ಹನುಮಾನ್ ಜಯಂತಿಯ ಶುಭಾಶಯ: ಎಲ್ಲರಿಗೂ ಗುಡ್ರಿಟರ್ನ್ಸ್ ಕನ್ನಡ ವತಿಯಿಂದ ಹನುಮಾನ್ ಜಯಂತಿಯ ಶುಭಾಶ. ಶ್ರೀರಾಮನ ಭಂಟ ಹನುಮ ಹುಟ್ಟಿದ ದಿನವನ್ನು ಹನುಮಾನ್ ಜಯಂತಿಯನ್ನಾಗಿ ಇಡೀ ದೇಶವೇ ಸಂಭ್ರಮದಿಂದ ಆಚರಿಸುತ್ತದೆ. ಭಾರತದ ಸಂಸ್ಕೃತಿ ಮತ್ತು ಭಕ್ತಿಯ ಪವಿತ್ರ ನಿಟ್ಟಿನಲ್ಲಿ, ಹನುಮಾನ್ ಜಯಂತಿ ಎಂಬುದು ಅಪಾರ ಭಕ್ತಿಭಾವದಿಂದ ಕೂಡಿದ ಪರ್ವ. ಶಕ್ತಿ, ಬುದ್ಧಿ ಮತ್ತು ಭಕ್ತಿಯ ದೈವಸ್ವರೂಪನಾದ ಹನುಮಂತನ ಜನ್ಮದಿನವನ್ನಾಗಿ ಈ ದಿನವನ್ನು ಭಕ್ತರು ಆಚರಿಸುತ್ತಾರೆ. ಆದರೆ ಈ ಹನುಮಾನ್ ಜಯಂತಿಯನ್ನು ಭಾರತದಲ್ಲಿ ವರ್ಷಕ್ಕೆ ಎರಡೆರಡು ಬಾರಿ ಆಚರಣೆ ಮಾಡುತ್ತಾರೆ. ಅದು ಯಾಕೆ ಅನ್ನೋ ಗೊಂದಲ ಎಷ್ಟೋ ಜನಕ್ಕಿದೆ. ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಯಾಕೆ ಎರಡು ಬಾರಿ ಹನುಮಾನ್ ಜಯಂತಿ?
ಸಾಮಾನ್ಯವಾಗಿ ಉತ್ತರ ಭಾರತದ ಭಕ್ತರು ಹನುಮಾನ್ ಜಯಂತಿಯನ್ನು ಚೈತ್ರ ಮಾಸದ ಪೂರ್ಣಿಮೆಯಂದು..ಅಂದರೆ ಮಾರ್ಚ್-ಏಪ್ರಿಲ್ ಮಧ್ಯೆ ಆಚರಿಸುತ್ತಾರೆ. ಈ ದಿನವೇ ಅಂಜನಾ ಮತ್ತು ಕೇಸರಿಗೆ ವಾಯು ದೇವರ ಆಶೀರ್ವಾದದಿಂದ ಹನುಮಂತನು ಜನಿಸಿದ್ದನೆಂದು ಅಲ್ಲಿನ ನಂಬಿಕೆ. ಈ ಆವೃತ್ತಿಯು ಭಾರತೀಯ ಕಾಲಚಕ್ರದಲ್ಲಿ ಬಹಳ ಪ್ರಸಿದ್ಧವಾಗಿದೆ ಮತ್ತು ಸಾವಿರಾರು ಮಂದಿಗೆ ಪರಿಚಿತವೂ ಆಗಿದೆ.
ಆದರೆ ದಕ್ಷಿಣ ಭಾರತದ ಹಲವು ರಾಜ್ಯಗಳಲ್ಲಿ ತಮಿಳುನಾಡು, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರ ಪ್ರದೇಶ ಹನುಮಂತನ ಜನ್ಮದಿನವನ್ನು ಮಾರ್ಗಶೀರ್ಷ ಮಾಸದಲ್ಲಿ...ಡಿಸೆಂಬರ್-ಜನವರಿ ಸಮಯದಲ್ಲಿ ಆಚರಿಸುತ್ತಾರೆ. ಈ ಭಾಗಗಳಲ್ಲಿ 'ಆಂಜನೇಯ ಜಯಂತಿ' ಎಂಬ ಹೆಸರಿನಲ್ಲಿ ಈ ದಿನ ಆಚರಣೆಗೊಳ್ಳುತ್ತದೆ. ವಿಶೇಷವೆಂದರೆ, ಇಲ್ಲಿ ಭಕ್ತರು ಈ ದಿನದ ತನಕ 41 ದಿನಗಳ ದೀಕ್ಷೆಯನ್ನು ನಿರಂತರ ಅನುಸರಿಸುತ್ತಾರೆ.
ಈ ಭಿನ್ನತೆಯ ಹಿಂದಿರುವ ಪುರಾತನ ಮೂಲಗಳು:
ಚೈತ್ರ ಹಾಗೂ ಮಾರ್ಗಶೀರ್ಷ ಹನುಮಾನ್ ಜಯಂತಿಗಳ ಈ ವ್ಯತ್ಯಾಸವು ಪ್ರಾಚೀನ ಪುರಾಣಗಳಲ್ಲಿ ಬರುವ ವಿವರಣೆಗಳ ಆಧಾರವಾಗಿದೆ. ಕೆಲವು ಶಾಸ್ತ್ರಗಳು ಹನುಮಂತನ ಜನನವನ್ನು ಚೈತ್ರ ಮಾಸಕ್ಕೆ ಸಂಬಂಧಿಸಿದಂತೆ ಉಲ್ಲೇಖಿಸುತ್ತವೆ, ಇನ್ನು ಕೆಲವು ಮಾರ್ಗಶೀರ್ಷ ಮಾಸದ ವೇಳೆ ಎಂದು ವಿವರಿಸುತ್ತವೆ. ಕಾಲಾಂತರದಲ್ಲಿ ಈ ವ್ಯಾಖ್ಯಾನಗಳು ಪ್ರಾದೇಶಿಕ ಸಂಪ್ರದಾಯಗಳಾಗಿ ರೂಪುಗೊಂಡು, ಇಂದು ಇಬ್ಬರು ಭಕ್ತರೂ ಸಹ ಸಮಾನ ಗೌರವದಿಂದ ತಮ್ಮ-ತಮ್ಮ ಕಾಲಪ್ರಕಾರ ಆಚರಿಸುತ್ತಿದ್ದಾರೆ.
ಆಚರಣೆ ಮಾತ್ರವಲ್ಲ, ಭಾವನೆಯ ಶುದ್ಧತೆ ಮುಖ್ಯ:
ದಿನಾಂಕವಲ್ಲದೆ, ಹನುಮಾನ್ ಜಯಂತಿಯ ಆಚರಣೆಗೆ ಸಂಬಂಧಿಸಿದ ತಾತ್ವಿಕ ಭಾವನೆ ಎಲ್ಲೆಡೆ ಒಂದೇ ರೀತಿಯದ್ದು. ಭಕ್ತರು ಹನುಮಾನ್ ಚಾಲೀಸಾ ಪಠಿಸುತ್ತಾರೆ, ವಿಶೇಷ ಪೂಜೆಗಳನ್ನು ನೆರವೇರಿಸುತ್ತಾರೆ ಮತ್ತು ಹನುಮಂತನ ಗುಣಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಈ ಸಂದರ್ಭದಲ್ಲಿ ದೇವಾಲಯಗಳಲ್ಲಿ ವಿಶೇಷ ಅಭಿಷೇಕ, ಹೋಮ, ಸತ್ಸಂಗ ಇತ್ಯಾದಿಗಳ ಮೂಲಕ ದೇವನನ್ನು ಸ್ಮರಿಸಲಾಗುತ್ತದೆ.
ಹನುಮಂತನು ಶಕ್ತಿಯ ಸಂಕೇತ ಮಾತ್ರವಲ್ಲ; ಭಕ್ತಿ, ಧೈರ್ಯ, ನಿಷ್ಠೆ ಮತ್ತು ನಮ್ರತೆಯ ಮೂರ್ತಿಯೂ ಹೌದು. ಅವರ ಜೀವನ ಸಾರವನ್ನು ನೆನೆಸಿಕೊಳ್ಳುವ ಈ ಪವಿತ್ರ ದಿನ, ಭಕ್ತರನ್ನು ನೈತಿಕ ದೃಷ್ಟಿಯಿಂದ ಉನ್ನತ ಮಟ್ಟಕ್ಕೆ ಎತ್ತುವ ಒಂದು ಅವಕಾಶವಾಗಿರುತ್ತದೆ.
ಇಂತಹ ಪವಿತ್ರ ಹಬ್ಬವನ್ನು ಯಾವ ತಿಥಿಯಂದು ಆಚರಿಸಬೇಕು ಎಂಬುದರಲ್ಲಿ ಪ್ರಾದೇಶಿಕ ವ್ಯತ್ಯಾಸಗಳು ಇದ್ದರೂ, ಭಕ್ತರ ನಂಬಿಕೆ, ಶ್ರದ್ಧೆ ಮತ್ತು ಭಾವನೆ ಮಾತ್ರ ಒಂದೇ..ಭಗವಾನ್ ಹನುಮಂತನಿಗೆ ನಿಸ್ವಾರ್ಥ ಭಕ್ತಿ ಸಲ್ಲಿಸುವುದು. ಭಾರತದಲ್ಲಿ ಹನುಮನ ಜಪ ನಿತ್ಯ..ನಿರಂತರ. ಏನೇ ಬದಲಾದರೂ ರಾಮ ನಾಮ ಸ್ಮರಿಸುವವರೆಗೂ ಹನುಮನನ್ನು ಸ್ಮರಿಸುತ್ತಲೇ ಇರುತ್ತೇವೆ. ಹನುಮಾನ್ ಜಯಂತಿಯ ಸನ್ನಿವೇಶದಲ್ಲಿ ನಾವು ಶ್ರೀ ರಾಮನ ಭಕ್ತನಾದ ಹನುಮಂತನ ಧೈರ್ಯ, ಶಕ್ತಿ ಮತ್ತು ಆತ್ಮಸಮರ್ಪಣೆಯ ಗುಣಗಳನ್ನು ಮನನ ಮಾಡಿಕೊಳ್ಳಬೇಕು.


Click it and Unblock the Notifications