ನವದೆಹಲಿ, ಆಗಸ್ಟ್ 17: ದೇಶದಾದ್ಯಂತ ಎಲ್ಲ ಬಗೆಯ ವಾಹನ ಮಾರಾಟ ಕಳವಳಕಾರಿ ರೀತಿಯಲ್ಲಿ ಕುಸಿತ ಕಂಡಿದೆ. ಇದರಿಂದ ಆಟೊಮೊಬೈಲ್ ಉದ್ಯಮ ತತ್ತರಿಸಿದೆ. ಜುಲೈ ತಿಂಗಳಲ್ಲಿ ಕಳೆದ 19 ವರ್ಷದಲ್ಲಿಯೇ ಅತ್ಯಂತ ಹಿನ್ನಡೆಯುಂಟಾಗಿದ್ದು, 2.30 ಲಕ್ಷ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ವರದಿಯೊಂದು ತಿಳಿಸಿತ್ತು.
ವಾಹನ ಉದ್ಯಮದ ಪಡಿಪಾಡಲು ಮುಂದುವರಿದಿದೆ. ಒಂದೆಡೆ ಬೃಹತ್ ಕಂಪೆನಿಗಳು ನಷ್ಟ ಭರಿಸಲಾಗಿದೆ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಮುಂದಾಗಿದ್ದರೆ, ಇನ್ನೊಂದೆಡೆ ಆಟೊಮೊಬೈಲ್ ಕ್ಷೇತ್ರದ ಪದವೀಧರರು ಉದ್ಯೋಗಾವಕಾಶ ಸಿಗದೆ ಕಂಗಾಲಾಗಿದ್ದಾರೆ.
ಭಾರತದ ಅತಿದೊಡ್ಡ ಕಾರ್ ತಯಾರಕ ಕಂಪೆನಿಯಾದ ಮಾರುತಿ ಸುಜುಕಿ ಇಂಡಿಯಾ ಕೂಡ ಆಟೋಮೊಬೈಲ್ ಉದ್ಯಮದ ಹಿನ್ನೆಡೆಯಲ್ಲಿ ಪಾಲು ಹೊಂದಿದೆ. ಮಾರುತಿ ಸುಜುಕಿಯ ಸುಮಾರು 3,000 ಗುತ್ತಿಗೆ ನೌಕರರು ಈಗಾಗಲೇ ಕೆಲಸ ಕಳೆದುಕೊಂಡಿದ್ದಾರೆ ಎಂಬ ಆಘಾತಕಾರಿ ವರದಿ ಬಹಿರಂಗವಾಗಿದೆ.
ಕ್ಯಾಂಪಸ್ ಸಂದರ್ಶನದಲ್ಲಿ ಕಡಿತ
ಒಂದೆಡೆ ಉದ್ಯೋಗ ಕಡಿತವಾಗುತ್ತಿದ್ದರೆ, ಇನ್ನೊಂದೆಡೆ ಪ್ರತಿಭಾವಂತ ಕೆಲಸಗಾರರನ್ನು ನೇಮಿಸಿಕೊಳ್ಳುವ ಯೋಜನೆಗಳಿಗೆ ವಿವಿಧ ಕಂಪೆನಿಗಳು ಕತ್ತರಿಹಾಕಿವೆ. ಪ್ರಮುಖ ಕಂಪೆನಿಗಳು ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳಿಗೆ ತೆರಳಿ ಕ್ಯಾಂಪಸ್ ಆಯ್ಕೆ ಮಾಡುತ್ತಿದ್ದವು. ಈಗ ಅವುಗಳಿಗೆ ಲಗಾಮು ಬಿದ್ದಿವೆ. ಮಹೀಂದ್ರಾ & ಮಹೀಂದ್ರಾ, ಮಾರುತಿ ಸುಜುಕಿ, ಅಶೋಕ ಲೈಲ್ಯಾಂಡ್ ಮುಂತಾದ ಕಂಪೆನಿಗಳು ಆಗಷ್ಟೇ ವಿದ್ಯಾಭ್ಯಾಸ ಮುಗಿಸಿರುವ ಫ್ರೆಶರ್ಗಳ ನೇಮಕಾತಿಗೆ ಕಡಿವಾಣ ಹಾಕಿವೆ. ಮಹೀಂದ್ರಾ ಕಂಪೆನಿಯು ಪ್ರತಿ ಬಾರಿ ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆ ಮಾಡುತ್ತಿದ್ದ ಪ್ರಮಾಣವನ್ನು ಅರ್ಧದಷ್ಟು ಕಡಿತಗೊಳಿಸಿದೆ.
ಮಾರುತಿ ಸುಜುಕಿಯಲ್ಲಿ ಉದ್ಯೋಗ ಕಡಿತ
''ಸದ್ಯದ ಪರಿಸ್ಥಿತಿಯಲ್ಲಿ ಕಂಪೆನಿಯ ಕಾಯಂ ಉದ್ಯೋಗಿಗಳ ಸ್ಥಾನಕ್ಕೆ ಸಂಚಕಾರ ಬಂದಿಲ್ಲ. ಆದರೆ, ಗುತ್ತಿಎ ಪದ್ಧತಿಯಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 3,000 ತಾತ್ಕಾಲಿಕ ಉದ್ಯೋಗಿಗಳ ಗುತ್ತಿಗೆಯನ್ನು ನವೀಕರಣ ಮಾಡಿಲ್ಲ. ಇದು ಉದ್ಯಮದ ಭಾಗ. ಬೇಡಿಕೆ ಅಧಿಕವಾದಾಗ ಹೆಚ್ಚು ಗುತ್ತಿಗೆ ನೌಕರರನ್ನು ಪಡೆದುಕೊಳ್ಳಲಾಗುತ್ತದೆ. ಬೇಡಿಕೆ ಕಡಿಮೆಯಾದಾಗ ಅವರನ್ನು ಕಡಿತಗೊಳಿಸಲಾಗುತ್ತದೆ'' ಎಂದು ಮಾರುತಿ ಸುಜುಕಿ ಇಂಡಿಯಾ (ಎಂಎಸ್ಐಎಲ್) ಅಧ್ಯಕ್ಷ ಆರ್.ಸಿ. ಭಾರ್ಗವ ಹೇಳಿದ್ದಾರೆ.
ಉದ್ಯೋಗ ನಷ್ಟದ ಎಚ್ಚರಿಕೆ
''ಆಟೋಮೊಬೈಲ್ ವಲಯವು ಮಾರಾಟ, ಸೇವೆ, ವಿಮೆ, ಪರವಾನಗಿ, ಹಣಕಾಸು, ಬಿಡಿಭಾಗಗಳು, ಚಾಲಕರು, ಪೆಟ್ರೋಲ್ ಪಂಪ್, ಸಾರಿಗೆ ಸೇರಿದಂತೆ ಅನೇಕ ವಿಭಾಗಗಳಲ್ಲಿ ಉದ್ಯೋಗ ಸೃಷ್ಟಿಸುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಕೆಲವು ಆಟೋಮೊಬೈಲ್ಗಳ ಮಾರಾಟದಲ್ಲಿ ಉಂಟಾಗಿರುವ ಹಿನ್ನಡೆ ಭಾರಿ ಪ್ರಮಾಣದಲ್ಲಿ ಉದ್ಯೋಗ ನಷ್ಟಕ್ಕೆ ಎಡೆಮಾಡಿಕೊಡಲಿದೆ'' ಎಂದು ಭಾರ್ಗವ ಎಚ್ಚರಿಕೆ ನೀಡಿದ್ದಾರೆ.
ಉದ್ಯೋಗಿಗಳ ಮುಂದೆ ಎರಡು ಆಯ್ಕೆ ಇಟ್ಟ ಲೈಲ್ಯಾಂಡ್
ಬೃಹತ್ ವಾಹನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಅಶೋಕ್ ಲೈಲ್ಯಾಂಡ್ ಕೂಡ ಹಣ ಉಳಿತಾಯದ ಅನಿವಾರ್ಯತೆಯ ಕ್ರಮಕ್ಕೆ ಮುಂದಾಗಿದೆ. ವಾಹನ ಮಾರಾಟದಲ್ಲಿ ತೀವ್ರ ಇಳಿಕೆಯಾಗಿರುವುದರಿಂದ ಅಶೋಕ್ ಲೈಲ್ಯಾಂಡ್ ಎರಡು ಯೋಜನೆಗಳನ್ನು ಉದ್ಯೋಗಿಗಳಿಗೆ ಜಾರಿಗೆ ತಂದಿದೆ. ಕಂಪೆನಿಯಲ್ಲಿನ ಅನುಭವಕ್ಕೆ ಅನುಗುಣವಾಗಿ 30 ಲಕ್ಷ ರೂ ಮತ್ತು 60 ಲಕ್ಷ ರೂ.ದ ಎರಡು ಪ್ಯಾಕೇಜ್ಗಳನ್ನು ತಂದಿದೆ. ವಿಆರ್ಎಸ್ ತೆಗೆದುಕೊಳ್ಳಲು ಬಯಸದ ಉದ್ಯೋಗಿಗಳಿಗೆ ಪರ್ಯಾಯವಾಗಿ ಉದ್ಯೋಗಿ ಪ್ರತ್ಯೇಕತಾ ಯೋಜನೆಯನ್ನು ಅಳವಡಿಸಿದೆ. ಈ ಯೋಜನೆಗಳನ್ನು ಸ್ವೀಕರಿಸಲು ಆಸಕ್ತಿ ಇದೆಯೇ ಎಂಬ ಬಗ್ಗೆ ಆಗಸ್ಟ್ ಅಂತ್ಯದ ಒಳಗೆ ತಿಳಿಸುವಂತೆ ಕಂಪೆನಿ ಸೂಚಿಸಿದೆ.


Click it and Unblock the Notifications