ಸಾಲದ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿರುವ ಬೈಜೂಸ್ ಸಂಸ್ಥೆಯು ನಿರಂತರವಾಗಿ ಒಂದಲ್ಲ ಒಂದು ಸಮಸ್ಯೆಯನ್ನು ಎದುರಿಸುತ್ತಾ ಬರುತ್ತಿದೆ. ಈಗ ಈ ಆನ್ಲೈನ್ ಶಿಕ್ಷಣ ನೀಡುವ ಆಪ್ ಹೊಂದಿರುವ ಸಂಸ್ಥೆಯಾದ ಬೈಜೂಸ್ ತನ್ನ ಎಲ್ಲ ವಿಭಾಗದಲ್ಲಿ ಸುಮಾರು ಒಂದು ಸಾವಿರ ಮಂದಿಗೆ ಈಗಾಗಲೇ ಪಿಂಕ್ ಸ್ಲಿಪ್ ನೀಡಿ ಮನೆಗೆ ಕಳುಹಿಸಿದೆ ಎಂದು ವರದಿಯಾಗಿದೆ. ಸಂಸ್ಥೆಯಲ್ಲಿ ರಚನಾತ್ಮಕ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ಈ ಉದ್ಯೋಗ ಕಡಿತ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸುಮಾರು ಒಂದು ಬಿಲಿಯನ್ ಡಾಲರ್ ಸಾಲವನ್ನು ಮರುಪಾವತಿ ಮಾಡುವ ವಿಚಾರದಲ್ಲಿ ಯುಎಸ್ನ ಸಾಲದಾತರೊಂದಿಗೆ ಪ್ರಸ್ತುತ ಬೈಜೂಸ್ ಕಾನೂನು ಸಮರಕ್ಕೆ ಇಳಿದಿದೆ. ಈ ಸಂದರ್ಭದಲ್ಲೇ ಸಂಸ್ಥೆಯಲ್ಲಿ ಮಾಡಲಾಗಿರುವ ಈ ಉದ್ಯೋಗ ಕಡಿತದ ಬಗ್ಗೆ ವರದಿಯಾಗಿದೆ. "ಸರಿಸುಮಾರು ಒಂದು ಸಾವಿರ ಉದ್ಯೋಗಿಗಳನ್ನು ಬೈಜೂಸ್ ಉದ್ಯೋಗದಿಂದ ವಜಾಗೊಳಿಸಿದೆ. ಹೊಸದಾಗಿ ಉದ್ಯೋಗಿಗಳ ಸೇರ್ಪಡೆಯಾಗಿರುವ ಕಾರಣದಿಂದಾಗಿ ಈ ಕಡಿತದ ಬಳಿಕವೂ ಸಂಸ್ಥೆಯಲ್ಲಿ ಸುಮಾರು 50,000 ಉದ್ಯೋಗಿಗಳು ಇದ್ದಾರೆ," ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.

ಇಂದು ಮೊದಲನೆ ಉದ್ಯೋಗ ಕಡಿತವೇನಲ್ಲ!
ಜಾಗತಿಕವಾಗಿ ಕಳೆದ ವರ್ಷದಿಂದಲೇ ಉದ್ಯೋಗ ಕಡಿತವು ಆರಂಭವಾಗಿದೆ. ಹಣದುಬ್ಬರ, ಆರ್ಥಿಕ ಹಿಂಜರಿತದ ಆತಂಕದ ನಡುವೆ ಹಲವಾರು ಪ್ರತಿಷ್ಠಿತ ಸಂಸ್ಥೆಗಳು ಉದ್ಯೋಗ ಕಡಿತವನ್ನು ಮಾಡಿದೆ. ಅಷ್ಟಕ್ಕೂ ಒಂದು ಬಾರಿ ಉದ್ಯೋಗ ಕಡಿತ ಘೋಷಣೆ ಮಾಡಿದ ಬಳಿಕ ಈ ಪ್ರಕ್ರಿಯೆ ನಿಂತಿಲ್ಲ. ಬಹುತೇಕ ಸಂಸ್ಥೆಗಳು ಎರಡು ಮೂರು ಹಂತಗಳಲ್ಲಿ ಉದ್ಯೋಗ ಕಡಿತವನ್ನು ಮಾಡಿದೆ. ಅದರಂತೆಯೇ ಬೈಜೂಸ್ನಲ್ಲಿಯೂ ಈ ಹಿಂದೆಯೂ ಉದ್ಯೋಗ ಕಡಿತ ಮಾಡಲಾಗಿದೆ.
ಈ ಹಿಂದೆ ಅಕ್ಟೋಬರ್ 2022ರಲ್ಲಿ ಬೈಜೂಸ್ ಸುಮಾರು ಶೇಕಡ 5ರಷ್ಟು ಅಥವಾ 2500 ಉದ್ಯೋಗಿಗಳನ್ನು ಮುಂದಿನ ಆರು ತಿಂಗಳ ಅವಧಿಯಲ್ಲಿ ಉದ್ಯೋಗದಿಂದ ವಜಾಗೊಳಿಸಲಾಗುತ್ತದೆ ಎಂದು ಘೋಷಣೆ ಮಾಡಿದೆ. ಮಾರ್ಚ್ 2023ರ ವೇಳೆಗೆ ಸಂಸ್ಥೆಯನ್ನು ಲಾಭದಾಯಕ ಸಂಸ್ಥೆಯಾಗಿ ಪರಿವರ್ತನೆಗೊಳಿಸುವ ನಿಟ್ಟಿನಲ್ಲಿ ಬೈಜೂಸ್ ಈ ಉದ್ಯೋಗ ಕಡಿತದ ಪ್ಲ್ಯಾನ್ ಮಾಡಿತ್ತು. ಇತ್ತೀಚಿಗೆ ನಡೆದ ಈ ಉದ್ಯೋಗ ಕಡಿತವು ಸಂಸ್ಥೆಯಲ್ಲಿನ ವೆಚ್ಚ ಕಡಿತದ ನಿಟ್ಟಿನಲ್ಲಿ ನಡೆದಿದೆ ಎಂಬ ಮಾಹಿತಿಯಿದೆ.
ಬೈಜೂಸ್ಗೆ ಎದುರಾದ ಹಲವಾರು ಸಂಕಷ್ಟಗಳು
ತನ್ನ ಪತ್ನಿ ದಿವ್ಯಾ ಗೋಕುಲ್ನಾಥ್ ಜೊತೆ ಸೇರಿ ರವೀಂದ್ರನ್ ಬೈಜೂಸ್ ಸಂಸ್ಥೆಯನ್ನು 2011ರಲ್ಲಿ ಆರಂಭ ಮಾಡಿದ್ದಾರೆ. ಅದಾದ ಬಳಿಕ ಸಂಸ್ಥೆಯು ಸಾಕಷ್ಟು ಬೆಳವಣಿಗೆಯನ್ನು ಕಂಡಿದೆ. ಆದರೆ ಕಳೆದ ಒಂದು ವರ್ಷದಿಂದ ಬೈಜೂಸ್ ಸಂಸ್ಥೆಯ ವಿರುದ್ಧ ಸಾಕಷ್ಟು ಆರೋಪಗಳು ಕೇಳಿಬಂದಿದೆ. ಈ ಹಿಂದೆ ಬೈಜೂಸ್ನ ಹಳೆ ಉದ್ಯೋಗಿಗಳು ಹಾಗೂ ಪೋಷಕರು ಹಲವಾರು ಆರೋಪಗಳನ್ನು ಮಾಡಿದ್ದರು.
ಬೈಜೂಸ್ ಆಪ್ನಲ್ಲಿ ಪೋಷಕರಿಗೆ ಆಮಿಷ ಒಡ್ಡಲಾಗಿದೆ ಹಾಗೂ ಸಾಲ ಒಪ್ಪಂದಗಳನ್ನು ಕೂಡಾ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿ ಭಾರತದ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಬೈಜೂಸ್ನ ಸಿಇಒ ರವೀಂದ್ರನ್ಗೆ ಸಮನ್ಸ್ ನೀಡಿದೆ. ಬೈಜೂಸ್ನಲ್ಲಿ ಸಾಲ ನೀಡುವ ಒಪ್ಪಂದಗಳನ್ನು ಮಾಡಲಾಗುತ್ತಿದೆ. ಪೋಷಕರಿಗೆ ಆಮಿಷ ಒಡ್ಡಲಾಗುತ್ತಿದೆ. ಹಾಗೆಯೇ ಉದ್ಯೋಗಿಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬಂದಿದೆ.
ಈ ಆರೋಪಗಳ ನಡುವೆಯೇ ಬೈಜೂಸ್ನ ಸಿಇಒ ಬೈಜು ರವೀಂದ್ರನ್ರ ಬೆಂಗಳೂರಿನಲ್ಲಿರುವ ಕಚೇರಿ ಮತ್ತು ಮನೆಯ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ್ದು ಶೋಧ ಕಾರ್ಯಚರಣೆಯನ್ನು ನಡೆಸಲಾಗಿದೆ. ವಿದೇಶಿ ಹೂಡಿಕೆ ಕಾನೂನುಗಳನ್ನು ಉಲ್ಲಂಘಣೆ ಮಾಡಿದ ಆರೋಪದಲ್ಲಿ ಜಾರಿ ನಿರ್ದೇಶನಾಲಯವು ಬೈಜೂಸ್ ಸಿಇಒ ಮನೆ, ಕಚೇರಿ ಮೇಲೆ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ ಕೆಲವು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.
ಪ್ರಸ್ತುತ ಬೈಜೂಸ್ ಸುಮಾರು ಒಂದು ಬಿಲಿಯನ್ ಡಾಲರ್ ಸಾಲವನ್ನು ಮರುಪಾವತಿ ಮಾಡುವ ವಿಚಾರದಲ್ಲಿ ಕಾನೂನು ಕದ ತಟ್ಟಿದೆ. ಸುಮಾರು 10,000 ಕೋಟಿ ರೂಪಾಯಿ ಸಾಲ ಹೊಂದಿರುವ ಬೈಜೂಸ್ ಮೂರು ತಿಂಗಳಿಗೆ ಒಮ್ಮೆ ಬಡ್ಡಿಯಾದರೂ ಕಟ್ಟಬೇಕು. ಬಡ್ಡಿ ಮೊತ್ತ 40 ಮಿಲಿಯನ್ ಡಾಲರ್ ಅಥವಾ 33 ಕೋಟಿ ರೂಪಾಯಿ ಆಗಿದೆ. ಈ ಬಡ್ಡಿಯನ್ನು ಬೈಜೂಸ್ಗೆ ಪಾವತಿ ಮಾಡಲಾಗುತ್ತಿಲ್ಲ. ಈಗ ಈ ಸಾಲ ಮರುಪಾವತಿ ವಿಚಾರದಲ್ಲಿ ಕಾನೂನು ಸಮರ ನಡೆಯುತ್ತಿದೆ
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications