ಸಾರ್ವಜನಿಕ ಸೇವೆಯಲ್ಲಿರುವ ಚಾಲಕರಿಗೆ ತಲಾ 5 ಸಾವಿರ ರು. ಘೋಷಣೆ
ಕೊರೊನಾ ಆತಂಕಕ್ಕೆ ದೇಶದಾದ್ಯಂತ ಲಾಕ್ ಡೌನ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ದೆಹ;ಲಿಯಲ್ಲಿ ಸಾರ್ವಜನಿಕ ಸೇವೆಯ ವಾಹನಗಳನ್ನು ಚಲಾಯಿಸುವವರಿಗೆ ತಲಾ 5 ಸಾವಿರ ರುಪಾಯಿ ನೀಡುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ಘೋಷಣೆ ಮಾಡಿದ್ದಾರೆ.
ಲಾಕ್ ಡೌನ್ ಕಾರಣಕ್ಕೆ ಆಟೋರಿಕ್ಷಾ, ಇ ರಿಕ್ಷಾ ಚಾಲಕರು ಉಪವಾಸ ಇರುವಂತಾಗಿದೆ ಎಂದು ಹೇಳುತ್ತಿದ್ದಾರೆ ಎಂಬುದನ್ನು ಕೇಜ್ರಿವಾಲ್ ತಿಳಿಸಿದ್ದಾರೆ. "ಸಾರ್ವಜನಿಕ ವಾಹನಗಳನ್ನು ಚಲಾಯಿಸುವವರಿಗೆ ತಲಾ 5 ಸಾವಿರ ರುಪಾಯಿ ನೀಡಲಾಗುವುದು. ಇದಕ್ಕೆ 7ರಿಂದ 10 ದಿನ ಬೇಕಾಗುತ್ತದೆ. ಈ ಬಗ್ಗೆ ಯೋಜನೆ ರೂಪಿಸುತ್ತಿದ್ದೇವೆ" ಎಂದು ಅವರು ಹೇಳಿದ್ದಾರೆ.
ಸರ್ಕಾರದ ಬಳಿ ಈ ಚಾಲಕರ ಬ್ಯಾಂಕ್ ಖಾತೆ ಮಾಹಿತಿ ಇಲ್ಲ. ಇದಕ್ಕೆ ಸಮಯ ಹಿಡಿಯುತ್ತದೆ. ಈ ಚಾಲಕರ ಪಟ್ಟಿಯಲ್ಲಿ ಗ್ರಾಮೀಣ್ ಸೇವಾ ವಾಹನಗಳನ್ನು ಚಲಾಯಿಸುತ್ತಿರುವವರನ್ನು ಸೇರಿಸಲಾಗುತ್ತದೆ. ಸರ್ಕಾರದಿಂದ 37 ಸಾವಿರಕ್ಕೂ ಹೆಚ್ಚು ದಿನಗೂಲಿ ನೌಕರರಿಗೆ ಸಮಾನವಾದ ಮೊತ್ತ ನೀಡಲಾಗಿದೆ ಎಂದಿದ್ದಾರೆ.
ದೆಹಲಿ ಸರ್ಕಾರದಿಂದ ಆರು ಲಕ್ಷ ಮಂದಿಗೆ ಬುಧವಾರ ಎರಡು ಹೊತ್ತಿನ ಊಟದ ವ್ಯವಸ್ಥೆ ಮಾಡಲಾಗಿ ಎಂದು ಅವರು ತಿಳಿಸಿದ್ದಾರೆ. ಹತ್ತು ಲಕ್ಷ ಮಂದಿಗೆ ಊಟದ ವ್ಯವಸ್ಥೆ ಮಾಡಿದ್ದೇವೆ. ನಾವು ಸೂಕ್ತ ಸಿದ್ಧತೆ ಮಾಡಿಕೊಂಡಿದ್ದೇವೆ, ದೆಹಲಿಯಲ್ಲಿ ಯಾರೂ ಉಪವಾಸ ಮಲಗದಂತೆ ನೋಡಿಕೊಳ್ಳುತ್ತೇವೆ ಎಂದಿದ್ದಾರೆ.