ಸಾಲ ಪಡೆಯಲು ಹೋದವನನ್ನೇ ಶ್ರೀಮಂತಗೊಳಿಸಿದ ಲಾಟರಿ ಟಿಕೆಟ್
ಒಂದೇ ಒಂದು ಲಾಟರಿ ಟಿಕೆಟ್ ಇಡೀ ಕುಟುಂಬದ ಜೀವನಶೈಲಿಯನ್ನೇ ಬದಲಿಸಿ ಬಿಡುತ್ತದೆ ಎಂದು ಆತ ಕನಸು ಮನಸಿನಲ್ಲೂ ಎನಿಸಿರಲಿಲ್ಲ. ಮಗಳ ಮದುವೆಗಾಗಿ ಇದ್ದ ಮನೆಯನ್ನೇ ಅಡಮಾನವಿಟ್ಟಿದ ಬಡ ತಂದೆ ಆತ. ಕೇರಳ ರಾಜ್ಯ ಲಾಟರಿ ಆತನ ಕಷ್ಟವನ್ನೆಲ್ಲ ದೂರ ಮಾಡಿದೆ. ಕಣ್ಣೂರು ಜಿಲ್ಲೆ ಮಾಲೂರು ಪಂಚಾಯಿತಿ ಕುರಿಚಾಯ ಕಾಲೋನಿ ನಿವಾಸಿ ರಾಜನ್ ಪೆರುನ್ನೋನ್ ಗೆ ಕ್ರಿಸ್ ಮೆಸ್ ಮತ್ತು ಹೊಸ ವರ್ಷದ ಸಾಲಿನ ಬಂಪರ್ ಲಾಟರಿ ಹೊಡೆದಿದೆ.
ಕೂಥುಪರಂಬು ಪ್ರದೇಶದ ಅಂಗಡಿಯೊಂದರಲ್ಲಿ ರಾಜನ್ ಖರೀದಿಸಿದ 300 ರುಪಾಯಿಯ ಲಾಟರಿ ಸಂಖ್ಯೆ ST 269609 ಗೆ ಬರೋಬ್ಬರಿ 12 ಕೋಟಿ ರುಪಾಯಿ ಬಂಪರ್ ಹೊಡೆದಿದೆ. ಕೇಂದ್ರ ಸರ್ಕಾರದ ಆದಾಯ ತೆರಿಗೆ, ಜಿಎಸ್ ಪಿ ಮತ್ತು ಲಾಟರಿ ಕಂಪೆನಿ ಕಮಿಷನ್ ಹೊರತಾಗಿ ರಾಜನ್ ಕೈಗೆ ಇದೀಗ 7.2 ಕೋಟಿ ರುಪಾಯಿ ಹಣ ಸಿಗಲಿದೆ.
ಲಾಟರಿ ಖೇಲ್, ಕೋಟಿ ಸಿಕ್ಕಿದೆ ಖಾಕಿಗಳೇ ಕಾಪಾಡಿ ಎಂದ ಅಂಕಲ್!
ಹಿರಿಯ ಮಗಳು ಅಥಿರಾ ಮದುವೆಗೆಂದು ಸಾಲ ಮಾಡಿಕೊಂಡಿದ್ದ ರಾಜನ್, ದಿನಗೂಲಿ ಕೆಲಸವನ್ನು ಮಾಡಿಕೊಂಡಿದ್ದರು. ಪಿಯುಸಿ ಓದುತ್ತಿದ್ದ ಕಿರಿಯ ಮಗಳು ಅಕ್ಷರಾಗೆ ಉತ್ತಮ ಶಿಕ್ಷಣ ಕೊಡಿಸುವ ಕನಸನ್ನು ಕಟ್ಟಿಕೊಂಡಿದ್ದರು. ಇನ್ನು, ಪುತ್ರ ವಿಗಿಲ್ ಕೂಡ ಕುಟುಂಬವನ್ನು ನಡೆಸಲು ತಂದೆಯ ಜೊತೆಗೆ ದಿನಗೂಲಿ ಕೆಲಸಕ್ಕೆ ತೆರಳುತ್ತಾರೆ.
ಬ್ಯಾಂಕ್ ಗೆ ತೆರಳಿದ್ದ ದಿನವೇ ಕೇರಳ ಲಾಟರಿ ಖರೀದಿ
ಹಿರಿಯ ಮಗಳು ಅಥಿರಾ ಮದುವೆಗೆ 5 ಲಕ್ಷ ಸಾಲ ಮಾಡಿದ್ದ ರಾಜನ್, ಅದಕ್ಕಾಗಿ ಮನೆಯನ್ನೇ ಅಡಮಾನವಿಟ್ಟಿದ್ದರು. ಮನೆ ಬಿಡಿಸಿಕೊಳ್ಳುವುದಕ್ಕಾಗಿ ಬ್ಯಾಂಕ್ ನಿಂದ ಸಾಲ ಪಡೆಯಲು ಅರ್ಜಿ ಸಲ್ಲಿಸಿದ್ದರು. ಆದರೆ ಈಗಾಗಲೇ ಪಡೆದ ಸಾಲವನ್ನು ಮೊದಲು ತೀರಿಸುವಂತೆ ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದರು. ಅದೇ ದಿನ 300 ರುಪಾಯಿ ಕೊಟ್ಟು ಕೇರಳ ರಾಜ್ಯ ಲಾಟರಿಯನ್ನು ಖರೀದಿಸಿದ್ದರು.
ಲಾಟರಿ ಖರೀದಿಸುತ್ತಿದ್ದ ವಿಚಾರ ಪತ್ನಿಯಿಂದ ಗೋಪ್ಯ
ಇನ್ನು, ರಾಜನ್ ಲಾಟರಿ ಖರೀದಿಸುವ ವಿಚಾರವನ್ನು ಪತ್ನಿಗೆ ಯಾವುದೇ ಕಾರಣಕ್ಕೂ ತಿಳಿಸುತ್ತಿರಲಿಲ್ಲ. ದಿನಗೂಲಿ ಕೆಲಸದಿಂದ ಬರುವ ಆದಾಯದಲ್ಲಿ 300 ರುಪಾಯಿ ಹಣವನ್ನು ಲಾಟರಿ ಟಿಕೆಟ್ ಗೆ ನೀಡುವುದಕ್ಕೆ ಪತ್ನಿ ವಿರೋಧ ವ್ಯಕ್ತಪಡಿಸುತ್ತಿದ್ದಳು ಎಂದು ಸ್ವತಃ ರಾಜನ್ ತಿಳಿಸಿದ್ದಾರೆ.
ಗೆಲುವಿಗೆ ಸ್ಪೂರ್ತಿಯಾಗಿದ್ದೇ ಆ ಎರಡು ಸಾವಿರ ರುಪಾಯಿ
ಕೇರಳ ರಾಜ್ಯ ಲಾಟರಿಯನ್ನು ನಿತ್ಯ ಖರೀದಿಸುತ್ತಿದ್ದ ರಾಜನ್ ಗೆ ಆಗಾಗ ಬಹುಮಾನ ಸಿಗುತ್ತಿತ್ತು. ಒಮ್ಮೊಮ್ಮೆ ಒಂದು ಸಾವಿರ, ಎರಡು ಸಾವಿರ, ಐದು ಸಾವಿರ ರುಪಾಯಿ ಬಹುಮಾನ ಪಡೆದಿದ್ದೇ ಲಾಟರಿ ಟಿಕೆಟ್ ಖರೀದಿಸಲು ಸ್ಪೂರ್ತಿಯಾಯಿತು ಎಂದು ರಾಜನ್ ತಿಳಿಸಿದ್ದಾರೆ. ಇದರ ಜೊತೆಗೆ ಇತ್ತೀಚೆಗಷ್ಟೇ ಕೆಲವೇ ಅಂಕಿಗಳ ವ್ಯತ್ಯಾಸದಲ್ಲಿ ಬರೋಬ್ಬರಿ 50 ಸಾವಿರ ರುಪಾಯಿ ಬಹುಮಾನ ಕೈ ತಪ್ಪಿತ್ತು ಎಂದು ರಾಜನ್ ನೆನಪಿಸಿಕೊಳ್ಳುತ್ತಾರೆ.
ಎರಡನೇ ಬಹುಮಾನ 5 ಕೋಟಿ ರುಪಾಯಿ
ಮೊದಲ ಬಹುಮಾನ 12 ಕೋಟಿ ರುಪಾಯಿಯಾದರೆ ಎರಡನೇ ಬಹುಮಾನ 5 ಕೋಟಿ ಎಂದು ಕೇರಳ ರಾಜ್ಯ ಲಾಟರಿ ಘೋಷಿಸಿದೆ. ಈ ಬಹುಮಾನದ ಮೊತ್ತವನ್ನು 10 ಮಂದಿ ವಿಜೇತರಿಗೆ ಸರಿಯಾಗಿ 50 ಲಕ್ಷ ರುಪಾಯಿಯಂತೆ ಹಂಚಿಕೆ ಮಾಡಲಾಗುತ್ತದೆ. ಇನ್ನು, ಮೂರನೇ ಬಹುಮಾನ 1 ಕೋಟಿ ರುಪಾಯಿ ಆಗಿದ್ದು, ಇದನ್ನು ತಲಾ 10 ಲಕ್ಷ ರುಪಾಯಿಯಂತೆ 10 ಮಂದಿ ವಿಜೇತರಿಗೆ ಹಂಚಿಕೆ ಮಾಡಲಾಗುತ್ತದೆ.