ವಾಣಿಜ್ಯ ಬ್ಯಾಂಕುಗಳ ರೈತರ ಬೆಳೆ ಸಾಲ ಮನ್ನಾ, ಒಂದೇ ಕಂತಿನಲ್ಲಿ ಹಣ ಬಿಡುಗಡೆ
ಬೆಳೆ ಸಾಲಗಳನ್ನು ವರ್ಗಿಕರಿಸುವಲ್ಲಿ ಬ್ಯಾಂಕುಗಳು ಮಾಡಿದ ತಪ್ಪುಗಳಿಂದಾಗಿ ಸಾವಿರಾರು ರೈತರ ಸಾಲಮನ್ನಾ ಪೂರ್ಣಗೊಳಿಸುವ ಪ್ರಕ್ರಿಯೆ ಹಿನ್ನೆಡೆಗೆ ಕಾರಣವಾಗಿದೆ.
ಬೆಳೆ ಸಾಲಗಳನ್ನು ವರ್ಗಿಕರಿಸುವಲ್ಲಿ ಬ್ಯಾಂಕುಗಳು ಮಾಡಿದ ತಪ್ಪುಗಳಿಂದಾಗಿ ಸಾವಿರಾರು ರೈತರ ಸಾಲ ಮನ್ನಾ ಪೂರ್ಣಗೊಳಿಸುವ ಪ್ರಕ್ರಿಯೆ ಹಿನ್ನೆಡೆಗೆ ಕಾರಣವಾಗಿದೆ. ಮೈತ್ರಿ ಸರ್ಕಾರವು ರೈತರ ಸಾಲಮನ್ನಾ ಯೋಜನಾ ಪ್ರಕ್ರಿಯೆ ಸರಾಗವಾಗಿ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರ ಸ್ಪಷ್ಟಪಡಿಸಿದ್ದಾರೆ.
ಲೋಕಸಭಾ ಚುನಾವಣೆ ಮುಗಿದ ಬಳಿಕ ರೈತರ ಸಾಲಮನ್ನಾ ಯೋಜನೆಯ ಭಾಗವಾಗಿ ಸಾವಿರಾರು ರೈತರ ಖಾತೆಯಿಂದ ಹಣ ಹಿಂಪಡೆಯಲಾಗಿದೆ ಎಂಬ ವರದಿಗಳು ಮಾದ್ಯಮಗಳಲ್ಲಿ ಪ್ರಕಟವಾಗಿದ್ದವು. ಇದಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿಯವರು ಸ್ಪಷ್ಟನೆ ನೀಡಿದ್ದಾರೆ.
ಒಂದೇ ಕಂತಿನಲ್ಲಿ ಹಣ ಬಿಡುಗಡೆ
ವಾಣಿಜ್ಯ ಬ್ಯಾಂಕುಗಳಿಂದ ರೈತರು ಪಡೆದಿರುವ ಬೆಳೆ ಸಾಲವನ್ನು ಒಂದೇ ಕಂತಿನಲ್ಲಿ ಬಿಡುಗಡೆ ಮಾಡಿ ಸಾಲಮನ್ನಾ ಮಾಡುವಂತೆ ಸರ್ಕಾರ ಆದೇಶಿಸಿದೆ.
ವಾಣಿಜ್ಯ ಬ್ಯಾಂಕು ಗಳಿಂದ ಪಡೆದಿರುವ ಬೆಳೆ ಸಾಲ ಮನ್ನಾ ಸಂಬಂಧಿಸಿದಂತೆ ಅರ್ಹತೆ ಹೊಂದಿರುವ ರಿಸ್ಟ್ರಕ್ಚರ್ಡ್ ಸಾಲ, ಅರ್ಹತೆ ಹೊಂದಿರುವ ಓವರ್ ಡ್ಯೂ ಸಾಲ ಹಾಗೂ ಪ್ರೋತ್ಸಾಹ ಧನ ಸಾಲಗಳಿಗೆ ಸಂಬಂಧಿಸಿದಂತೆ ಈಗಾಗಲೇ ಬಿಡುಗಡೆಯಾದ ಮೊತ್ತವನ್ನು ಕಡಿತಗೊಳಿಸಿ, ಉಳಿದ ಸಂಪೂರ್ಣ ಮೊತ್ತವನ್ನು ಒಂದೇ ಕಂತಿನಲ್ಲಿ ರೈತರ ಖಾತೆಗೆ ಬಿಡುಗಡೆ ಮಾಡಲು ಅನುಮೋದನೆ ನೀಡಿ ಸರ್ಕಾರ ಆದೇಶ ಹೊರಡಿಸಿದೆ.
ವಸೂಲಾಗದ ಸಾಲ (ಎನ್ಪಿಎ) ಮತ್ತು ದಿನಾಂಕ 1-1-2018 ರಿಂದ ಬಡ್ಡಿ ಮೊತ್ತ ಪಾವತಿಸುವ ಬಗ್ಗೆ ಪ್ರತ್ಯೇಕವಾಗಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸರ್ಕಾರವು ಆದೇಶದಲ್ಲಿ ಹೇಳಿದೆ.
ಚುನಾವಣೆ ಸಂದರ್ಭ ಸಾಲಮನ್ನಾ ಸದ್ದು
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಸಾಲಮನ್ನಾ ಸಾಕಷ್ಟು ಸದ್ದು ಮಾಡಿತ್ತು. ಆದರೆ ಫಲಿತಾಂಶ ಘೋಷಣೆಯಾದ ಬಳಿಕ ರೈತರ ಖಾತೆಗೆ ಜಮೆಯಾದ ಸಾಲ ಮನ್ನಾದ ಹಣವು ಸದ್ದಿಲ್ಲದೇ ಸರಕಾರಕ್ಕೆ ವಾಪಸ್ ಹೋಗಿರುವುದು ರೈತರನ್ನು ದಂಗಾಗಿಸಿದೆ. ಸಾಲ ಮನ್ನಾ ಯೋಜನೆಯಡಿ ರೈತರ ಖಾತೆಗೆ ಜಮೆಯಾದ ಹಣ ವಾಪಸ್ ಹೋಗಿರುವುದು ಬೆಳಕಿಗೆ ಬಂದಿದೆ.
ಹಣ ವಾಪಸ್, ರೈತರಿಗೆ ಶಾಕ್
ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿನ ಎಸ್ಬಿಐ ಖಾತೆಗೆ ಶಿವಪ್ಪ ಕಾವಲಿ ಅವರ ಖಾತೆಗೆ ಜ. 29 ರಂದು ರೂ. 50 ಸಾವಿರ ಹಾಗೂ ಏ. 17ರಂದು ರೂ. 44,926 ಜಮಾ ಮಾಡಲಾಗಿತ್ತು. ಮೇ 23ರಂದು ಬ್ಯಾಂಕಿಗೆ ಹೋಗಿ ಖಾತೆ ಪರಿಶೀಲನೆ ನಡೆಸಿದ ವೇಳೆ ಹಣ ವಾಪಸ್ ಹೋಗಿರುವುದು ಗೊತ್ತಾಗಿದೆ. ಈ ಗ್ರಾಮದಲ್ಲಿರುವ ಶಾಖೆಯಲ್ಲಿ ಸುಮಾರು 200ಕ್ಕೂ ಅಧಿಕ ರೈತರ ಹಣ ವಾಪಸ್ಸು ಹೋಗಿರುವುದು ತಿಳಿದು ಬಂದಿದೆ.
ವಾಣಿಜ್ಯ ಬ್ಯಾಂಕುಗಳ ಬೆಳೆಸಾಲ ಮನ್ನಾಗೆ ಸಂಬಂಧಿಸಿದಂತೆ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಅರ್ಹತೆ ಹೊಂದಿರುವ ಫಲಾನುಭವಿಗಳಿಗೆ ಬಾಕಿ ಉಳಿದಿರುವ ಸಾಲವನ್ನು ಒಂದೇ ಕಂತಿನಲ್ಲಿ ಬಿಡುಗಡೆ ಮಾಡಲು ಆದೇಶ ಹೊರಡಿಸಲಾಗಿದೆ.
— CM of Karnataka (@CMofKarnataka) June 12, 2019
ಅದರ ಪ್ರತಿ ಇಲ್ಲಿದೆ- pic.twitter.com/KjSGk2idiE