ಮೈಸೂರಿನಲ್ಲಿರುವ ಚಾಣಕ್ಯನ 'ಅರ್ಥಶಾಸ್ತ್ರ'ದ ಮೂಲಪ್ರತಿ ಹಾಳಾಗುವ ಭೀತಿ
ಮೈಸೂರು, ನವೆಂಬರ್ 18: ಒಂದು ರಾಜ್ಯವನ್ನು ಹೇಗೆ ನಡೆಸಬೇಕು, ಅರ್ಥ ವ್ಯವಸ್ಥೆ ಹೇಗಿರಬೇಕು ಎಂಬುದಕ್ಕೆ ಸಾರ್ವಕಾಲಿಕ ಕೈಪಿಡಿಯಂತೆ ಇರುವುದು 'ಅರ್ಥಶಾಸ್ತ್ರ'. ಚಾಣಕ್ಯ ಎಂಬ ಹೆಸರಿನಿಂದಲೇ ಜಗತ್ತಿನಾದ್ಯಂತ ಹೆಸರಾದ ಕೌಟಿಲ್ಯ ಬರೆದ ಅಮೂಲ್ಯವಾದ ಗ್ರಂಥ ಇದು. ಚಂದ್ರಗುಪ್ತ ಮೌರ್ಯನ ಪ್ರಧಾನಿಯೂ ಆಗಿದ್ದ ಚಾಣಕ್ಯ ಬರೆದ 'ಅರ್ಥಶಾಸ್ತ್ರ' ಗ್ರಂಥದ ಮೂಲ ಹಸ್ತಪ್ರತಿಯನ್ನು ಸರಿಯಾಗಿ ಜೋಪಾನ ಮಾಡದಿದ್ದರೆ ಕಳೆದುಕೊಳ್ಳುವ ಸಾಧ್ಯತೆ ಇದೆ.
ನಿರ್ಲಕ್ಷ್ಯದ ಪರಿಣಾಮವಾಗಿ 'ಅರ್ಥಶಾಸ್ತ್ರ'ದ ಹಸ್ತಪ್ರತಿಯೇ ನಾಶವಾಗುವ ಹಂತದಲ್ಲಿದೆ ಎಂಬ ಬಗ್ಗೆ 'ಲೈವ್ ಮಿಂಟ್' ವರದಿ ಮಾಡಿದೆ. ಮೈಸೂರಿನ ಓರಿಯೆಂಟಲ್ ರೀಸರ್ಚ್ ಇನ್ ಸ್ಟಿಟ್ಯೂಟ್ (ಒಆರ್ ಐ) ಕೋಣೆಯಲ್ಲಿ 'ಅರ್ಥಶಾಸ್ತ್ರ'ದ ಹಸ್ತಪ್ರತಿ ಇಟ್ಟು, ಬೀಗ ಹಾಕಲಾಗಿದೆ. ಆದರೆ ಅಲ್ಲಿ ಏರ್ ಕಂಡೀಷಿನಿಂಗ್ ಅಥವಾ ಇನ್ಯಾವುದೇ ವ್ಯವಸ್ಥೆ ಇಲ್ಲ.
ಇನ್ ಸ್ಟಿಟ್ಯೂಟ್ ಸಮಿತಿಯ ಸದಸ್ಯ ಎಸ್. ಎ. ಕೃಷ್ಣಯ್ಯ ಮಾತನಾಡಿ, ಹಸ್ತಪ್ರತಿಯನ್ನು ಒಂದು ಬಟ್ಟೆಯಲ್ಲಿ ಸುತ್ತಿ, ಕುಷನ್ ಪೆಟ್ಟಿಗೆಯಲ್ಲಿ ಇಡಲಾಗಿದೆ. ಇದನ್ನು ನೋಡಿದಾಗ ಜನರು ಬಹಳ ಹೆಮ್ಮೆ ಪಡುತ್ತಾರೆ. ಆದರೆ ಅದನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಅಂಶ ತಕ್ಷಣವೇ ಗೊತ್ತಾಗುತ್ತದೆ ಎನ್ನುತ್ತಾರೆ.
ಏಳು ವರ್ಷದ ಹಿಂದೆ ಸರ್ಕಾರದಿಂದ ಐವತ್ತು ಸಾವಿರ ಅಮೆರಿಕನ್ ಡಾಲರ್ ಅನುದಾನ ನೀಡಲಾಗಿದೆ. ಅದರಲ್ಲಿ ಬಹುಪಾಲು ಮೊತ್ತ ಕಟ್ಟಡವನ್ನು ಸರಿಯಾಗಿ ಇರಿಸಿಕೊಳ್ಳುವುದಕ್ಕೆ ಖರ್ಚಾಗಿದೆ. ಇನ್ನು ಫೋರ್ಡ್ ಫೌಂಡೇಷನ್ ನಿಂದ ಏರ್ ಕಂಡೀಷನರ್ಸ್, ಡಿಹ್ಯುಮಡಿಫೈಯರ್ಸ್ ನೀಡಿದ್ದು, ಅದನ್ನು ದುರಸ್ತಿ ಮಾಡದ ಮಟ್ಟಕ್ಕೆ ಹಾಳಾಗಿವೆ. ಇನ್ನು ಒಆರ್ ಐ ಬಳಿ ಹಣವೇ ಇಲ್ಲ.
"ಏರ್ ಕಂಡೀಷಿನಿಂಗ್, ಡಿಹ್ಯುಮಡಿಫೈಯರ್ ಇಲ್ಲದೆ ಮತ್ತು ನಿಯಮಿತವಾಗಿ ಸಿಟ್ರೊನೆಲ್ಲ ತೈಲ ಕೋಟಿಂಗ್ ಇಲ್ಲದೆ 'ಅರ್ಥಶಾಸ್ತ್ರ'ದ ಮೂಲ ತಾಳೆಗರಿ ಗ್ರಂಥವನ್ನು ಉಳಿಸಿಕೊಳ್ಳುವುದಕ್ಕೆ ಆಗಲ್ಲ" ಎನ್ನುತ್ತಾರೆ ಕೃಷ್ಣಯ್ಯ.
ವರದಿಯ ಪ್ರಕಾರ, ಇನ್ ಸ್ಟಿಟ್ಯೂಟ್ ನ ನಿರ್ದೇಶಕರು ಹಲವು ವರ್ಷಗಳಿಂದ ಸಾಕಷ್ಟು ಮೂಲಸೌಕರ್ಯ ಅಭಿವೃದ್ಧಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಆದರೆ ತಾಳೆಗರಿ ಗ್ರಂಥವನ್ನು ಉಳಿಸಿಕೊಳ್ಳಲು ಅಗತ್ಯ ಇರುವ ಕ್ರಮವನ್ನು ತೆಗೆದುಕೊಳ್ಳಬೇಕಿದೆ. ಇನ್ನು ಅಗತ್ಯ ತಜ್ಞರು, ಹಸ್ತಪ್ರತಿ ನಿರ್ವಹಣೆ ಮತ್ತು ಕಟ್ಟಡ ನಿರ್ವಹಣೆಗೆ ಅಗತ್ಯ ಪ್ರಮಾಣ ಹಣವಿಲ್ಲ ಎನ್ನಲಾಗಿದೆ.
ಕೃಷ್ಣಯ್ಯ ಅವರು ಹೇಳುವ ಪ್ರಕಾರ, ತಾಳೆಗರಿಗಳು ಸಾವಿರಾರು ವರ್ಷ ಇರುತ್ತವೆ. ಆದರೆ ಅದನ್ನು ಉಳಿಸಿಕೊಳ್ಳಲು ಬೇಕಾದ ನಿರ್ವಹಣೆ ಕಡೆಗೂ ಗಮನ ನೀಡಬೇಕು. ತಕ್ಷಣವೇ ಅಗತ್ಯ ಕ್ರಮ ತೆಗೆದುಕೊಂಡರೆ ಅರ್ಥಶಾಸ್ತ್ರದ ಮೂಲ ಹಸ್ತಪ್ರತಿ ಇನ್ನಷ್ಟು ಹಾಳಾಗದಂತೆ ಎಚ್ಚರಿಕೆ ವಹಿಸಬಹುದು.