ಎಟಿಎಂ ನಿಂದ ಹಣ ತೆಗೆವುದು ಇನ್ನು ಮುಂದೆ ಸುಲಭವಲ್ಲ
ನವದೆಹಲಿ, ಆಗಸ್ಟ್ 27: ಎಟಿಎಂ ನಿಂದ ಹಣ ಕಳುವು ಪ್ರಕರಣಗಳನ್ನು ಕಡಿಮೆ ಮಾಡಲೆಂದು ಹೊಸ ನಿಯಮಗಳನ್ನು ಜಾರಿಗೆ ತರಲು ಚಿಂತನೆ ನಡೆಸಲಾಗಿದ್ದು, ಈ ಹೊಸ ನಿಯಮಗಳು ಗ್ರಾಹಕನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಎಟಿಎಂನಲ್ಲಿ ಹಣ ವಂಚನೆ, ಎಟಿಎಂ ನಲ್ಲಿ ಹಣ ಪಡೆದ ಗ್ರಾಹಕರಿಗೆ ಬೆದರಿಕೆ ಹಾಗಿ ದರೋಡೆ ಹೀಗೆ ಹಲವು ರೀತಿಯ ಎಟಿಎಂ ಸಂಬಂಧಿ ಹಣ ವಂಚನೆ ಮತ್ತು ಕಳುವು ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ಇವನ್ನು ನಿಯಂತ್ರಿಸಲು ಹೊಸ ನಿಯಮಗಳನ್ನು ಜಾರಿಗೆ ತರಲು ಚಿಂತನೆ ನಡೆದಿದ್ದು, ನಿಯಮಗಳನ್ನು ಈಗಾಗಲೇ ರೂಪಿಸಲಾಗಿದೆ.
ಅಜಿತ್ ಪವಾರ್ ವಿರುದ್ಧ 1000 ಕೋಟಿ ಬ್ಯಾಂಕ್ ಹಗರಣದ ಆರೋಪ
ದೆಹಲಿ ರಾಜ್ಯ ಮಟ್ಟದ ಬ್ಯಾಂಕರ್ರುಗಳ ಸಮಿತಿ (ಎಸ್ಎಲ್ಬಿಸಿ) ಸಭೆ ನಡೆಸಿ ಎಟಿಎಂ ಹಣ ಕಳುವು ತಡೆಯಲು ಕೆಲವು ಸಲಹೆಗಳನ್ನು ನೀಡಿದ್ದು, ಎಟಿಎಂ ನಲ್ಲಿ ಹಣ ಪಡೆಯಲು ಸಮಯಮಿತಿ ನಿಗದಿಪಡಿಸುವ ಸಲಹೆಯನ್ನು ಸಮಿತಿಯು ನೀಡಿದೆ.
ಒಂದು ಬಾರಿ ಎಟಿಎಂನಿಂದ ಹಣ ಪಡೆದ ಬಳಿಕ ಮತ್ತೆ ಹಣ ಪಡೆಯಲು 6-12 ಗಂಟೆ ಅವಧಿ ಸಮಯ ನಿಗದಿಪಡಿಸುವ ಸಲಹೆಸಹ ಅದರಲ್ಲಿ ಸೇರಿದೆ. ಗ್ರಾಹಕರು ಈಗ ಎಟಿಎಂನಿಂದ ಹಣ ಪಡೆಯಲು ಯಾವುದೇ ಸಮಯ ನಿಗದಿ ಇಲ್ಲ. ಆದರೆ ಈ ನಿಯಮ ಅನ್ವಯವಾದರೆ ದಿನಕ್ಕೆ ಎರಡು ಭಾರಿ ಮಾತ್ರವೇ ಹಣ ಪಡೆಯಬಹುದಾಗಿರುತ್ತದೆ.
ಬಹುತೇಕ ವಂಚನೆ ರಾತ್ರಿ ಸಮಯವೇ ನಡೆದಿದೆ
ಬಹುತೇಕ ಎಟಿಎಂ ಹಣ ವಂಚನೆ, ಕಳ್ಳತನಗಳು ರಾತ್ರಿಯಿಂದ ಬೆಳಿಗ್ಗಿನ ಅವಧಿಯಲ್ಲಿ ಆಗುತ್ತಿವೆ ಹಾಗಾಗಿ ಎಟಿಎಂ ನಲ್ಲಿ ಹಣ ತೆಗೆಯಲು ಸಮಯ ನಿಗದಿ ಪಡಿಸಿದರೆ ಎಟಿಎಂ ವಂಚನೆ ಕಡಿಮೆ ಮಾಡಬಹುದು ಎಂದು ಓರಿಯಂಟಲ್ ಬ್ಯಾಂಕ್ ಸಿಇಒ ಮತ್ತು ಎಸ್ಎಲ್ಬಿಸಿ ಸಮಿತಿ ಸದಸ್ಯ ಮುಖೇಶ್ ಕುಮಾರ್ ಜೈನ್ ಹೇಳಿದ್ದಾರೆ.
ಸರ್ಕಾರಕ್ಕೆ ಸಲಹೆ ಸಲ್ಲಿಸಲಾಗಿದೆ
18 ವಿವಿಧ ಪ್ರಮುಖ ಬ್ಯಾಂಕ್ಗಳ ಪ್ರಮುಖರು ಉಳ್ಳ ಎಸ್ಎಲ್ಬಿಸಿ ಸಮಿತಿಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿ ಸಲಹೆಯನ್ನು ಸರ್ಕಾರಕ್ಕೆ ರವಾನಿಸಲಾಗಿದ್ದು, ಸರ್ಕಾರವು ಸಲಹೆಯನ್ನು ಸ್ವೀಕರಿಸಿದ್ದೇ ಆದಲ್ಲಿ ಎಟಿಎಂನಿಂದ ಹಣ ಪಡೆಯುವುದು ಕಠಿಣವಾಗಲಿದೆ.
ಬ್ಯಾಂಕಿಗೆ ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ಸಾಲು ಸಾಲು ರಜೆ
ಒಟಿಪಿ ಇದ್ದರಷ್ಟೆ ಎಟಿಎಂನಿಂದ ಹಣ
ಇದರ ಜೊತೆಗೆ ಕೆನೆರಾ ಬ್ಯಾಂಕ್ ಸಹ ತನ್ನ ಎಟಿಎಂನಲ್ಲಿ 10,000 ಕ್ಕಿಂತಲೂ ಹೆಚ್ಚು ಹಣ ಪಡೆಯುವುದಾದರೆ ಒಟಿಪಿ (ಒನ್ ಟೈಮ್ ಪಾಸ್ವರ್ಡ್) ಕಡ್ಡಾಯಗೊಳಿಸುವುದಾಗಿ ಹೇಳಿದ್ದು. ಈ ನಿಯಮ ಸಹ ಇನ್ನೂ ಜಾರಿಯಾಗಿಲ್ಲ. ಇದು ಜಾರಿಯಾದರೆ ಒಟಿಪಿ ನೀಡಿದ ಬಳಿಕವೇ ಹಣ ಡ್ರಾ ಮಾಡಬೇಕಾಗುತ್ತದೆ.
ಹೆಚ್ಚಾಗುತ್ತಿರುವ ಎಟಿಎಂ ವಂಚನೆ ಪ್ರಕರಣ
2018-2019 ರ ಅವಧಿಯಲ್ಲಿ ದೆಹಲಿ ಒಂದರಲ್ಲಿಯೇ 179 ಎಟಿಎಂ ವಂಚನೆ, ಕಳುವು ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರದಲ್ಲಿ 233 ಪ್ರಕರಣಗಳು ಇದೇ ಅವಧಿಯಲ್ಲಿ ದಾಖಲಾಗಿವೆ. ಬೇರೆ ಬೇರೆ ರಾಜ್ಯಗಳಲ್ಲಿಯೂ ಸಹ ಎಟಿಎಂ ವಂಚನೆ, ಕಳ್ಳತನ ಪ್ರಕರಣಗಳು ಹೆಚ್ಚಾಗಿರುವ ಕಾರಣ ಈ ಸಲಹೆ ನೀಡಲಾಗಿದೆ.