಇದೆ.
ಈರುಳ್ಳಿ ಬೆಳೆಗಾರರಿಗೆ ಪ್ರೋತ್ಸಾಹ
ಈರುಳ್ಳಿ ಬೆಳೆಗಾರರಿಗೆ ನೀಡುವ ರಫ್ತು ಪ್ರೋತ್ಸಾಹಧನವನ್ನು ಕಳೆದ ಡಿಸೆಂಬರ್ ನಲ್ಲಿ ಭಾರತವು ಎರಡು ಪಟ್ಟು ಮಾಡಿದ್ದು, ಹತ್ತು ಪರ್ಸೆಂಟ್ ಗೆ ಏರಿಸಲಾಗಿದೆ. ಪ್ರಮುಖ ಬೆಳೆಗಳ ಬೆಲೆ ಕುಸಿತದ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಕಾರ್ಯಕ್ರಮದ ಪ್ರಕಾರ ಕ್ರೆಡಿಟ್ ಅನ್ನು ತೆರಿಗೆ ಪಾವತಿಸಲು ಬಳಸಬಹುದು.
ಇ ಕಾಮರ್ಸ್ ಕಂಪನಿಗಳಿಗೆ ಕಡಿವಾಣ
ಯಾವ ಕಂಪನಿಯಲ್ಲಿ ತನ್ನ ಪಾಲು ಹೊಂದಿದೆಯೋ ಆ ಕಂಪನಿಯ ಉತ್ಪನ್ನಗಳನ್ನು ಮಾರಾಟ ಮಾಡಲು ವಾಲ್ ಮಾರ್ಟ್ ಆಲೀಕತ್ವದ ಫ್ಲಿಪ್ ಕಾರ್ಟ್, ಅಮೆಜಾನ್ ನಂಥ ಇ ಕಾಮರ್ಸ್ ಕಂಪನಿಗಳಿಗೆ ಫೆಬ್ರವರಿ ಒಂದರಿಂದ ನಿಷೇಧ ಹೇರಲಾಗುವುದು. ಚಿಲ್ಲರೆ ವ್ಯಾಪಾರಿಗಳಿಂದ ದೊಡ್ಡ ಮಟ್ಟದಲ್ಲಿ ದೂರು ಬಂದ ನಂತರ ಸರಕಾರ ಈ ನಿರ್ಧಾರ ಕೈಗೊಂಡಿದೆ.
ತೆರಿಗೆ ಕಡಿತ
ಕಳೆದ ಡಿಸೆಂಬರ್ ಇಪ್ಪತ್ತೆರಡನೇ ತಾರೀಕು ಇಪ್ಪತ್ತಕ್ಕೂ ಹೆಚ್ಚು ವಸ್ತುಗಳ ಮೇಲಿನ ಮಾರಾಟ ತೆರಿಗೆಯನ್ನು ಕೇಂದ್ರ ಸರಕಾರ ಇಳಿಕೆ ಮಾಡಿತ್ತು. ಟೀವಿಯಿಂದ ಸಿನಿಮಾ ಟಿಕೆಟ್ ತನಕ ಇಳಿಕೆ ಆಗಿತ್ತು. ಇದೀಗ ಆದಾಯ ತೆರಿಗೆ ಮಿತಿಯನ್ನು ಏರಿಸುವ ಬಗ್ಗೆ ಸರಕಾರ ಆಲೋಚನೆ ಮಾಡುತ್ತಿದೆ ಎಂದು ಬಿಜೆಪಿ ಹೇಳಿದೆ.


Click it and Unblock the Notifications