ಜೆಟ್ ಏರ್ವೇಸ್ ಬಿಕ್ಕಟ್ಟು, ವೇತನ ಕೊಡಿಸುವಂತೆ ಕೋರಿ ನರೇಂದ್ರ ಮೋದಿಗೆ ಪತ್ರ
ದೇಶದ ಪ್ರಮುಖ ಮಾನಯಾನ ಸಂಸ್ಥೆ ಜೆಟ್ ಏರ್ವೇಸ್ ತೀವ್ರ ಆರ್ಥಿಕ ದುಸ್ಥಿತಿಗೆ ತಲುಪಿದ್ದು, ತನ್ನ ಸಾವಿರಾರು ಸಿಬ್ಬಂದಿಗಳಿಗೆ ಸಕಾಲಕ್ಕೆ ವೇತನ ಪಾವತಿಸುವ ಸ್ಥಿತಿಯಲ್ಲಿ ಇಲ್ಲ.
ದೇಶದ ಪ್ರಮುಖ ಮಾನಯಾನ ಸಂಸ್ಥೆ ಜೆಟ್ ಏರ್ವೇಸ್ ತೀವ್ರ ಆರ್ಥಿಕ ದುಸ್ಥಿತಿಗೆ ತಲುಪಿದ್ದು, ತನ್ನ ಸಾವಿರಾರು ಸಿಬ್ಬಂದಿಗಳಿಗೆ ಸಕಾಲಕ್ಕೆ ವೇತನ ಪಾವತಿಸುವ ಸ್ಥಿತಿಯಲ್ಲಿ ಇಲ್ಲ.
ಜೆಟ್ ಏರ್ವೇಸ್ ಬಿಕ್ಕಟ್ಟಿಗೆ ಆತಂಕಕ್ಕೊಳಗಾಗಿರುವ ನೌಕರರು, ಜೆಟ್ ಏರ್ವೇಸ್ ಸಂಸ್ಥೆ ದಿವಾಳಿ ಅಂಚಿಗೆ ತಲುಪಿರುವುದರಿಂದ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಮೋದಿಗೆ ಪತ್ರ
ಜೆಟ್ ಏರ್ವೇಸ್ ಪೈಲೆಟ್ ಗಳು, ನೌಕರರು ಪ್ರಧಾನಿ ನರೇಂದ್ರ ಮೋದಿ ಹಾಗು ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು ಅವರಿಗೆ ವೇತನ ಕೊಡಿಸಲು ಮಧ್ಯ ಪ್ರವೇಶಿಸುವಂತೆ ಕೋರಿ ಪತ್ರ ಬರೆದಿದ್ದಾರೆ. ಆರ್ಥಿಕ ಬಿಕ್ಕಟ್ಟಿನಿಂದ ಜೆಟ್ ಏರ್ವೇಸ್ ವಿಮಾನಗಳ ಹಾರಾಟ ಸಂಖ್ಯೆ ಕುಸಿದಿದ್ದು ಪ್ರಯಾಣಿಕರಿಗೂ ತೊಂದರೆಯಾಗುತ್ತಿದೆ.
ವಿಮಾನ ಹಾರಾಟ ಬಂದ್!
ನೌಕರರ ಬಾಕಿ ಇರುವ ವೇತನವನ್ನು ಮಾರ್ಚ್ 31ರ ಒಳಗಾಗಿ ಪಾವತಿ ಮಾಡದಿದದ್ರೆ ಏಪ್ರಿಲ್ 1ರಿಂದ ಜೆಟ್ ವಿಮಾನ ಹಾರಾಟ ಸಂಪೂರ್ಣವಾಗಿ ನಿಲ್ಲಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಪೈಲೆಟ್ ಗಳು ಎಚ್ಚರಿಕೆ ನೀಡಿದ್ದಾರೆ.
3 ತಿಂಗಳಿಂದ ವೇತನ ಇಲ್ಲ
ಜೆಟ್ ಏರ್ವೇಸ್ ಸಂಸ್ಥೆ ತನ್ನ ಎಂಜಿನಿಯರ್, ಪೈಲಟ್ ಹಾಗೂ ಹಿರಿಯ ಅಧಿಕಾರಿಗಳಿಗೆ ಕಳೆದ 3 ತಿಂಗಳುಗಳಿಂದ ವೇತನ ಪಾವತಿಸಿಲ್ಲ. ಇದರ ಬಗ್ಗೆ ಸಂಸ್ಥೆ ಉದ್ಯೋಗಿಗಳು ಕೇಂದ್ರ ಸರ್ಕಾರ, ಪ್ರಧಾನಿ ಹಾಗೂ ವಿಮಾನಯಾನ ಸಚಿವರಿಗೆ ಪತ್ರ ಬರೆದಿದ್ದಾರೆ. ಸಂಬಳವಿಲ್ಲದೆ ನೌಕರರು ಮಾನಸಿಕ ಸಂಕಷ್ಟಕ್ಕೆ ಸಿಲುಕಿದ್ದು, ಇದು ಜೆಟ್ ಏರ್ವೇಸ್ ವಿಮಾನದ ಪ್ರಯಾಣಿಕರ ಸುರಕ್ಷತೆ ಮೇಲೂ ಪರಿಣಾಮ ಬೀರಬಹುದು.
ಎಸ್ಬಿಐ ಮತ್ತು ಇತರೆ ಸಂಸ್ಥೆಗಳ ನೆರವು ಸಾಧ್ಯತೆ
ಜೆಟ್ ಏರ್ವೇಸ್ಗೆ ಸೂಕ್ತ ಹೊಸ ಮಾಲೀಕರು ಸಿಗುವವರೆಗೂ ಅಗತ್ಯ ಹಣಕಾಸಿನ ನೆರವು ನೀಡುವಂತೆ ಎಸ್ಬಿಐ ನೇತೃತ್ವದ ಸರ್ಕಾರಿ ವಲಯದ ಕೆಲವು ಬ್ಯಾಂಕ್ಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ ಎಂದು ಮೂಲಗಳು ತಿಳಿಸಿವೆ. ಬ್ಯಾಂಕುಗಳು ತಕ್ಷಣಕ್ಕೆ ಜೆಟ್ಗೆ ಹಣಕಾಸಿನ ನೆರವು ನೀಡಿದರೆ ವಿಮಾನಯಾನ ಕಂಪನಿ ಉಳಿಯಲಿದೆ. ಒಂದು ವೇಳೆ ನೆರವು ಸಿಗದಿದ್ದಲ್ಲಿ ಕಿಂಗ್ಫಿಶರ್ ಹಾದಿ ಹಿಡಿಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಜೆಟ್ ಏರ್ವೇಸ್ ಸುಮಾರು ರೂ. 8200 ಕೋಟಿ ಸಾಲದಲ್ಲಿ ಸಿಲುಕಿದ್ದು, ಇದರಿಂದ ಪಾರಾಗಲು ಕೇಂದ್ರ ಸರ್ಕಾರ ಹೊಸ ಉಪಾಯವೊಂದನ್ನು ಹುಡುಕಿದ್ದು, ಸಾಲ ನೀಡಿದ ಎಸ್ಬಿಐ ನೇತೃತ್ವದ ಬ್ಯಾಂಕುಗಳಿಗೆ ಜೆಟ್ ಏರ್ವೇಸ್ ಷೇರು ಖರೀದಿಸಲು ಸೂಚಿಸಿದೆ ಎನ್ನಲಾಗಿದೆ.