ಕೊರೊನಾವೈರಸ್ ಲಾಕ್ಡೌನ್ನಿಂದಾಗಿ ದೇಶದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟನ್ನು ತಗ್ಗಿಸಲು ಕೇಂದ್ರ ಸರ್ಕಾರ ಘೋಷಿಸಿರುವ 20 ಲಕ್ಷ ಕೋಟಿ ಪ್ಯಾಕೇಜ್ನ ಮೂರನೇ ಹಂತವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಪ್ರಕಟಿಸಿದ್ದಾರೆ.
ವಿಶೇಷ ಪ್ಯಾಕೇಜ್ನಲ್ಲಿ 11 ಉಪಕ್ರಮಗಳನ್ನು ಘೋಷಿಸಲಾಗಿದ್ದು, ಈ ಪೈಕಿ 8 ಅಂಶಗಳು ಮೂಲಸೌಕರ್ಯ, ಸರಕು ಸಾಗಣೆ ವ್ಯವಸ್ಥೆ ಅಭಿವೃದ್ಧಿಪಡಿಸಲು ಮೀಸಲಿಡಲಾಗಿದೆ. ಉಳಿತ ಮೂರು ಕ್ರಮಗಳು ಆಡಳಿತ ಮತ್ತು ಆಡಳಿತಾತ್ಮಕ ಸುಧಾರಣೆಗೆ ಸಂಬಂಧಿಸಿದ್ದಾಗಿದೆ.
ಕೃಷಿ ಮೂಲಸೌಕರ್ಯ ಅಭಿವೃದ್ಧಿಗೆ 1 ಲಕ್ಷ ಕೋಟಿ ರುಪಾಯಿ
ಕೇಂದ್ರ ಸರ್ಕಾರವು ಕೃಷಿ ಉತ್ಪನ್ನಗಳ ಮೂಲ ಸೌಕರ್ಯಕ್ಕಾಗಿ 1 ಲಕ್ಷ ಕೋಟಿ ಕೃಷಿ ಮೂಲಸೌಕರ್ಯ ನಿಧಿಗೆ ಮೀಸಲಿಡಲಾಗಿದೆ. ಲಾಕ್ಡೌನ್ ಅವಧಿಯಲ್ಲಿ ಹಾಲಿಗೆ ಬೇಡಿಕೆಯು 20 ರಿಂದ 25 ಪರ್ಸೆಂಟ್ರಷ್ಟು ಕಡಿಮೆಯಾಗಿದೆ. ಹಾಲು ಉತ್ಪಾದಕರಿಗೆ ಸಾಲದ ಮೇಲಿನ ಬಡ್ಡಿಯಲ್ಲಿ ಸರ್ಕಾರದಿಂದ 2 ಪರ್ಸೆಂಟ್ರಷ್ಟು ಪಾವತಿ ಮಾಡುವ ಹೊಸ ಯೋಜನೆ ರೂಪಿಸಲಾಗಿದೆ. ಇದರಿಂದ ಎರಡು ಕೋಟಿ ರೈತರಿಗೆ ಉಪಯೋಗವಾಗುವುದು.
ಕನಿಷ್ಟ ಬೆಂಬಲ ಬೆಲೆಗಾಗಿ 74,300 ಕೋಟಿ ರುಪಾಯಿ
ಅಗತ್ಯ ಉತ್ಪನ್ನಗಳ ಕಾಯ್ದೆಗೆ ತಿದ್ದುಪಡಿ ಮೂಲಕ ಉತ್ತಮ ಬೆಂಬಲ ಬೆಲೆ ನೀಡುವ ಪ್ರಯತ್ನ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಕನಿಷ್ಟ ಬೆಂಬಲ ಬೆಲೆಗಾಗಿ 74,300 ಕೋಟಿ ರುಪಾಯಿ ಮೀಸಲಿಡಲಾಗುವುದು. ಪಿಎಂ ಕಿಸಾನ್ ನಿಧಿಯಿಂದ 18,700 ಕೋಟಿ ವರ್ಗಾಯಿಸಲಾಗಿದೆ ಎಂದು ತಿಳಿಸಿದ್ದಾರೆ.
ಟೊಮ್ಯಾಟೊ, ಈರುಳ್ಳಿ, ಆಲೂಗೆಡ್ಡೆ ಬೆಳೆ ಸಾಗಣೆ, ಸಂಸ್ಕರಣೆಗೆ 500 ಕೋಟಿ ರುಪಾಯಿ ಮೀಸಲಿಡಲಾಗಿದೆ. ಇನ್ನೂ ಈ ಉತ್ಪನ್ನಗಳ ಸಾಗಾಣೆಗೆ 50 ಪರ್ಸೆಂಟ್ ಸಬ್ಸಿಡಿ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಜೊತೆಗೆ ಉಗ್ರಾಣದಲ್ಲಿ ಸಂಗ್ರಹಣಕ್ಕೂ ಸಬ್ಸಿಡಿ ನೀಡಲಾಗುವುದು.
ಕೃಷಿ ಮಾರುಕಟ್ಟೆಯಲ್ಲಿ ಸುಧಾರಣೆ
ಕೃಷಿ ಮಾರುಕಟ್ಟೆಯಲ್ಲಿ ಅಮೂಲಾಗ್ರ ಬದಲಾವಣೆ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಅಗತ್ಯ ವಸ್ತುಗಳನ್ನು ಸಂಗ್ರಹಿಸಲು ಸದ್ಯ ಯಾವುದೇ ಮಿತಿ ಇಲ್ಲ ಎಂದು ಹೇಳಿರುವ ಕೇಂದ್ರ ಸರ್ಕಾರ ಎಣ್ಣೆಕಾಳು, ಬೇಳೆಕಾಳು, ಆಲೂಗೆಡ್ಡೆ, ಈರುಳ್ಳಿ ಸಂಗ್ರಹಕ್ಕೆ ನಿರ್ಬಂಧ ರದ್ದುಪಡಿಸಲಾಗುವುದು ಎಂದು ತಿಳಿಸಿದೆ.
ರೈತರು ತಮಗಿಷ್ಟವಾದ ಮಾರುಕಟ್ಟೆಯಲ್ಲಿ ಬೆಳೆ ಮಾರಾಟ ಮಾಡುವ ಅವಕಾಶ ನೀಡಲಾಗವುದು ಎಂದು ಹೇಳಿರುವ ವಿತ್ತ ಸಚಿವೆ, ರೈತರು ಎಪಿಎಂಸಿಯಲ್ಲೇ ಮಾರಾಟ ಮಾಡಬೇಕೆಂಬ ನಿಯಮವಿಲ್ಲ. ಎಪಿಎಂಸಿಯಲ್ಲಿ ಪರವಾನಗಿ ಹೊಂದಿರುವವರು ಮಾತ್ರ ರೈತರಿಂದ ಉತ್ಪನ್ನ ಖರೀದಿಗೆ ಅವಕಾಶ ನೀಡಲಾಗುವುದು. ದಲ್ಲಾಳಿಗಳು ಬೇಕಾಬಿಟ್ಟಿ ಖರೀದಿಗೆ ಅವಕಾಶ ನೀಡಲಾಗುವುದಿಲ್ಲ ಎನ್ನಲಾಗಿದೆ.
ಜೊತೆಗೆ ಅಂತಾರಾಜ್ಯ ಮುಕ್ತ ಮಾರಾಟಕ್ಕೆ ಅವಕಾಶ ನೀಡುವುದರ ಜೊತೆಗೆ ಇ-ಟ್ರೇಡಿಂಗ್ ಮೂಲಕ ಕೃಷಿ ಉತ್ಪನ್ನ ಮಾರಾಟ ಮಾಡಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಡೇರಿ ಉತ್ಪನ್ನಗಳಿಗೆ ಗುಣಮಟ್ಟ ಹೆಚ್ಚಳಕ್ಕೆ 15 ಸಾವಿರ ಕೋಟಿ
ಹೈನುಗಾರಿಕೆ ಮೂಲಕಸೌಕರ್ಯ ಅಭಿವೃದ್ಧಿ ನಿಧಿಗೆ 15,000 ಕೋಟಿ ರುಪಾಯಿಯನ್ನು ಕೇಂದ್ರ ಸರ್ಕಾರ ಘೋಷಿಸಿದೆ. 53 ಕೋಟಿ ಜಾನುವಾರುಗಳಿಗೆ ಲಸಿಕೆ ಹಾಕಲಾಗುವುದು ಎಂದು ತಿಳಿಸಿರುವ ಸರ್ಕಾರವು ಹಾಲು ಮಾರಾಟಕ್ಕೂ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು ಎಂದು ತಿಳಿಸಿದೆ.
ಡೇರಿ ಉತ್ಪನ್ನಗಳಿಗೆ ಗುಣಮಟ್ಟ ಹೆಚ್ಚಳಕ್ಕೆ 15 ಸಾವಿರ ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ. ಪಶುಗಳ ರೋಗನಿರೋಧಕತೆ ಹೆಚ್ಚಿಸುವ ಲಸಿಕೆ ಹಾಕಲು 13,343 ಕೋಟಿ. 53 ಕೋಟಿ ಪಶುಗಳಿಗೆ ಲಸಿಕೆ ಗುರಿ ಹೊಂದಲಾಗಿದೆ. ಮಿಲ್ಕ್ ಪೌಡರ್, ಚೀಸ್, ಮೊದಲಾದ ಡೇರಿ ಉತ್ಪನ್ನಗಳ ಗುಣಮಟ್ಟಕ್ಕೆ ಒತ್ತು.
ಕರ್ನಾಟಕದ ರಾಗಿ ಗ್ಲೋಬಲ್ ಬ್ರ್ಯಾಂಡಿಂಗ್
ಕರ್ನಾಟಕದ ರಾಗಿ ಬೆಳೆಗೆ ಗ್ಲೋಬಲ್ ಬ್ರ್ಯಾಂಡಿಂಗ್ ಸೃಷ್ಟಿಸಲಾಗುವುದು ಎಂದು ಹೇಳಿರುವ ಸರ್ಕಾರ, ಸಾವಯವ ಪದ್ದತಿಯಲ್ಲಿ ರಾಗಿ ಬೆಳೆಯಲು ಪ್ರೋತ್ಸಾಹ ನೀಡಲಾಗುವುದು ಎಂದು ತಿಳಿಸಿದೆ. ಬ್ಯಾಂಡಿಂಗ್ ಮೂಲಕವೇ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಕೇಂದ್ರ ಸರಕಾರ ಕ್ರಮ ಕೈಗೊಳ್ಳಲಿದೆ. ಜೊತೆಗೆ ಗಿಡಮೂಲಿಕೆ ಕೃಷಿ ಉತ್ತೇಜನಕ್ಕೆ 4,000 ಕೋಟಿ ರುಪಾಯಿ ಮೀಸಲಿಡಲಾಗಿದೆ.
ಮೀನುಗಾರಿಕೆಗೆ 20 ಸಾವಿರ ಕೋಟಿ ರುಪಾಯಿ
ಪಿಎಂ ಮತ್ಸ್ಯ ಸಂಪದ ಯೋಜನೆಯಡಿ 55 ಲಕ್ಷ ಜನರಿಗೆ ಉದ್ಯೋಗ ನೀಡುವ ನಿರೀಕ್ಷೆಯಿದ್ದು, ಮುಂದಿನ ಐದು ವರ್ಷಗಳಲ್ಲಿ 70 ಲಕ್ಷ ಟನ್ ಮೀನು ಉತ್ಪಾದನೆಯ ಹೆಚ್ಚಳ ನಿರೀಕ್ಷಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಜೊತೆಗೆ ಹೊಸ ಬೋಟ್ ಖರೀದಿಸಲು ಮೀನುಗಾರರಿಗೆ ಸಾಲ ನೀಡಲಾಗುವುದು ಎಂದು ತಿಳಿಸಿದೆ.
ಜೇನು ಸಾಕಾಣೆಗೆ 500 ಕೋಟಿ ರುಪಾಯಿ ಮೀಸಲು
ಜೇನು ಸಾಕಾಣೆಗೆ 500 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಇದರಿಂದ 2 ಲಕ್ಷ ಜೇನು ಉತ್ಪಾದಕರಿಗೆ ಅನುಕೂಲವಾಗಲಿದ್ದು, ಅವರ ಆದಾಯ ಹೆಚ್ಚಿಗೆ ನಿರೀಕ್ಷಿಸಲಾಗಿದೆ. ಜೊತೆಗೆ ಜೇನಿನಿಂದ ಉತ್ಪಾದನೆಯಾಗುವ ಮೇಣ ರಫ್ತು ಕಡಿತಕ್ಕೆ ಪ್ರಯತ್ನ ಮಾಡಲಾಗುವುದು ಎಂದು ಹೇಳಲಾಗಿದೆ.


Click it and Unblock the Notifications