ಕರ್ನಾಟಕ ಬಜೆಟ್ 2019 : ಸಿದ್ದರಾಮಯ್ಯ, ಬಿಎಸ್ವೈ ಕ್ಷೇತ್ರಕ್ಕೆ ಬಂಪರ್
ಬೆಂಗಳೂರು, ಫೆಬ್ರವರಿ 08 : 2019-20ನೇ ಸಾಲಿನ ಬಜೆಟ್ನಲ್ಲಿ ಬಿ.ಎಸ್.ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಕ್ಷೇತ್ರಕ್ಕೆ ಬಂಪರ್ ಕೊಡುಗೆ ನೀಡಲಾಗಿದೆ. ಶಿಕಾರಿಪುರ ಮತ್ತು ಬಾದಾಮಿ ಕ್ಷೇತ್ರದಲ್ಲಿ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ.
ಶುಕ್ರವಾರ ಎಚ್.ಡಿ.ಕುಮಾರಸ್ವಾಮಿ ಅವರು 2019-20ನೇ ಸಾಲಿನ ಬಜೆಟ್ ಮಂಡನೆ ಮಾಡಿದರು. ನೀರಾವರಿ ಕ್ಷೇತ್ರಕ್ಕೆ ಹಲವು ಕೊಡುಗೆಗಳನ್ನು ಅವರು ಘೋಷಣೆ ಮಾಡಿದರು. ರಾಜ್ಯದಲ್ಲಿನ ಕೆರೆಗಳನ್ನು ತುಂಬಿಸಲು 1600 ಕೋಟಿ ಯೋಜನೆಯನ್ನು ಘೋಷಣೆ ಮಾಡಿದರು.
ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರ ಕ್ಷೇತ್ರ ಶಿಕಾರಿಪುರದಲ್ಲಿ ಕೆರೆ ತುಂಬಿಸಲು 200 ಕೋಟಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರಕ್ಕೆ ನೀರಾವರಿ ಯೋಜನೆಗಾಗಿ 300 ಕೋಟಿ ಅನುದಾನ ಘೋಷಿಸಿದರು.
ಬಜೆಟ್ನಲ್ಲಿ ನೀರಾವರಿ ಕ್ಷೇತ್ರಕ್ಕೆ ಸಿಕ್ಕಿದ್ದೇನು?
* ನೀರಾವರಿ ಯೋಜನೆಗಾಗಿ 1563 ಕೋಟಿ ರೂ.ಗಳ ಯೋಜನೆ. ರಾಜ್ಯದಲ್ಲಿನ ಕೆರೆಗಳನ್ನು ತುಂಬಿಸಲು 1600 ಕೋಟಿ ಯೋಜನೆ
* ತುಮಕೂರಿನ ಹೇಮಾವತಿ ಶಾಖಾ ನಾಲೆ ಅಭಿವೃದ್ಧಿಗೆ 200 ಕೋಟಿ, ಉಡುಪಿಯಲ್ಲಿ ಕೆರೆಗಳನ್ನು ತುಂಬಿಸಲು 40 ಕೋಟಿ. ಮಳವಳ್ಳಿ ತಾಲೂಕು ಅಚ್ಚುಕಟ್ಟು ನೀರಾವರಿ ಯೋಜನೆಗೆ 200 ಕೋಟಿ.
* ಕೊಪ್ಪಳ ಏತ ನೀರಾವರಿ ಯೋಜನೆಗೆ 200 ಕೋಟಿ. 400 ಕೋಟಿ ವೆಚ್ಚದಲ್ಲಿ ಮಂಡ್ಯದ ವಿಶ್ವೇಶ್ವರಯ್ಯ ನಾಲೆಯನ್ನು ಅಭಿವೃದ್ಧಿಗೊಳಿಸಲಾಗುತ್ತದೆ.
* ಕೃಷಿಭಾಗ್ಯ, ಸಾವಯವ ಕೃಷಿ, ಶೂನ್ಯ ಬಂಡವಾಳ ಕೃಷಿ, ಇಸ್ರೇಲ್ ಮಾದರಿ ಕಿರು ನೀರಾವರಿ ಕಾರ್ಯಕ್ರಮಗಳಿಗೆ 472 ಕೋಟಿ ರೂ. ಅನುದಾನ.
* ಮುಖ್ಯಮಂತ್ರಿಗಳ ಸೂಕ್ಮ್ಷ ನೀರಾವತಿ ಯೋಜನೆಯಡಿ ಎಲ್ಲಾ ವರ್ಗದ ರೈತರಿಗೆ ಶೇ 90ರಷ್ಟು ಪ್ರೋತ್ಸಾಹಧನ. ಇದಕ್ಕಾಗಿ 368 ಕೋಟಿ ರೂ. ಅನುದಾನ
* ಜಲಸಂಪನ್ಮೂಲ ಇಲಾಖೆಗೆ 2019-20ರಲ್ಲಿ 17,212 ಕೋಟಿ ಅನುದಾನ. ಏತ ನೀರಾವರಿ ಯೋಜನೆಗಳಿಗೆ 1563 ಕೋಟಿ, ಕಾಲುವೆ ಆಧುನೀಕರಣ, ಅಭಿವೃದ್ಧಿಗೆ 860 ಕೋಟಿ ಯೋಜನೆ.
* ಮಂಚನಬೆಲೆ ಜಲಾಶಯದ ಕೆಳಭಾಗದ ಉದ್ಯಾನ ಅಭಿವೃದ್ಧಿ, ಪ್ರವಾಸೋದ್ಯಮ ಅಭಿವೃದ್ಧಿಗೆ 125 ಕೋಟಿ. ಮತ್ತು ಹಾರಂಗಿ ಜಲಾನಯನ ಪ್ರದೇಶ ಹಾಗೂ ನದಿ ಪಾತ್ರದ ಪುನಶ್ಚೇತನ ಕಾಮಗಾರಿಗಾಗಿ 75 ಕೋಟಿ ರೂ. ಅನುದಾನ.
* ಕೆ.ಸಿ.ವ್ಯಾಲಿ ಯೋಜನೆಯಡಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ 40 ಎಂಎಲ್ಡಿ ನೀರು ಕೊಂಡೊಯ್ಯಲು ಪೈಪ್ ಲೈನ್ ಅಳವಡಿಸುವ ಕಾಮಗಾರಿಗೆ 40 ಕೋಟಿ ರೂ. ಅನುದಾನ.
* ಪಾಂಡವಪುರ ತಾಲೂಕಿನ ಬಳಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗೆ 100 ಕೋಟಿ ರೂ.. ಮುಂದಿನ 3 ವರ್ಷಗಳಲ್ಲಿ 300 ಕೋಟಿ ರೂ. ವೆಚ್ಚದಲ್ಲಿ ಬೀದರ್ ಜಿಲ್ಲೆಯ ಎಲ್ಲಾ ಕೆರೆಗಳ ಸುಧಾರಣೆಗೆ ಕ್ರಮ
* ಶಿವಮೊಗ್ಗ ಜಿಲ್ಲೆಯ ಹೊಳೆ ಹನಸವಾಡಿ ಗ್ರಾಮದ ಹತ್ತಿರ ತುಂಗಾ ನದಿಯಿಂದ ಏತ ನೀರಾವರಿ ಮೂಲಕ 8 ಕೆರೆಗಳಿಗೆ ನೀರು ತುಂಬಿಸಲು 13 ಕೋಟಿ, ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೌಜಲಗಿ, ಗೋಸಬಾಳ ಹಾಗೂ ಸುತ್ತಮುತ್ತಲಿನ ಹಳ್ಳಿಗಳ 2500 ಎಕರೆ ಜಮೀನುಗಳಿಗೆ ಕಲ್ಲಮರಡಿ ಏತ ನೀರಾವರಿ ಯೋಜನೆ ಜಾರಿ.
* ರಾಜ್ಯದಲ್ಲಿ ಅಂತರ್ಜಲ ಮಟ್ಟಲು ತೀವ್ರವಾಗಿ ಕುಸಿದಿರುವ ಅತಿ ಬಳಕೆ ತಾಲೂಕುಗಳಲ್ಲಿ ಅಂತರ್ಜಲ ವೃದ್ಧಿಸಲು ಚೆಕ್ ಡ್ಯಾಂ, ಬ್ಯಾರೇಜ್ ಬಾಂದಾರಗಳು, ಮರುಪೂರಣ ಕಾಮಗಾರಿಗೆ 10 ಕೋಟಿ ಅನುದಾನ