ಆಧಾರ್ ಡೇಟಾ ದುರ್ಬಳಕೆಯಾಗಿದೆ: ಎಸ್ಬಿಐ ಆರೋಪ
ವಿಶಿಷ್ಟ ಗುರುತಿನ ಪ್ರಾಧಿಕಾರದ (ಯುಐಡಿಎಐ) ಡೇಟಾವನ್ನು ದುರ್ಬಳಕೆ ಮಾಡಲಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಅಧಿಕಾರಿಗಳು ಆರೋಪ ಮಾಡಿದ್ದಾರೆ.
ವಿಶಿಷ್ಟ ಗುರುತಿನ ಪ್ರಾಧಿಕಾರದ (ಯುಐಡಿಎಐ) ಡೇಟಾವನ್ನು ದುರ್ಬಳಕೆ ಮಾಡಲಾಗಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಅಧಿಕಾರಿಗಳು ಆರೋಪ ಮಾಡಿದ್ದಾರೆ. ಅನಧಿಕೃತ ಆಧಾರ್ ಕಾರ್ಡ್ ಗಳನ್ನು ಸೃಷ್ಟಿಸಲು ಆಧಾರ್ ಅಪರೇಟರ್ ಗಳು ಲಾಗಿನ್ ಮತ್ತು ಬಯೊಮೆಟ್ರಿಕ್ ಅನ್ನು ದುರ್ಬಳಕೆ ಮಾಡಿದ್ದಾರೆ ಎಂದು ಬ್ಯಾಂಕ್ ಅಧಿಕಾರಿಗಳು ಯುಐಡಿಎಐಗೆ ಮಾಹಿತಿ ನೀಡಿದ್ದಾರೆ.
ಆಧಾರ್ ಡೇಟಾಬೇಸ್ ಸಂಪೂರ್ಣವಾಗಿ ಸುರಕ್ಷಿತವಾಗಿದ್ದು, ಭದ್ರತಾ ಉಲ್ಲಂಘನೆ, ಬಯೋಮೆಟ್ರಿಕ್ ದುರ್ಬಳಕೆ ಅಥವಾ ಇನ್ಯಾವುದೇ ಘಟನೆಗಳು ನಡೆದಿಲ್ಲ ಎಂದು ಯುಐಡಿಎಐ ಅಧಿಕಾರಿಗಳು ತಿಳಿಸಿದ್ದಾರೆ.
ಎಸ್ಬಿಐ ಬ್ಯಾಂಕ್ ಅಧಿಕಾರಿಗಳ ಹೇಳುವಂತೆ, ನಕಲಿ ಆಧಾರ್ ಕಾರ್ಡ್ ಮಾಡಿಕೊಳ್ಳಲು ಲಾಗ್ ಇನ್ ಹಾಗೂ ಬಯೋಮೆಟ್ರಿಕ್ ಗಳನ್ನು ಆಧಾರ್ ಆಪರೇಟರ್ ಗಳು ಬಳಸಿಕೊಳ್ಳುತ್ತಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೂ ತರಲಾಗಿದೆ ಎಂದಿದ್ದಾರೆ.
ಆದರೆ ಯುಐಡಿಎಐ ಮಾತ್ರ ಎಸ್ಬಿಐ ಆರೋಪವನ್ನು ಅಲ್ಲಗೆಳೆದಿದ್ದು, ಆಧಾರ್ ಮಾಹಿತಿ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಸ್ಪಷ್ಟನೆ ನೀಡಿದೆ.
ಎಸ್ಬಿಐ ಒಳಗೊಂಡಂತೆ ವಿವಿಧ ಬ್ಯಾಂಕುಗಳಿಗೆ ಪ್ರತಿ ತಿಂಗಳು ಇಂತಿಷ್ಟು ಆಧಾರ್ ಕಾರ್ಡ್ ಜೋಡಣೆ ಹಾಗೂ ಹೊಸ ಆಧಾರ್ ಕಾರ್ಡ್ಗಳನ್ನು ಮಾಡಿಸಬೇಕೆಂದು ಸೂಚನೆ ನೀಡಿದೆ. ಚಂಡಿಘರ್, ಹರಿಯಾಣ, ಪಂಜಾಬ್, ಹಿಮಾಚಲ್ ಪ್ರದೇಶ್, ಜಮ್ಮು ಕಾಶ್ಮೀರ ಹೀಗೆ ಹಲವು ಪ್ರದೇಶಗಳಲ್ಲಿಯೂ ಬ್ಯಾಂಕುಗಳಿಗೆ ಅವಕಾಶ ನೀಡಲಾಗಿತ್ತು. ಬ್ಯಾಂಕುಗಳು ತಮಗೆ ನೀಡಿರುವ ಟಾರ್ಗೆಟ್ ಮುಟ್ಟಲು ಕೆಲ ಸಂಸ್ಥೆಗಳಿಗೆ ಆಧಾರ್ ಕಾರ್ಡ್ ಮಾಡುವ ಗುತ್ತಿಗೆ ನೀಡಿದ್ದವು. ಈ ಪ್ರಕ್ರಿಯೆಯಲ್ಲಿ ಕೆಲವರು ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನಿಸಿರುವುದನ್ನು ಯುಐಎಡಿಐ ಸಂಸ್ಥೆ ಪತ್ತೆ ಹಚ್ಚಿ ದಂಡ ವಿಧಿಸಿತ್ತು.