ಮತ್ತೆ ನೋಟು ರದ್ದು ಮಾಡ್ತೀರಾ ಮೋದಿ?: ಚಿದಂಬರಂ ಅಣಕ
ನವದೆಹಲಿ, ಫೆಬ್ರವರಿ 1: ದೇಶದಲ್ಲಿ ಕಳೆದ 45 ವರ್ಷಗಳಲ್ಲಿಯೇ ಅತಿ ಹೆಚ್ಚಿನ ಪ್ರಮಾಣದಲ್ಲಿ ನಿರುದ್ಯೋಗದ ಸಮಸ್ಯೆ ಉಲ್ಬಣಿಸಿದೆ ಎಂದು ಬಿಜಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆ ವರದಿ ಮಾಡಿತ್ತು.
ಇದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ವಿರೋಧ ಪಕ್ಷಗಳಿಗೆ ಮತ್ತೊಂದು ಅಸ್ತ್ರ ದೊರಕಿದಂತಾಗಿದೆ.
ಈ ವರದಿಯನ್ನು ಆಧಾರವಾಗಿಟ್ಟುಕೊಂಡು ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಕೇಂದ್ರ ಸರ್ಕಾರ ಶುಕ್ರವಾರ ಮಂಡಿಸಿದ ಮಧ್ಯಂತರ ಬಜೆಟ್ ಅನ್ನು ಸಹ ಅವರು ಟೀಕಿಸಿದ್ದಾರೆ.
45 ವರ್ಷಗಳಲ್ಲೇ ಭಾರೀ ನಿರುದ್ಯೋಗ ಸಮಸ್ಯೆ, ಕೇಂದ್ರ ಸರ್ಕಾರಕ್ಕೆ ಸಂಕಷ್ಟ?
ಇದು ಲೆಕ್ಕಾಚಾರದ ಮೇಲಿನ ಮತವಲ್ಲ, ಮತಗಳಿಗಾಗಿ ಲೆಕ್ಕಾಚಾರ ಎಂದು ಚಿದಂಬರಂ ಟ್ವಿಟ್ಟರ್ನಲ್ಲಿ ಟೀಕಿಸಿದ್ದಾರೆ.
ನಿರುದ್ಯೋಗವೂ ಬೆಳವಣಿಗೆ!
ಮೋದಿ ಸರ್ಕಾರವು ಜಿಡಿಪಿ ಬೆಳವಣಿಗೆಯ ಅಂಕಿ ಅಂಶಗಳನ್ನು ಮೇಲ್ಮುಖ ಇರುವಂತೆ ಪರಿಷ್ಕರಿಸಿದೆ. ಆದರೆ, ನಿರುದ್ಯೋಗದ ಅಂಕಿ ಅಂಶಗಳನ್ನೂ ಹೀಗೆ ಮೇಲ್ಮುಖದಲ್ಲಿ ಇರುವಂತೆ ಮಾಡಬೇಕೆಂದು ಮೋದಿ ಸರ್ಕಾರಕ್ಕೆ ಹೊಳೆದಿರಲಿಲ್ಲ.
ನಿರುದ್ಯೋಗ ಸಮಸ್ಯೆ ಕುರಿತ ವರದಿಯ ಬಗ್ಗೆ ನೀತಿ ಆಯೋಗ ಸ್ಪಷ್ಟನೆ
ನಮ್ಮದು ಇದೇ ಪ್ರಶ್ನೆ...
ಉದ್ಯೋಗ ಇಲ್ಲದೆ ಇದ್ದರೆ ದೇಶವೊಂದು ಶೇ 7ರ ಸರಾಸರಿಯಲ್ಲಿ ಬೆಳವಣಿಗೆ ಹೊಂದಲು ಹೇಗೆ ಸಾಧ್ಯ ಎಂದು ನೀತಿ ಆಯೋಗದ ಉಪಾಧ್ಯಕ್ಷರು ಪ್ರಶ್ನಿಸಿದ್ದಾರೆ. ಇದು ನಮ್ಮ ಪ್ರಶ್ನೆಯೂ ಹೌದು. ನಿರುದ್ಯೋಗವು 45 ವರ್ಷಗಳಲ್ಲಿಯೇ ಅತ್ಯಧಿಕ ಮಟ್ಟದಲ್ಲಿ ಇರುವಾಗ ಆರ್ಥಿಕತೆಯು ಶೇ 7ರ ದರದಲ್ಲಿ ಬೆಳವಣಿಗೆ ಆಗುತ್ತಿದೆ ಎಂಬುದನ್ನು ನಾವು ಹೇಗೆ ನಂಬಲು ಸಾಧ್ಯ?
ಮತ್ತೆ ನೋಟು ರದ್ದತಿ ಮಾಡುತ್ತೀರಾ?
ಮೋದಿ ಸರ್ಕಾರದಲ್ಲಿ ಅಪನಗದೀಕರಣ ಮಾಡಿದ ವರ್ಷವೇ ಅತ್ಯುತ್ತಮ ಬೆಳವಣಿಗೆಯ (ಶೇ 8.2) ವರ್ಷ ಎನಿಸಿದೆ. ಹಾಗಾದರೆ ಮತ್ತೊಂದು ಸುತ್ತಿನ ಅಪನಗದೀಕರಣ ಮಾಡಿ. ಈ ಬಾರಿ 100 ರೂ. ಮೌಲ್ಯದ ನೋಟುಗಳನ್ನು ರದ್ದುಗೊಳಿಸಿ ಎಂದು ಚಿದಂಬರಂ ಸವಾಲು ಹಾಕಿದ್ದಾರೆ.
ಕಾಂಗ್ರೆಸ್ ಕಾಪಿ
ದೇಶದ ಸಂಪನ್ಮೂಲಗಳನ್ನು ಮೊದಲು ಬಡವರು ಬಳಸುವ ಹಕ್ಕು ಹೊಂದಿದ್ದಾರೆ ಎಂಬ ಕಾಂಗ್ರೆಸ್ನ ಘೋಷಣೆಯನ್ನು ನಕಲು ಮಾಡಿರುವುದಕ್ಕೆ ಹಣಕಾಸು ಸಚಿವರಿಗೆ ಧನ್ಯವಾದಗಳು ಎಂದು ಚಿದಂಬರಂ ಲೇವಡಿ ಮಾಡಿದ್ದಾರೆ.