ಲಾಕ್ಡೌನ್ ಪರಿಹಾರವಲ್ಲ, ಹೆಚ್ಚಿನ ಕೋವಿಡ್-19 ಲಸಿಕೆ ಪರವಾನಗಿ ಪಡೆಯಬೇಕಿದೆ: ಚಂದ್ರಶೇಖರನ್
ಭಾರತದಲ್ಲಿ ದಾಖಲೆಯ ಪ್ರಮಾಣದಲ್ಲಿ ಕೋವಿಡ್-19 ಸೋಂಕು ಹರಡುತ್ತಿದ್ದು, ದೇಶವು ಹೆಚ್ಚಿನ ಕೋವಿಡ್-19 ಲಸಿಕೆಯ ಪರವಾನಗಿ ಪಡೆದು ಉತ್ಪಾದನೆಯನ್ನು ಹೆಚ್ಚಿಸಬೇಕಿದೆ ಎಂದು ಟಾಟಾ ಸನ್ಸ್ ಅಧ್ಯಕ್ಷ ಎನ್. ಚಂದ್ರಶೇಖರನ್ ಸೋಮವಾರ ಹೇಳಿದ್ದಾರೆ.
ಜಗತ್ತಿನಲ್ಲಿ ಈಗಾಗಲೇ ಅನೇಕ ಕಂಪನಿಗಳ ಕೋವಿಡ್-19 ಲಸಿಕೆಯು ಬಳಕೆಯಲ್ಲಿದ್ದು, ಭಾರತವು ಸಾಧ್ಯವಾದಷ್ಟು ಹೆಚ್ಚು ಲಸಿಕೆಯ ಪರವಾನಗಿ ಪಡೆದು ಉತ್ಪಾದನೆಗೆ ಚುರುಕು ಮುಟ್ಟಿಸಬೇಕಿದೆ ಎಂದು ಚಂದ್ರಶೇಖರನ್ ಅಭಿಪ್ರಾಯ ಪಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಹೆಚ್ಚಿರುವ ಲಸಿಕೆಯ ಬೇಡಿಕೆಯನ್ನು ಪೂರೈಸಲು ಸಾಧ್ಯ ಎಂದಿದ್ದಾರೆ.
ಕೋವಿಡ್-19 ಎರಡನೇ ಅಲೆಯು ಸಾಕಷ್ಟು ಆತಂಕಕ್ಕೆ ಕಾರಣವಾಗಿದ್ದು, ಲಸಿಕೆ ಉತ್ಪಾದನೆ ಹೆಚ್ಚಿಸುವುದು ಹಾಗೂ ಟ್ರ್ಯಾಕಿಂಗ್ ಪೂರೈಕೆಗೆ ಕರೆ ನೀಡಿದರು. ಆದರೆ ರಾಷ್ಟ್ರವ್ಯಾಪಿ ಲಾಕ್ಡೌನ್ ಪರಿಹಾರವಲ್ಲ, ಏಕೆಂದರೆ ಇದು ಆರ್ಥಿಕತೆಯನ್ನು ಕಠಿಣಗೊಳಿಸುತ್ತದೆ ಮತ್ತು ಸಮಾಜದ ಕೆಳ ಹಂತದ ಜನರ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಪರಿಣಾಮ ಬೀರುತ್ತದೆ ಎಂದು ಟಾಟಾ ಸನ್ಸ್ ಅಧ್ಯಕ್ಷ ಹೇಳಿದ್ದಾರೆ.
"ನಾವು ಸಾಧ್ಯವಾದಷ್ಟು ವಿಭಿನ್ನ ಲಸಿಕೆಗಳ ಪರವಾನಗಿಗಳನ್ನು ಪಡೆಯಬೇಕಾಗಿದೆ ಮತ್ತು ಅನೇಕ ಕಾರ್ಖಾನೆಗಳನ್ನು ಉತ್ಪಾದನೆಯನ್ನು ಸಹ ನಾವು ಹೆಚ್ಚಿಸಲಿದ್ದೇವೆ" ಎಂದು ಎಐಎಂಎ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಚಂದ್ರಶೇಖರನ್ ಹೇಳಿದರು.
ಪ್ರಸ್ತುತ ಪರಿಸ್ಥಿತಿಯಲ್ಲಿ ಅವರಿಗೆ ಜವಾಬ್ದಾರಿಯನ್ನು ನೀಡಿದ್ದರೆ ಹೇಗೆ ನಿಭಾಯಿಸುತ್ತಿದ್ದರು ಎಂದು ಕೇಳಿದ ಪ್ರಶ್ನೆಗೆ ಈ ಮೇಲ್ಕಂಡಂತೆ ಪ್ರತಿಕ್ರಿಯಿಸಿದ್ದಾರೆ.