ಉನ್ನತ ಶಿಕ್ಷಣದ ಬಲವರ್ಧನೆಗೆ 2019ರ ಬಜೆಟ್ ನಲ್ಲಿ ಸರ್ಕಾರ ನೀಡಬೇಕಾದ ಆದ್ಯತೆಗಳೇನು?
ಕಳೆದ 12 ವರ್ಷಗಳಿಂದ 2018-19 ರವರೆಗೆ ಉನ್ನತ ಶಿಕ್ಷಣಕ್ಕಾಗಿ ಪ್ರತಿವರ್ಷ ಸರಾಸರಿ ಶೇ.1.47 ರಷ್ಟು ಹಣ ಖರ್ಚು ಮಾಡಲಾಗಿದೆ. ಪ್ರಸ್ತುತ ಭಾರತವು 15 ರಿಂದ 24 ರ ವಯೋಮಾನದ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿದೆ.
ಭಾರತವು ವಿಶ್ವದ ಅತಿ ದೊಡ್ಡ ಮಾನವ ಸಂಪನ್ಮೂಲ ಭಂಡಾರವನ್ನು ಹೊಂದಿದೆ. ಆದರೆ ಈ ಮಾನವ ಸಂಪನ್ಮೂಲದ ಶಕ್ತಿ, ಸಾಮರ್ಥ್ಯಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳದೆ ಇರುವುದರಿಂದ ದೇಶದ ಮಾನವ ಸಂಪನ್ಮೂಲದ ಶಕ್ತಿ ಕುಂದುತ್ತಿದೆ. ಈಗ ಸಾರ್ವತ್ರಿಕ ಚುನಾವಣೆಗೂ ಮುನ್ನ ಕೇಂದ್ರ ಸರಕಾರ ತನ್ನ ಅವಧಿಯ ಕೊನೆಯ ಬಜೆಟ್ ಅನ್ನು ಮಂಡಿಸಲು ಸಜ್ಜಾಗುತ್ತಿರುವ ಸಂದರ್ಭದಲ್ಲಿಯಾದರೂ ಸರಕಾರ ಈ ವಾಸ್ತವವನ್ನು ಒಪ್ಪಿಕೊಳ್ಳದಿದ್ದರೆ ದೇಶದ ಮಾನವ ಸಂಪನ್ಮೂಲದ ಸಾಮರ್ಥ್ಯಗಳು ಇನ್ನಷ್ಟು ಹಾಳಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.
ಉನ್ನತ ಶಿಕ್ಷಣದ ಸರಾಸರಿ ಖರ್ಚು
ಒಟ್ಟು ಬಜೆಟ್ ನಲ್ಲಿ ಉನ್ನತ ಶಿಕ್ಷಣಕ್ಕಾಗಿ ಖರ್ಚು ಮಾಡುವ ಶೇಕಡಾವಾರು ಮೊತ್ತ ಹಲವಾರು ವರ್ಷಗಳಿಂದ ಒಂದೇ ಪ್ರಮಾಣದಲ್ಲಿದೆ. ಕಳೆದ 12 ವರ್ಷಗಳಿಂದ 2018-19 ರವರೆಗೆ ಉನ್ನತ ಶಿಕ್ಷಣಕ್ಕಾಗಿ ಪ್ರತಿವರ್ಷ ಸರಾಸರಿ ಶೇ.1.47 ರಷ್ಟು ಹಣ ಖರ್ಚು ಮಾಡಲಾಗಿದೆ. ಪ್ರಸ್ತುತ ಭಾರತವು 15 ರಿಂದ 24 ರ ವಯೋಮಾನದ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿದೆ. (241 ಮಿಲಿಯನ್ ಅಥವಾ ಒಟ್ಟು ಭಾರತೀಯರ ಪೈಕಿ ಶೇ.18 ರಷ್ಟು). ಅತಿ ಹೆಚ್ಚು ಯುವ ಸಮೂಹದ ಜನಸಂಖ್ಯೆ ಹೊಂದಿರುವ ರಾಷ್ಟ್ರಗಳ ಪೈಕಿ ಭಾರತ ಚೀನಾವನ್ನೂ (169.4 ಮಿಲಿಯನ್) ಮೀರಿಸಿ ಮುನ್ನಡೆಯುತ್ತಿದೆ ಎಂದು 2017 ರಲ್ಲಿ ವಿಶ್ವಸಂಸ್ಥೆಯ ಅರ್ಥಶಾಸ್ತ್ರ ಹಾಗೂ ಸಾಮಾಜಿಕ ವ್ಯವಹಾರಗಳ ಇಲಾಖೆ ವರದಿ ಮಾಡಿದೆ.
ಗುಣಮಟ್ಟದ ಉನ್ನತ ಶಿಕ್ಷಣ ಬೇಕು
2020ರ ವೇಳೆಗೆ ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇ. 34.33 ರಷ್ಟು ಜನ 15 ರಿಂದ 24 ರೊಳಗಿನ ವಯೋಮಾನದವರು ಇರುತ್ತಾರೆ ಎಂದು ಅಂಕಿ ಅಂಶಗಳು ಹಾಗೂ ಕಾರ್ಯಕ್ರಮಗಳ ಜಾರಿ ಖಾತೆ 2017 ರಲ್ಲಿ ವರದಿ ಸಿದ್ಧಪಡಿಸಿದೆ. ಈಗ ಫೆ. 1 ರಂದು ತನ್ನ ಬಜೆಟ್ ಮಂಡಿಸಲಿರುವ ಕೇಂದ್ರ ಸರಕಾರ ಈ ವಾಸ್ತವವನ್ನು ತೀರಾ ಗಂಭೀರವಾಗಿ ಪರಿಗಣಿಸಬೇಕಿದೆ. ಭಾರತದ ನಿಜವಾದ ಶಕ್ತಿಯಾಗಿರುವ ಈ ಬೃಹತ್ ಯುವ ಸಮೂಹ ಜಾಗತಿಕ ಮಾರುಕಟ್ಟೆಯಲ್ಲಿ ಪೈಪೋಟಿ ನಡೆಸಲು ಬೇಕಾದ ಗುಣಮಟ್ಟದ ಉನ್ನತ ಶಿಕ್ಷಣಕ್ಕಾಗಿ ಬಜೆಟ್ನಲ್ಲಿ ದೊಡ್ಡ ಮೊತ್ತದ ಹಣ ಮೀಸಲಿಡುವುದು ಅತಿ ಅಗತ್ಯವಾಗಿದೆ ಎನ್ನುತ್ತಾರೆ ಆರ್ಥಿಕ ವಿಶ್ಲೇಷಕರು.
ಉನ್ನತ ಶಿಕ್ಷಣಕ್ಕೆ 35 ಸಾವಿರ ಕೋಟಿ ತೀರಾ ಅಲ್ಪ ಮೊತ್ತ
2018-19 ನೇ ಸಾಲಿನ ಬಜೆಟ್ ನಲ್ಲಿ ಉನ್ನತ ಶಿಕ್ಷಣಕ್ಕಾಗಿ 35 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿತ್ತು. ಆದರೆ ಭಾರತದ ಬೃಹತ್ ಜನಸಂಖ್ಯೆಯ ಮುಂದೆ ಈ ಮೊತ್ತ ಯಾತಕ್ಕೂ ಸಾಲದು ಎನ್ನುತ್ತಾರೆ ಹಾರ್ವರ್ಡ್ ಬಿಸಿನೆಸ್ ಸ್ಕೂಲ್ ಇನಸ್ಟಿಟ್ಯೂಟ್ ಫಾರ್ ಸ್ಟ್ರಾಟೆಜಿ ಆಂಡ್ ಕಾಂಪಿಟಿಟಿವನೆಸ್ ಭಾರತೀಯ ಅಂಗ ಸಂಸ್ಥೆಯಾದ ಕಾಂಪಿಟಿಟಿವ್ ಇನಸ್ಟಿಟ್ಯೂಟ್ನ ಚೇರಮನ್ ಅಮಿತ ಕಪೂರ್.
ವಿವಿಗಳಿಗೆ ಅನುದಾನ ಹಂಚಿಕೆ ತಾರತಮ್ಯ; ಐಐಟಿ, ಐಐಎಂಗಳಿಗೆ ಸಿಂಹಪಾಲು
ದೇಶದ ವಿಶ್ವವಿದ್ಯಾಲಯಗಳಿಗೆ ಅನುದಾನದ ಹಂಚಿಕೆ ಏಕರೂಪದಲ್ಲಿ ಇರದಿರುವುದು ಮತ್ತೊಂದು ಕಳವಳಕಾರಿ ವಿಷಯವಾಗಿದೆ. ಸಾರ್ವಜನಿಕ ವಿಶ್ವವಿದ್ಯಾಲಯಗಳನ್ನು ಗಮನಿಸಿದಲ್ಲಿ ಶೇ. 97 ರಷ್ಟು ವಿದ್ಯಾರ್ಥಿಗಳು ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಹಾಗೂ ಇನ್ನುಳಿದ ಶೇ. 3 ರಷ್ಟು ವಿದ್ಯಾರ್ಥಿಗಳು ಕೇಂದ್ರದ ವಿಶ್ವವಿದ್ಯಾಲಯಗಳಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಆದರೆ ಕೇಂದ್ರದ ಉನ್ನತ ಶಿಕ್ಷಣ ಅನುದಾನದ ಶೇ. 57.5 ರಷ್ಟು ಮೊತ್ತವು ಕೇಂದ್ರ ಸರ್ಕಾರದ ವಿವಿಗಳಿಗೆ ಹಾಗೂ ಇನ್ನುಳಿದ ಪ್ರತಿಷ್ಠಿತ ಸಂಸ್ಥೆಗಳಾದ ಐಐಟಿ ಹಾಗೂ ಐಐಎಂಗಳ ಪಾಲಾಗುತ್ತಿದೆ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ. ನಿಜ ಹೇಳಬೇಕೆಂದರೆ ಅನುದಾನ ಕೊರತೆಯಿಂದ ಸೌಕರ್ಯಗಳಿಲ್ಲದೆ ಪರದಾಡುತ್ತಿರುವ ಹಾಗೂ ಹೆಚ್ಚು ಸಂಖ್ಯೆಯ ವಿದ್ಯಾರ್ಥಿಗಳನ್ನು ಕಷ್ಟಪಟ್ಟು ಸಂಭಾಳಿಸುತ್ತಿರುವ ರಾಜ್ಯದ ವಿಶ್ವವಿದ್ಯಾಲಯಗಳಿಗೆ ಇನ್ನೂ ಹೆಚ್ಚಿನ ಅನುದಾನ ದೊರಕಬೇಕಿದೆ. ಆದರೆ ಕೇಂದ್ರ ಸರಕಾರದ ನಿರ್ಲಕ್ಷ ಹಾಗೂ ತಾರತಮ್ಯ ಧೋರಣೆಯಿಂದ ಉನ್ನತ ಶಿಕ್ಷಣಕ್ಕೆ ಮೀಸಲಾದ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಉಂಟಾಗುತ್ತಿದೆ ಎನ್ನುತ್ತಾರೆ ಹಣಕಾಸು ತಜ್ಞರು.
ಕೇಂದ್ರದ ಅನುದಾನ ಪ್ರಕ್ರಿಯೆ ಸರಳ
ಪ್ರಸ್ತುತ ರಾಜ್ಯ ಸರಕಾರಗಳ ಅಧೀನದಲ್ಲಿರುವ ವಿಶ್ವವಿದ್ಯಾಲಯಗಳು ಕೇಂದ್ರ ಸರಕಾರದ ಪಾಲಿನ ಅನುದಾನವನ್ನು ಯುನಿವರ್ಸಿಟಿ ಗ್ರ್ಯಾಂಟ್ಸ್ ಕಮೀಷನ್ (ಯುಜಿಸಿ) ಮತ್ತು ರಾಷ್ಟ್ರೀಯ ಉಚ್ಚತರ ಶಿಕ್ಷಾ ಅಭಿಯಾನಗಳ ಮೂಲಕ ಹಾಗೂ ಇನ್ನುಳಿದ ಭಾಗಶಃ ಅನುದಾನವನ್ನು ರಾಜ್ಯ ಸರಕಾರಗಳಿಂದ ಪಡೆಯುತ್ತಿವೆ. ಆದರೆ ಕೇಂದ್ರ ಸರಕಾರದಿಂದ ಅನುದಾನ ಪಡೆದುಕೊಳ್ಳುವ ಪ್ರಕ್ರಿಯೆ ರಾಜ್ಯಗಳಿಗಿಂತ ಸರಳವಾಗಿದೆ ಎಂದು ಆಬ್ಸರ್ವರ್ ರಿಸರ್ಚ್ ಫೌಂಡೇಶನ್ನ ಉನ್ನತ ಶಿಕ್ಷಣ, ಕೌಶಲ ಶಿಕ್ಷಣ ಹಾಗೂ ತರಬೇತಿ ವಿಭಾಗದ ನೀತಿ ತಜ್ಞ ಅಂತರಾ ಸೇನಗುಪ್ತಾ ಹೇಳಿದ್ದಾರೆ.
ಅನುದಾನ ಇಳಿಕೆ
2018-19 ರಲ್ಲಿ ರಾಷ್ಟ್ರೀಯ ಉಚ್ಚತರ ಶಿಕ್ಷಾ ಅಭಿಯಾನಕ್ಕೆ ರೂ. 1400 ಕೋಟಿ ಅನುದಾನ ಮೀಸಲಿರಿಸಲಾಗಿತ್ತು. ಇದು ಹಿಂದಿನ ವರ್ಷಕ್ಕಿಂತ ರೂ. 100 ಕೋಟಿ ಹೆಚ್ಚಾಗಿದೆ. ಆದರೆ ಈ ಹಿಂದೆ ನೀಡಲಾಗಿದ್ದ ಯುಜಿಸಿ ಅನುದಾನವನ್ನು ರೂ. 4922.74 ಕೋಟಿಗಳಿಂದ ರೂ. 4722.75 ಕೋಟಿಗಳಿಗೆ ಇಳಿಸಿದ್ದು ವಿಪರ್ಯಾಸ.
ಉನ್ನತ ಶಿಕ್ಷಣಕ್ಕೆ ದಾಖಲಾತಿ ವಿರಳ
ಭಾರತದಲ್ಲಿ ಉನ್ನತ ಶಿಕ್ಷಣ ಪಡೆಯಲು ದಾಖಲಾತಿ ಪಡೆಯುವವರ ಸಂಖ್ಯೆಯೂ ಕಡಿಮೆ ಇದೆ. ಉನ್ನತ ಶಿಕ್ಷಣ ಕುರಿತು ನಡೆಸಲಾದ ಅಖಿಲ ಭಾರತ ಸಮೀಕ್ಷೆಯ ಪ್ರಕಾರ 2017-18 ನೇ ಸಾಲಿನಲ್ಲಿ ದೇಶದಲ್ಲಿನ 18 ರಿಂದ 23 ವಯೋಮಾನದ ಶೇ.70 ಕ್ಕೂ ಹೆಚ್ಚು ಯುವಕರು ಉನ್ನತ ಶಿಕ್ಷಣ ಸಂಸ್ಥೆಗೆ ದಾಖಲಾತಿ ಪಡೆದಿರಲಿಲ್ಲ. ಭಾರತದ ಕುಸಿಯುತ್ತಿರುವ ಉನ್ನತ ಶಿಕ್ಷಣದ ಸಾಮರ್ಥ್ಯಕ್ಕೆ ಇದು ಬಹುದೊಡ್ಡ ಕಾರಣವಾಗಿದೆ. ಕಾಲೇಜು ಶಿಕ್ಷಣ ಮುಗಿಸಿದವರು ಉನ್ನತ ಶಿಕ್ಷಣಕ್ಕೆ ದಾಖಲಾತಿ ಪಡೆಯುವಂತೆ ಉತ್ತೇಜಿಸುವುದು ಹಾಗೂ ಸಂಶೋಧನಾ ಕಾರ್ಯಗಳ ಗುಣಮಟ್ಟ ಹೆಚ್ಚಿಸುವುದು ಸರಕಾರದ ಆದ್ಯತಾ ವಿಷಯಗಳಾಗಬೇಕು ಎನ್ನುತ್ತಾರೆ ಹಣಕಾಸು ತಜ್ಞರು.
ಉನ್ನತ ಶಿಕ್ಷಣ ಹಾಗೂ ಬಡತನ
ಶಿಕ್ಷಣದ ಗುಣಮಟ್ಟ ಸುಧಾರಣೆಯು ಬಡತನ ನಿರ್ಮೂಲನೆಯೊಂದಿಗೆ ನಿಕಟವಾಗಿ ಬೆಸೆದುಕೊಂಡಿದೆ. ಯುನೆಸ್ಕೊದ 2014ರ ವರದಿಯೊಂದರ ಪ್ರಕಾರ ಒಂದು ವರ್ಷದ ಶಿಕ್ಷಣದ ಖರ್ಚು ಶೇ.10 ರಷ್ಟು ಆದಾಯ ಹೆಚ್ಚಳವನ್ನು ಅವಲಂಬಿಸಿದೆ. ಅಂದರೆ ಉನ್ನತ ಶಿಕ್ಷಣ ಪಡೆಯಲು ಬಡತನ ಸಹ ಪ್ರಮುಖ ಅಡ್ಡಿಯಾಗಿದ್ದು ಈ ಅಡೆತಡೆ ನಿವಾರಣೆಗೆ ಕೇಂದ್ರ ಸರಕಾರ ಮುಂದಾಗುವುದು ತಕ್ಷಣಕ್ಕೆ ಆಗಬೇಕಾದ ಕೆಲಸವಾಗಿದೆ.
ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಭಾರತದ ಸ್ಥಾನ ಎಷ್ಟು?
ಯುನೆಸ್ಕೊ ವರದಿಯ ಪ್ರಕಾರ 2000ನೇ ಇಸ್ವಿಯಲ್ಲಿ ಭಾರತ ಹಾಗೂ ಚೀನಾ ದೇಶಗಳು ತಮ್ಮ ಜಿಡಿಪಿಯಲ್ಲಿ ಬಹುತೇಕ ಒಂದೇ ಪ್ರಮಾಣದ ಮೊತ್ತವನ್ನು ಉನ್ನತ ಶಿಕ್ಷಣಕ್ಕಾಗಿ ಖರ್ಚು ಮಾಡಿವೆ. ಈ ಸಾಲಿನಲ್ಲಿ ಭಾರತ ತನ್ನ ಜಿಡಿಪಿಯ ಶೇ. 0.77 ಹಾಗೂ ಚೀನಾ ತನ್ನ ಜಿಡಿಪಿಯ ಶೇ. 0.89 ಹಣವನ್ನು ಖರ್ಚು ಮಾಡಿದ್ದವು. ಆದರೆ ಅಂದಿನಿಂದ ಚೀನಾ ಉನ್ನತ ಶಿಕ್ಷಣಕ್ಕಾಗಿ ಅನುದಾನವನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿದೆ. 2016 ರ ವೇಳೆಗೆ ಚೀನಾ ಜಿಡಿಪಿಯ ಶೇ. 2.11 ರಷ್ಟು ಮೊತ್ತವನ್ನು ಉನ್ನತ ಶಿಕ್ಷಣಕ್ಕಾಗಿ ನೀಡಿದ್ದರೆ, ಭಾರತದಲ್ಲಿ ಈ ಪ್ರಮಾಣ ಶೇ. 0.73 ಹಾಗೂ 0.87 ರ ಮಧ್ಯೆ ಇತ್ತು. 2015 ರಲ್ಲಿ ಈ ಪ್ರಮಾಣ ಶೇ. 0.62 ಗೆ ಕುಸಿದಿದ್ದು ಇನ್ನೂ ಆತಂಕದ ವಿಷಯವಾಗಿದೆ.
ಶ್ರೇಷ್ಠ 200 ವಿವಿಗಳಲ್ಲಿ ಭಾರತದ ವಿವಿ ಇಲ್ಲ
ವಿಶ್ವದ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಭಾರತೀಯ ವಿಶ್ವವಿದ್ಯಾಲಯಗಳು ಯಾವಾಗಲೂ ಕೆಳಗಿನ ಸ್ಥಾನವನ್ನೇ ಪಡೆದಿವೆ. 2019 ರಲ್ಲಿ ಟೈಮ್ಸ್ ಹೈಯರ್ ಎಜುಕೇಶನ್ ವರ್ಲ್ಡ್ ಯುನಿವರ್ಸಿಟಿ ಶ್ರೇಯಾಂಕ ವಿಶ್ವದ 200 ಶ್ರೇಷ್ಠ ಗುಣಮಟ್ಟದ ವಿಶ್ವ ವಿದ್ಯಾಲಯಗಳ ಪಟ್ಟಿಯಲ್ಲಿ ಭಾರತದ ಒಂದೂ ವಿವಿ ಸ್ಥಾನ ಪಡೆಯಲಾಗಲಿಲ್ಲ ಎಂದರೆ ಇಲ್ಲಿನ ಶಿಕ್ಷಣದ ಗುಣಮಟ್ಟವನ್ನು ಅರ್ಥಮಾಡಿಕೊಳ್ಳಬಹುದಾಗಿದೆ. ಶ್ರೇಷ್ಠ 500 ವಿವಿಗಳ ಪಟ್ಟಿಯಲ್ಲಿ ದೇಶದ ಕೇವಲ 5 ವಿವಿಗಳು ಸ್ಥಾನ ಪಡೆದಿದ್ದವು. ಟೈಮ್ಸ್ನ ಈ ರ್ಯಾಂಕಿಂಗ್ಗಳು ವಿವಿಗಳಲ್ಲಿನ ಶಿಕ್ಷಕರ ಸಂಖ್ಯೆ, ಶಿಕ್ಷಣದ ಗುಣಮಟ್ಟ, ಸಂಶೋಧನಾ ಕಾರ್ಯ ಹಾಗೂ ಸಂಶೋಧನೆಯ ಗುಣಮಟ್ಟವನ್ನು ಆಧರಿಸಿರುತ್ತವೆ.
ಉನ್ನತ ಶಿಕ್ಷಣಕ್ಕೆ ಅನುದಾನ; ಯುಪಿಎ ಹಾಗೂ ಎನ್ಡಿಎ ಕೊಟ್ಟಿದ್ದೆಷ್ಟು?
2007-08 ರಿಂದ ಉನ್ನತ ಶಿಕ್ಷಣಕ್ಕೆ ಕೊಡಮಾಡುವ ಅನುದಾನದ ಪ್ರಮಾಣದಲ್ಲಿ ಅಂಥ ದೊಡ್ಡ ಬದಲಾವಣೆಯೇನೂ ಆಗಿಲ್ಲ. 2007-08ರ ಅವಧಿಯ ನಂತರ 2017-18 ನೇ ಸಾಲಿನಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರಕಾರ ನೀಡಿದ ಶೇ. 1.62 ಅನುದಾನವೇ ಉನ್ನತ ಶಿಕ್ಷಣಕ್ಕಾಗಿ ನೀಡಿದ ಅತಿ ಹೆಚ್ಚು ಅನುದಾನವಾಗಿದೆ. ಹಾಗೆಯೇ ಇದೇ ಸರಕಾರದ ಅವಧಿಯಲ್ಲಿ 2014-15 ರಲ್ಲಿ ಕೊಡಮಾಡಲಾದ ಶೇ. 1.29 ರಷ್ಟು (ರೂ. 23152.48 ಕೋಟಿ) ಅನುದಾನ ಅತಿ ಕನಿಷ್ಠ ಮೊತ್ತವಾಗಿದೆ.
ಉನ್ನತ ಶಿಕ್ಷಣಕ್ಕೆ ಸರಕಾರದ ಅನುದಾನವು 2017-18 ರಲ್ಲಿ 34862.46 ಕೋಟಿ ರೂ. ಇದ್ದದ್ದು 2018-19 ರ ವೇಳೆಗೆ ಶೇ.0.42 ಹೆಚ್ಚಾಗಿ 35,010.29 ಕೋಟಿ ರೂ. ತಲುಪಿದೆ. ಆದರೆ ಬಜೆಟ್ ಪ್ರಮಾಣವನ್ನು ನೋಡಿದರೆ ಇದು ಶೇ.1.62 ಬಜೆಟ್ ಶೇಕಡಾವಾರಿನಿಂದ ಶೇ.1.43 ಕ್ಕೆ ಕುಸಿದಿದ್ದು ಕಂಡು ಬರುತ್ತದೆ.
ಕೇಂದ್ರ ವಿವಿಗಳಿಗೆ ಅನುದಾನ ಕಡಿತ
ಉನ್ನತ ಶಿಕ್ಷಣ ಬಜೆಟ್ ಅನುದಾನದಲ್ಲಿ ಕೇಂದ್ರ ವಿವಿಗಳಿಗೆ ನೀಡಲಾಗುವ ಮೊತ್ತವನ್ನು 2017-18 ನೇ ಸಾಲಿನಲ್ಲಿ ಇದ್ದ 7,261.42 ಕೋಟಿ ರೂ.ಗಳಿಂದ 2018-19ನೇ ಸಾಲಿಗೆ 6,445.23 ಕೋಟಿ ರೂ.ಗಳಿಗೆ ಇಳಿಸಲಾಯಿತು. ಹಾಗೆಯೇ ಐಐಟಿಗಳಿಗೆ ನೀಡಲಾಗುವ ಅನುದಾನವು 2017-18 ರಲ್ಲಿ 7503.5 ಕೋಟಿ ರೂ. ಗಳಿಂದ 5613 ಕೋಟಿ ರೂ.ಗಳಿಗೆ ಕುಸಿಯಿತು.
ಬಂಡವಾಳ ಹೂಡಿಕೆಗೆ ಬೇಕಿದೆ ಉತ್ತೇಜನ
2015-16 ನೇ ಸಾಲಿನಲ್ಲಿ ಉನ್ನತ ಶಿಕ್ಷಣಕ್ಕಾಗಿ ಬಂಡವಾಳ ಹೂಡಿಕೆ ವೆಚ್ಚವು ಶೂನ್ಯವಾಗಿತ್ತು ಎಂದರೆ ನಂಬಲೇಬೇಕು. ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳ ಮೂಲಭೂತ ಸೌಕರ್ಯ ಹೆಚ್ಚಿಸುವ ಸಲುವಾಗಿ ಕೆನರಾ ಬ್ಯಾಂಕ್ ಸಹಯೋಗದಲ್ಲಿ ಉನ್ನತ ಶಿಕ್ಷಣ ಹಣಕಾಸು ಹೂಡಿಕೆ ಏಜೆನ್ಸಿ ಆರಂಭಿಸುವುದಾಗಿ 2016-17ನೇ ಸಾಲಿನ ಬಜೆಟ್ ಭಾಷಣದಲ್ಲಿ ಕೇಂದ್ರ ಸರಕಾರ ಪ್ರಕಟಿಸಿತ್ತು. 2016-17ನೇ ಸಾಲಿನಲ್ಲಿ ಉನ್ನತ ಶಿಕ್ಷಣ ಹಣಕಾಸು ಹೂಡಿಕೆ ಏಜೆನ್ಸಿ ಕಾರಣದಿಂದ ಬಂಡವಾಳ ವೆಚ್ಚ 1 ಕೋಟಿ ರೂ.ಗೆ ಹೆಚ್ಚಾಯಿತು. ತದನಂತರ 2017-18 ರಲ್ಲಿ 250 ಕೋಟಿ ರೂ. ಹಾಗೂ 2018-19 ರಲ್ಲಿ ಇದು ಹತ್ತು ಪಟ್ಟು ಹೆಚ್ಚಳಗೊಂಡು 2750 ಕೋಟಿ ರೂ. ಗಳಾಯಿತು.
ಉನ್ನತ ಶಿಕ್ಷಣ ಹಣಕಾಸು ಹೂಡಿಕೆ ಏಜೆನ್ಸಿಯು ಮುಂದಿನ ನಾಲ್ಕು ವರ್ಷಗಳಲ್ಲಿ ರೂ. 1 ಲಕ್ಷ ಕೋಟಿ ಅನುದಾನ ನೀಡಲಿದೆ. 2019 ರ ಜನೆವರಿ 11 ರಂದು ಬಿಡುಗಡೆಯಾದ ಮಾನವ ಸಂಪನ್ಮೂಲ ಖಾತೆಯ ವರದಿಯ ಪ್ರಕಾರ ಇಲ್ಲಿಯವರೆಗೆ 12,700 ಕೋಟಿ ರೂ. ಸಾಲಕ್ಕೆ ಮಂಜೂರಾತಿ ನೀಡಲಾಗಿದೆ.
ಉನ್ನತ ಶಿಕ್ಷಣದ ಆದ್ಯತೆಗಳೇನು?
ಒಟ್ಟಾರೆ ದಾಖಲಾತಿ ಪ್ರಮಾಣ ಹಾಗೂ ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಿಸಬೇಕಾದರೆ ಕೇಂದ್ರ ಸರಕಾರವು ಮೊದಲು ರಾಜ್ಯ ವಿವಿಗಳ ಗುಣಮಟ್ಟ ಸುಧಾರಿಸಲು ಮುಂದಾಗಬೇಕು ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಕೇಂದ್ರ ಹಾಗೂ ರಾಜ್ಯ ಅಧೀನದ ವಿವಿಗಳನ್ನು ಹಾಗೂ ಇವಕ್ಕೆ ಸಂಲಗ್ನಗೊಂಡಿರುವ ಕಾಲೇಜುಗಳನ್ನು ಉನ್ನತ ದರ್ಜೆಗೇರಿಸಲು ಸರಕಾರ ಯತ್ನಿಸಬೇಕಿದೆ. ಕೆಲ ರಾಜ್ಯ ವಿಶ್ವವಿದ್ಯಾಲಯಗಳು ಅಪಾರ ಸಾಮರ್ಥ್ಯ ಹೊಂದಿದ್ದರೂ ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಿರ್ಲಕ್ಷದಿಂದ ನಿರೀಕ್ಷಿತ ಗುರಿ ಮುಟ್ಟಲಾಗುತ್ತಿಲ್ಲ ಎನ್ನುತ್ತಾರೆ ಸೇನಗುಪ್ತಾ. 2017 ರ ಸ್ಥಾಯಿ ಸಮಿತಿಯ ವರದಿಯು ಸಹ ಈ ವಿಷಯವನ್ನು ಪುಷ್ಟೀಕರಿಸಿದೆ.
ಕೇಂದ್ರದ ಉನ್ನತ ಶಿಕ್ಷಣದ ಯುಜಿಸಿ ಬಜೆಟ್ನಲ್ಲಿ ಶೇ. 65 ರಷ್ಟು ಮೊತ್ತವನ್ನು ಕೇಂದ್ರ ವಿವಿಗಳು ಹಾಗೂ ಅದಕ್ಕೆ ಸಂಬಂಧಿತ ಕಾಲೇಜುಗಳು ಬಳಸಿಕೊಳ್ಳುತ್ತವೆ. ಇನ್ನುಳಿದ ಶೇ.35 ರಷ್ಟು ಮೊತ್ತ ಮಾತ್ರ ರಾಜ್ಯ ವಿವಿಗಳು ಹಾಗೂ ಅವುಗಳ ಕಾಲೇಜುಗಳಿಗೆ ಸಿಗುತ್ತಿದೆ ಎಂದು ವರದಿ ತಿಳಿಸಿದೆ.