ಆರ್ ಬಿಐ ಕಾರ್ಯ ನಿರ್ವಹಣೆ ಬಗ್ಗೆ ಸಿಬಿಐ ವಿಚಾರಣೆ ಆಗಬೇಕು: ಸುಬ್ರಮಣಿಯನ್ ಸ್ವಾಮಿ
ಡಿಬಿಎಸ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಲಕ್ಷ್ಮೀ ವಿಲಾಸ್ ಬ್ಯಾಂಕ್ ವಿಲೀನ ಆಗುವುದನ್ನು ಸರ್ಕಾರ ತಡೆಯಬೇಕು ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಕಾರ್ಯ ನಿರ್ವಹಣೆ ಬಗ್ಗೆ ಸಿಬಿಐ ವಿಚಾರಣೆ ಆಗಬೇಕು ಎಂದು ರಾಜ್ಯ ಸಭಾ ಸಂಸದ ಹಾಗೂ ಬಿಜೆಪಿ ಸದಸ್ಯ ಸುಬ್ರಮಣಿಯನ್ ಸ್ವಾಮಿ ಕೇಳಿದ್ದಾರೆ.
ಪ್ರಧಾನ ಮಂತ್ರಿಗೆ ಪತ್ರ ಬರೆದಿರುವ ಅವರು, ಆರ್ ಬಿಐ ಕಾರ್ಯ ನಿರ್ವಹಣೆ ಬಗ್ಗೆ ಸಿಬಿಐ ತನಿಖೆಗೆ ಮನವಿ ಮಾಡುತ್ತೇನೆ, ಅದರಲ್ಲೂ ವಿಶೇಷವಾಗಿ ಯಾವುದೇ ಹೈ ಪ್ರೊಫೈಲ್ ಹಗರಣದಲ್ಲೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಯಾವ ಅಧಿಕಾರಿ, ಹುದ್ದೆಗೆ ಸಂಬಂಧಿಸಿದವರನ್ನು ವಿಚಾರಣೆ ನಡೆಸುವುದು ಅಗತ್ಯ ಎಂದು ಯಾವತ್ತೂ ಪರಿಗಣಿಸದಿರುವುದನ್ನು ಗಮನಿಸಬೇಕು ಎಂದಿದ್ದಾರೆ.
ಲಕ್ಷ್ಮಿ ವಿಲಾಸ್ ಬ್ಯಾಂಕ್ ಅನ್ನು ಡಿಬಿಎಸ್ ಇಂಡಿಯಾದೊಂದಿಗೆ ವಿಲೀನಗೊಳಿಸಲು ಕ್ಯಾಬಿನೆಟ್ ಅನುಮೋದನೆ
ಆರ್ ಬಿಐ ಕಾರ್ಯ ನಿರ್ವಹಣೆಯು ಸರ್ಕಾರದ ಆದ್ಯತೆ ಆಗಬೇಕು ಮತ್ತು ಈ ತನಿಖೆ ಪೂರ್ತಿ ಆಗುವ ತನಕ ಆರ್ ಬಿಐ ಗವರ್ನರ್ ಅನ್ನು ಅನಿರ್ದಿಷ್ಟಾವಧಿ ರಜೆ ಮೇಲೆ ಕಳುಹಿಸಬೇಕು. ಜತೆಗೆ ಆರ್ ಬಿಐ ಮಂಡಳಿ ಹಾಗೂ ಸಲಹಾ ಸಮಿತಿ ಪುನಾರಚನೆ ಆಗಬೇಕು ಎಂದು ಸ್ವಾಮಿ ಕೇಳಿದ್ದಾರೆ.
ಲಕ್ಷ್ಮೀವಿಲಾಸ್ ಬ್ಯಾಂಕ್ ಆಸ್ತಿಯನ್ನು ಸುಪರ್ದಿಗೆ ಪಡೆದ ಡಿಬಿಎಸ್ ಬಗ್ಗೆ ಫೊರೆನ್ಸಿಕ್ ಆಡಿಟ್ ಆಗಬೇಕು ಎಂಬ ಕಾರಣಕ್ಕೆ ಡಿಬಿಎಸ್ ನಲ್ಲಿ ಎಲ್ ವಿಬಿ ವಿಲೀನ ಆಗುವುದಕ್ಕೆ ತಡೆ ಹಾಕಬೇಕು. ಅಂತರರಾಷ್ಟ್ರೀಯ ಮಟ್ಟದಲ್ಲಿ ಡಿಬಿಎಸ್ ವಿರುದ್ಧ ಮಾಡಿರುವ ಆರೋಪದ ತನಿಖೆ ಆಗಬೇಕು. ಇನ್ನು ಅದರ ತಾಯ್ನಾಡಾದ ಸಿಂಗಾಪೂರದಲ್ಲಿ ಅಕ್ರಮ ಹಣ ವರ್ಗಾವಣೆ ಬಗ್ಗೆ ಆರೋಪಗಳಿವೆ ಎಂದಿದ್ದಾರೆ.
ಅಚ್ಚರಿ ಏನೆಂದರೆ, ಷೇರುದಾರರಿಗೆ ಆಕ್ಷೇಪಣೆ ಸಲ್ಲಿಸಲು ನವೆಂಬರ್ 20, 2020ರ ಕಾರ್ಯ ನಿರ್ವಹಣೆ ಅವಧಿಯೊಳಗೆ ಸಲ್ಲಿಸಲು ಕೇಳಲಾಗುತ್ತದೆ. ಆದರೆ ಪ್ರತಿಕ್ರಿಯೆ ದಾಖಲಿಸಲು 72 ಗಂಟೆಗಿಂತ ಕಡಿಮೆ ಸಮಯ ನೀಡಲಾಗಿದೆ ಎಂದು ಪತ್ರದಲ್ಲಿ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.