ಆನ್ ಲೈನ್ ಬ್ಯಾಂಕಿಂಗ್ ಹೆಸರಲ್ಲಿ ವಂಚಿಸುತ್ತಿದ್ದ ಯುವಕ ಸಿಕ್ಕಿಬಿದ್ದ
ಮುಂಬೈ ಪೊಲೀಸರು ಮಂಗಳವಾರ ಇಪ್ಪತ್ತೈದು ವರ್ಷದ ಯುವಕನನ್ನು ಬಂಧಿಸಿದ್ದಾರೆ. ಜ್ಯುವೆಲ್ಲರಿ ಅಂಗಡಿ ಮಾಲೀಕರೊಬ್ಬರು ನೀಡಿದ ದೂರಿನ ಆಧಾರದಲ್ಲಿ ವಿರಾರ್ ನಿವಾಸಿ ನಿಖಿಲ್ ದುರ್ಗೇಶ್ ಸುಮನ್ ಎಂಬಾತನನ್ನು ಪೊಲೀಸರು ಬಂಧಿಸಿದ ಮೇಲೇ ಗೊತ್ತಾಗಿದ್ದು ಈತ ನಾನಾ ಕಡೆಗಳಲ್ಲಿ ವಂಚನೆ ಮಾಡಿದ್ದಾನೆ. ಆಭರಣದ ಅಂಗಡಿ ಮಾಲೀಕರಿಗೆ ವಂಚಿಸಿದ್ದು ಹೇಗೆಂದರೆ?
ಐದು ಲಕ್ಷದ ಮೂವತ್ಮೂರು ಸಾವಿರ ರುಪಾಯಿ ಮೌಲ್ಯದ ಚಿನ್ನದ ಸರವೊಂದನ್ನು ಸುಮನ್ ಖರೀದಿ ಮಾಡಿದ್ದಾನೆ. ಎನ್ ಇಎಫ್ ಟಿ ಮೊಬೈಲ್ ಬ್ಯಾಂಕಿಂಗ್ ಮೂಲಕ ಹಣ ವರ್ಗಾವಣೆ ಮಾಡುವುದಾಗಿ ಹೇಳಿದ್ದಾನೆ. ಆಭರಣದಂಗಡಿ ಮಾಲೀಕರಿಗೆ ಹಣ ವರ್ಗಾವಣೆ ಯಶಸ್ವಿ ಆಗಿದೆ ಎಂಬ ಸಂದೇಶವನ್ನೂ ತೋರಿಸಿದ್ದಾನೆ. ಆ ನಂತರ ಮಳಿಗೆಯಿಂದ ಹೊರಟಿದ್ದಾನೆ.
ಎಲ್ಲೆಂದರಲ್ಲಿ ಮೊಬೈಲ್ ನಂಬರ್ ಕೊಡದಿರಿ, ಸೈಬರ್ ಕಳ್ಳರಿದ್ದಾರೆ ಎಚ್ಚರಿಕೆ..!
ಆದರೆ, ಮಾಲೀಕರ ಖಾತೆಗೆ ಹಣ ಬಂದಿಲ್ಲ. ಆಗ ಸುಮನ್ ನನ್ನು ಸಂಪರ್ಕಿಸಲು ಅವರು ಪ್ರಯತ್ನಿಸಿದ್ದಾರೆ. ಫೋನ್ ಸ್ವಿಚ್ಡ್ ಅಫ್ ಬಂದಿದೆ. ಆ ನಂತರ ಪೊಲೀಸರಿಗೆ ದೂರು ನೀಡಿದಾಗ ಗೊತ್ತಾಗಿದ್ದು ಏನೆಂದರೆ, ಸುಮನ್ ಇದೇ ರೀತಿಯಾಗಿ ಅಂಗಡಿಗಳಲ್ಲಿ, ಹೋಟೆಲ್, ಟ್ರಾವೆಲ್ ಸಂಸ್ಥೆಗಳಲ್ಲಿ, ಆಭರಣ ಮಳಿಗೆಗಳಲ್ಲಿ ವಂಚನೆ ಮಾಡಿದ್ದಾನೆ.
ಮುಂಬೈ, ನವೀ ಮುಂಬೈ, ಥಾಣೆ, ಮಿರಾ ರಸ್ತೆ, ವಸೈ- ವಿರಾರ್ ಮತ್ತು ಪಲ್ಘರ್ ಗಳಲ್ಲಿ ಜನರಿಗೆ ಸುಮನ್ ಮೋಸ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.