ರಿಲಯನ್ಸ್ ಕಮ್ಯುನಿಕೇಶನ್ಸ್ ನಿರ್ದೇಶಕ ಹುದ್ದೆಗೆ ರಾಜೀನಾಮೆ ನೀಡಿದ ಅನಿಲ್ ಅಂಬಾನಿ
ತೀವ್ರ ನಷ್ಟಕ್ಕೆ ತುತ್ತಾಗಿರುವ ರಿಲಯನ್ಸ್ ಕಮ್ಯುನಿಕೇಶನ್ಸ್ ಕಂಪನಿಯ ನಿರ್ದೇಶಕ ಹುದ್ದೆಗೆ ಅನಿಲ್ ಧೀರೂಭಾಯಿ ಅಂಬಾನಿ ರಾಜೀನಾಮೆ ನೀಡಿದ್ದಾರೆ.
ನಿರ್ದೇಶಕ ಸ್ಥಾನಕ್ಕೆ ಅನಿಲ್ ಅಂಬಾನಿ ರಾಜೀನಾಮೆಯ ಜೊತೆಗೆ ಅನಿಲ್ ಡಿ. ಅಂಬಾನಿ, ಛಾಯಾ ವಿರಾನಿ, ರ್ಯಾನ ಕರಾನಿ,(Ryna karani), ಮಂಜರಿ ಕಾಕೆರ್ ಮತ್ತು ಸುರೇಶ್ ರಂಗಾಚಾರ್ ಕೂಡ ನಿರ್ದೇಶಕ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅಂಬಾನಿ, ಛಾಯಾ ವಿರಾನಿ, ಮಂಜರಿ ಕಾಕೆರ್ ನವೆಂಬರ್ 15ರಂದು ರಾಜೀನಾಮೆ ನೀಡಿದ್ದಾರೆ. ರ್ಯಾನ ಕರಾನಿ ನವೆಂಬರ್ 14ರಂದು ಮತ್ತು ಸುರೇಶ್ ರಂಗಾಚಾರ್ ನವೆಂಬರ್ 13ರಂದು ರಾಜೀನಾಮೆ ಸಲ್ಲಿಸಿದ್ದಾರೆ.
ರಿಲಯನ್ಸ್ ಕಮ್ಯುನಿಕೇಶನ್ಸ್ ನಿರ್ದೇಶಕ ಹಾಗೂ ಮುಖ್ಯ ಹಣಕಾಸು ಅಧಿಕಾರಿಯಾಗಿದ್ದ ಮಣಿಕಂಠನ್ ವಿ. ಕೂಡ ತಮ್ಮ ಸ್ಥಾನಕ್ಕೆ ಅಕ್ಟೋಬರ್ 4ರಂದೇ ರಾಜೀನಾಮೆ ನೀಡಿದ್ದಾರೆ ಎಂದು ರಿಲಯನ್ಸ್ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಸಾಲ ಮರುಪಾವತಿಸಲು ವಿಫಲ-ಅನಿಲ್ ಅಂಬಾನಿ ಮೇಲೆ ಕೇಸ್
ಮುಖ್ಯ ಹಣಕಾಸು ಅಧಿಕಾರಿ(ಸಿಎಫ್ಒ) ಮಣಿಕಂಠನ್ ವಿ. ಸ್ಥಾನಕ್ಕೆ ಈಗಾಗಲೇ ಡಿ. ವಿಶ್ವನಾಥ್ ಆಯ್ಕೆಯಾಗಿದ್ದು, ಸಾಲಗಾರರ ಸಮಿತಿ (ಸಿಒಸಿ) ಅನುಮೋದನೆ ದೊರೆಯಬೇಕಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
2019-20ರ 2ನೇ ತ್ರೈಮಾಸಿಕ ಅವಧಿಯಲ್ಲಿ ಕಂಪನಿಯು 30,158 ಕೋಟಿ ರುಪಾಯಿ ನಿವ್ವಳ ನಷ್ಟ ಅನುಭವಿಸಿದೆ ಎಂದು ವರದಿಯಾಗಿತ್ತು. ಮೊದಲ ತ್ರೈಮಾಸಿಕ ಅವಧಿಯಲ್ಲಿ 366 ಕೋಟಿ ರುಪಾಯಿ ನಷ್ಟವಾಗಿತ್ತು. ಪರಿಣಾಮ ನವೆಂಬರ್ 15ರಂದು ರಿಲಿಯನ್ಸ ಕಮ್ಯುನಿಕೇಶನ್ ಷೇರುಗಳು 52 ವಾರಗಳಲ್ಲಿ ಅತ್ಯಂತ ಹೆಚ್ಚು ಕುಸಿತ ಕಂಡು ಪ್ರತಿ ಷೇರು ಬೆಲೆ 0.55ಪೈಸೆಗೆ ತಲುಪಿದೆ.