ನಿರ್ಮಲಾ ಸೀತಾರಾಮನ್ ಘೋಷಣೆಯ ಪ್ರಮುಖಾಂಶಗಳು
ಆತ್ಮ ನಿರ್ಭರ್ ಭಾರತ್ ಪ್ಯಾಕೇಜ್ 20 ಲಕ್ಷ ಕೋಟಿ ರುಪಾಯಿಯ ಕೊನೆ ಕಂತು ಭಾನುವಾರ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿದ್ದು, ನರೇಗಾ, ಆರೋಗ್ಯರಕ್ಷಣೆ ಮತ್ತು ಶಿಕ್ಷಣ, ಕೋವಿಡ್ ಸಂದರ್ಭದಲ್ಲಿ ವ್ಯಾಪಾರ, ಕಂಪೆನಿ ಕಾಯ್ದೆಯಲ್ಲಿ ಶಿಕ್ಷೆಯನ್ನು (ಡಿಕ್ರಿಮಿನಲೈಸೇಷನ್) ರದ್ದು ಮಾಡುವುದು, ವ್ಯಾಪಾರ ಮಾಡುವುದು ಸರಳ ಮಾಡುವುದು, ಪಿಎಸ್ ಯು ಹಾಗೂ ರಾಜ್ಯ ಸರ್ಕಾರ ನೀತಿಗಳು ಮತ್ತು ಸಂಪನ್ಮೂಲಕ್ಕೆ ಸಂಬಂಧಿಸಿದಂತೆ 7 ಪ್ರಮುಖ ವಿಚಾರ ಪ್ರಸ್ತಾವ ಮಾಡಿದ್ದಾರೆ.
ಅವರ ಘೋಷಣೆಗಳ ಪ್ರಮುಖಾಂಶಗಳು ಹೀಗಿವೆ:
* ಬಜೆಟ್ ನಲ್ಲಿ ಮೀಸಲಿಟ್ಟಿದ್ದ ಮೊತ್ತಕ್ಕಿಂತ 40 ಸಾವಿರ ಕೋಟಿ ರುಪಾಯಿಯನ್ನು ನರೇಗಾ ಯೋಜನೆಗೆ ಎತ್ತಿಡಲು ತೀರ್ಮಾನ
* ಟಯರ್ ಎರಡು ಮತ್ತು ಟಯರ್ ಮೂರನೇ ನಗರಗಳಲ್ಲಿ ಬ್ಲಾಕ್ ಆರೋಗ್ಯ ಕೇಂದ್ರಗಳು. ಡಯಾಗ್ನೋಸ್ಟಿಕ್, ಪರೀಕ್ಷೆ ಲ್ಯಾಬ್ ಹಾಗೂ ಆಸ್ಪತ್ರೆಗಳು ಆರಂಭ.
* ಪಿಎಂ ಇ- ವಿದ್ಯಾ ಕಾರ್ಯಕ್ರಮ ಆರಂಭ. ಒಂದರಿಂದ ಹನ್ನೆರಡನೇ ತರಗತಿ ತನಕ ಪ್ರತಿ ತರಗತಿಗೆ ಒಂದೊಂದು ಚಾನೆಲ್ ಆರಂಭ. ಕಣ್ಣಿನ ಸಮಸ್ಯೆ ಇರುವವರಿಗೆ ಇ - ಕಂಟೆಂಟ್. ಮಕ್ಕಳಿಗೆ ಮಾನಸಿಕ ಸಮಸ್ಯೆ ಆಗದಂತೆ ಮನು ದರ್ಪಣ್ ಬೆಂಬಲ. ಇದರಿಂದ ಕುಟುಂಬಗಳು, ಶಿಕ್ಷಕರಿಗೂ ಅನುಕೂಲ.
* ಕೊರೊನಾ ಕಾರಣಕ್ಕೆ ಸಾಲ ಬಾಕಿ ಉಳಿಸಿಕೊಂಡಿರುವ ಕಂಪೆನಿಗಳನ್ನು ಸುಸ್ತಿದಾರರು ಎಂದು ಪರಿಗಣಿಸುವುದಿಲ್ಲ. ಮುಂದಿನ ಒಂದು ವರ್ಷದ ತನಕ ಯಾವುದೇ ಹೊಸ ದಿವಾಳಿ ಕಲಾಪಗಳನ್ನು ನಡೆಸಲ್ಲ. ಎಂಎಸ್ ಎಂಇಗಳಿಗೆ ವಿಶೇಷ ದಿವಾಳಿ ನಿಯಮ ರೂಪಿಸಲಾಗುತ್ತದೆ. ಎಂಎಸ್ ಎಂಇಗಳಿಗೆ ಈಗಿರುವ ದಿವಾಳಿ ಮೊತ್ತದ ಮಿತಿ 1 ಲಕ್ಷ ರುಪಾಯಿಯನ್ನು 1 ಕೋಟಿಗೆ ಏರಿಸಲಾಗುತ್ತದೆ.
* ವ್ಯಾಪಾರ ಮಾಡುವುದಕ್ಕೆ ಅನುಕೂಲವಾದ ವಾತಾವರಣ ನಿರ್ಮಾಣಕ್ಕೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಲಾಗುವುದು.
* ಭಾರತದ ಸಾರ್ವಜನಿಕ ವಲಯದ ಕಂಪೆನಿಗಳ ಸೆಕ್ಯೂರಿಟೀಸ್ ಗಳನ್ನು ನೇರವಾಗಿ ವಿದೇಶಗಳಲ್ಲಿ ಲಿಸ್ಟ್ ಮಾಡಬಹುದು. ಸಾರ್ವಜನಿಕ ಸಂಸ್ಥೆಗಳಿಗೆ ಇದಕ್ಕಾಗಿಯೇ ನೀತಿಯೊಂದು ಬರಲಿದೆ. ಇದೇ ರೀತಿ ಖಾಸಗಿ ಕಂಪೆನಿಗಳು ಸಹ ಭಾಗವಹಿಸುವುದಕ್ಕೆ ಅಧಿಸೂಚನೆ ಹೊರಡಿಸಲಾಗುತ್ತದೆ.
* ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣ ಮಾಡಲಾಗುತ್ತದೆ. ಈ ಸಂಖ್ಯೆ ಒಂದರಿಂದ ನಾಲ್ಕಕ್ಕೆ ಇಳಿಯುತ್ತದೆ. ಉಳಿದವು ಖಾಸಗೀಕರಣ ಮಾಡಲಾಗುತ್ತದೆ ಅಥವಾ ವಿಲೀನ ಮಾಡಲಾಗುತ್ತದೆ ಅಥವಾ ಹೋಲ್ಡಿಂಗ್ ಕಂಪೆನಿ ಅಡಿಯಲ್ಲಿ ತರಲಾಗುತ್ತದೆ. ಇದರಿಂದ ಆಡಳಿತಾತ್ಮಕ ವೆಚ್ಚ ಕಡಿಮೆ ಆಗುತ್ತದೆ.
* ಏಪ್ರಿಲ್ ತಿಂಗಳಲ್ಲಿ ರಾಜ್ಯ ಸರ್ಕಾರಗಳಿಗೆ ತೆರಿಗೆ ಕೊರತೆ ತುಂಬಿಕೊಳ್ಳಲು 46,038 ಕೋಟಿ ನೀಡಲಾಗಿದೆ. ಇನ್ನು ಕಂದಾಯ ಕೊರತೆ 12,390 ಕೋಟಿ ರುಪಾಯಿಯನ್ನು ಏಪ್ರಿಲ್ ನಲ್ಲಿ ರಾಜ್ಯಗಳಿಗೆ ನೀಡಲಾಗಿದೆ. ಎಸ್ ಡಿಆರ್ ಎಫ್ ಅನುದಾನ ಮುಂಚಿತವಾಗಿಯೇ ಬಿಡುಗಡೆ ಮಾಡಲಾಗಿದೆ. ಆರೋಗ್ಯ ಸಚಿವಾಲಯವು 4113 ಕೋಟಿ ರುಪಾಯಿಯನ್ನು ಕೊರೊನಾ ತಡೆ ಚಟುವಟಿಕೆಗಾಗಿ ನೇರವಾಗಿ ಬಿಡುಗಡೆ ಮಾಡಿದೆ. ಇನ್ನು ಆರ್ ಬಿಐನಿಂದ ರಾಜ್ಯಗಳಿಗೆ ನೀಡುವ ಸಾಲ ಮಿತಿ ಹಾಗೂ ಅವಧಿ ಎರಡನ್ನೂ ಹೆಚ್ಚಿಸಲಾಗಿದೆ.
* 2020-21ನೇ ಸಾಲಿಗೆ ಸಾಲ ಪಡೆಯುವುದರಲ್ಲಿ ರಾಜ್ಯ ಸರ್ಕಾರಗಳಿಗೆ ಇದ್ದ ಮಿತಿಯನ್ನು 3ರಿಂದ 5 ಪರ್ಸೆಂಟ್ ಗೆ ಏರಿಸಲು ಅನುಮತಿ ನೀಡಲಾಗಿದೆ. ಇದರಿಂದ 4.28 ಲಕ್ಷ ಕೋಟಿ ಹೆಚ್ಚುವರಿ ಸಂಪನ್ಮೂಲ ದೊರೆಯುತ್ತದೆ.