14 ಖಾರಿಫ್ ಬೆಳೆಗೆ ಬೆಂಬಲ ಬೆಲೆ ಏರಿಕೆ ಮಾಡಿದ ಕೇಂದ್ರ ಸರ್ಕಾರ
ಕೇಂದ್ರ ಸಚಿವ ಸಂಪುಟವು ಹದಿನಾಲ್ಕು ಖಾರಿಫ್ ಬೆಳೆಗೆ ಕನಿಷ್ಠ ಬೆಂಬಲ ಬೆಲೆ (MSP) ಏರಿಕೆ ಮಾಡಲು ಒಪ್ಪಿಗೆ ನೀಡಿದೆ. ಸಂಪುಟ ಸಭೆಯ ಬಗ್ಗೆ ಮಾಹಿತಿ ನೀಡಿದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಪರಿಷ್ಕೃತ ಬೆಲೆಯಿಂದಾಗಿ ರೈತರಿಗೆ ವೆಚ್ಚಕ್ಕಿಂತ 50ರಿಂದ 83 ಪರ್ಸೆಂಟ್ ಹೆಚ್ಚು ದೊರೆಯುತ್ತದೆ ಎಂದು ಹೇಳಿದ್ದಾರೆ.
ಭತ್ತ ಮತ್ತು ಜೋಳದ ಕನಿಷ್ಠ ಬೆಂಬಲ ಬೆಲೆ 50 ಪರ್ಸೆಂಟ್ ಏರಿಕೆ ಮಾಡಲಾಗಿದೆ. ಹತ್ತಿ ಕ್ವಿಂಟಲ್ ಗೆ 5,515 ನಿಗದಿ ಮಾಡಿದ್ದರೆ, ರಾಗಿ, ಹೆಸರು ಮತ್ತು ಕಡ್ಲೇಕಾಯಿ ಬೆಲೆಯನ್ನು ಶೇಕಡಾ 50ರಷ್ಟು ಏರಿಕೆ ಮಾಡಲಾಗಿದೆ. ಇದೇ ವೇಳೆ ಕೃಷಿ ಹಾಗೂ ಕೃಷಿ ಸಂಬಂಧಿತ ಅಲ್ಪಾವಧಿ ಸಾಲದ (3 ಲಕ್ಷ ರುಪಾಯಿಯೊಳಗೆ) ಮರುಪಾವತಿಗೆ ಆಗಸ್ಟ್ 31, 2020ರ ತನಕ ಅವಧಿ ವಿಸ್ತರಣೆ ಮಾಡಲಾಗಿದೆ.
ಮಾರ್ಚ್ 1ರಿಂದ ಆಗಸ್ಟ್ 31, 2020ರ ಮಧ್ಯೆ 2 ಪರ್ಸೆಂಟ್ ಬಡ್ಡಿ ವಿನಾಯಿತಿ (IS) ಹಾಗೂ ಪ್ರಾಮಾಣಿಕ ಮರುಪಾವತಿ ಪ್ರೋತ್ಸಾಹವಾಗಿ 3 ಪರ್ಸೆಂಟ್ ರೈತರಿಗೆ ದೊರೆಯಲಿದೆ. ಈ ಹಿಂದೆ ಗಡುವನ್ನು ಮೇ 31ರ ತನಕ ವಿಸ್ತರಣೆ ಮಾಡಲಾಗಿತ್ತು. ಇನ್ನು ಸರ್ಕಾರದಿಂದ ಬ್ಯಾಂಕ್ ಗಳ ಮೂಲಕ ರೈತರಿಗೆ ಮೂರು ಲಕ್ಷದ ತನಕ ವಾರ್ಷಿಕ ನಾಲ್ಕು ಪರ್ಸೆಂಟ್ ಬಡ್ಡಿ ದರದಲ್ಲಿ ಸಾಲ ದೊರೆಯುವುದು ಮುಂದುವರಿಯಲಿದೆ.