ಮೋದಿ ಆಡಳಿತದ 100 ದಿನಗಳಲ್ಲಿ 12.5 ಲಕ್ಷ ಕೋಟಿ ಸಂಪತ್ತು ಸರ್ವನಾಶ
ಕೇಂದ್ರದಲ್ಲಿ ಎರಡನೇ ಅವಧಿಗೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರ ಸ್ವೀಕರಿಸಿಕೊಂಡು 100 ದಿನಗಳು ಪೂರ್ಣಗೊಂಡಿವೆ. ನೂರು ದಿನಗಳಲ್ಲಿ ದೇಶದ ಆರ್ಥಿಕ ಉತ್ತೇಜನಕ್ಕೆ ಸಾಕಷ್ಟು ಶ್ರಮಿಸುತ್ತಿದೆ.
ಕೇಂದ್ರದಲ್ಲಿ ಎರಡನೇ ಅವಧಿಗೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರ ಸ್ವೀಕರಿಸಿಕೊಂಡು 100 ದಿನಗಳು ಪೂರ್ಣಗೊಂಡಿವೆ. ನೂರು ದಿನಗಳಲ್ಲಿ ದೇಶದ ಆರ್ಥಿಕ ಉತ್ತೇಜನಕ್ಕೆ ಸಾಕಷ್ಟು ಶ್ರಮಿಸುತ್ತಿದೆ. ಆದರೆ ಆರ್ಥಿಕ ಬಿಕ್ಕಟ್ಟು ಸರ್ಕಾರದ ನಿಯಂತ್ರಣಕ್ಕೆ ಮಾತ್ರ ಸಿಗದೇ ಕುಸಿಯುತ್ತಲೇ ಸಾಗಿದೆ. ದಿನೇ ದಿನೇ ಸಂಕಷ್ಟ ಎದುರಿಸುತ್ತಿರುವ ವಾಹನ ಉದ್ಯಮ, ಬ್ಯಾಂಕಿಂಗ್ ವಲಯ, ಉತ್ಪಾದನಾ ವಲಯಗಳು ಬಾಗಿಲುಗಳನ್ನು ಮುಚ್ಚುತ್ತಿವೆ. ಇನ್ನೊಂದೆಡೆ ಉದ್ಯೋಗ, ಹೂಡಿಕೆ-ಷೇರುಪೇಟೆ ದಾಖಲೆಯ ನಷ್ಟ ಕಂಡಿವೆ. ಆಟೊಮೊಬೈಲ್ ಉದ್ಯಮ ಪಾತಾಳಕ್ಕೆ ಕುಸಿದು, ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ.
12.5 ಲಕ್ಷ ಕೋಟಿ ನಾಶ
ಇದು ನಿಜಕ್ಕೂ ಶಾಕಿಂಗ್ ಸುದ್ದಿ. ಮೋದಿ ಸರ್ಕಾರ ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡ ನಂತರ ಕೇವಲ ನೂರು ದಿನಗಳಲ್ಲೇ ಷೇರು ಹೂಡಿಕೆದಾರರ ಸಂಪತ್ತು ರೂ. 12.5 ಲಕ್ಷ ಕೋಟಿ ನಾಶವಾಗಿದೆ. ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಕೆಲ ಬೆಳವಣಿಗೆಗಳೂ ಆರ್ಥಿಕ ಕುಸಿತಕ್ಕೆ ನೂಕಿವೆ.
ಮಾರುಕಟ್ಟೆ ಕುಸಿತಕ್ಕೆ ಕೆಲ ಕಾರಣ
ನಿಧಾನಗತಿಯ ಆರ್ಥಿಕ ಬೆಳವಣಿಗೆ, ವಿದೇಶಿ ನಿಧಿಗಳ ಹೊರಹರಿವು ಮತ್ತು ದುರ್ಬಲ ಕಾರ್ಪೊರೇಟ್ ಗಳಿಕೆಗಳು ಈಕ್ವಿಟಿ ಮಾರುಕಟ್ಟೆಗಳ ಕುಸಿತಕ್ಕೆ ಕೆಲವು ಕಾರಣಗಳಾಗಿವೆ ಎಂದು ವಿಶ್ಲೇಷಕರು ಹೇಳುತ್ತಾರೆ. ವಿದೇಶಿ ಹೂಡಿಕೆದಾರರು ಭಾರತೀಯ ಮಾರುಕಟ್ಟೆಗಳಲ್ಲಿ ಪ್ರಮುಖ ಮಾರಾಟಗಾರರಾಗಿದ್ದಾರೆ.
ತೆರಿಗೆ ನೀತಿಗಳ ಎಫೆಕ್ಟ್
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮೊದಲ ಬಜೆಟ್ನಲ್ಲಿ ವಿದೇಶಿ ಹೂಡಿಕೆದಾರರ ಮೇಲಿನ ಅತಿ ಶ್ರೀಮಂತ ತೆರಿಗೆಯನ್ನು ಪರಿಚಯಿಸಿದ ನಂತರ ಮಾರಾಟದ ಒತ್ತಡ ಹೆಚ್ಚಾಯಿತು. ಇದನ್ನು ಒಂದು ತಿಂಗಳ ನಂತರ ಹಿಂಪಡೆಯಲಾಯಿತು. ಸರ್ಕಾರ ರಚನೆಯಾದಾಗಿನಿಂದ, ವಿದೇಶಿ ಬಂಡವಾಳ ಹೂಡಿಕೆದಾರರು ರೂ. 28,260.50 ಕೋಟಿ ಷೇರು ಮೌಲ್ಯ ಮಾರಾಟ ಮಾಡಿದ್ದಾರೆ ಎಂದು ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ (ಎನ್ಎಸ್ಡಿಎಲ್) ಹೇಳಿದೆ.
ಆರ್ಥಿಕ ಕುಸಿತದ ಪ್ರಾರಂಭ
"ಮಾರುಕಟ್ಟೆಯಲ್ಲಿನ ಕುಸಿತವು ಪ್ರಧಾನಿ ಮೋದಿಯವರ ಎರಡನೇ ಅಧಿಕಾರಾವಧಿಗೆ ಮುಂಚೆಯೇ ಪ್ರಾರಂಭವಾಯಿತು. ಫೆಬ್ರವರಿ 2018 ರ ಬಜೆಟ್ ನಲ್ಲಿ ದೀರ್ಘಾವಧಿಯ ಬಂಡವಾಳ ಲಾಭ ತೆರಿಗೆ ಮತ್ತು ಲಾಭಾಂಶ ವಿತರಣಾ ತೆರಿಗೆಯನ್ನು ಪರಿಚಯಿಸಿದ್ದು ಈಕ್ವಿಟಿ ಮಾರುಕಟ್ಟೆ ಕುಸಿತದ ಪ್ರಾರಂಭಕ್ಕೆ ಕಾರಣವಾಯಿತು. ಮಾರುಕಟ್ಟೆಗಳ ಕುಸಿತವು ವೇಗಗೊಂಡಿತು.
ನಿಯಂತ್ರಣಕ್ಕೆ ಸಿಗದ ಆರ್ಥಿಕ ಹಳಿ
ಕೇಂದ್ರ ಸರ್ಕಾರವು ಪ್ರಸಕ್ತ ಆರ್ಥಿಕ ಕುಸಿತವನ್ನು ತಡೆಗಟ್ಟಲು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರೆದರೆ ಆರ್ಥಿಕ ಸಂಕಷ್ಟ ಮತ್ತಷ್ಟು ಎದುರಾಗಲಿದೆ. ಸದ್ಯದಲ್ಲೇ ನಡೆಯಲಿರುವ ಜಿಎಸ್ಟಿ ಮಂಡಳಿ ಸಭೆಯಲ್ಲಿ ಕೆಲವೊಂದು ಮಹತ್ವದ ತೀರ್ಮಾನಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.