ಲಂಚ, ಬಹುಪತ್ನಿತ್ವ ಆರೋಪದಲ್ಲಿ ಮಾಜಿ ಬ್ಯಾಂಕರ್ ಗೆ ಚೀನಾದಲ್ಲಿ ಮರಣದಂಡನೆ
ಚೀನಾ ಸರ್ಕಾರದ ಅತಿ ದೊಡ್ಡ ಅಸೆಟ್ ಮ್ಯಾನೇಜ್ ಮೆಂಟ್ ಸಂಸ್ಥೆಯ ಮಾಜಿ ಅಧ್ಯಕ್ಷರಿಗೆ ಮಂಗಳವಾರ ಮರಣದಂಡನೆ ವಿಧಿಸಲಾಗಿದೆ. 260 ಮಿಲಿಯನ್ ಅಮೆರಿಕನ್ ಡಾಲರ್ ಲಂಚ ಕೇಳಿದ್ದು, ಭ್ರಷ್ಟಾಚಾರ ಹಾಗೂ ದ್ವಿಪತ್ನಿತ್ವದ ಆರೋಪದ ಮೇಲೆ ಈ ಶಿಕ್ಷೆಯನ್ನು ಘೋಷಣೆ ಮಾಡಲಾಗಿದೆ.
ಲಾಯ್ ಕ್ಷಿಯೋಮಿನ್ ಮರಣದಂಡನೆಗೆ ಗುರಿಯಾದ ವ್ಯಕ್ತಿ. ಆತ ಕಮ್ಯುನಿಸ್ಟ್ ಪಕ್ಷದ ಮಾಜಿ ಸದಸ್ಯ ಕೂಡ ಹೌದು. ಜನವರಿ 2020ರಲ್ಲಿ ಸರ್ಕಾರಿ ಸ್ವಾಮ್ಯದ ಮಾಧ್ಯಮ "ಸಿಸಿಟಿವಿ"ಯಲ್ಲಿ ವಿವರವಾದ ತಪ್ಪೊಪ್ಪಿಗೆ ನೀಡಿದ್ದರು. ಅದರ ಜತೆಗೆ ಲಾಯ್ ಗೆ ಸೇರಿದ್ದು ಎನ್ನಲಾದ ಬೀಜಿಂಗ್ ಅಪಾರ್ಟ್ ಮೆಂಟ್ ನಲ್ಲಿ ರಾಶಿರಾಶಿ ಹಣವನ್ನು ತೋರಿಸಲಾಗಿತ್ತು.
"ಸರ್ಕಾರದ ಜತೆ ಲವ್ ಇರಬೇಕು, ಆದರೆ ಎಂದೂ ಮದುವೆ ಆಗಬಾರದು
ತಮ್ಮ ಅಧಿಕಾರವನ್ನು ಬಳಸಿಕೊಂಡು, ಲಾಯ್ ದೊಡ್ಡ ಮೊತ್ತದ ಹಣವನ್ನು ಸಂಗ್ರಹಿಸಲು ಪ್ರಯತ್ನಿಸಿದ್ದಾರೆ ಎಂದು ಟಿಯಾನ್ಜಿನ್ ನಲ್ಲಿನ ಕೋರ್ಟ್ ಹೇಳಿದೆ. ಇನ್ನು ಲಂಚದ ಪ್ರಮಾಣವನ್ನು "ವಿಪರೀತ ದೊಡ್ಡದು" ಮತ್ತು ಸನ್ನಿವೇಶವು "ನಿರ್ದಿಷ್ಟವಾಗಿ ಗಂಭೀರ" ಎಂದಿದೆ. ಇದರ ಜತೆಗೆ, ಆತ "ವಿಪರೀತ ಕೆಟ್ಟ ಉದ್ದೇಶ" ತೋರಿದ್ದಾಗಿ ಹೇಳಲಾಗಿದೆ.
ಹಾಂಕಾಂಗ್ ನಲ್ಲಿ ಲಿಸ್ಟ್ ಆಗಿರುವಂಥ ಚೀನಾ ಹ್ಯುರಾಂಗ್ ಅಸೆಟ್ ಮ್ಯಾನೇಜ್ ಮೆಂಟ್ ಕಂಪೆನಿಯ ಮಾಜಿ ಅಧ್ಯಕ್ಷ ಲಾಯ್ ಮೇಲೆ ದ್ವಿಪತ್ನಿತ್ವ ಆರೋಪದಲ್ಲೂ ತಪ್ಪಿತಸ್ಥ ಎನಿಸಿದ್ದಾರೆ. ವಿವಾಹೇತರ ಸಂಬಂಧ ಮತ್ತು ಕಾನೂನುಬಾಹಿರವಾಗಿ ಮಕ್ಕಳನ್ನು ಪಡೆದ ತಪ್ಪು ಕೂಡ ಹೊರಿಸಲಾಗಿದೆ.
2009ನೇ ಇಸವಿಯಿಂದ 2018ರ ಮಧ್ಯೆ 25 ಮಿಲಿಯನ್ ಯುವಾನ್ (ಇವತ್ತಿನ ಲೆಕ್ಕಕ್ಕೆ ಭಾರತೀಯ ರುಪಾಯಿಗಳಲ್ಲಿ 28,32,68,250 ಅಥವಾ 28.32 ಕೋಟಿ ರು.) ಹಣದ ಅವ್ಯವಹಾರ ನಡೆಸಿದ್ದಾರೆ ಎಂಬ ಆರೋಪ ಲಾಯ್ ಮೇಲಿತ್ತು. ಅದಕ್ಕಾಗಿ ಅವರ ವಿರುದ್ಧ 2018ರ ಏಪ್ರಿಲ್ ನಲ್ಲಿ ತನಿಖೆ ಶುರುವಾಗಿತ್ತು.
ಸಿಸಿಟಿವಿಯ ತಪ್ಪೊಪ್ಪಿಗೆಯ ವೇಳೆ ಲಾಯ್ ಮಾತನಾಡಿ, ಆ ಹಣದಲ್ಲಿ ಏನನ್ನೂ ಖರ್ಚು ಮಾಡಿರಲಿಲ್ಲ. ಅದನ್ನು ಹಾಗೇ ಇಟ್ಟಿದ್ದೆ. ಅದನ್ನು ಖರ್ಚು ಮಾಡುವ ಧೈರ್ಯವೂ ನನಗಿರಲಿಲ್ಲ," ಎಂದಿದ್ದರು. ಇನ್ನು ಲಾಯ್ ಲಂಚವಾಗಿ ಸ್ವೀಕರಿಸಿದ್ದರು ಎನ್ನಲಾದ ವಿಲಾಸಿ ಕಾರುಗಳು, ಚಿನ್ನದ ಗಟ್ಟಿಗಳನ್ನು ಸಿಸಿಟಿವಿಯಲ್ಲಿ ತೋರಿಸಲಾಗಿತ್ತು.
ಲಾಯ್ ಗೆ ಸೇರಿದ ಎಲ್ಲ ವೈಯಕ್ತಿಕ ಆಸ್ತಿಯನ್ನು ವಶಪಡಿಸಿಕೊಂಡು, ರಾಜಕೀಯ ಹಕ್ಕುಗಳನ್ನು ಕಸಿದುಕೊಳ್ಳಬೇಕು ಎಂದು ಟಿಯಾನ್ಜಿನ್ ಕೋರ್ಟ್ ತೀರ್ಪು ನೀಡಿದೆ. ಈ ಮಧ್ಯೆ ಚೀನಾ ಅಧ್ಯಕ್ಷರು ತಮ್ಮ ವಿರೋಧಿಗಳನ್ನು ಹಣಿಯಲು ಹೀಗೆ ಭ್ರಷ್ಟಾಚಾರ ವಿರೋಧಿ ಅಭಿಯಾನ ನಡೆಸುವ ಸೋಗು ಹಾಕುತ್ತಿದ್ದಾರೆ. ಇದು ತಮ್ಮ ನಾಯಕತ್ವದ ವಿರುದ್ಧ ಇರುವವರನ್ನು ಮುಗಿಸಲು ಬಳಸುತ್ತಿರುವ ತಂತ್ರ ಎಂಬ ಟೀಕೆಗಳು ಕೇಳಿಬರುತ್ತಿವೆ.
ಕೋರ್ಟ್ ನಲ್ಲಿ ಹಾಜರುಪಡಿಸುವ ಮುನ್ನವೇ ಶಂಕಿತರ ತಪ್ಪೊಪ್ಪಿಗೆಯನ್ನು ಚೀನಾದ ಸರ್ಕಾರಿ ಮಾಧ್ಯಮ ಸಿಸಿಟಿವಿಯಲ್ಲಿ ಪ್ರಸಾರ ಮಾಡಲಾಗುತ್ತಿದೆ. ಇಂಥ ಧೋರಣೆಗೆ ವಕೀಲರು ಮತ್ತು ವಿವಿಧ ಹಕ್ಕುಗಳ ಸಂಘಟನೆ ಕಾರ್ಯಕರ್ತರಿಂದ ಆಕ್ಷೇಪ ಕೇಳಿಬರುತ್ತಿದೆ.