ಆತ್ಮ ನಿರ್ಭರ್ ಭಾರತ್: ಎಲ್ಲ ವಲಯಗಳೂ ಖಾಸಗಿಗೆ ಮುಕ್ತ ಮುಕ್ತ ಮುಕ್ತ...
ಎಲ್ಲ ವಲಯಗಳೂ ಖಾಸಗಿ ಕಂಪೆನಿಗಳಿಗೆ ಮುಕ್ತವಾಗಲಿದೆ. ಇದರ ಜತೆಗೆ ಸಾರ್ವಜನಿಕ ವಲಯದ ಸಂಸ್ಥೆಗಳೂ ಪ್ರಮುಖ ಪಾತ್ರ ವಹಿಸಲಿವೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ ತಿಳಿಸಿದರು. ಆತ್ಮನಿರ್ಭರ್ ಭಾರತ್ ಆರ್ಥಿಕ ಪ್ಯಾಕೇಜ್ ಅಂತಿಮ ಹಂತದ ಘೋಷಣೆ ವೇಳೆ ಈ ವಿಚಾರ ತಿಳಿಸಿದರು.
ನಿರ್ಮಲಾ ಸೀತಾರಾಮನ್ ಘೋಷಣೆಯ ಪ್ರಮುಖಾಂಶಗಳು
ಸಾರ್ವಜನಿಕ ಹಿತದೃಷ್ಟಿಯಿಂದ ಎಲ್ಲೆಲ್ಲಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಇರಬೇಕು ಎಂಬ ಬಗ್ಗೆ ನಿರ್ದಿಷ್ಟವಾದ ಹೊಸ ನೀತಿಯನ್ನು ರಚಿಸಲಾಗುವುದು. ಆ ಅಧಿಸೂಚಿತ ವಲಯದಲ್ಲಿ ಕನಿಷ್ಠ ಒಂದು ಸಾರ್ವಜನಿಕ ವಲಯದ ಸಂಸ್ಥೆಯು ಇರುತ್ತದೆ. ಅದರ ಜತೆಗೆ ಖಾಸಗಿ ವಲಯದ ಸಂಸ್ಥೆಗಳಿಗೂ ಅವಕಾಶ ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಅವರು ಹೇಳಿದರು.
ಕೊರೊನಾ ಕಾರಣದಿಂದ ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 20 ಲಕ್ಷ ಕೋಟಿ ರುಪಾಯಿಯ ಆರ್ಥಿಕ ಪ್ಯಾಕೇಜ್ ಹಾಗೂ ಹಲವು ಸುಧಾರಣಾ ಕ್ರಮಗಳ ಘೋಷಣೆ ಮಾಡಿದ್ದಾರೆ. ಅದರ ಹಿನ್ನೆಲೆಯಲ್ಲಿ ನಿರ್ಮಲಾ ಸೀತಾರಾಮನ್ ಈ ಮಾಹಿತಿ ನೀಡಿದ್ದಾರೆ.