ಇನ್ನೂ 30ರಿಂದ 40 ಸಾವಿರ ಐ. ಟಿ. ಸಿಬ್ಬಂದಿ ಕೆಲಸ ಕಳೆದುಕೊಳ್ಳಬಹುದು: ಪೈ
ಬೆಂಗಳೂರು, ನವೆಂಬರ್ 18: ಆರ್ಥಿಕ ಪ್ರಗತಿಯಲ್ಲಿನ ಹಿಂಜರಿತದ ಕಾರಣಕ್ಕೆ ಈ ವರ್ಷ ಭಾರತದ ಮಾಹಿತಿ ತಂತ್ರಜ್ಞಾನ ಕಂಪೆನಿಗಳು ಮೂವತ್ತರಿಂದ ನಲವತ್ತು ಸಾವಿರದಷ್ಟು ಮಧ್ಯಮ ಹಂತದಲ್ಲಿನ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಬಹುದು ಎಂದು ಉದ್ಯಮದ ಅನುಭವಿ ಟಿ. ವಿ. ಮೋಹನ್ ದಾಸ್ ಅಭಿಪ್ರಾಯ ಪಟ್ಟಿದ್ದಾರೆ.
ಐದು ವರ್ಷಕ್ಕೆ ಒಮ್ಮೆ ಹೀಗೆ ಆಗುವುದು ಸಾಮಾನ್ಯ ವಿದ್ಯಮಾನ ಎಂದು ಇನ್ಫೋಸಿಸ್ ನ ಮಾಜಿ ಚೀಫ್ ಫೈನಾನ್ಷಿಯಲ್ ಆಫೀಸರ್ ಆದ ಮೋಹನ್ ದಾಸ್ ಪೈ ಹೇಳಿದ್ದಾರೆ. "ಪಶ್ಚಿಮದ ದೇಶಗಳಲ್ಲಿ ಎಲ್ಲ ವಲಯಗಳಲ್ಲಿ, ಭಾರತದಲ್ಲೂ ಯಾವುದೇ ವಲಯ ಬೆಳೆಯುತ್ತಾ ಮಧ್ಯಮ ಹಂತದಲ್ಲಿ ಇರುವ ಹಲವು ಜನರು ತಮ್ಮ ವೇತನಕ್ಕೆ ತಕ್ಕಂತೆ ಕೆಲಸ ಮಾಡಲು ಆಗಲ್ಲ" ಎಂದಿದ್ದಾರೆ.
ಕಂಪೆನಿಗಳು ವೇಗವಾಗಿ ಬೆಳೆಯುವಾಗ ಪ್ರಮೋಷನ್ ನೀಡುವುದು ಸರಿ. ಆದರೆ ಹಿಂಜರಿತದ ಸಂದರ್ಭದಲ್ಲಿ ದೊಡ್ಡ ಮಟ್ಟದ ಸಂಬಳ ಪಡೆಯುವ ಹಿರಿಯ ಹಂತದ ಅಧಿಕಾರಿಗಳಿಗೆ ಗೊತ್ತು ಪಡಿಸಿದ ಗುರಿಯನ್ನು ಮತ್ತೆ ನಿಗದಿ ಪಡಿಸಲಾಗುತ್ತದೆ. ಆ ನಂತರ ಕೆಲಸದಿಂದ ತೆಗೆಯಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಪ್ರತಿ ಐದು ವರ್ಷಕ್ಕೆ ಒಮ್ಮೆ ಪದೇ ಪದೇ ಹೀಗೆ ಆಗುತ್ತಲೇ ಇರುತ್ತದೆ. ಯಾರೇ ಆಗಲಿ ನೀವು ತುಂಬ ಚೆನ್ನಾಗಿ ಕೆಲಸ ಮಾಡದ ಹೊರತು ದೊಡ್ಡ ವೇತನ ನೀಡಲು ಸಾಧ್ಯವಿಲ್ಲ ಅಲ್ಲವಾ? ಪಡೆಯುವ ವೇತನಕ್ಕೆ ತಕ್ಕ ಕೆಲಸ ಮಾಡಬೇಕಾಗುತ್ತದೆ ಎಂದು ಪೈ ಹೇಳಿದ್ದಾರೆ.
ಒಟ್ಟಾರೆಯಾಗಿ ಈ ವಲಯದಲ್ಲಿ ಮೂವತ್ತರಿಂದ ನಲವತ್ತು ಸಾವಿರ ಮಂದಿ ಒಂದು ವರ್ಷಕ್ಕೆ ಕೆಲಸ ಕಳೆದುಕೊಳ್ಳುತ್ತಾರೆ. ಅದರಲ್ಲಿ ತಜ್ಞರು ಅನಿಸಿಕೊಂಡವರಿಗೆ ಇತರ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ದೊರೆಯುತ್ತವೆ ಎಂದು ಮೋಹನ್ ದಾಸ್ ಪೈ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.