ಕಾಫೀ ಡೇ: ಲೆಕ್ಕ ಸಿಗದ 2000 ಕೋಟಿ ಏನಾಯಿತು? ಸ್ಫೋಟಕ ವರದಿ ಮುಖ್ಯಾಂಶ
ಕೆಫೆ ಕಾಫೀ ಡೇ ಸಂಸ್ಥಾಪಕ ವಿ.ಜಿ. ಸಿದ್ಧಾರ್ಥ ಸಾವಿನ ನಂತರ ಕಂಪೆನಿಯ ಆಡಳಿತ ಮಂಡಳಿ ತನಿಖೆಯೊಂದನ್ನು ಕೈಗೊಂಡಿತ್ತು. ಅದು ಆಂತರಿಕ ಲೆಕ್ಕಾಚಾರಕ್ಕೆ ಸಂಬಂಧಿಸಿದ ಸಂಗತಿಯಾಗಿತ್ತು. ಇನ್ನೇನು ಆ ತನಿಖಾ ವರದಿ ಬಹಿರಂಗಗೊಳ್ಳುವ ಹಂತದಲ್ಲಿದ್ದು, ಕನಿಷ್ಠ 2000 ಕೋಟಿ ರುಪಾಯಿ ಮೊತ್ತವು ಲೆಕ್ಕಕ್ಕೆ ಸಿಗುತ್ತಿಲ್ಲ, ಅರ್ಥಾತ್ ಅಷ್ಟು ಹಣವೇ ಇಲ್ಲ ಎಂದು ಮೂಲಗಳು ತಿಳಿಸಿರುವುದಾಗಿ 'ಲೈವ್ ಮಿಂಟ್' ವರದಿ ಮಾಡಿದೆ.
ಉದ್ಯಮಿ ಸಿದ್ಧಾರ್ಥ ಅವರು ಕಳೆದ ವರ್ಷ ಜುಲೈನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಆ ನಂತರ ಕೆಫೆ ಕಾಫೀ ಡೇ ಮತ್ತು ಅದರ ಮಾಲೀಕರ ಒಡೆತನದ ಹತ್ತಾರು ಖಾಸಗಿ ಕಂಪೆನಿಗಳ ಆರ್ಥಿಕ ವ್ಯವಹಾರಗಳ ಬಗ್ಗೆ ತಿಂಗಳುಗಟ್ಟಲೆ ತನಿಖೆ ನಡೆಯುತ್ತಿತ್ತು. ಅಂದ ಹಾಗೆ ವರದಿಯ ಕರಡು ಪ್ರತಿ ನೂರಕ್ಕೂ ಹೆಚ್ಚು ಪುಟಗಳಿವೆ ಎನ್ನಲಾಗಿದ್ದು, ನೂರಾರು ಕೋಟಿ ರುಪಾಯಿ ಹಣ ಕಣ್ಮರೆಯಾಗಿವೆ ಎಂದು ಹೆಸರು ಹೇಳಲು ಇಚ್ಛಿಸದ ವ್ಯಕ್ತಿಗಳು ಮಾಹಿತಿ ನೀಡಿದ್ದಾರೆ.
ಅಂದ ಹಾಗೆ ಈ ವರದಿ ಇನ್ನೂ ಬಹಿರಂಗಗೊಂಡಿಲ್ಲ.
ಕಣ್ಮರೆ ಆಗಿರುವ ಹಣ 2500 ಕೋಟಿಗೂ ಹೆಚ್ಚಿದೆ
ಸ್ಥಾಪಕರ ಲಿಸ್ಟೆಡ್ ಮತ್ತು ವೈಯಕ್ತಿಕ ವ್ಯಾಪಾರದಲ್ಲಿ ನೂರಾರು ವ್ಯವಹಾರಗಳು ಎಲ್ಲರಿಗೂ ಗೊತ್ತಾಗುವಂತೆ ಆಗಿಲ್ಲ ಎನ್ನಲಾಗಿದೆ. ಆದರೂ ವರದಿ ಅಂತಿಮ ಹಂತದಲ್ಲಿದ್ದು, ಬಿಡುಗಡೆಗೂ ಮುನ್ನ ಅದರಲ್ಲಿ ಬದಲಾವಣೆ ಕಾಣಬಹುದಾಗಿದೆ. ಹೆಚ್ಚು ಕಡಿಮೆ ಈ ವಾರದಲ್ಲೇ ವರದಿ ಬಿಡುಗಡೆ ಆಗುವ ನಿರೀಕ್ಷೆ ಇದೆ. ಮತ್ತೊಬ್ಬ ವ್ಯಕ್ತಿಯ ಪ್ರಕಾರ, ಕಣ್ಮರೆ ಆಗಿರುವ ಹಣ 2500 ಕೋಟಿಗೂ ಹೆಚ್ಚಿದೆ. "ವರದಿಯ ಕೆಲಸ ಇನ್ನೂ ನಡೆಯುತ್ತಿದೆ, ಅಂತಿಮಗೊಂಡಿಲ್ಲ" ಎಂದು ಕಂಪೆನಿ ವಕ್ತಾರರು ಮಾಹಿತಿ ನೀಡಿದ್ದಾರೆ. "ಈ ಹಂತದಲ್ಲಿ ಕಂಪೆನಿಯ ನಿರ್ದೇಶಕರಿಗಾಗಲೀ ಮತ್ತು ಕಂಪೆನಿಗಾಗಲೀ ವರದಿಯಲ್ಲಿ ಏನಿದೆ ಎಂಬ ಬಗ್ಗೆ ತಿಳಿದಿಲ್ಲ. ಈಗಲೇ ತನಿಖಾ ವರದಿಯ ಬಗ್ಗೆ ಊಹಿಸುವುದು ಸರಿಹೋಗುವುದಿಲ್ಲ" ಎಂದಿದ್ದಾರೆ. ಕಂಪೆನಿಯ ಆಡಳಿತ ಮಂಡಳಿಗಾಗಲೀ ಅಥವಾ ಸಿದ್ಧಾರ್ಥ ಕುಟುಂಬಕ್ಕಾಗಲೀ ಕಾಫೀ ಡೇ ವ್ಯವಹಾರವನ್ನು ಮುಂದುವರಿಸಿಕೊಂಡು ಹೋಗುವುದೇ ಆದ್ಯತೆ. ಯಾರಿಗೆಲ್ಲ ಬಾಕಿ ಇದೆಯೋ ಅದನ್ನು ಪಾವತಿಸಬೇಕು ಮತ್ತು 30 ಸಾವಿರ ಮಂದಿ ಉದ್ಯೋಗ ಹಾಗೇ ಉಳಿಯಬೇಕು ಎಂದು ವಕ್ತಾರರು ತಿಳಿಸಿದ್ದಾರೆ.
ಫೆಬ್ರವರಿಯಲ್ಲಿ ವಹಿವಾಟು ಅಮಾನತಾಗಿದೆ
ಕಳೆದ ವರ್ಷ ಜುಲೈನಲ್ಲಿ ಸಿದ್ಧಾರ್ಥ ಆತ್ಮಹತ್ಯೆ ಮಾಡಿಕೊಂಡ ತಿಂಗಳ ನಂತರ ನಿವೃತ್ತ ಅಧಿಕಾರಿ ಅಶೋಕ್ ಕುಮಾರ್ ಮಲ್ಹೋತ್ರಾ ಅವರನ್ನು ಕರೆತಂದು, ಕಂಪೆನಿಯ ಆರ್ಥಿಕ ವ್ಯವಹಾರಗಳ ತನಿಖೆ ಆರಂಭಿಸಲಾಗಿತ್ತು. ಇನ್ನು ಸುಪ್ರೀಂ ಕೋರ್ಟ್ ನ ಹಿರಿಯ ವಕೀಲರೊಬ್ಬರು ಈ ವಿಚಾರದಲ್ಲಿ ನೆರವು ನೀಡುತ್ತಿದ್ದಾರೆ ಎಂದು ತಿಳಿಸಲಾಗಿತ್ತು. ಷೇರು ಮಾರುಕಟ್ಟೆಯಲ್ಲಿ ವ್ಯವಹಾರ ನಡೆಸುತ್ತಿದ್ದ ಕಾಫೀ ಡೇ ಕಂಪೆನಿಯು ಸ್ಟಾರ್ ಬಕ್ಸ್ ಕಾರ್ಪೊರೇಷನ್ ಗೆ ಪ್ರತಿಸ್ಪರ್ಧಿ. ರಾಷ್ಟ್ರೀಯ ಹೆದ್ದಾರಿ ಬದಿಗಳಲ್ಲಿ ಹಾಗೂ ಪ್ರಮುಖ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ 1500ಕ್ಕೂ ಹೆಚ್ಚು ಕೆಫೆ ಕಾಫಿ ಡೇ ಮಳಿಗೆಗಳಿವೆ. ದೇಶದ ಮಧ್ಯಮ ವರ್ಗದ ಜನರಿಗೆ ಕೈಗೆಟುಕುವ ಬೆಲೆಯಲ್ಲಿ ದೊರೆಯುವ ಆಯ್ಕೆ ಇದಾಗಿರಬೇಕು ಎಂಬುದು ಕಂಪೆನಿ ಉದ್ದೇಶ. ಮತ್ತು ಕಂಪೆನಿಯ ಟ್ಯಾಗ್ ಲೈನ್- "ಎ ಲಾಟ್ ಕ್ಯಾನ್ ಹ್ಯಾಪನ್ ಓವರ್ ಕಾಫಿ". ಆದರೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ ಸಾವಿನ ನಂತರ ನಾನಾ ಸಮಸ್ಯೆಗಳು ಎದುರಾಗಿವೆ. ಷೇರಿನ ಮೌಲ್ಯ 90%ಗೂ ಹೆಚ್ಚು ಕುಸಿದು, ಮಾರುಕಟ್ಟೆ ಮೌಲ್ಯವು $ 80 ಮಿಲಿಯನ್ ಗೂ ಹೆಚ್ಚು ಇಳಿಕೆ ಕಂಡು, ಫೆಬ್ರವರಿಯಲ್ಲಿ ವಹಿವಾಟು ಅಮಾನತಾಗಿದೆ.
ಸಿದ್ಧಾರ್ಥ ಗ್ಯಾರಂಟೀರ್ ಆಗಿದ್ದರು
ಕೆಫೆ ಕಾಫೀ ಡೇ ಕಂಪೆನಿಗೆ ಸಾಲ ನೀಡಿದ್ದ ಇಂಡಸ್ ಇಂಡ್ ಬ್ಯಾಂಕ್ ಹಾಗೂ ಆರ್ ಬಿಎಲ್ ಬ್ಯಾಂಕ್ ಷೇರುಗಳು ಸಹ ಭಾರೀ ಇಳಿಕೆ ಕಂಡಿವೆ. ಮಾರ್ಚ್ 2019ರ ಬ್ಯಾಲೆನ್ಸ್ ಶೀಟ್ ನಲ್ಲಿರುವ ಪ್ರಕಾರ, ಕೆಫೆ ಕಾಫಿ ಡೇ ಕಂಪೆನಿಯು 2400 ಕೋಟಿ ರುಪಾಯಿ ನಗದು ಹಾಗೂ ನಗದಿಗೆ ಸಮಾನವಾದುದು ಇರುವುದಾಗಿ ತಿಳಿಸಿತ್ತು. ಇನ್ನು ಈಗ ಸಿದ್ಧವಾಗಿರುವ ವರದಿ ಪ್ರಕಾರ ಕಾಫಿ ಡೇ ತೆಗೆದುಕೊಂಡ ಸಾಲಕ್ಕೆ ಸಿದ್ಧಾರ್ಥ ಗ್ಯಾರಂಟೀರ್ ಆಗಿದ್ದರು. ಇನ್ನು ಸ್ಥಳೀಯ ಲೇವಾದೇವಿದಾರರಿಂದಲೂ ಹೆಚ್ಚಿನ ಬಡ್ಡಿಗೆ ಸಾಲ ತೆಗೆದುಕೊಂಡಿದ್ದರು ಎನ್ನಲಾಗಿದ್ದು, ಕಾಫಿ ಬೆಳೆಗಾರರಿಗೆ ಹಾಗೂ ಇತರ ಪೂರೈಕೆದಾರರಿಗೆ ಕೆಫೆ ಕಾಫೀ ಡೇಯಿಂದ ಎಷ್ಟು ಬಾಕಿ ಇದೆ ಎಂಬುದರ ಬಗ್ಗೆ ಕೂಡ ತನಿಖೆ ನಡೆದಿದೆ. ಬ್ಯಾಂಕ್ ನಿಂದ ಸಾಲ ಪಡೆಯಲು ಸಿದ್ಧಾರ್ಥ ಹಾಗೂ ಕೆಲವು ಉದ್ಯೋಗಿಗಳಿಗೆ ಸೇರಿದ ಕಾಫೀ ಎಸ್ಟೇಟ್ ಗಳನ್ನು ಅಡಮಾನ ಮಾಡಲಾಗಿದೆ. ಸಾಲ ಪಡೆಯುವ ಕಾರಣಕ್ಕಾಗಿಯೇ ಆ ಆಸ್ತಿಗಳ ಬೆಲೆಯನ್ನು ಹೆಚ್ಚಿಗೆ ತೋರಿಸಲಾಗಿದೆ.
10,000 ಕೋಟಿ ರುಪಾಯಿಗೂ ಹೆಚ್ಚು ಸಾಲ
ಈಗ ನಡೆಯುತ್ತಿರುವ ತನಿಖೆಯಲ್ಲಿ ನಾನಾ ಆಯಾಮಗಳ ಪರಿಶೀಲನೆ ನಡೆದಿದೆ. ಕಂಪೆನಿಯ ಹಣ ಏನಾಯಿತು? ಕಾಫೀ ಡೇ ಹಣ ಕಾಸಿನ ಸ್ಥಿತಿಯನ್ನು ತಮಗೆ ಬೇಕಾದಂತೆ ಬಿಂಬಿಸಲಾಗಿದೆಯಾ? ನಗದು ಹಾಗೂ ಲಾಭದ ಪ್ರಮಾಣವನ್ನು ಬದಲಿಸಲಾಗಿದೆಯಾ? ದೊಡ್ಡ ಮಟ್ಟದ ರಿಟರ್ನ್ಸ್ ನೀಡುವುದಾಗಿ ಸಿದ್ಧಾರ್ಥ ಭರವಸೆ ನೀಡಿದ್ದ ದೊಡ್ಡ ಹೂಡಿಕೆದಾರರಿಗೆ ಹಣ ಹಿಂತಿರುಗಿಸಲು ಕಂಪೆನಿಯಿಂದ ದುಡ್ಡು ತೆಗೆದರಾ? ಇತ್ಯಾದಿ ವಿಚಾರದ ಬಗ್ಗೆ ತನಿಖೆ ನಡೆದಿರುವುದಾಗಿ ಮೂಲಗಳು ತಿಳಿಸಿವೆ. ಸಿದ್ಧಾರ್ಥ ಅವರ ಲಿಸ್ಟೆಡ್ ಹಾಗೂ ಖಾಸಗಿ ಕಂಪೆನಿ ಫೈಲಿಂಗ್ ನ ಪ್ರಕಾರ, 10,000 ಕೋಟಿ ರುಪಾಯಿಗೂ ಹೆಚ್ಚು ಸಾಲ ಅವರಿಗೆ ಇತ್ತು. ಸಾಲದ ಭಾರಕ್ಕೆ ಕುಸಿದುಹೋಗಿದ್ದ ಸಿದ್ಧಾರ್ಥ ಅವರಿಗೆ ಬಡ್ಡಿ ಸಹ ಪಾವತಿಸಲು ಕಷ್ಟವಾಗಿತ್ತು ಎನ್ನಲಾಗಿದೆ. ಇನ್ನು ಕಾಫೀ ಡೇ ಕಂಪೆನಿಯೂ ಬ್ಲ್ಯಾಕ್ ಸ್ಟೋನ್ ಗ್ರೂಪ್ ಜತೆಗಿನ ವ್ಯವಹಾರವನ್ನು ಅಂತಿಮಗೊಳಿಸುತ್ತಿದೆ. ಅದು ರಿಯಲ್ ಎಸ್ಟೇಟ್ ಆಸ್ತಿಗೆ ಸಂಬಂಧಿಸಿದ ವ್ಯವಹಾರವಾಗಿದೆ. ಕಂಪೆನಿಯ ಬ್ರ್ಯಾಂಡ್ ಹಾಗೂ ಉದ್ಯೋಗಿಗಳ ಹಿತ ಕಾಪಾಡುವುದು ಸದ್ಯದ ಆದ್ಯತೆಯಾಗಿದೆ.