ಸರ್ಕಾರಿ ನೌಕರ, ಕುಟುಂಬ ಸದಸ್ಯರಿಂದಲೇ ಕೊಲೆಯಾದ್ರೆ ಪಿಂಚಣಿ ಯಾರಿಗೆ ಸಿಗಲಿದೆ? ನಿಯಮ ತಿದ್ದುಪಡಿ!
ಕೇಂದ್ರ ಸರ್ಕಾರವು 50 ವರ್ಷಗಳಷ್ಟು ಹಳೆಯ ಪಿಂಚಣಿ ನಿಯಮವನ್ನು ತಿದ್ದುಪಡಿ ಮಾಡಿದ್ದು, ಫಲಾನುಭವಿ ಸರ್ಕಾರಿ ನೌಕರ ಸದಸ್ಯರು ನಿಟ್ಟುಸಿರು ಬಿಡುವಂತಾಗಿದೆ. 1972 ರ ಹಿಂದಿನ ನಿಯಮವನ್ನು ಕೇಂದ್ರ ಸರ್ಕಾರ ಬದಲಾಯಿಸಿದ್ದು, ಕೊಲೆಯಾದ ಸರ್ಕಾರಿ ನಿವೃತ್ತಿ ವ್ಯಕ್ತಿಯ ಕುಟುಂಬದ ಸದಸ್ಯರು ಪಿಂಚಣಿ ಪಡೆಯಲಿದ್ದಾರೆ.
ಈ ಹಿಂದೆ ಮೃತ ಸರ್ಕಾರಿ ನೌಕರನ ಕೊಲೆ ಆರೋಪ ಆತನ ಕುಟುಂಬ ಸದಸ್ಯರ ಮೇಲಿದ್ದರೆ ಅಂಥ ಸಂದರ್ಭದಲ್ಲಿ ಪಿಂಚಣಿ ಹಣಕ್ಕೆ ತಾತ್ಕಾಲಿಕವಾಗಿ ತಡೆ ನೀಡಲಾಗುತ್ತಿತ್ತು. ಆರೋಪದಿಂದ ಕುಟುಂಬ ಸದಸ್ಯರು ಮುಕ್ತರಾದರೆ ಮಾತ್ರ ಪಿಂಚಣಿ ಹಣ ಅರ್ಹ ಸದಸ್ಯನಿಗೆ ತಲುಪುತ್ತಿತ್ತು. ಜೊತೆಗೆ ಕೊಲೆ ಸಾಭೀತಾದರೆ ಮತ್ತೊಬ್ಬ ಕುಟುಂಬ ಸದಸ್ಯನಿಗೆ ಪಿಂಚಣಿ ತಲುಪುತ್ತಿತ್ತು. ಈ ಪ್ರಕರಣ ಅಂತ್ಯದವರೆಗೆ ಪಿಂಚಣಿ ಸ್ಥಗಿತಗೊಳ್ಳುತ್ತಿತ್ತು.
ಆದರೆ ಈಗ ಈ ನಿಯಮದಲ್ಲಿ ತಿದ್ದುಪಡಿ ತರಲಾಗಿದ್ದು, ಮೃತ ಸರ್ಕಾರಿ ನೌಕರನ ಕೊಲೆ ಆರೋಪ ಹೊತ್ತ ಕುಟುಂಬ ಸದಸ್ಯ ಆರೋಪ ಮುಕ್ತನಾಗುವವರೆಗೂ ಪಿಂಚಣಿ ಸ್ಥಗಿತಗೊಳ್ಳುವುದಿಲ್ಲ. ಬೇರೆ ಅರ್ಹ ಕುಟುಂಬ ಸದಸ್ಯರಿಗೆ ಕೂಡಲೇ ಪಿಂಚಣಿ ವರ್ಗವಾಗುತ್ತದೆ. ಒಂದು ವೇಳೆ ಕೊಲೆ ಆರೋಪಿ ಖುಲಾಸೆಗೊಂಡರೆ ಕೂಡಲೆ ಆತನಿಗೆ ಪಿಂಚಣಿ ಮರಳಿ ಸಿಗುತ್ತದೆ. ಜೂನ್ 16ರಂದು ಪಿಂಚಣಿ ನಿಯಮದಲ್ಲಿ ಈ ತಿದ್ದುಪಡಿ ಮಾಡಲಾಗಿದೆ.
ಈ ಹಿಂದೆ ಕೊಲೆ ಆರೋಪದಿಂದ ಮುಕ್ತವಾಗಲು ಹಲವು ವರ್ಷಗಳೇ ತೆಗೆದುಕೊಂಡ ಪರಿಣಾಮ ಕುಟುಂಬದ ಸದಸ್ಯರು ಪಿಂಚಣಿ ಇಲ್ಲದೆ ಪರದಾಡುತ್ತಿದ್ದರು. ಹೀಗಾಗಿ ಅಲ್ಲಿಯವರೆಗೆ ಮೃತ ನೌಕರನ ಕುಟುಂಬದ ಬೇರೆ ಅರ್ಹ ಸದಸ್ಯನಿಗೂ ಪಿಂಚಣಿ ನಿರಾಕರಣೆ ಮಾಡುವುದು ಸರಿಯಲ್ಲ ಎಂದು ಸಿಬ್ಬಂದಿ ಖಾತೆ ಸಚಿವಾಲಯ ಆದೇಶದಲ್ಲಿ ತಿಳಿಸಲಾಗಿದೆ.