2 ದಿನ ಬ್ಯಾಂಕ್ ಮುಷ್ಕರ: ಸಾಲು, ಸಾಲು ರಜೆ!
ಸರ್ಕಾರಿ ಸ್ವಾಮ್ಯದ ಎರಡು ಬ್ಯಾಂಕ್ಗಳನ್ನು ಖಾಸಗೀಕರಣಗೊಳಿಸುವ ತೀರ್ಮಾನವನ್ನು ವಿರೋಧಿಸಿ ಮಾರ್ಚ್ 15-16ರಂದು ಹಲವಾರು ಬ್ಯಾಂಕ್ ಒಕ್ಕೂಟಗಳು ಮುಷ್ಕರಕ್ಕೆ ಕರೆ ನೀಡಿವೆ. ಎಸ್ ಬಿ ಐ ನೇತೃತ್ವದ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ಮಾರ್ಚ್ 15 ಮತ್ತು 16 ರಂದು ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ.
ಬ್ಯಾಂಕಿಂಗ್ ಕೆಲಸ ಕಾರ್ಯಗಳನ್ನು ಮುಗಿಸಿಕೊಳ್ಳುವುದಕ್ಕೆ ಗ್ರಾಹಕರಿಗೆ ಇಂದು (ಶುಕ್ರವಾರ) ಮಾತ್ರ ಉಳಿದಿದೆ. ಮುಂದಿನ ನಾಲ್ಕು ದಿನಗಳ ಕಾಲ ಬ್ಯಾಂಕಿಂಗ್ ಸೇವೆಗಳು ಸಿಗುವುದು ಅನುಮಾನವಾಗಿದೆ.
ಇತ್ತೀಚಿಗೆ ನಡೆದ ಸಂಧಾನ ಸಭೆಯಲ್ಲಿ ಯಾವುದೇ ರೀತಿ ಸಕಾರಾತ್ಮಕ ಸ್ಪಂದನೆ ಸಿಕ್ಕಿರಲಿಲ್ಲ. ಈ ಹಿನ್ನೆಲೆ ಮಾರ್ಚ್ 15 ಮತ್ತು 16 ರಂದು ಸುಮಾರು 10 ಲಕ್ಷ ಬ್ಯಾಂಕ್ ನೌಕರರು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ. ಇದರ ಜೊತೆಗೆ ನಾಳೆ ಎರಡನೇ ಶನಿವಾರ ಬ್ಯಾಂಕ್ ರಜೆಯಾಗಿದ್ದು, ಭಾನುವಾರದ ಕಾರಣ ಬ್ಯಾಂಕ್ ರಜೆ ಇರುತ್ತದೆ.
ಬ್ಯಾಂಕ್ ಒಕ್ಕೂಟಗಳು ಕರೆ ನೀಡಿರುವ ಮುಷ್ಕರದ ಕುರಿತಾಗಿ ಪ್ರಮುಖ ಐದು ವಿಷಯಗಳು ಈ ಕೆಳಗಿವೆ:
1) ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (ಯುಎಫ್ಬಿಯು) ಮಾರ್ಚ್ 15 ಮತ್ತು ಮಾರ್ಚ್ 16 ರಂದು ಬ್ಯಾಂಕಿಂಗ್ ಉದ್ಯಮದಲ್ಲಿ ಮುಷ್ಕರಕ್ಕೆ ಕರೆ ನೀಡಿದೆ.
2) ಮುಂಬರುವ ಮುಷ್ಕರ ದಿನಗಳಲ್ಲಿ ಬ್ಯಾಂಕ್ ಶಾಖೆಗಳು ಮತ್ತು ಕಚೇರಿಗಳ ಸುಗಮ ಕಾರ್ಯನಿರ್ವಹಣೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಬ್ಯಾಂಕ್ಗಳು ಮುಂದಾಗಿವೆ.
3) ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ), ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (ಎಐಬಿಒಸಿ), ಬ್ಯಾಂಕ್ ನೌಕರರ ರಾಷ್ಟ್ರೀಯ ಒಕ್ಕೂಟ (ಎನ್ಸಿಬಿಇ), ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ (ಎಐಬಿಒಎ), ಬ್ಯಾಂಕ್ ನೌಕರರ ಒಕ್ಕೂಟ (ಬಿಇಎಫ್ಐ), ಇಂಡಿಯನ್ ನ್ಯಾಷನಲ್ ಬ್ಯಾಂಕ್ ನೌಕರರ ಒಕ್ಕೂಟ (ಐಎನ್ಬಿಇಎಫ್), ಭಾರತೀಯ ರಾಷ್ಟ್ರೀಯ ಬ್ಯಾಂಕ್ ಅಧಿಕಾರಿಗಳ ಕಾಂಗ್ರೆಸ್ (ಐಎನ್ಬಿಒಸಿ), ಬ್ಯಾಂಕ್ ಕಾರ್ಮಿಕರ ರಾಷ್ಟ್ರೀಯ ಸಂಸ್ಥೆ (ಎನ್ಒಬಿಡಬ್ಲ್ಯೂ), ಬ್ಯಾಂಕ್ ಅಧಿಕಾರಿಗಳ ರಾಷ್ಟ್ರೀಯ ಸಂಸ್ಥೆ (ನೊಬೊ), ಅಖಿಲ ಭಾರತ ರಾಷ್ಟ್ರೀಕೃತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ಮುಷ್ಕರದಲ್ಲಿ ಭಾಗಿಯಾಗಲಿವೆ.
4) ಕೇಂದ್ರ ಬಜೆಟ್ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಎರಡು ಸಾರ್ವಜನಿಕ ವಲಯದ ಬ್ಯಾಂಕ್ಗಳನ್ನು ಖಾಸಗೀಕರಣಗೊಳಿಸುವುದಾಗಿ ಘೋಷಿಸಿದ್ದರು.
5) ಸರ್ಕಾರವು ಈಗಾಗಲೇ ಐಡಿಬಿಐ ಬ್ಯಾಂಕ್ನ ಬಹುಪಾಲು ಪಾಲನ್ನು ಎಲ್ಐಸಿಗೆ 2019 ರಲ್ಲಿ ಮಾರಾಟ ಮಾಡುವ ಮೂಲಕ ಖಾಸಗೀಕರಣಗೊಳಿಸಿದೆ. ಕಳೆದ ನಾಲ್ಕು ವರ್ಷಗಳಲ್ಲಿ 14 ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ವಿಲೀನಗೊಳಿಸಿದೆ.