ರಿಸರ್ವ್ ಬ್ಯಾಂಕ್ ನಿಂದ ನೋಟು ಮುದ್ರಣವೋ ಅಥವಾ ಐಎಂಎಫ್ ಸಾಲವೋ?
ಕೊರೊನಾ ವೈರಸ್ ಅಟ್ಟಹಾಸದಿಂದ ಸರ್ಕಾರ ಬಜೆಟ್ ಲೆಕ್ಕಾಚಾರ ತಲೆ ಕೆಳಗಾಗಿದೆ. ಅಂದುಕೊಂಡಷ್ಟು ಆದಾಯ ಇಲ್ಲ. ನಿರೀಕ್ಷೆಯೇ ಮಾಡದಷ್ಟು ಖರ್ಚು ಹೆಚ್ಚಾಗಿದೆ. ಇದರಿಂದ ಎದುರಾಗಿರುವ ವಿತ್ತೀಯ ಕೊರತೆ, ಅಂದರೆ ಖರ್ಚು ಮತ್ತು ಆದಾಯದ ಮಧ್ಯೆ ಏರ್ಪಟ್ಟಿರುವ ದೊಡ್ಡ ವ್ಯತ್ಯಾಸವನ್ನು ಸರಿ ಮಾಡಿಕೊಳ್ಳಲು ಸರ್ಕಾರದ ಮುಂದಿರುವ ಹಲವು ಆಯ್ಕೆಗಳನ್ನು ಪರಿಶೀಲಿಸಲಾಗುತ್ತಿದೆ.
ಹೆಚ್ಚು ಹಣ ಮುದ್ರಿಸುವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಕೇಳುವುದು ಆಯ್ಕೆಗಳಲ್ಲಿ ಒಂದು ಎಂದು ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ವಿ. ಸುಬ್ರಮಣಿಯನ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ಆರ್ಥಿಕ ಉತ್ತೇಜನಕ್ಕೆ ಜಿಡಿಪಿಯ 10 ಪರ್ಸೆಂಟ್, ಅಂದರೆ 20 ಲಕ್ಷ ಕೋಟಿ ರುಪಾಯಿಯ ಪ್ಯಾಕೇಜ್ ಘೋಷಣೆ ಮಾಡಿದ್ದಾರೆ.
ಹಣದ ಕೊರತೆ ನೀಗಿಸಲು ಸರ್ಕಾರದಿಂದ ಶುರುವಾಗಿದೆಯೇ ಪ್ರಯತ್ನ?
ಆದರೂ ಇಂಥ ಸಂದರ್ಭದಲ್ಲಿ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯನ್ನು (ಐಎಂಎಫ್) ಸಾಲಕ್ಕಾಗಿ ಕೇಳುವ ಅಗತ್ಯ ಇಲ್ಲ (1990ರ ದಶಕದಲ್ಲಿ ಬ್ಯಾಲೆನ್ಸ್ ಆಫ್ ಪೇಮೆಂಟ್ ಬಿಕ್ಕಟ್ಟಿನ ಸಮಯದಲ್ಲಿ ಸಾಲ ಪಡೆಯಲಾಗಿತ್ತು) ಎಂದು ಮುಖ್ಯ ಆರ್ಥಿಕ ಸಲಹೆಗಾರರು ತಿಳಿಸಿದ್ದಾರೆ.
MSMEಗಳಿಗೆ ಸರ್ಕಾರವೇ ಗ್ಯಾರಂಟಿ
ಮೊದಲ ಬಾರಿಗೆ ಪ್ಯಾಕೇಜ್ ಘೋಷಣೆ ಮಾಡಿದಾಗ ದುರ್ಬಲ ವರ್ಗದವರನ್ನು ಗಮನದಲ್ಲಿ ಇಟ್ಟುಕೊಂಡು ರೂಪಿಸಲಾಗಿತ್ತು. ಮುಂದಿನ ಹಂತದ ಪರಿಹಾರ ಯೋಜನೆ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ವಿಸ್ತೃತವಾಗಿ ತಿಳಿಸಲಿದ್ದಾರೆ. ಆ ವೇಳೆ ಆರ್ಥಿಕತೆಯಲ್ಲಿನ ಪೂರೈಕೆ ಬಗ್ಗೆ, ಅಂದರೆ ಸಾಲ ವಿತರಣೆ ಅಥವಾ ವ್ಯವಸ್ಥೆಯೊಳಗೆ ನಗದು ಪೂರೈಸುವ ಕಡೆಗೆ ಗಮನ ಇರಲಿದೆ. ಇನ್ನು ವ್ಯವಸ್ಥೆಯೊಳಗೆ ನಗದು ಪೂರೈಕೆ ಹೆಚ್ಚಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಮುಖ ಹೆಜ್ಜೆಗಳನ್ನು ಇರಿಸಿದೆ. ಕೃಷ್ಣಮೂರ್ತಿ ವಿ. ಸುಬ್ರಮಣಿಯನ್ ಅವರು ನೀಡಿರುವ ಸೂಚನೆ ಪ್ರಕಾರ, ಎಂಎಸ್ ಎಂಇಗಳಂಥ ವಲಯಗಳಿಗೆ ಸಾಲಕ್ಕೆ ಸರ್ಕಾರವು ಗ್ಯಾರಂಟಿ ಆಗಲಿದೆ.
ಸಾಲದ ಅಂದಾಜು 12 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ
ಆರ್ಥಿಕ ವರ್ಷ 2021ಕ್ಕೆ ಕೇಂದ್ರದ ವಿತ್ತೀಯ ಕೊರತೆ ಬಗ್ಗೆ ಮಾತನಾಡಿರುವ ಅವರು, ಕಳೆದ ವಾರ ತೆಗೆದುಕೊಂಡಿರುವ ನಿರ್ಧಾರದಿಂದ ಮಾರ್ಕೆಟ್ ಮೂಲಕ ಪಡೆಯುವ ಸಾಲವನ್ನು 4.2 ಲಕ್ಷ ಕೋಟಿಯಿಂದ 12 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ. ಇದರಿಂದ ಕೇಂದ್ರದ ಬಜೆಟ್ ವಿತ್ತೀಯ ಕೊರತೆ ಮಟ್ಟವು (3.5 ಪರ್ಸೆಂಟ್) 150 ಬೇಸಿಸ್ ಪಾಯಿಂಟ್ ಏರಿಕೆ ಆಗಲಿದೆ. ತಜ್ಞರು ಅಂದಾಜು ಮಾಡಿರುವ ಪ್ರಕಾರ, FY21ಗೆ ಕೇಂದ್ರದ ತೆರಿಗೆ ಸಂಗ್ರಹದಲ್ಲಿ ಜಿಡಿಪಿಯ 1- 2 ಪರ್ಸೆಂಟ್ ಅಥವಾ 2ರಿಂದ 4 ಲಕ್ಷ ಕೋಟಿ ರುಪಾಯಿ ಕಡಿಮೆ ಆಗಬಹುದು. ಜಿಡಿಪಿ ಬೆಳವಣಿಗೆ ಕಡಿಮೆ ಆಗಬಹುದು ಅಥವಾ ನೆಗೆಟಿವ್ ಕೂಡ ಆಗಬಹುದು. ಮುಖ್ಯ ಆರ್ಥಿಕ ಸಲಹೆಗಾರರು 1.5ರಿಂದ 2 ಪರ್ಸೆಂಟ್ ಅಂದಾಜು ಮಾಡಿದ್ದರು.
ರಾಜ್ಯ ಸರ್ಕಾರಗಳೇ ಶಿಸ್ತು ಪಾಲಿಸುತ್ತಿವೆ
ಕೃಷ್ಣಮೂರ್ತಿ ಸುಬ್ರಮಣಿಯನ್ ಸಂದರ್ಶನದಲ್ಲಿ ಮಾತನಾಡಿ, ವಿತ್ತೀಯ ಕೊರತೆಯನ್ನು ನಿಗದಿ ಮಾಡಿರುವ 3 ಪರ್ಸೆಂಟ್ ಗಿಂತ ಹೆಚ್ಚು ಮಾಡಿ, FRBM ನಿಯಮಗಳಿಂದ ವಿನಾಯಿತಿ ನೀಡಬೇಕಾ ಎಂಬ ಬಗ್ಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಚರ್ಚೆ ನಡೆಸುತ್ತಿವೆ ಎಂದು ಹೇಳಿದ್ದಾರೆ. ಈಚಿನ ವರ್ಷಗಳಲ್ಲಿ ಕೇಂದ್ರಕ್ಕಿಂತ ರಾಜ್ಯ ಸರ್ಕಾರಗಳು ಆರ್ಥಿಕ ಯೋಜನೆಗಳಲ್ಲಿ ಹೆಚ್ಚು ಶಿಸ್ತು ಕಾಪಾಡಿಕೊಳ್ಳುತ್ತಿವೆ. ಇದೀಗ ಆ ಶಿಸ್ತು ಕಾಪಾಡಿಕೊಳ್ಳಬೇಕಾದ ಸನ್ನಿವೇಶ ಕೇಂದ್ರಕ್ಕೂ ಬಂದಿದೆ. ಕೊರೊನಾದ ಕಾರಣಕ್ಕೆ ಎದುರಾಗಿರುವ ಆರ್ಥಿಕ ಸವಾಲಿನಿಂದ ಈಗ ಎಲ್ಲವನ್ನೂ ಮರುಚಿಂತಿಸಬೇಕಾದ ಸನ್ನಿವೇಶ ಎದುರಾಗಿದೆ. ಆರ್ಥಿಕ ವರ್ಷ 2020ಕ್ಕೆ 2.6 ಪರ್ಸೆಂಟ್ ಗೆ ಕೊರತೆಯ ಗುರಿಯನ್ನು ಬದಲಾಯಿಸಲಾಗಿದ್ದು, 2019ರ ಆರ್ಥಿಕ ವರ್ಷಕ್ಕೆ 2.4 ಪರ್ಸೆಂಟ್ ಇತ್ತು.
6000 ಕೋಟಿ ಡಾಲರ್ ವಿತ್ತೀಯ ಕೊರತೆ
ಸುಬ್ರಮಣಿಯನ್ ಹೇಳಿರುವಂತೆ, 6000 ಕೋಟಿ ಡಾಲರ್ ವಿತ್ತೀಯ ಕೊರತೆ ತುಂಬಿಕೊಳ್ಳಲು ಸರ್ಕಾರದ ಬಾಂಡ್ ಗಳನ್ನು ಜಾಗತಿಕವಾಗಿ ಲಿಸ್ಟಿಂಗ್ ಮಾಡಿ, ಹಣ ಸಂಗ್ರಹಿಸುವ ಉದ್ದೇಶ ಮುಂದಿನ ಆರ್ಥಿಕ ವರ್ಷಕ್ಕೆ ಸಾಧ್ಯವಾಗಲಿದೆ. ಆದರೂ ಈ ಹಣವು ಸಾಲದ ಕುರಿತು ಯೋಜನೆ ರೂಪಿಸಲು ಸರ್ಕಾರಕ್ಕೆ ಸಹಾಯ ಮಾಡುತ್ತದೆ. ಕಳೆದ ಮಾರ್ಚ್ ನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಘೋಷಣೆ ಮಾಡಿತ್ತು: ಜಾಗತಿಕ ಬಾಂಡ್ ಮಾರುಕಟ್ಟೆಯಲ್ಲಿ ವಿದೇಶಿ ಹೂಡಿಕೆಯನ್ನು ಸೆಳೆಯಲು ಸರ್ಕಾರದ ಸೆಕ್ಯೂರಿಟೀಸ್ ಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿತ್ತು.