ಅಪನಗದೀಕರಣ ಪ್ರಕರಣದಲ್ಲಿ ರು. 130.57 ಕೋಟಿಯ ಚರಾಸ್ತಿ, ಸ್ಥಿರಾಸ್ತಿ ಇ.ಡಿ. ವಶಕ್ಕೆ
ಅಪನಗದೀಕರಣ ಪ್ರಕರಣದಲ್ಲಿ ಹೈದರಾಬಾದ್ ಮೂಲದ ಮುಸದ್ದಿಲಾಲ್ ಜೆಮ್ಸ್ ಅಂಡ್ ಜ್ಯುವೆಲ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಇತರರಿಗೆ ಸೇರಿದ ರು. 130.57 ಕೋಟಿಯ ಚರಾಸ್ತಿ ಹಾಗೂ ಸ್ಥಿರಾಸ್ತಿಯನ್ನು ಸೋಮವಾರ ಜಾರಿ ನಿರ್ದೇಶನಾಲಯದಿಂದ (ಇ.ಡಿ.) ವಶಪಡಿಸಿಕೊಳ್ಳಲಾಗಿದೆ.
ಇ.ಡಿ.ಯಿಂದ ಅಧಿಕೃತವಾಗಿ ಹೇಳಿಕೆ ನೀಡಲಾಗಿದ್ದು, ಅಪನಗದೀಕರಣ ಹಗರಣ ಪ್ರಕರಣದಲ್ಲಿ ವಿವಿಧ ಜ್ಯುವೆಲ್ಲರ್ ಗಳು ಮತ್ತು ಇತರರ ಹೆಸರಿನಲ್ಲಿದ್ದ 41 ಸ್ಥಿರಾಸ್ತಿ ಒಳಗೊಂಡಂತೆ ರು. 130.57 ಕೋಟಿ ರುಪಾಯಿಯ ಆಸ್ತಿಯನ್ನು ಪ್ರಾವಿಷನಲಿ ಜಪ್ತಿ ಮಾಡಲಾಗಿದೆ. ಇದರಲ್ಲಿ ಸ್ಟಾಕ್ ಇನ್ ಟ್ರೇಡ್ ರು. 18.69 ಕೋಟಿ, ಷೇರು ಮಾರುಕಟ್ಟೆಯಲ್ಲಿ ಮಾಡಿದ್ದ ಹೂಡಿಕೆ 63 ಲಕ್ಷ ರುಪಾಯಿ ಕೂಡ ಇದೆ.
IL&FS ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇ.ಡಿ.ಯಿಂದ 452 ಕೋಟಿ ರು. ಆಸ್ತಿ ಮುಟ್ಟುಗೋಲು
ಮುಟ್ಟುಗೋಲು ಹಾಕಿಕೊಂಡಿದ್ದರಲ್ಲಿ ಚಿನ್ನದ ಆಭರಣ, ಚಿನ್ನದ ಗಟ್ಟಿ, ಒಡವೆಗಳು ವಶಪಡಿಸಿಕೊಳ್ಳಲಾಗಿದೆ. ಅದರ ಮೌಲ್ಯ 83.3 ಕೋಟಿ ರುಪಾಯಿ ಎಂದು ತಿಳಿಸಲಾಗಿದೆ. ತೆಲಂಗಾಣ ರಾಜ್ಯ ಪೊಲೀಸರು ಹೈದರಾಬಾದ್ ನ ಮುಸದ್ದಿಲಾಲ್ ಜೆಮ್ಸ್ ಅಂಡ್ ಜ್ಯುವೆಲ್ಸ್ ಪ್ರೈ. ಲಿಮಿಟೆಡ್ ಮತ್ತು ಇತರರ ವಿರುದ್ಧ ಎಫ್ ಐಆರ್ ದಾಖಲಿಸಿದ್ದರು. ಅದರ ಆಧಾರದಲ್ಲಿ ಇ.ಡಿ. ತನಿಖೆ ಶುರು ಮಾಡಿತ್ತು.
ತನಿಖೆ ಸಂದರ್ಭದಲ್ಲಿ ಗೊತ್ತಾಗಿದ್ದೇನೆಂದರೆ, ಮುಸದ್ದಿಲಾಲ್ ಜೆಮ್ಸ್ ಅಂಡ್ ಜ್ಯುವೆಲ್ಸ್ ಪ್ರೈ. ಲಿಮಿಟೆಡ್, ವೈಷ್ಣವಿ ಬುಲಿಯನ್ ಪ್ರೈ. ಲಿಮಿಟೆಡ್ ಅಂಡ್ ಮುಸದ್ದಿಲಾಲ್ ಜ್ಯುವೆಲ್ಲರ್ಸ್ ಪ್ರೈ. ಲಿಮಿಟೆಡ್ ನವೆಂಬರ್ 8, 2016ರ ಅಪನಗದೀಕರಣದ ನಂತರ ನಿಷೇಧಿತ 500 ಹಾಗೂ 1000 ರುಪಾಯಿ ನೋಟುಗಳ, ಒಟ್ಟು ಮೌಲ್ಯ 111 ಕೋಟಿ ರುಪಾಯಿಯಷ್ಟು ಬ್ಯಾಂಕ್ ಖಾತೆಯಲ್ಲಿ ಠೇವಣಿ ಮಾಡಿದ್ದರು.
ನಕಲಿ ನಗದು ರಸೀದಿಗಳನ್ನು ಸೃಷ್ಟಿಸಿದ್ದರು ಮತ್ತು ನವೆಂಬರ್ 8, 2016ರಂದು ಅಪನಗದೀಕರಣ ಘೋಷಣೆಯಾದ ಮೇಲೆ ರಾತ್ರಿ 8 ಎಂಟು ಗಂಟೆಯಿಂದ ಮಧ್ಯರಾತ್ರಿಯ ತನಕ ಆರು ಸಾವಿರ ಕಾಲ್ಪನಿಕ ಗ್ರಾಹಕರಿಗೆ ವಸ್ತುಗಳ ಮಾರಾಟ ಮಾಡಿರುವುದಾಗಿ ಇನ್ ವಾಯ್ಸ್ ತೋರಿಸಿದ್ದರು ಎಂದು ತಿಳಿಸಲಾಗಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ, 2002 (PMLA) ಅಡಿಯಲ್ಲಿ ಇ.ಡಿ. ವಿಚಾರಣೆ ಕೈಗೊಂಡಿತ್ತು. ಕಾಲ್ಪನಿಕ ಆದಾಯ ಮೂಲವನ್ನು ತೋರಿಸಿ, ದೊಡ್ಡ ಮೊತ್ತದ ನಗದು ಠೇವಣಿಯನ್ನು ಮಾಡಿದ್ದಕ್ಕೆ ಸಮರ್ಥಿಸಿಕೊಳ್ಳಲು ಕೈಲಾಶ್ ಚಂದ್ ಗುಪ್ತಾ ಮತ್ತು ಆತನ ಮಕ್ಕಳು ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಸಂಜಯ್ ಸರ್ದಾ ಸೇರಿ ನಕಲಿ ಇನ್ ವಾಯ್ಸ್ ಗಳನ್ನು ಸೃಷ್ಟಿಸಿದ್ದಾರೆ.
ಸಂಜಯ್ ಸರ್ದಾ ಸಲಹೆ ನೀಡಿ, 2 ಲಕ್ಷ ರುಪಾಯಿಗಿಂತ ಕಡಿಮೆ ದರಕ್ಕೆ ನಕಲಿ ಇನ್ ವಾಯ್ಸ್ ಸೃಷ್ಟಿಸಿದರೆ ಕೆವೈಸಿ ಸಾಕ್ಷ್ಯ ಅಥವಾ ಗ್ರಾಹಕರ PAN ಅಗತ್ಯ ಇಲ್ಲ ಎಂದಿದ್ದರು. ನಿಷೇಧಿತ ನೋಟು ಬದಲಿಸಿಕೊಳ್ಳುವುದರಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಸಹಾಯ ಮಾಡಿದ್ದು, ಅದಕ್ಕಾಗಿ ಭಾರೀ ಕಮಿಷನ್ ಪಡೆದಿದ್ದಾರೆ ಎಂದು ಇ.ಡಿ. ಹೇಳಿದೆ.
111 ಕೋಟಿ ರುಪಾಯಿ ಬ್ಯಾಂಕ್ ಗೆ ಠೇವಣಿ ಮಾಡಿದ ಮೇಲೆ ಆರೋಪಿಗಳು ಅದರಲ್ಲಿ ಬಹು ದೊಡ್ಡ ಮೊತ್ತದ ಭಾಗವನ್ನು ಚಿನ್ನದ ಗಟ್ಟಿ ಖರೀದಿಗೆ ಬಳಸಿ, ಈ ಹಗರಣದಲ್ಲಿ ಭಾಗಿಯಾದ ವಿವಿಧ ಜ್ಯುವೆಲ್ಲರ್ ಗಳಿಗೆ, ವ್ಯಕ್ತಿಗಳಿಗೆ ಹಾಗೂ ಸಂಸ್ಥೆಗಳಿಗೆ ವರ್ಗಾವಣೆ ಮಾಡಿದ್ದಾರೆ.