ಯಾವಾಗ, ಎಷ್ಟು ಹಣ ನೀಡಬೇಕು ಸರ್ಕಾರಕ್ಕೆ ಗೊತ್ತಿದೆ: ರಜನಿ ಸ್ಟೈಲ್ ನಿರ್ಮಲಾ ಡೈಲಾಗ್
"ಸರ್ಕಾರವು ಮುಕ್ತ ಮನಸ್ಥಿತಿಯಲ್ಲಿದೆ. ಯಾವಾಗ ಖರ್ಚು ಮಾಡಬೇಕು ಹಾಗೂ ಎಷ್ಟು ಖರ್ಚು ಮಾಡಬೇಕು ಎಂಬುದನ್ನು ಸರಿಯಾದ ಸಮಯಕ್ಕೆ ನಿರ್ಧಾರ ತೆಗೆದುಕೊಳ್ಳುತ್ತೇವೆ," ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಿಜಿನೆಸ್ ಸ್ಟ್ಯಾಂಡರ್ಡ್ ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದಿಂದ ಆರ್ಥಿಕ ಪ್ಯಾಕೇಜ್ ನೀಡಲು ಸಾಧ್ಯವಾಗುತ್ತಿಲ್ಲ, ಬೇಡಿಕೆಗೆ ಮತ್ತೆ ಜೀವ ನೀಡಲು ಹಾಗೂ ಗ್ರಾಹಕರು ಖರ್ಚು ಮಾಡುವುದನ್ನು ಹೆಚ್ಚಿಸಲು ಆಗುತ್ತಿಲ್ಲ ಎಂಬ ಟೀಕೆಯನ್ನು ಅವರು ಅಲ್ಲಗಳೆದು, ಮೇಲ್ಕಂಡಂತೆ ಉತ್ತರ ನೀಡಿದರು. ಸಂದರ್ಶನದ ವೇಳೆ ಅವರು ಮಾತನಾಡಿದ ಪ್ರಮುಖ ಅಂಶಗಳು ಹೀಗಿವೆ:
* ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲೂ ಆರ್ಥಿಕ ಚೇತರಿಕೆ "ತೇಪೆ" ಹಚ್ಚಿದಂತೆ ಇರುತ್ತದೆ. ಇಂಥ ಸಂದರ್ಭದಲ್ಲೇ ಸ್ಥಿರತೆ ಬರುತ್ತದೆ ಎಂದು ಖಡಾಖಂಡಿತವಾಗಿ ಹೇಳುವುದು ಕಷ್ಟ.
ಹೆಲಿಕಾಪ್ಟರ್ ಮನಿಯಿಂದ ಆರ್ಥಿಕ ಚೇತರಿಕೆ ತನಕ ನಿರ್ಮಲಾ ಸೀತಾರಾಮನ್ ಹೇಳಿದ್ದೇನು?
* ಈಗಿನ ಸಮಸ್ಯೆಯ ಗಾಢತೆ ತುಂಬ ವಿಶಿಷ್ಟವಾದದ್ದು. ಎಲ್ಲರ ಜತೆ ಸರ್ಕಾರವು ತೊಡಗಿಕೊಂಡಿದೆ. ಆದರೂ ಪ್ರಸ್ತುತ ಸನ್ನಿವೇಶದಲ್ಲಿ ಹೆಚ್ಚುವರಿ ಹಣಕಾಸು ಬೆಂಬದ ಬಗ್ಗೆ ಯಾವುದೇ ಸ್ಥಿರವಾದ ಮೌಲ್ಯಮಾಪನ ಮಾಡಲ್ಲ.
* ಪ್ರಧಾನಿ ನರೇಂದ್ರ ಮೋದಿ ಅವರ ನಿರ್ದೇಶನದಂತೆ, ಈಗಿನ ಬಿಕ್ಕಟ್ಟಿನ ಸಂದರ್ಭವನ್ನು ಸರ್ಕಾರವು ಅವಕಾಶವನ್ನಾಗಿ ಬದಲಾಯಿಸುತ್ತಿದೆ. ಕಾರ್ಮಿಕ, ಕೃಷಿ, ಬ್ಯಾಂಕಿಂಗ್ ವಲಯದಲ್ಲಿ ಹಲವು ವ್ಯವಸ್ಥಿತ ಸುಧಾರಣೆ ಮಾಡಲಾಗುತ್ತಿದೆ. ರೇಷನ್ ಕಾರ್ಡ್, ವಿದ್ಯುತ್ ಮುಂತಾದವನ್ನು ಡಿಕಿಟೈಸ್ ಮಾಡಲಾಗುತ್ತಿದೆ. ಏನೋ ಕೆಲವು ನೆರವು ನೀಡುವಂಥದ್ದನ್ನು ಸುಲಭವಾಗಿ ಆರಿಸಿಕೊಳ್ಳಬಹುದಿತ್ತು ಮತ್ತು ಏನೂ ಮಾಡದೇ ಇರಬಹುದಿತ್ತ. ಆದರೆ ನಾವು ಗಂಭೀರವಾದ ಸುಧಾರಣೆಗಳನ್ನು ಕೈಗೆತ್ತಿಕೊಂಡೆವು.
* ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೇವಲ ಹಣದುಬ್ಬರವನ್ನು ನಿಗಾ ಮಾಡುವುದಕ್ಕಷ್ಟೇ ಸೀಮಿತ ಆಗದೆ ಈಗಿನ ಕಠಿಣ ಪರಿಸ್ಥಿತಿಗೆ ಪರಿಹಾರ ಕಂಡುಕೊಳ್ಳಲು ನೆರವಾಗಿದ್ದರಿಂದ ಅದಕ್ಕೆ ಆಭಾರಿ ಆಗಿದ್ದೇನೆ.
* ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮೇಲೆ ಭಾರೀ ಹೊರೆ ಹೊರಿಸಲಾಗಿದೆ ಎಂದು ಕೆಲವರು ಟೀಕಿಸುತ್ತಿದ್ದಾರೆ. ಆ ಮಾತನ್ನು ನಾನು ಒಪ್ಪುವುದಿಲ್ಲ. ಒಬ್ಬೊಬ್ಬರದು ಒಂದೊಂದು ಬಗೆಯ ಕಾರ್ಯ ವೈಖರಿ ಇರುತ್ತದೆ.
* ಅಮ್ನೆಸ್ಟಿ ಇಂಟರ್ ನ್ಯಾಷನಲ್ ಭಾರತದಲ್ಲಿ ಕಾರ್ಯ ನಿರ್ವಹಣೆ ನಿಲ್ಲಿಸುತ್ತಿರುವುದಕ್ಕೆ ಸರ್ಕಾರವನ್ನು ದೂಷಿಸಿದೆ. ಆದರೆ ಅವರು ಮತ್ತೆ ಮತ್ತೆ ತಪ್ಪುಗಳನ್ನು ಮಾಡಿದ್ದಾರೆ. ಯುಪಿಎ ಸರ್ಕಾರ 2009ರಲ್ಲೇ ಅವರ ಪರ್ಮಿಟ್ ಹಿಂಪಡೆಯಬೇಕು ಎಂದು ನಿರ್ಧರಿಸಿತ್ತು. ಆದರೆ ಈಗೇಕೆ ಅಷ್ಟು ಜೋರು ಧ್ವನಿ? ಈ ಸರ್ಕಾರವು ನಾಗರಿಕ ಸಮಾಜದ ವಿರುದ್ಧವಾಗಿಲ್ಲ. ವಾಸ್ತವ ಏನೆಂದರೆ, ನಮ್ಮ ದೇಶದಲ್ಲಿ ಶಾಲೆಗಳಿಗಿಂತ ಎನ್ ಜಿಒಗಳು ಜಾಸ್ತಿ ಇವೆ.
* ಇಎಂಐ ವಿನಾಯಿತಿಯ ಬಡ್ಡಿಯ ಬಗ್ಗೆ ಹೇಳಬೇಕೆಂದರೆ, ಕೊರೊನಾ ಸಂದರ್ಭದಲ್ಲಿ ಬ್ಯಾಂಕ್ ಗಳ ಮೇಲೂ ಪ್ರಭಾವ ಆಗಿದೆ. ಗ್ರಾಹಕರು ಕಷ್ಟಕ್ಕೆ ಈಡಾದರೆ ಬ್ಯಾಂಕ್ ಸಹ ಅದೇ ದಾರಿ ಹಿಡಿಯುತ್ತದೆ. ಇದು ತುಂಬ ಸಂಕೀರ್ಣವಾದ ಸಮಸ್ಯೆ. ಇನ್ನು ಈ ವಿಚಾರದಲ್ಲಿ ಬಡ್ಡಿ ಪರಿಹಾರಕ್ಕೆ ಯಾವುದೇ ಆದಾಯದ ಮಿತಿ ಹಾಕುವ ಪ್ರಸ್ತಾವ ಸರ್ಕಾರದ ಮುಂದಿಲ್ಲ.