ಬೆಂಗಳೂರಿನಲ್ಲಿ ಫೆ.12ರಿಂದ 14ರವರೆಗೆ ನಡೆಯಲಿರುವ 'ಇನ್ವೆಸ್ಟ್ ಕರ್ನಾಟಕ-2025' ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಭರದ ತಯಾರಿ ನಡೆಯುತ್ತಿದ್ದು , 10 ಲಕ್ಷ ಕೋಟಿ ರೂ. ಹೂಡಿಕೆ ಆಕರ್ಷಣೆ ಗುರಿ ಹೊಂದಲಾಗಿದೆ. ಫೆ.11ರಂದು ಸಂಜೆ 4ಕ್ಕೆ ಸಮಾವೇಶದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಈ ಸಮಾವೇಶದಲ್ಲಿ 19 ದೇಶಗಳು ಭಾಗವಹಿಸಲಿವೆʼ ಎಂದು ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ ಅವರು ತಿಳಿಸಿದ್ದಾರೆ.
ಟೆಕ್-ಚಾಲಿತ, ಹಸಿರು, ಅಂತರ್ಗತ ಮತ್ತು ಸ್ಥಿತಿಸ್ಥಾಪಕ ಬೆಳವಣಿಗೆ ಗಮನದಲ್ಲಿಟ್ಟುಕೊಂಡು ಈ ಸಮಾವೇಶದ ಥೀಮ್ ಸಿದ್ದಪಡಿಸಲಾಗಿದೆ. 2,000 ಹೂಡಿಕೆದಾರರು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ ಮತ್ತು 60 ಕ್ಕೂ ಹೆಚ್ಚು ಉದ್ಯಮ ತಜ್ಞರು ಸಭೆಯಲ್ಲಿ ಮಾತನಾಡಲಿದ್ದಾರೆ. 19 ದೇಶಗಳಲ್ಲಿ, ಒಂಬತ್ತು ಪ್ರತ್ಯೇಕ ಪೆವಿಲಿಯನ್ಗಳನ್ನು ಹೊಂದಿರುತ್ತವೆ. ಥಾಯ್ಲೆಂಡ್, ಮಲೇಷ್ಯಾ, ದಕ್ಷಿಣ ಕೊರಿಯಾ, ಫ್ರಾನ್ಸ್, ನೆದರ್ಲ್ಯಾಂಡ್ಸ್, ಜಪಾನ್, ಇಸ್ರೇಲ್, ನಾರ್ವೆ, ಸ್ವಿಟ್ಜರ್ಲ್ಯಾಂಡ್, ತೈವಾನ್, ಜರ್ಮನಿ, ಆಸ್ಟ್ರೇಲಿಯಾ, ಡೆನ್ಮಾರ್ಕ್, ಪೋಲಂಡ್, ಇಟಲಿ, ಬ್ರಿಟನ್, ಸ್ಲೊವೆನಿಯಾ, ಸಿಂಗಾಪುರ ಮತ್ತು ಬಹ್ರೇನ್ ದೇಶಗಳು ಈ ಸಮಾವೇಶದಲ್ಲಿ ಭಾಗವಹಿಸಲಿವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಜಾಗತಿಕ ಉದ್ಯಮ ಜಗತ್ತಿಗೆ ಕರ್ನಾಟಕವು ಏರೋಸ್ಪೇಸ್, ನವೀಕರಿಸಬಹುದಾದ ಇಂಧನ, ಎಲೆಕ್ಟ್ರಾನಿಕ್ಸ್, ಸೆಮಿಕಂಡಕ್ಟರ್ ಮತ್ತು ಅತ್ಯಾಧುನಿಕ ತಯಾರಿಕಾ ವಲಯಗಳಲ್ಲಿ ಬಂಡವಾಳ ಹೂಡಿಕೆಗೆ ಮುಂಚೂಣಿಯಲ್ಲಿದೆ ಎಂಬುದನ್ನು ಸಮಾವೇಶದ ಮೂಲಕ ಪರಿಚಯಿಸಲು ಸರ್ವ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಅಲ್ಲದೆ ಫ್ಯೂಚರ್ ಆಫ್ ಇನ್ನೊವೇಷನ್ ಎಕ್ಸ್ಪೋ ಪರಿಸರ ಸ್ನೇಹಿ ವಿದ್ಯುತ್ ಚಾಲಿತ ವಾಹನಗಳು, ರಕ್ಷಣೆ, ಜೈವಿಕ ತಂತ್ರಜ್ಞಾನ, ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಅತ್ಯಂತ ನಿಖರವಾದ ಬಿಡಿಭಾಗಗಳ ತಯಾರಿಕಾ ಕ್ಷೇತ್ರಗಳಲ್ಲಿನ ಇತ್ತೀಚಿನ ಬೆಳವಣಿಗೆಗಳ ಮೇಲೆ ಬೆಳಕು ಚೆಲ್ಲುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ರಾಜ್ಯದಲ್ಲಿನ ಎಸ್ಎಂಇ ಹಾಗೂ ನವೋದ್ಯಮಗಳ ಬೆಳವಣಿಗೆಗೆ ಸಮಾವೇಶವು ವೇಗ ನೀಡಲಿದೆ. ಡಿಜಿಟಲೀಕರಣ ಅಳವಡಿಸಿಕೊಳ್ಳಲು 2,000ಕ್ಕೂ ಹೆಚ್ಚು ಎಸ್ಎಂಇಗಳಿಗೆ ಸೂಕ್ತ ತರಬೇತಿ ನೀಡಲಾಗಿದೆ. ಡಿಜಿಟಲ್ ಪರಿವರ್ತನೆಗೆ 100 ಎಸ್ಎಂಇಗಳಿಗೆ ಅಗತ್ಯ ನೆರವು ನೀಡಲಾಗಿದೆʼ ಎಂದು ತಿಳಿಸಿದ್ದಾರೆ.
ತಯಾರಿಕೆ ಮತ್ತು ಪರಿಸರ ಸ್ನೇಹಿ ನವೋದ್ಯಮಗಳಿಗೆ ಉತ್ತೇಜನ ನೀಡಲು, ಜಾಗತಿಕ ನವೋದ್ಯಮ ಸವಾಲಿನ - ವೆಂಚುರೈಸ್ನ 2ನೇ ಆವೃತ್ತಿಯು ಸಮಾವೇಶದ ಮತ್ತೊಂದು ಆಕರ್ಷಣೆಯಾಗಿರಲಿದೆ. ಮೂಲ ಉಪಕರಣಗಳನ್ನು ತಯಾರಿಸುವ (ಒಇಎಂ) ದೊಡ್ಡ ಕಂಪನಿಗಳೊಂದಿಗೆ ವ್ಯವಹಾರ ನಡೆಸಲು ಎಸ್ಎಂಇಗಳಿಗೆ ಸಹಾಯವಾಗುವಂತೆ ಕೃತಕ ಬುದ್ಧಿಮತ್ತೆ ಆಧಾರಿತ ಎಸ್ಎಂಇ ಕನೆಕ್ಟ್ ವೆಬ್ಸೈಟ್ ಅನ್ನು ಅಭಿವೃದ್ಧಿಪಡಿಸಲಾಗಿದೆ."
ಬಂಡವಾಳ ಹೂಡಿಕೆ ಸುಲಲಿತಗೊಳಿಸಲು ಕೃತಕ ಬುದ್ಧಿಮತ್ತೆ ನೆರವಿನ ಏಕಗವಾಕ್ಷಿ ವ್ಯವಸ್ಥೆ ಅಭಿವೃದ್ಧಿಪಡಿಸಲಾಗಿದೆ. ಇದು ಭೂಮಿ ಹಂಚಿಕೆ, ಹೂಡಿಕೆದಾರರ ಕುಂದುಕೊರತೆ ನಿವಾರಣೆಗೆ ನೆರವಾಗಲಿದ್ದು, ಬಹುಭಾಷಾ ಚಾಟ್ಬೋಟ್ ಸೌಲಭ್ಯ ಒಳಗೊಂಡಿರಲಿದೆ. ಆನಂದ ಮಹೀಂದ್ರಾ, ಕುಮಾರ್ ಮಂಗಳಂ ಬಿರ್ಲಾ, ಕಿರಣ್ ಮಜುಂದಾರ್ ಶಾ, ಮಾರ್ಟಿನ್ ಲುಂಡ್ಸ್ಟೆಡ್ಟ್, ಜಾರ್ಜ್ ಪಪಂಡ್ರೆವು, ಆನ್ ಡಂಕಿನ್ ಮತ್ತು ಒಡೆ ಅಬೊಷ್ ಅವರು ಉದ್ದಿಮೆ, ತಂತ್ರಜ್ಞಾನ ಮತ್ತು ಕೈಗಾರಿಕಾ ಪರಿವರ್ತನೆ ಬಗ್ಗೆ ಒಳನೋಟಗಳನ್ನು ಹಂಚಿಕೊಳ್ಳಲಿದ್ದಾರೆ. ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಜಾಗತಿಕ ಪ್ರಮುಖ ಉದ್ದಿಮೆಗಳು ಮತ್ತು ವಿದೇಶಿ ಸರ್ಕಾರಗಳ ಪಾಲ್ಗೊಳ್ಳುವಿಕೆಯಿಂದ ರಾಜ್ಯದಲ್ಲಿ ಹೇರಳ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ದುಡಿಯುವ ವರ್ಗದ ಕೌಶಲ್ಯ ಹೆಚ್ಚಾಗುತ್ತದೆ. ತಂತ್ರಜ್ಞಾನದ ಸುಲಭ ವರ್ಗಾವಣೆ ಆಗುತ್ತದೆ. ಇವೆಲ್ಲವುಗಳ ಮೂಲಕ ಜಾಗತಿಕ ನಾವೀನ್ಯತೆ ಕ್ಷೇತ್ರದಲ್ಲಿ ಕರ್ನಾಟಕದ ಬಾಂಧವ್ಯ ಗಮನಾರ್ಹವಾಗಿ ಬೆಳೆಯುತ್ತದೆ ಎಂದು ಸಚಿವ ಪಾಟೀಲ ಅವರು ವಿವರಿಸಿದ್ದಾರೆ.
ಸಮಾವೇಶದ ಬಗ್ಗೆ ಮಾಹಿತಿ ಪಡೆಯಲು ಹಾಗೂ ಹೆಸರು ನೋಂದಾಯಿಸಲು https://investkarnataka.co.in/gim2025/ ಅಂತರ್ಜಾಲ ತಾಣಕ್ಕೆ ಭೇಟಿ ನೀಡಬಹುದಾಗಿದೆ.


Click it and Unblock the Notifications