'ಬಡ್ಡಿಯ ಮೇಲಿನ ಬಡ್ಡಿ ಮನ್ನಾ' ಬಗ್ಗೆ ಕೇಂದ್ರದಿಂದ ಸುಪ್ರೀಂಗೆ ಅಫಿಡವಿಟ್
ಎರಡು ಕೋಟಿ ರುಪಾಯಿ ತನಕದ ಸಾಲಕ್ಕೆ ಮಾರ್ಚ್ ನಿಂದ ಆಗಸ್ಟ್ ವರೆಗಿನ 6 ತಿಂಗಳ ಇಎಂಐ ವಿನಾಯಿತಿ ಸಂದರ್ಭದಲ್ಲಿ "ಬಡ್ಡಿ ಮೇಲಿನ ಬಡ್ಡಿಯನ್ನು" ಮನ್ನಾ ಮಾಡಲಾಗುವುದು ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಅಫಿಡವಿಟ್ ನಲ್ಲಿ ತಿಳಿಸಲಾಗಿದೆ. ಈ ಹಿಂದೆ ಕಂಡರಿಯದ ಇಂಥ ಸನ್ನಿವೇಶದಲ್ಲಿ ಮನ್ನಾ ಮಾಡುವ ಬಡ್ಡಿಯ ಹೊರೆಯನ್ನೇ ಸರ್ಕಾರ ಹೊತ್ತುಕೊಳ್ಳುವುದೇ ಏಕೈಕ ಪರಿಹಾರ ಮಾರ್ಗ ಎಂದಿದೆ.
ಇನ್ನು ಸರ್ಕಾರದಿಂದ ತೆಗೆದುಕೊಂಡ ನಿರ್ಧಾರಕ್ಕೆ ಸಂಸತ್ ನಲ್ಲಿ ಒಪ್ಪಿಗೆ ಪಡೆಯಲಾಗುವುದು. ಈ ನಡೆಯಿಂದ ಸಾವಿರಾರು ಮಂದಿ ಸಾಲ ಪಡೆದಂಥವರಿಗೆ ಅನುಕೂಲ ಆಗುತ್ತದೆ. ಈಗಾಗಲೇ ಸಾಲ ತೀರಿಸಿದವರಿಗೂ ಇದರ ಲಾಭ ದೊರೆಯಲಿದೆ. ಶಿಕ್ಷಣ ಸಾಲ, ಮನೆ ಸಾಲ, ಕ್ರೆಡಿಟ್ ಕಾರ್ಡ್ ಬಾಕಿ ಮತ್ತಿತರ ಸಾಲಗಳಿಗೆ ಇದು ಅನ್ವಯ ಆಗುತ್ತದೆ ಎಂದು ಅಫಿಡವಿಟ್ ನಲ್ಲಿ ಹಣಕಾಸು ಸಚಿವಾಲಯ ಹೇಳಿದೆ.
ಇಎಂಐ ವಿನಾಯಿತಿ ಎರಡು ವರ್ಷದ ತನಕ ವಿಸ್ತರಿಸಬಹುದು ಎಂದ ಕೇಂದ್ರ ಸರ್ಕಾರ
ಕೊರೊನಾ ನಿಯಂತ್ರಣಕ್ಕೆ ತರಬೇಕು ಎಂಬ ಕಾರಣಕ್ಕೆ ಮಾರ್ಚ್ ನಲ್ಲಿ ದೇಶದಾದ್ಯಂತ ಲಾಕ್ ಡೌನ್ ಘೋಷಿಸಲಾಯಿತು. ಸಾಲದ ಮೇಲಿನ ವಿನಾಯಿತಿಯನ್ನು ಆಗಸ್ಟ್ 31ನೇ ತಾರೀಕಿನ ತನಕ ವಿಸ್ತರಿಸಲಾಯಿತು. ಕೇಂದ್ರ ಸರ್ಕಾರವು ಹೇಳಿರುವ ಪ್ರಕಾರ, ಎಲ್ಲ ವಿಭಾಗದ ಸಾಲದ ಮೇಲೆ ಶುಲ್ಕ ಮನ್ನಾ ಮಾಡಿದಲ್ಲಿ ಬ್ಯಾಂಕ್ ಗಳಿಗೆ 6 ಲಕ್ಷ ಕೋಟಿ ರುಪಾಯಿ ಹೊರೆಯಾಗುತ್ತದೆ.
ಒಂದು ವೇಳೆ ಬ್ಯಾಂಕ್ ಗಳೇ ಈ ಹೊರೆಯನ್ನು ಹೊತ್ತುಕೊಳ್ಳಬೇಕು ಅಂತಾದಲ್ಲಿ ಅವುಗಳ ನಿವ್ವಳ ಮೌಲ್ಯ ಮುಖ್ಯ ಭಾಗವೇ ಕೊಚ್ಚಿ ಹೋಗುತ್ತದೆ. ಎಷ್ಟೋ ಬ್ಯಾಂಕ್ ಗಳು ತಮ್ಮ ಅಸ್ತಿತ್ವದ ಬಗ್ಗೆಯೇ ಆತಂಕ ವ್ಯಕ್ತಪಡಿಸಿದವು. ಸೆಪ್ಟೆಂಬರ್ 28ನೇ ತಾರೀಕಿನಂದು ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಅಕ್ಟೋಬರ್ 5ನೇ ತಾರೀಕಿಗೆ ಮುಂದೂಡಿತ್ತು. ಕೇಂದ್ರ ಸರ್ಕಾರಕ್ಕೆ ಇನ್ನಷ್ಟು ಸಮಯಾವಕಾಶ ನೀಡಲಾಗಿತ್ತು. ಕೇಂದ್ರ ಬ್ಯಾಂಕ್ ಹಾಗೂ ಸರ್ಕಾರ ಎರಡೂ ಚರ್ಚೆ ಮಾಡಿದ ನಂತರ ಪ್ರತಿಕ್ರಿಯೆ ದಾಖಲಿಸುವಂತೆ ಹೇಳಿತ್ತು.
ಸೆಪ್ಟೆಂಬರ್ 3ನೇ ತಾರೀಕಿನಂದು ಸುಪ್ರೀಂ ಕೋರ್ಟ್ ಮಧ್ಯಂತರ ನಿರ್ದೇಶನ ನೀಡಿತ್ತು. ಆಗಸ್ಟ್ 31ನೇ ತಾರೀಕಿನ ತನಕ ಇಎಂಐ ವಿನಾಯಿತಿ ಪಡೆದ ಖಾತೆಗಳನ್ನು ಎನ್ ಪಿಎಗಳು (ಅನುತ್ಪಾದಕ ಆಸ್ತಿ) ಎಂದು ಪರಿಗಣಿಸಬಾರದು ಎಂದು ತಿಳಿಸಿತ್ತು. ಇನ್ನು ಅರ್ಜಿದಾರರಾದ ಗಜೇಂದ್ರ ಶರ್ಮ ಅವರು, ಇಎಂಐ ವಿನಾಯಿತಿ ಸಂದರ್ಭದಲ್ಲಿ ಬಡ್ಡಿ ಮನ್ನಾ ಮಾಡಬೇಕು ಎಂದು ಮನವಿ ಮಾಡಿದ್ದರು.