ಒಂದು ತಪ್ಪು ಸುದ್ದಿಗೆ ಇಂಡಿಯಾ ಬುಲ್ ಹೌಸಿಂಗ್ ಷೇರುದಾರರ 4500 ಕೋಟಿ ಮಟಾಷ್

ಷೇರುಪೇಟೆಯಲ್ಲಿನ ಬೆಳವಣಿಗೆಗಳು ಸೃಷ್ಟಿಸುವ ಅವಕಾಶ ಮತ್ತು ಅಪಾಯಗಳ ಅರಿವಿದ್ದಲ್ಲಿ ಮಾತ್ರ ಚಟುವಟಿಕೆ ನಡೆಸಲು ಯೋಗ್ಯ. ಸದ್ಯದ ಸ್ಥಿತಿಯಲ್ಲಿ ಕಂಪೆನಿಗಳ ಸಾಧನೆಗಳಿಗಿಂತ ಬಾಹ್ಯ ಬೆಳವಣಿಗೆ ಹೆಚ್ಚು ಪ್ರಭಾವಿ ಆಗಿರುತ್ತದೆ. ಈ ಕಾರಣದಿಂದ ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬಂತೆ ಕೈಲಿ ಇರುವ ಹೆಚ್ಚುವರಿ ಹಣ ಮಾತ್ರ ಷೇರುಪೇಟೆಯಲ್ಲಿ ತೊಡಗಿಸಿಕೊಂಡಲ್ಲಿ ಪೇಟೆಯ ಏರಿಳಿತಗಳು ಅಬಾಧಿತವಾಗಿರುತ್ತದೆ.

ಮಾರ್ಜಿನ್ ಟ್ರೇಡಿಂಗ್, ಡೇ ಟ್ರೇಡಿಂಗ್, ಡೆರಿವೇಟಿವ್ ಟ್ರೇಡಿಂಗ್ ಮುಂತಾದವುಗಳು ಸಣ್ಣ ಹೂಡಿಕೆದಾರರ ಹಿಡಿತದಿಂದ ದೂರವಾಗಿವೆ. ಈ ಹೊಸ ನಮೂನೆಯ ವಿಧಗಳಲ್ಲಿ ತೊಡಗಿಸಿಕೊಂಡವರು ಹೆಚ್ಚಿನವರು ಅಸಂತುಷ್ಟರಾಗಿರುವುದು ಎಲ್ಲೆಡೆ ಕಂಡುಬರುತ್ತದೆ. ಪೇಟೆಯ ಚಟುವಟಿಕೆಯು ಸಂಪೂರ್ಣವಾಗಿ ಸಾಮಾನ್ಯ ಚಿಂತನೆಗಳ ವಿರುದ್ಧವಾಗಿ ಸಾಗುತ್ತಿದೆ.

ಕೆಲವು ಬೆಳವಣಿಗೆಗಳು ಊಹೆಗೂ ಮೀರಿದ ರೀತಿಯಲ್ಲಿ ಪೇಟೆಗೆ ಚಲನೆಯ ತಿರುವುಗಳನ್ನು ಒದಗಿಸುತ್ತಿವೆ. ಇಂತಹ ಅನಿರೀಕ್ಷಿತ ಚಲನೆಯೊಂದು ಗುರುವಾರ ಪ್ರದರ್ಶನವಾಯಿತು. ಇಂಡಿಯಾ ಬುಲ್ ಹೌಸಿಂಗ್ ಫೈನಾನ್ಸ್ ಕಂಪೆನಿಯು ಗೃಹ ವಲಯದ ಪ್ರತಿಷ್ಠಿತ ಕಂಪೆನಿಯಾಗಿದ್ದು, ಕಂಪೆನಿಯ ಪ್ರಕಾರ 90 ಸಾವಿರ ಕೋಟಿಯಷ್ಟು ಗೃಹ ಸಾಲ ನೀಡಿದೆ.

ಒಂದು ಸುದ್ದಿಯ ಕಾರಣಕ್ಕೆ ತೊಪ್ಪನೆ ಬಿದ್ದಿತು

ಒಂದು ಸುದ್ದಿಯ ಕಾರಣಕ್ಕೆ ತೊಪ್ಪನೆ ಬಿದ್ದಿತು

ಈ ಕಂಪೆನಿಯ ಷೇರಿನ ವಾರ್ಷಿಕ ಗರಿಷ್ಠ ಆಗಸ್ಟ್ ತಿಂಗಳಲ್ಲಿ 1,396ರ ಸಮೀಪವಿತ್ತು. ಆಗಿನ ಮಾರ್ಕೆಟ್ ಕ್ಯಾಪಿಟಲೈಸೇಶನ್ ರೂ.32 ಸಾವಿರ ಕೋಟಿಯಷ್ಟಿತ್ತು. ಫೆಬ್ರವರಿಯಲ್ಲಿ ನಾನ್ ಬ್ಯಾಂಕಿಂಗ್ ಫೈನಾನ್ಸ್ ಕಂಪೆನಿಗಳ ಗೊಂದಲದಿಂದಾಗಿ ವಲಯದ ಎಲ್ಲಾ ಷೇರುಗಳು ಭಾರಿ ಕುಸಿತಕ್ಕೊಳಗಾದ ಕಾರಣ ಆ ಸಂದರ್ಭದಲ್ಲಿ ರೂ.600ರ ಸಮೀಪಕ್ಕೆ ಕುಸಿದಿತ್ತು. ಕಂಪೆನಿಯ ಆಡಳಿತ ಮಂಡಳಿಯು ರೂ.98 ಸಾವಿರ ಕೋಟಿಯಷ್ಟು ಹಣದ ದುರ್ಬಳಕೆ ಮಾಡಿಕೊಂಡಿದೆ, ಈ ವಿಷಯವಾಗಿ ಸೋಮವಾರ ಕಂಪೆನಿಯ ಷೇರುದಾರರು ಮೊಕದ್ದಮೆಯೊಂದನ್ನು ದಾಖಲಿಸಿದ್ದಾರೆ ಎಂಬ ಆಘಾತಕರ ಸುದ್ದಿಯೊಂದು ಮಂಗಳವಾರದಂದು ಹೊರಬಿತ್ತು. ಈ ಸುದ್ದಿಯ ಪರಿಣಾಮವಾಗಿ ಷೇರಿನ ಬೆಲೆ ಶೇಕಡಾ 8.50ರಷ್ಟು ಕುಸಿತ ಕಂಡಿತು.

ತಮಗೆ ಅರಿವಿಲ್ಲದೆ ಸಹಿ ಹಾಕಿದ್ದು ಎಂಬ ಸಬೂಬು

ತಮಗೆ ಅರಿವಿಲ್ಲದೆ ಸಹಿ ಹಾಕಿದ್ದು ಎಂಬ ಸಬೂಬು

ಸೋಮವಾರದಂದು ಈ ಕಂಪೆನಿಯ ಷೇರು 765 ರುಪಾಯಿಗಳ ಸಮೀಪದಿಂದ 576ರವರೆಗೂ ಕುಸಿಯಿತು. ಗುರುವಾರದಂದು ರು.615ರ ಸಮೀಪದಿಂದ 588ರವರೆಗೂ ಕುಸಿಯಿತು. ದಿನದ ಮಧ್ಯಂತರದಲ್ಲಿ ಮಾಧ್ಯಮಗಳಲ್ಲಿ ಷೇರುದಾರರು ದಾಖಲಿಸಿದ್ದ ಮೊಕೊದ್ದಮೆಯನ್ನು ತಮಗರಿವಿಲ್ಲದೆ, ತಮ್ಮ ಸಹಿಯುಳ್ಳ ಪತ್ರವನ್ನು ಉಪಯೋಗಿಸಿಕೊಳ್ಳಲಾಗಿದೆ ಎಂಬ ಕುಂಟು ನೆಪದಿಂದ ಹಿಂಪಡೆದಿದ್ದಾರೆ ಎಂದು ಪ್ರಸಾರವಾಯಿತು. ಅದಾಗುತ್ತಿದ್ದಂತೆ ಷೇರಿನ ಬೆಲೆಯಲ್ಲಿ ಮಿಂಚಿನ ಸಂಚಾರವಾಗಿ ರೂ.699ರವರೆಗೂ ಏರಿಕೆ ಕಾಣುವಂತಾಯಿತು. ಅಂದರೆ ಗುರುವಾರದಂದು ರೂ.615 ರಿಂದ ರೂ.588ಕ್ಕೆ ಕುಸಿದು ನಂತರ ರೂ.699 ರವರೆಗೂ ಪುಟಿದೆದ್ದು, ಹಲವರಿಗೆ ಬೆರಗುಗೊಳಿಸಿದರೆ ಮತ್ತೆ ಕೆಲವರಿಗೆ ಅಪಾರವಾದ ಹಾನಿಯನ್ನು ಉಂಟುಮಾಡಿದೆ.

ತಪ್ಪು ಮಾಡಿದವರ ವಿರುದ್ಧ ಕ್ರಮ ಬೇಡವೆ?

ತಪ್ಪು ಮಾಡಿದವರ ವಿರುದ್ಧ ಕ್ರಮ ಬೇಡವೆ?

ಕೇವಲ ಎರಡು ದಿನಗಳ ಚಟುವಟಿಕೆಯಲ್ಲಿ ರು.4500 ಕೋಟಿಯಷ್ಟು ಷೇರುದಾರರ ಹಣ ನಶಿಸಿ ಹೋಗಿದೆ. ನಂತರ ಒಂದೇ ದಿನ ಮೊಕದ್ದಮೆ ಹಿಂಪಡೆದ ಸುದ್ದಿಯ ಕಾರಣ ಸುಮಾರು ಮೂರು ಸಾವಿರ ಕೋಟಿಯಷ್ಟು ಏರಿಕೆ ಕಂಡಿರುವುದು ಅಂಕಿ- ಅಂಶ ತಜ್ಞರಿಗೆ ಅನುಕೂಲವಾಗಿರುತ್ತದೆ. ಆದರೆ ಅನುಭವಿಸುವವರಿಗೆ ವಿಶೇಷವಾಗಿ 'ಭ್ರಮೆಯೇ ಬ್ರಹ್ಮಾಂಡ' ಎಂದುಕೊಂಡವರಿಗೆ ನುಂಗಲಾರದ ತುತ್ತಾಗಿದೆ. ಈ ರೀತಿಯ ಕ್ಷುಲ್ಲಕ ಕಾರಣಗಳಿಗೆ ಇಡೀ ಬಂಡವಾಳ ಪೇಟೆಯನ್ನೇ ಅಲುಗಾಡಿಸುವ ಕೃತ್ಯ ಎಸಗಿರುವವರಿಗೆ ಪೇಟೆಯ ನಿಯಂತ್ರಕರಾಗಲಿ, ನ್ಯಾಯಾಲಯಗಳಾಗಲಿ ತಕ್ಕ ಶಿಕ್ಷೆಯನ್ನು ವಿಧಿಸಿ, ಹೂಡಿಕೆದಾರರ ನಂಬಿಕೆಗೆ ಪಾತ್ರರಾಗುವುದು ಇಂದಿನ ಅವಶ್ಯಕತೆ ಅಲ್ಲವೇ?

ತಿಂಗಳಿಗೆ ಒಂದರಂತೆ ಉದಾಹರಣೆ ಸಿಗುತ್ತದೆ

ತಿಂಗಳಿಗೆ ಒಂದರಂತೆ ಉದಾಹರಣೆ ಸಿಗುತ್ತದೆ

ಡಾ ರೆಡ್ಡಿ ಲ್ಯಾಬ್ಸ್, ಎಸ್ ಬಿಐ ಲೈಫ್, ಸನ್ ಫಾರ್ಮಾ ಹೀಗೆ ತಿಂಗಳಲ್ಲಿ ಒಂದಲ್ಲಾ ಒಂದು ಕಂಪೆನಿಗೆ ಸಂಬಂಧಿಸಿದ ಸುದ್ದಿ ಬರುತ್ತದೆ. ಕೆಲವು ಷೇರುಗಳಂತೂ ಮತ್ತೆ ಚೇತರಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲದ ಮಟ್ಟಿಗೆ ಕುಸಿಯುತ್ತದೆ. ಮತ್ತೆ ಕೆಲವು ದಿಢೀರನೇ ಕುಸಿದು, ಆ ನಂತರ ಎದ್ದು ನಿಲ್ಲುತ್ತವೆ. ಈ ಹಿಂದೆ ನನ್ನದೇ ಅಂಕಣದಲ್ಲಿ ಎಸ್ ಬಿಐ ಲೈಫ್ ಬಗ್ಗೆ ಒಂದು ವಿಸ್ತೃತವಾದ ಲೇಖನವನ್ನೇ ಬರೆದಿದ್ದೆ. ಹೀಗೆ ಪದೇ ಪದೇ ಹೂಡಿಕೆದಾರರು ತಮ್ಮ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಅವರ ಬಂಡವಾಳ ಸುರಕ್ಷತೆ ಬಗ್ಗೆ ಯೋಚಿಸಬೇಕಾದವರು ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಮೂಡುತ್ತದೆ. ಆದರೆ ಉತ್ತರ ಮಾತ್ರ ಸಿಗುವುದಿಲ್ಲ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+