ಸರ್ಕಾರಿ ಸ್ವಾಮ್ಯದ 13 ವಿಮಾನ ನಿಲ್ದಾಣ ಖಾಸಗೀಕರಣಕ್ಕೆ ಕೇಂದ್ರ ಸರ್ಕಾರ ಮುಂದು!
ನವದೆಹಲಿ, ಅಕ್ಟೋಬರ್ 26: ಸರ್ಕಾರಿ ಸ್ವಾಮ್ಯದ ಭಾರತೀಯ ವಿಮಾನಯಾನ ಪ್ರಾಧಿಕಾರದಡಿ ಕಾರ್ಯಾಚರಣೆ ಮಾಡುತ್ತಿರುವ 13 ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆಯನ್ನು ಮಾರ್ಚ್ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸಲು ಕೇಂದ್ರ ಸರ್ಕಾರ ಯೋಜನೆ ಹಾಕಿಕೊಂಡಿದೆ.
"ಪಿಪಿಪಿ (ಸಾರ್ವಜನಿಕ-ಖಾಸಗಿ ಸಹಭಾಗಿತ್ವ) ಮೇಲೆ ಬಿಡ್ ಮಾಡಬೇಕಾದ 13 ವಿಮಾನ ನಿಲ್ದಾಣಗಳ ಪಟ್ಟಿಯನ್ನು ನಾವು ವಿಮಾನಯಾನ ಸಚಿವಾಲಯಕ್ಕೆ ಕಳುಹಿಸಿದ್ದೇವೆ. ಈ ಹಣಕಾಸು ವರ್ಷದ ಅಂತ್ಯದ ವೇಳೆಗೆ ಈ ವಿಮಾನ ನಿಲ್ದಾಣಗಳ ಬಿಡ್ಡಿಂಗ್ ಅನ್ನು ಪೂರ್ಣಗೊಳಿಸುವ ಯೋಜನೆ ಇದೆ" ಎಂದು ಭಾರತೀಯ ವಿಮಾನಯಾನ ಪ್ರಾಧಿಕಾರದ ಅಧ್ಯಕ್ಷ ಸಂಜೀವ್ ಕುಮಾರ್ ಹೇಳಿದ್ದಾರೆ.
ಮುಂಬೈ ವಿಮಾನ ನಿಲ್ದಾಣದ ಶೇ.74ರಷ್ಟು ಪಾಲು ಅದಾನಿ ತೆಕ್ಕೆಗೆ
ಪ್ರಯಾಣಿಕರ ಆದಾಯದ ಮಾದರಿಯನ್ನೇ ಬಿಡ್ಡಿಂಗ್ಗೆ ಅನುಸರಿಸಬೇಕಾಗುತ್ತದೆ. ಈ ಹಿಂದೆಯೂ ಬಳಕೆಯಾದ ಮಾದರಿ ಯಶಸ್ವಿಯಾಗಿದೆ. ಜೆವಾರ್ ವಿಮಾನ ನಿಲ್ದಾಣವನ್ನು (ಗ್ರೇಟರ್ ನೋಯ್ಡಾದಲ್ಲಿ) ಸಹ ಅದೇ ಮಾದರಿಯಲ್ಲಿ ಬಿಡ್ ಮಾಡಲಾಗಿದೆ" ಎಂದು ಅವರು ಹೇಳಿದ್ದಾರೆ.
50 ವರ್ಷಗಳ ಅವಧಿಗೆ ಖಾಸಗೀಕರಣ:
ಕೋವಿಡ್-19 ಸಾಂಕ್ರಾಮಿಕ ಪಿಡುಗಿನ ಹಾವಳಿಯ ಹೊರತಾಗಿಯೂ ಈ ಯೋಜನೆಗಳನ್ನು ತೆಗೆದುಕೊಳ್ಳುವವರು ಇರುತ್ತಾರೆ. ಏಕೆಂದರೆ ಕೊರೊನಾವೈರಸ್ ರೋಗದ ಪರಿಣಾಮವು ಅಲ್ಪಾವಧಿಯದ್ದಾಗಿದೆ. ಆದರೆ ವಿಮಾನ ನಿಲ್ದಾಣಗಳು 50 ವರ್ಷಗಳವರೆಗೆ ಖಾಸಗೀಯವರಿಗೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಒಟ್ಟು 13 ವಿಮಾನ ನಿಲ್ದಾಣಗಳ ಖಾಸಗೀಕರಣ:
ಕೇಂದ್ರ ಸರ್ಕಾರವು ಖಾಸಗೀಕರಣಗೊಳಿಸಲು ಹೊರಟಿರುವ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಏಳು ಸಣ್ಣ ವಿಮಾನ ನಿಲ್ದಾಣಗಳಿದ್ದರೆ, ಅದರ ಜೊತೆಗೆ ಆರು ದೊಡ್ಡ ವಿಮಾನ ನಿಲ್ದಾಣಗಳೂ ಸೇರ್ಪಡೆಯಾಗಿವೆ. ವಾರಣಾಸಿಯೊಂದಿಗೆ ಕುಶಿನಗರ್ ಮತ್ತು ಗಯಾ, ಅಮೃತಸರ್ ಜೊತೆಗೆ ಕಾಂಗ್ರಾ, ಭುವನೇಶ್ವರ್ ಜೊತೆ ತಿರುಪತಿ, ರಾಯಪುರ್ ಜೊತೆಗೆ ಔರಂಗಬಾದ್, ಇಂದೋರ್ ಜೊತೆ ಜಬಲ್ಪುರ್, ತಿರುಚಿ ಜೊತೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣವನ್ನೂ ಖಾಸಗಿಯವರಿಗೆ ನೀಡಲು ಕೇಂದ್ರ ಸರ್ಕಾರ ಯೋಜನೆ ಹಾಕಿಕೊಂಡಿದೆ.
ನಾಲ್ಕು ವರ್ಷಗಳಲ್ಲಿ 25 ವಿಮಾನ ನಿಲ್ದಾಣ ಖಾಸಗೀಕರಣ:
ರಾಷ್ಟ್ರೀಯ ಹಣಗಳಿಕೆಯ ಯೋಜನೆಯ (NMP) ಭಾಗವಾಗಿ ಈಗ ಯೋಜನೆ ಹಾಕಿಕೊಂಡಿರುವ 13 ವಿಮಾನ ನಿಲ್ದಾಣಗಳೂ ಸೇರಿದಂತೆ ಮುಂದಿನ ನಾಲ್ಕು ವರ್ಷಗಳಲ್ಲಿ ಒಟ್ಟು 25 ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸಲು ಸರ್ಕಾರ ಯೋಜನೆ ಹಾಕಿಕೊಂಡಿದೆ. 2005-6ರಲ್ಲಿ ದೆಹಲಿ, ಮುಂಬೈ, ಬೆಂಗಳೂರು ಮತ್ತು ಹೈದ್ರಾಬಾದ್ ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸಲಾಯಿತು. ಇದರ ಬೆನ್ನಲ್ಲೇ 2019ರಲ್ಲಿ ದೇಶದ ಆರು ವಿಮಾನ ನಿಲ್ದಾಣಗಳನ್ನು ಅದಾನಿ ಗ್ರೂಪ್ ನಿರ್ವಹಣೆಗೆ ನೀಡಲಾಯಿತು.
ಲಾಭ ಗಳಿಸುವ ವಿಮಾನ ನಿಲ್ದಾಣಗಳ ಖಾಸಗೀಕರಣದೊಂದಿಗೆ ವಲಯವನ್ನು ಉದಾರೀಕರಣಗೊಳಿಸುವುದು ಸರ್ಕಾರದ ಯೋಜನೆಯಾಗಿದೆ. ಖಾಸಗೀಕರಣಗೊಂಡ ವಿಮಾನ ನಿಲ್ದಾಣಗಳ ಆದಾಯದ ಹಂಚಿಕೆಯ ಮೂಲಕ ಗಳಿಸಿದ ಲಾಭವನ್ನು ಮತ್ತೊಂದು ವಲಯದ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳುವ ಬಗ್ಗೆ ಭಾರತೀಯ ವಿಮಾನಯಾನ ಪ್ರಾಧಿಕಾರ ತಿಳಿಸಿದೆ.
ವಿಮಾನಯಾನ ಆದಾಯ ಗಳಿಕೆಗೆ ಹೊಡೆತ:
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದ ಭಾರತೀಯ ವಿಮಾನಯಾನ ಪ್ರಾಧಿಕಾರದ ಆದಾಯ ಗಳಿಕೆಗೆ ಹೊಡೆತ ಬಿದ್ದಿದೆ. ಇದು FY21ರಲ್ಲಿ 1,962 ಕೋಟಿ ರೂಪಾಯಿಗಳ ದಾಖಲೆಯ ನಷ್ಟವನ್ನು ಉಂಟು ಮಾಡಿದೆ. ಸಂಬಳ ಸೇರಿದಂತೆ ದುಡಿಯುವ ಬಂಡವಾಳದ ಅಗತ್ಯತೆಗಳನ್ನು ಪೂರೈಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ 1,500 ಕೋಟಿ ಸಾಲ ಪಡೆಯುವಂತೆ ಸ್ಥಿತಿ ನಿರ್ಮಾಣವಾಗಿದೆ. ಪ್ರಸ್ತುತ ಪರಿಸ್ಥಿತಿ ಸುಧಾರಣೆ ಕಂಡಿದ್ದು ಪ್ರಯಾಣಿಕರ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಆದ್ದರಿಂದ ಈ ವರ್ಷ ಯಾವುದೇ ರೀತಿ ಸಾಲ ಪಡೆದುಕೊಳ್ಳುವ ಅಗತ್ಯತೆ ವಿಮಾನಯಾನ ಪ್ರಾಧಿಕಾರಕ್ಕಿಲ್ಲ ಎಂದು ತಿಳಿಸಿದೆ.
ಕಳೆದ ವರ್ಷ ನಷ್ಟದ ಹೊರತಾಗಿಯೂ 2,100 ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದ್ದು, ಈ ಪೈಕಿ 1,000 ಕೋಟಿ ರೂಪಾಯಿ ಬಂಡವಾಳವನ್ನು ಇದೇ ವರ್ಷದಲ್ಲಿ ಬಳಕೆ ಮಾಡಿಕೊಳ್ಳಲಾಗುವುದು. "ನಮ್ಮ ಬಂಡವಾಳ ವೆಚ್ಚವು ಯೋಜಿಸಿದಂತೆ ಮುಂದುವರಿಯುತ್ತದೆ. ಈ ಹಣಕಾಸು ವರ್ಷದ ಬಂಡವಾಳ ವೆಚ್ಚದ ಅವಶ್ಯಕತೆಗಳನ್ನು ಪೂರೈಸಲು, ನಾವು ರೂ 1,000 ಕೋಟಿ ಸಾಲವನ್ನು ಪಡೆದಿದ್ದೇವೆ. ಮುಂದೆ, ಭವಿಷ್ಯದ ನಿಧಿಯ ಅಗತ್ಯವನ್ನು ಆಧರಿಸಿ, ಹೆಚ್ಚುವರಿ ಸಾಲದ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲಾಗುವುದು," ಎಂದು ಕುಮಾರ್ ಹೇಳಿದ್ದಾರೆ.