ಬೆಂಗಳೂರು, ಜನವರಿ 08: ನಗರದ ರೂಫ್ಟಾಪ್ ಬಾರ್ನಲ್ಲಿ ರಾತ್ರಿಯಿಡೀ ಪಾರ್ಟಿ ಮಾಡಿದ ಆರೋಪದ ಮೇಲೆ ಕನ್ನಡ ನಟ ದರ್ಶನ್ ತೂಗುದೀಪ, ಅಭಿಷೇಕ್ ಅಂಬರೀಶ್ ಮತ್ತು ನಟ-ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರಿಗೆ ನಗರ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಜನವರಿ 3 ರಂದು ರಾತ್ರಿ ಸೆಲೆಬ್ರಿಟಿ ಅತಿಥಿಗಳಿಗೆ ಮದ್ಯ ಬಡಿಸುವುದನ್ನು ಬಾರ್ ಮುಂದುವರಿಸಿದ ನಂತರ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಅಬಕಾರಿ ಮತ್ತು ಕರ್ನಾಟಕ ಪೊಲೀಸ್ ಕಾಯ್ದೆಯಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.

ದರ್ಶನ್ ತೂಗುದೀಪ, ಅಭಿಷೇಕ್ ಅಂಬರೀಶ್, ರಾಕ್ಲೈನ್ ವೆಂಕಟೇಶ್ ಮತ್ತು ಇತರ ಸೆಲೆಬ್ರಿಟಿಗಳು ಒರಾಯನ್ ಮಾಲ್ ಬಳಿಯ ಜೆಟ್ಲಾಗ್ ಬಾರ್ನಲ್ಲಿ ದರ್ಶನ್ ಅವರ ಕಾಟೇರ ಚಿತ್ರದ ಯಶಸ್ಸನ್ನು ಆಚರಿಸಿದ್ದರು ಎನ್ನಲಾಗಿದೆ. ಪೊಲೀಸರು ಮಧ್ಯರಾತ್ರಿ 12:30 ಕ್ಕೆ ಬಾರ್ಗೆ ಭೇಟಿ ನೀಡಿ ಸ್ಥಳವನ್ನು ಮುಚ್ಚುವಂತೆ ಹೇಳಿದ್ದರು. ಆದರೆ ಬಾರ್ನಲ್ಲಿ ಬೆಳಿಗ್ಗೆಯವರೆಗೆ ಮದ್ಯವನ್ನು ನೀಡಲಾಗಿತ್ತು.
ವರದಿಗಳ ಪ್ರಕಾರ, ಡಿಸೆಂಬರ್ 29 ರಂದು ಬಿಡುಗಡೆಯಾದ ಕಾಟೇರ ಚಿತ್ರವು ಮೊದಲ ವಾರದಲ್ಲಿ ರೂ 104.58 ಕಲೆಕ್ಷನ್ ಮಾಡಿದೆ. ಪೊಲೀಸರ ಪ್ರಕಾರ, ಮಧ್ಯರಾತ್ರಿ 1 ಗಂಟೆಗೆ ಬಾರ್ ಮುಚ್ಚಬೇಕಾಗಿತ್ತು, ಆದರೆ ಅದು ಬೆಳಗಿನವರೆಗೆ ತೆರೆದಿತ್ತು. ಸುಬ್ರಹ್ಮಣ್ಯ ನಗರ ಪೊಲೀಸರನ್ನು ಹಿರಿಯ ಅಧಿಕಾರಿಗಳು ರಾತ್ರಿಯಿಡೀ ಬಾರ್ ತೆರೆಯಲು ಅನುಮತಿ ನೀಡುವ ಬಗ್ಗೆ ಪ್ರಶ್ನಿಸಿದ್ದಾರೆ ಎಂದು ವರದಿಯಾಗಿದೆ.
ಜನವರಿ 3ರ ರಾತ್ರಿಯ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡುವಂತೆ ಬಾರ್ ಮಾಲೀಕರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ನಟರಾದ ಡಾಲಿ ದನುಂಜಯ್, ನೀನಾಸಂ ಸತೀಶ್, ಚಿಕ್ಕಣ್ಣ, ನಿರ್ದೇಶಕ ತರುಣ್ ಸುಧೀರ್ ಮತ್ತು ಸಂಗೀತ ನಿರ್ದೇಶಕ ಹರಿಕೃಷ್ಣ ಅವರಿಗೆ ನೋಟಿಸ್ ಜಾರಿ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.


Click it and Unblock the Notifications