ಕೃಷಿ ಮೂಲಸೌಕರ್ಯ ನಿಧಿ ಅಡಿಯಲ್ಲಿ 1 ಲಕ್ಷ ಕೋಟಿ ರುಪಾಯಿ ಹಣಕಾಸು ಸಾಲ ವ್ಯವಸ್ಥೆಗೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ. ಇದರ ಜತೆಗೆ 8.5 ಕೋಟಿ ರೈತರಿಗೆ ಪಿಎಂ- ಕಿಸಾನ್ ಯೋಜನೆ ಅಡಿಯಲ್ಲಿ ಆರನೇ ಕಂತಿನ ಮೊತ್ತವಾದ 17,000 ಕೋಟಿ ರುಪಾಯಿಯನ್ನು ಬಿಡುಗಡೆ ಮಾಡಿದರು.
ರೈತರಿಗೆ ಹಣಕಾಸು ಸಾಲ ಒದಗಿಸುವ ಯೋಜನೆಗೆ ಕೇಂದ್ರ ಸಂಪುಟದಿಂದ ಒಪ್ಪಿಗೆ ಸಿಕ್ಕಿದೆ. ಕೊಯ್ಲಿನ ನಂತರ ಮೂಲ ಸೌಕರ್ಯ ನಿರ್ವಹಣೆಗೆ ಹಾಗೂ ಶೀತಗೃಹ, ಸಂಗ್ರಹ ಕೇಂದ್ರ, ಪ್ರೊಸೆಸಿಂಗ್ ಘಟಕ ಮುಂತಾದ ಸಾಮುದಾಯಿಕ ಕೃಷಿ ಆಸ್ತಿ ಸೃಷ್ಟಿಗೆ ಈ ಮೊತ್ತವನ್ನು ಬಳಸಲಾಗುತ್ತದೆ ಎಂದು ಪ್ರಧಾನಮಂತ್ರಿ ಕಾರ್ಯಾಲಯದ ಹೇಳಿಕೆ ತಿಳಿಸಿದೆ.
8.5 ಕೋಟಿ ರೈತರಿಗೆ 17,000 ಕೋಟಿ ವರ್ಗಾವಣೆ
ಪಿಎಂ ಕಿಸಾನ್ ನಿಧಿ ಆಗಿ 8.5 ಕೋಟಿ ರೈತರಿಗೆ 17,000 ಕೋಟಿ ವರ್ಗಾವಣೆ ಮಾಡಿರುವುದರಿಂದ ನನಗೆ ಬಹಳ ತೃಪ್ತಿ ತಂದಿದೆ. ಏಕೆಂದರೆ, ಈ ಯೋಜನೆಯ ಗುರಿಯನ್ನು ತಲುಪಿದ ತೃಪ್ತಿ ಸಿಕ್ಕಿದೆ ಎಂದಿದ್ದಾರೆ ಮೋದಿ. ಕಳೆದ ಒಂದೂವರೆ ವರ್ಷದಲ್ಲಿ ರೈತರು ತಮ್ಮ ಬ್ಯಾಂಕ್ ಖಾತೆಗೆ ನೇರವಾಗಿ ಇಲ್ಲಿಯ ತನಕ 75 ಸಾವಿರ ಕೋಟಿ ಪಡೆದಿದ್ದಾರೆ.
ಲಾಕ್ ಡೌನ್ ಅವಧಿಯಲ್ಲಿ 22 ಸಾವಿರ ಕೋಟಿ ನೀಡಲಾಗಿದೆ
ಆ ಪೈಕಿ 22 ಸಾವಿರ ಕೋಟಿ ರುಪಾಯಿಯನ್ನು ಲಾಕ್ ಡೌನ್ ಅವಧಿಯಲ್ಲಿ ನೀಡಲಾಗಿದೆ. ಕಳೆದ ಏಳು ವರ್ಷಗಳಿಂದ ನಡೆಯುತ್ತಿದ್ದ "ಒಂದು ದೇಶ- ಒಂದು ಮಂಡಿ" ಕೆಲಸ ಈಗ ಪೂರ್ಣಗೊಂಡಿದೆ ಎಂದು ಅವರು ಹೇಳಿದ್ದಾರೆ. ಮೊದಲ ಇ- ನ್ಯಾಷನಲ್ ಅಗ್ರಿಕಲ್ಚರ್ ಮಾರ್ಕೆಟ್ (e-NAM) ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಮೂಲಕ ಮತ್ತು ಕಾನೂನು ಮಾಡಿ ರೈತರನ್ನು ಮಾರುಕಟ್ಟೆ ಹಾಗೂ ಮಾರುಕಟ್ಟೆ ತೆರಿಗೆಯಿಂದ ಮುಕ್ತಗೊಳಿಸಲಾಗಿದೆ.
ಮೂಲಸೌಕರ್ಯ ನಿಧಿ ಮೂಲಕ ರೈತರಿಗೆ ಅನುಕೂಲ
"ರೈತರಿಗೆ ಈಗ ಹಲವು ಆಯ್ಕೆಗಳಿವೆ". ರೈತರು ತಮ್ಮ ಜಮೀನಿಂದ ಅಥವಾ ಗೋದಾಮುಗಳಿಂದ ವ್ಯವಹಾರ ನಡೆಸಬಹುದು. ಯಾರು e-NAM ಮೂಲಕ ವರ್ತಕರಿಗೆ ಮತ್ತು ಸಂಸ್ಥೆಗಳಿಗೆ ಹಣ ಪಾವತಿಸುತ್ತಾರೋ ಅಂಥವರಿಗೆ ಉತ್ಪನ್ನ ಮಾರಬಹುದು. ಕೃಷಿ ಮೂಲಸೌಕರ್ಯ ನಿಧಿ ಮೂಲಕ ರೈತರಿಗೆ ಅನುಕೂಲ ಆಗಲಿದೆ. ರೈತರು ತಮ್ಮ ಗ್ರಾಮಗಳಾಲ್ಲಿ ಆಧುನಿಕ ಸಂಗ್ರಹ ವ್ಯವಸ್ಥೆ ಮಾಡಿಕೊಳ್ಳಬಹುದು ಎಂಬುದನ್ನು ಒತ್ತಿ ಹೇಳಿದರು.


Click it and Unblock the Notifications