ಅಂಕಣ:'ವರ್ಲ್ಡ್ ಹ್ಯಾಪಿನೆಸ್ಸ್ ಇಂಡೆಕ್ಸ್' ನಲ್ಲಿ ಉನ್ನತಿ ಕಾಣಬೇಕೇ?
ಎಸ್ ಎಸ್ ಎಲ್ ಸಿ, ಪಿ ಯು ಸಿ ಮುಂತಾದ ಪರೀಕ್ಷೆಗಳ ಫಲಿತಾಂಶವು ಹೊರಬಂದಿದ್ದು ತೇರ್ಗಡೆಯಾದವರ ಸಂಖ್ಯೆ, ಅವರು ಪಡೆದುಕೊಂಡ ಅಂಕಗಳ ಮಟ್ಟ ಎಲ್ಲರ ಹುಬ್ಬೇರಿಸುವ ಮಟ್ಟಕ್ಕೆ ತಲುಪಿದೆ. ಶೇ.90 ರ ಮೇಲ್ಪಟ್ಟು ಅಂಕ ಪಡೆದವರ ಸಂಖ್ಯೆ ಅಸಂಖ್ಯಾತವಾಗಿರುವುದು ಸಂತಸದ ವಿಷಯವಾಗಿದೆ. ಇದು ದೇಶದಲ್ಲಿ ಹೆಚ್ಚುತ್ತಿರುವ ಸಾಕ್ಷರತಾ ಮಟ್ಟಕ್ಕೆ ಸಾಕ್ಷಿಯಾಗಿದೆ.
ಎಲ್ಲರು ಸುಶಿಕ್ಷಿತರಾಗಬೇಕೆಂಬ ಜಾಗೃತಿ ಬೆಳೆದು ಬಡವ ಬಲ್ಲಿದರೆನ್ನದೆ ಮಕ್ಕಳ ಶಿಕ್ಷಣಕ್ಕೆ ಮೊದಲ ಆಧ್ಯತೆ ನೀಡುತ್ತಿರುವ ಬೆಳವಣಿಗೆಯು ಸ್ವಾಗತಾರ್ಹವಾಗಿದೆ. ಜೀವನದಲ್ಲಿ ಏನಾದರೂ ಸಾಧಿಸಬೇಕಾದರೆ ಶಿಕ್ಷಣದ ಪಾತ್ರ ಅತಿ ಮುಖ್ಯ ಎಂಬುದು ಮನದಟ್ಟಾಗಿರುವ ಕಾರಣ ಎಲ್ಲರ ಚಿತ್ತ ಶಿಕ್ಷಣ ಪಡೆಯುವತ್ತ ತಿರುಗಿದೆ.
ಭಾರತದಲ್ಲಿ ಸಂತೋಷಿಗಳಿಗಿಂತ ದುಃಖಿಗಳೇ ಜಾಸ್ತಿಯಂತೆ!
ಆದರೆ, ನಾವು ಶಿಕ್ಷಣವನ್ನು ಕೇವಲ ನಮ್ಮ ವೃತ್ತಿ ಅಥವಾ ನೌಕರಿಗಾಗಿ ಪಡೆಯುವ ಸ್ಪರ್ಧಾತ್ಮಕ ಚಿಂತನೆಯಲ್ಲಿದ್ದೇವೆ. ತನ್ಮೂಲಕ ನಾವು ಹಣ ಸಂಪಾದನೆಯನ್ನು ಮಾಡುವತ್ತ ನಮ್ಮ ಧ್ಯೇಯವನ್ನು ಕೇಂದ್ರೀಕರಿಸಿದ್ದೇವೆ. ಹಣವೇ ಸರ್ವಸ್ವ ಎಂಬ ಚಿಂತನೆಯನ್ನು ನಮ್ಮ ಕಣ ಕಣಗಳಲ್ಲೂ ಬೆಳೆಸಿಕೊಂಡಿದ್ದೇವೆ.
ಈ ಚಿಂತನೆಯೇ ನಮ್ಮ ಭವಿಷ್ಯಕ್ಕೆ ಮಾರಕ ಎಂಬುದನ್ನು ಗಮನಿಸುತ್ತಿಲ್ಲ. ಇದರ ಪರಿಣಾಮವೇ ಈಗ ಪ್ರಕಟವಾಗಿರುವ 156 ದೇಶಗಳ 'ವರ್ಲ್ಡ್ ಹ್ಯಾಪಿನೆಸ್ಸ್ ಇಂಡೆಕ್ಸ್' ನಲ್ಲಿ 140 ನೇ ಸ್ಥಾನದಲ್ಲಿದ್ದೇವೆ. ಹಣ ಮತ್ತು ಸ್ವತ್ತು ಸಂಪಾದನೆಯ ಗುರಿಯಾಗಿಸಿಕೊಂಡಿರುವ ನಮಗೆ N S T ಯನ್ನು ಕಳೆದುಕೊಂಡಿದ್ದೇವೆ.
ಏನದು ಎನ್ ಎಸ್ ಟಿ?
ನೆಮ್ಮದಿ, ಸಂತೋಷ, ತೃಪ್ತಿ ಈ ಮೂರೂ ಮಾನವನನ್ನು ಖುಷಿಯಾಗಿಡಲು ಅತ್ಯವಶ್ಯಕ. ಈ 'ವರ್ಲ್ಡ್ ಹ್ಯಾಪಿನೆಸ್ಸ್ ಇಂಡೆಕ್ಸ್'ನಲ್ಲಿ ಪಾಕಿಸ್ತಾನವು 67 ನೇ ಸ್ಥಾನದಲ್ಲಿದೆ, ಶ್ರೀಲಂಕಾ 130 ನೇ ಸ್ಥಾನದಲ್ಲಿದೆ. ಆದರೆ ನಮ್ಮ ದೇಶ ಮಾತ್ರ 140 ನೇ ಸ್ಥಾನದಲ್ಲಿದೆ. Finland ಪ್ರಥಮದಲ್ಲಿದ್ದು, ಬ್ರಿಟನ್ 15 ನೇ ಸ್ಥಾನದಲ್ಲಿ, ಅಮೆರಿಕಾ 19ನೇ ಸ್ಥಾನದಲ್ಲಿದೆ. ನಮ್ಮಂತೆ ಹೆಚ್ಚು ಜನಸ್ತೋಮ ಹೊಂದಿರುವ ಚೀನಾ ದೇಶವು 93ನೇ ಸ್ಥಾನದಲ್ಲಿದೆ. ಅಂದರೆ ನಮ್ಮಲ್ಲಿ ಬೆಳೆಯುತ್ತಿರುವ ಸಾಕ್ಷರತಾ ಮಟ್ಟವು ಜೀವನ ಮಟ್ಟ ಸುಧಾರಿಸಿ ಸಂತಸವನ್ನು ತಂದುಕೊಡುವ ಮಟ್ಟದಲ್ಲಿಲ್ಲ ಎಂಬುದು ಖಾತ್ರಿಯಾದಂತೆಯಲ್ಲವೇ?
ಆರ್ಥಿಕ ಸಾಕ್ಷರತೆಯತ್ತ ಗಮನ ಹರಿಸಬೇಕಿದೆ
ನಾವು ಸಾಕ್ಷರತೆ ಮತ್ತು ಆರ್ಥಿಕ ಸಾಕ್ಷರತೆ ಎರಡು ಒಂದೇ ನಾಣ್ಯದ ಎರಡುಮುಖಗಳು ಎಂಬುದನ್ನು ಮರೆತು ಕೇವಲ ಸಾಕ್ಷರತೆಗೆ ಹೆಚ್ಚು ಆಧ್ಯತೆ ನೀಡಿದ ಕಾರಣ ಆರ್ಥಿಕ ಸಾಕ್ಷರತೆಯು ತುಕ್ಕು ಹಿಡಿಯುವ ಮಟ್ಟಕ್ಕೆ ಹೋಗಿ ಸಂತೋಷ, ನೆಮ್ಮದಿ, ತೃಪ್ತಿಗಳನ್ನು ನಿಶ್ಚೇಷ್ಟಿತಗೊಳಿಸಿದೆ. ಸಾಕ್ಷರತೆಯ ಮಟ್ಟವನ್ನು ಸುಧಾರಿಸಿಕೊಂಡಿರುವ ನಾವುಗಳು ಈಗಲಾದರೂ ಆರ್ಥಿಕ ಸಾಕ್ಷರತೆಯತ್ತ ಗಮನಕೊಡದಿದ್ದಲ್ಲಿ ಹೆಚ್ಚಿನ ಅಪಾಯ ಎದುರಿಸಬೇಕಾಗುವುದು.
ಡಿಸ್ಕೌಂಟ್ ಗೆ ನಾವು ಮಾರುಹೋಗಿ ಖರೀದಿ
ನಾವು ಕಾರಿನಲ್ಲಿ ಹೋಗಿ ಸೊಪ್ಪು ಖರೀದಿಸುವಾಗ ಅಲ್ಲಿ ಚೌಕಾಶಿ ಮಾಡುತ್ತೇವೆ ಅದೇ ಶಾಪಿಂಗ್ ಮಾಲುಗಳಲ್ಲಿ ಅವರು ಡಿಸ್ ಪ್ಲೆ ಮಾಡಿದ ಡಿಸ್ಕೌಂಟ್ ಬಗ್ಗೆ ಗಮನಹರಿಸಿ ಖರೀದಿಸುತ್ತೇವೆ. ಅವರು ಶೇ.20,30,50,70, ರ ಡಿಸ್ಕೌಂಟ್ ಗೆ ನಾವು ಮಾರುಹೋಗಿ ಖರೀದಿಗೆ ಮುಂದಾಗುತ್ತೇವೆ.
ಏನು ಅಷ್ಟರ ಮಟ್ಟಿಗೆ ಡಿಸ್ಕೌಂಟ್ ನಲ್ಲಿ ಮಾರಾಟಮಾಡುವ ಸಾಮಾಗ್ರಿಯೂ ನಿಜವಾಗಿಯೂ ಖರೀದಿಗೆ ಅರ್ಹವೇ? ಇಷ್ಟರ ಮಟ್ಟಿಗೆ ಡಿಸ್ಕೌಂಟ್ ನೀಡುವ ಸಾಮಾಗ್ರಿಯ ಗುಣಮಟ್ಟವು ಕಳಪೆಯೇ? ಅಥವಾ ಅದರ ಬೆಲೆಯನ್ನು ಅತಿಯಾಗಿ ಹೆಚ್ಚಿಸಿ ನಂತರ ಡಿಸ್ಕೌಂಟ್ ಎಂಬ ಜೇನು ತುಪ್ಪದ ಲೇಪನಮಾಡಿ ಮಾರಾಟಮಾಡಲಾಗುತ್ತಿದೆಯೇ ಎಂಬುದನ್ನು ಪರಿಗಣಿಸುವುದಿಲ್ಲ.
ಪದಾರ್ಥಗಳ ಮೇಲೆ ಮುದ್ರಿತವಾಗುವ ಎಂ ಆರ್ ಪಿ
ನಮ್ಮ ಇಂದಿನ ಈ ದುರಾವಸ್ಥೆಗೆ ಮೂಲ ಕಾರಣ ಪದಾರ್ಥಗಳ ಮೇಲೆ ಮುದ್ರಿತವಾಗುವ ಎಂ ಆರ್ ಪಿ ಎಂಬ ಮಾಯಾ ಪದ. ಇದು ಮ್ಯಾಕ್ಸಿಮಮ್ ರಿಟೇಲ್ ಪ್ರೈಸ್ ಎಂದಾದರೂ ಉತ್ಪಾದನಾ ದರಕ್ಕಿಂತ ಹಲವು ಪಟ್ಟು ಹೆಚ್ಚಿಸಿ ಮುದ್ರಿಸಿ ಗ್ರಾಹಕರನ್ನು ದಾರಿ ತಪ್ಪಿಸಿ ಬಲಿಪಶುಗಳನ್ನಾಗಿಸುತ್ತಿದೆ. ಇದಕ್ಕೆ ಸರ್ಕಾರಗಳು ಹೊರತಲ್ಲ.
ಇದಕ್ಕೆ ಉತ್ತಮ ಉದಾಹರಣೆ ಎಂದರೆ ನಂದಿನಿ ತುಪ್ಪದಂತಹ ಉತ್ಪನ್ನದ ಲೀಟರ್ ಪ್ಯಾಕ್ ಮೇಲೆ ಎಂ ಆರ್ ಪಿ ಬೆಲೆ ರೂ.450ಎಂದು ಮುದ್ರಿತವಾಗಿದ್ದು ಹೊರಗಡೆ ಶಾಪಿಂಗ್ ಮಾಲುಗಳಲ್ಲಿ ರೂ.390 ರಲ್ಲಿ ದೊರೆಯುತ್ತಿದೆ. ಅಂದರೆ ಎಂ ಆರ್ ಪಿ ಬೆಲೆ ನೋಡಿದಾಗ ಉತ್ಪಾದಕರು ತಮ್ಮ ಉತ್ಪಾದನಾ ಬೆಲೆಯನ್ನೇ ಮರೆತು ಮನಸಾ ಇಚ್ಛೆಯಂತೆ ಎಂ ಆರ್ ಪಿ ಬೆಲೆ ಮುದ್ರಿಸಿರಬೇಕು.
ಇದಕ್ಕೆ ಪೂರಕವಾಗಿ ಮತ್ತೊಂದು ಎಂ ಆರ್ ಪಿ ಬೆಲೆ ಮುದ್ರಿಸುವುದನ್ನು ಕಡ್ಡಾಯಗೊಳಿಸುವುದು ಅನಿವಾರ್ಯವಾಗಿದೆ. ಏನದು ಮತ್ತೊಂದು ಎಂ ಆರ್ ಪಿ ಬೆಲೆ? ಅದೆಂದರೆ ಮಿನಿಮಮ್ ರಿಟೇಲ್ ಪ್ರೈಸ್ ಅಂದರೆ ಇದು ಉತ್ಪಾದನಾ ಬೆಲೆಯಾಗಿರಬೇಕು. ಆಗ ಮಾತ್ರ ಒಂದು ಸಾಮಾಗ್ರಿ ಅಥವಾ ಪದಾರ್ಥವು ಡಿಸ್ಕೌಂಟ್ ನಲ್ಲಿ ಮಾರಾಟಮಾಡುತ್ತಿರುವುದು ಸೂಕ್ತ ಎಂಬುದನ್ನು ನಿರ್ಧರಿಸಲು ಸಾಧ್ಯ.
ಹಿರಣ್ಣಯ್ಯ ಅವರ ನಾಟಕ ದೃಶ್ಯ ನೆನಪಿಗೆ ಬರುತ್ತೆ
ನಮ್ಮಲ್ಲಿ ಚೌಕಾಶಿ ಮಾಡುವುದು ಎಷ್ಟರಮಟ್ಟಿಗಿದೆ ಎಂದರೆ ದಿವಂಗತ ಮಾಸ್ಟರ್ ಹಿರಣ್ಣಯ್ಯ ರವರು ತಮ್ಮ ನಾಟಕವೊಂದರಲ್ಲಿ ವರ್ಣಿಸುತ್ತಿದ್ದರು, ಅದೆಂದರೆ ನಾವು ತಲೆಗೆ ಹಚ್ಚಿಕೊಳ್ಳಲು ಕೊಬ್ಬರಿ ಎಣ್ಣೆಯನ್ನು ಬೊಗಸೆಯಲ್ಲಿ ಹಾಕಿಕೊಳ್ಳುತ್ತೇವೆ, ಅದು ತಲೆಗೆ ಹಚ್ಚಿಕೊಳ್ಳುವ ಮುನ್ನವೇ ಮೊಣಕೈ ಮೇಲೆ ಹರಿದಾಗ ಅದನ್ನು ಉಳಿಸಲು ಮೊಣಕೈಯನ್ನು ತಲೆಗೆ ತಿಕ್ಕಲು ಪ್ರಯತ್ನಿಸುವಾಗ ಬೊಗಸೆಯಲ್ಲಿರುವ ಎಣ್ಣೆಯನ್ನು ಕೆಳಚೆಲ್ಲುತ್ತೇವೆ. ಅಂದರೆ ಪರಿಸ್ಥಿತಿಯನ್ನರಿತು ಅದಕ್ಕೆ ತಕ್ಕಂತೆ ನಡೆಯಬೇಕು. ಆಗಲೇ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ.
ಜಾಹಿರಾತು - ಪ್ರಚಾರ ವೈಖರಿ ಹೇಗಿದೆ
ಈಗಿನ ಜಾಹಿರಾತು - ಪ್ರಚಾರ ವೈಖರಿ ಹೇಗಿದೆ ಎಂದರೆ ನೀವು ಮಾರಾಟ ಮಾಡುವುದಿದ್ದರೆ ನಮ್ಮಲ್ಲಿ ಬನ್ನಿ ನಾವು ಅತಿ ಉತ್ತಮಬೆಲೆಗೆ ಮಾರಾಟಮಾಡಿಕೊಡುತ್ತೇವೆ ಎನ್ನುವರು ಅಂದರೆ ಖಾರೀದಿದಾರರು ಮೂರ್ಖರಾಗಿದ್ದಲ್ಲಿ ಇವರಲ್ಲಿ ಹೆಚ್ಚಿನ ಬೆಲೆಗೆ ಖರೀದಿಸಲು ಮುಂದಾಗಬಹುದು. ಇವರು ಒಂದು ರೀತಿಯ ಹಿಪ್ನಾಟಿಸಂ ಅಳವಡಿಸಿಕೊಂಡಿರಬೇಕು. ಇಲ್ಲವಾದಲ್ಲಿ ಖರೀದಿದಾರರನ್ನು ಮೂರ್ಖರನ್ನಾಗಿಸುವುದು ಸಾಧ್ಯವಿಲ್ಲ. ಇದು ಒಂದು ರೀತಿಯ ಪಾರ್ಶ್ವಚಿಂತನೆಯನ್ನು ಸಮಾಜದಲ್ಲಿ ಬೆಳೆಸಿ ನಮ್ಮ ಸ್ವಚಿಂತನಾ ಸಾಮರ್ಥ್ಯವನ್ನು ನಾಶಪಡಿಸುತ್ತಿದೆ. ಇಂತಹವುಗಳಿಂದ ದೂರವಿರಬೇಕು.
ಚೌಕಾಶಿ ಬಿಡಿ ಎಂದರೆ ಯಾರು ಕೇಳುತ್ತಾರೆ?
ಮೊದಲು ನಾವುಗಳು ಪಡೆದುಕೊಂಡ ವೃತ್ತಿಪರರಿಗೆ ಚೌಕಾಶಿ ಮಾಡದೆ ಅವರಿಗೆ ಕೊಡಬೇಕಾದ ಶುಲ್ಕವನ್ನು ಪಾವತಿಸಿದಲ್ಲಿ ಅವರು ತಮ್ಮ ಬಾಧ್ಯತೆಯನ್ನರಿತು ನ್ಯಾಯಸಮ್ಮತವಾದ ಸೇವೆಯನ್ನು ಒದಗಿಸಲು ಸಾಧ್ಯ. ಅದರಿಂದ ನಾವು ಹೆಚ್ಚಿನ ಸೇವೆಗೆ ಮತ್ತೊಬ್ಬ ವೃತ್ತಿಪರರನ್ನು ಹುಡುಕಿಕೊಂಡು ಹೋಗುವ ಮತ್ತು ಅದಕ್ಕೆ ತಗಲುವ ವೆಚ್ಚವನ್ನು ನಿಯಂತ್ರಿಸುವುದಲ್ಲದೆ, ಆ ವೃತ್ತಿಪರರು ತೃಪ್ತಿದಾಯಕ ಸೇವೆ ಒದಗಿಸಲು ಅನುಕೂಲವಾಗುವುದು. ಇದು ನಮ್ಮ ಮನಸ್ಸಿಗೂ ನೆಮ್ಮದಿ ತರುವುದು.
ನೈಸರ್ಗಿಕ ಸಂಪತ್ತನ್ನು ಉಳಿಸಿ ಬೆಳೆಸಿಕೊಳ್ಳುವ ಚಿಂತನೆ
ನಮ್ಮಲ್ಲಿ ನೈಸರ್ಗಿಕ ಸಂಪತ್ತನ್ನು ಉಳಿಸಿ ಬೆಳೆಸಿಕೊಳ್ಳುವ ಚಿಂತನೆ ಮೂಡಬೇಕು. ಕೇವಲ ನಾನು ಬಳಸಿಕೊಂಡರೆ ಏರನೂ ಕರಗುವುದಿಲ್ಲ ಎಂಬ ತಾತ್ಸಾರ ಭಾವನೆ, ಚಿಂತನೆ ಸರಿಯಲ್ಲ. ನೈಸರ್ಗಿಕ ಸಂಪತ್ತಿನ ಬಳಕೆಯಬಗ್ಗೆ ಹೇಳಬೇಕಾದರೆ ಹಿಂದೆ ನೀರಾವರಿ ತಜ್ಞರಾದ ಬಾಳೆಕುಂದ್ರಿಯವರು ಯಾವರೀತಿ ಇದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರೆಂದರೆ ಸ್ನಾನಕ್ಕೆ ಕೇವಲ ಅರ್ಧ ಬಕೆಟ್ ನೀರನ್ನು ಮಾತ್ರ ಬಳಸುತ್ತಿದ್ದರೆಂದು ಕೇಳಿದ ನೆನಪು. ಅಂದರೆ ಯಾವುದನ್ನಾದರೂ ಸ್ವತಃ ಅಳವಡಿಸಿಕೊಂಡು ಬೇರೆಯವರಿಗೆ ಮಾರ್ಗದರ್ಶನ ನೀಡಬಹುದು.
ಸುಶಿಕ್ಷಿತರಿರುವ ರಾಜ್ಯದಲ್ಲಿ ಖಿನ್ನತೆ ಹೆಚ್ಚಿದೆ
ಶಿಕ್ಷಣವೊಂದೇ ನಮಗೆ ಎಲ್ಲವನ್ನು ದೊರಕಿಸಿಕೊಡುತ್ತದೆ ಎಂಬುದು ತಪ್ಪು. ನಮ್ಮ ದೇಶದಲ್ಲಿ ಅತಿ ಹೆಚ್ಚು ಸುಶಿಕ್ಷಿತರಿರುವ ರಾಜ್ಯದಲ್ಲಿ ಖಿನ್ನತೆ ಹೆಚ್ಚಿದೆ ಎಂಬುದು ಒಂದು ಸರ್ವೇ ಪ್ರಕಾರ ತಿಳಿದುಬಂದಿದೆ. ನಾವು ನಮ್ಮಲ್ಲಿರುವ ಅರ್ಥವನ್ನು, ಅರ್ಥವತ್ತಾಗಿ ನಿರ್ವಹಿಸುವ ಸಾಮರ್ಥ್ಯವನ್ನು ಬೆಳೆಸಿ, ಅಳವಡಿಸಿಕೊಂಡಲ್ಲಿ ಮಾತ್ರ ಜೀವನ ಸಂತೋಷ, ನೆಮ್ಮದಿ, ತೃಪ್ತಿಗಳನ್ನು ತಂದು ಅರ್ಥವತ್ತಾಗಿಸುತ್ತದೆ.
ಆಗ 'ವರ್ಲ್ಡ್ ಹ್ಯಾಪಿನೆಸ್ಸ್ ಇಂಡೆಕ್ಸ್' ನಲ್ಲಿ ನಮ್ಮ ಸ್ಥಾನ ಸ್ವಯಂ ಉತ್ತುಂಗಕ್ಕೆ ಏರುವುದು. ನಾವು ಭಾವನಾತ್ಮಕವಾಗಿರದೆ, ಯಾಂತ್ರಿಕವಾಗಿರದೆ ಸ್ವಾಭಾವಿಕವಾಗಿ ನಮ್ಮ ಚಿಂತನೆಗಳನ್ನು ವಾಸ್ತವಾಂಶಗಳಿಂದ ತುಂಬಿ, ಸಮತೋಲನೆಯಲ್ಲಿರಿಸಿದರೆ ಎಲ್ಲವು ಸುಸೂತ್ರ. ಸಾಕ್ಷರತೆ ಮತ್ತು ಆರ್ಥಿಕ ಸಾಕ್ಷರತೆಗಳು ಈಗಿರುವ ವಿರುದ್ಧ ಅನುಪಾತದ ಬೆಳವಣಿಗೆಯಿಂದ ಸಮಾನಾಂತರ ಬೆಳವಣಿಗೆಯತ್ತ ತಿರುಗಿಸುವುದು ಇಂದಿನ ಅತ್ಯಗತ್ಯವಾಗಿದೆ.