ಆಧಾರ್ ಕಾರ್ಡ್ ಅನ್ನು ಸ್ವಯಂಪ್ರೇರಿತವಾಗಿ ಗುರುತಿನ ಚೀಟಿಯಾಗಿ ಬಳಸಲು ಅವಕಾಶ ಒದಗಿಸುವ ಆಧಾರ್ ಮತ್ತು ಇನ್ನಿತರ ಕಾನೂನು (ತಿದ್ದುಪಡಿ) ವಿಧೇಯಕಕ್ಕೆ ಈಗಾಗಲೇ ಲೋಕಸಭೆಯಲ್ಲಿ ಅನುಮೋದನೆ ಸಿಕ್ಕಿದ್ದು, ಈಗ ರಾಜ್ಯಸಭೆಯಲ್ಲೂ ಒಪ್ಪಿಗೆ ದೊರೆತಿದೆ.
ಆಧಾರ್ ಕಾರ್ಡ್ ಅನ್ನು ಸ್ವಯಂಪ್ರೇರಿತವಾಗಿ ಗುರುತಿನ ಚೀಟಿಯಾಗಿ ಬಳಸಲು ಅವಕಾಶ ಒದಗಿಸುವ ಆಧಾರ್ ಮತ್ತು ಇನ್ನಿತರ ಕಾನೂನು (ತಿದ್ದುಪಡಿ) ವಿಧೇಯಕಕ್ಕೆ ಈಗಾಗಲೇ ಲೋಕಸಭೆಯಲ್ಲಿ ಅನುಮೋದನೆ ಸಿಕ್ಕಿದ್ದು, ಈಗ ರಾಜ್ಯಸಭೆಯಲ್ಲೂ ಒಪ್ಪಿಗೆ ದೊರೆತಿದೆ. ಬಜೆಟ್ ಮಂಡನೆ ಸಂದರ್ಭದಲ್ಲಿ ಉಲ್ಲೇಖಿಸಿರುವಂತೆ ಹೊಸ ನಿಯಮಕ್ಕನುಗುಣವಾಗಿ ತೆರಿಗೆದಾರರು, ತಮ್ಮ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸಲು ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ಎರಡಲ್ಲಿ ಒಂದನ್ನು ಬಳಸಬಹುದಾಗಿದೆ. ಈ ಹಿಂದೆ ಐಟಿಆರ್ ಸಲ್ಲಿಸಲು ಎರಡನ್ನೂ ಹೊಂದಿರಬೇಕಾಗಿತ್ತು.
1 ಕೋಟಿ ದಂಡ
ಸೋಮವಾರದಂದು ಧ್ವನಿಮತದ ಮೂಲಕ ಈ ವಿಧೇಯಕಕ್ಕೆ ಸಂಸತ್ತಿನಲ್ಲಿ ಅಂಗೀಕಾರ ದೊರೆತಿದ್ದು, ಆಧಾರ್ ಹೊಂದಿರುವ ಗ್ರಾಹಕರು ಸ್ವಯಂಪ್ರೇರಿತರಾಗಿ ಬ್ಯಾಂಕ್ ಖಾತೆ ತೆರೆಯುವಾಗ, ಮೊಬೈಲ್ ಸಿಮ್ ಸಂಪರ್ಕ ಪಡೆಯುವಾಗ ಹಾಗು ಇನ್ನಿತರ ಸಂದರ್ಭಗಳಲ್ಲಿ ಬಳಸಬಹುದಾಗಿದೆ. ಖಾಸಗಿ ಸಂಸ್ಥೆಗಳು ಆಧಾರ್ ಮಾಹಿತಿಯನ್ನು ದುರುಪಯೋಗಪಡಿಸಿಕೊಂಡರೆ 1 ಕೋಟಿ ರೂಪಾಯಿವರೆಗೆ ದಂಡ ಹಾಗೂ ಜೈಲು ಶಿಕ್ಷೆ ವಿಧಿಸುವ ಬಗ್ಗೆ ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.
ಪ್ಯಾನ್ ಕಾರ್ಡ್ ವಿತರಣೆ
ಆಧಾರ್ ಕಾರ್ಡ್ ಒದಗಿಸಿ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡಿದವರಿಗೆ ಆದಾಯ ತೆರಿಗೆ ಇಲಾಖೆಯಿಂದಲೇ ಪ್ಯಾನ್ ಕಾರ್ಡ್ ವಿತರಿಸಲಾಗುವುದು. ಐಟಿಆರ್ ಸಲ್ಲಿಸುವಾಗ ಪ್ಯಾನ್ ಕಾರ್ಡ್ ಗೆ ಪರ್ಯಾಯವಾಗಿ ಆಧಾರ್ ಕಾರ್ಡ್ ನೀಡುವಂತೆ ಕೇಂದ್ರ ಸರ್ಕಾರವು ಬಜೆಟ್ಮಂಡನೆಯ ಸಂದರ್ಭದಲ್ಲಿ ತಿಳಿಸಿತ್ತು. ಪರ್ಯಾಯ ಬಳಕೆಗೆ ಅವಕಾಶ ಕೊಟ್ಟ ಮಾತ್ರಕ್ಕೆ ಪ್ಯಾನ್ ಕಾರ್ಡ್ ಅಪ್ರಸ್ತುತವಾಗುವುದಿಲ್ಲ ಎಂದಿದೆ.
ಆಧಾರ್ ಮೂಲಕ ಐಟಿ ರಿಟರ್ನ್ ಸಲ್ಲಿಸುವ ತೆರಿಗೆದಾರರಿಗೆ ತೆರಿಗೆ ಇಲಾಖೆ ವತಿಯಿಂದ ಪ್ಯಾನ್ ಕಾರ್ಡ್ ಅನ್ನು ಸ್ವಯಂ ವಿತರಿಸಲಾಗುವುದು ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ಅಧ್ಯಕ್ಷ ಪ್ರಮೋದ್ ಚಂದ್ರ ಹೇಳಿದ್ದಾರೆ.
ಆಧಾರ್-ಪ್ಯಾನ್ ಕಡ್ಡಾಯವಾಗಿತ್ತು
ಈ ಹಿಂದೆ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆ ಮಾಡಲು ಆಧಾರ್ ನೊಂದಿಗೆ ಪ್ಯಾನ್ ಕಾರ್ಡ್ ಜೋಡಣೆ ಕಡ್ಡಾಯವಾಗಿತ್ತು. ಕೇಂದ್ರ ಸರ್ಕಾರವು, ತೆರಿಗೆದಾರರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ಯಾನ್ ಕಾರ್ಡ್ ಬದಲಿಗೆ ಆಧಾರ್ ಕಾರ್ಡ್ ಬಳಕೆಗೆ ಅವಕಾಶ ಕಲ್ಪಿಸಿದೆ. ಆದರೆ ಪ್ಯಾನ್ ಕಾರ್ಡ್ ಅಸ್ತಿತ್ವಕ್ಕೆ ತೊಡಕಾಗುವುದಿಲ್ಲ. ಹೆಚ್ಚುವರಿ ಆಯ್ಕೆಯಾಗಿ ಆಧಾರ್ ಬಳಸಲು ಅವಕಾಶ ನೀಡಲಾಗಿದೆ.


Click it and Unblock the Notifications