ಕೊರೊನಾಕ್ಕಾಗಿ ಕರ್ನಾಟಕ ಸಿಎಂ ಪರಿಹಾರ ನಿಧಿಯಲ್ಲಿ ಸಂಗ್ರಹವಾದ ಹಣ ಎಷ್ಟು?
ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣ ದೃಷ್ಟಿಯಿಂದ ಕರ್ನಾಟಕ ಮುಖ್ಯಮಂತ್ರಿಗಳ ಪರಿಹಾರ ನಿಧಿ ಖಾತೆಗೆ ಜೂನ್ 18ರ ವರೆಗೆ ಒಟ್ಟು 290 ಕೋಟಿ ರುಪಾಯಿ ಸಾರ್ವಜನಿಕರು ಮತ್ತು ಸಂಘ-ಸಂಸ್ಥೆಗಳಿಂದ ದೇಣಿಗೆ ಹರಿದು ಬಂದಿದೆ.
ಈ ಕುರಿತು ಆರ್.ಟಿ.ಐ ಅಡಿ ಮಾಹಿತಿ ಕೋರಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯಾಧ್ಯಕ್ಷ ತಾಹಿರ್ ಹುಸೇನ್ ಎನ್ನುವರು ಸಲ್ಲಿಸಿದ್ದ ಅರ್ಜಿಗೆ ಮುಖ್ಯಮಂತ್ರಿ ಸಚಿವಾಲಯದಿಂದ ವಿವರ ಸಿಕ್ಕಿದೆ.
ಆ ಮೊತ್ತದಲ್ಲಿ ಒಂದು ರುಪಾಯಿಯನ್ನೂ ಸಹ ಈವರೆಗೆ ಸೋಂಕು ತಡೆಗಟ್ಟಲು ಖರ್ಚು ಮಾಡಿಲ್ಲ ಎಂಬ ಅಂಶ ಮಾಹಿತಿ ಹಕ್ಕು ಕಾಯ್ದೆಯಿಂದ ಬಹಿರಂಗವಾಗಿದೆ.
ಕೊರೋನ ಸೋಂಕು ನಿಯಂತ್ರಣಕ್ಕೆ ಸರಕಾರದ ವಿವಿಧ ಇಲಾಖೆಗಳಲ್ಲಿ ಲಭ್ಯವಿರುವ ಅನುದಾನದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಚಿಕಿತ್ಸೆ/ ರೋಗ ಹರಡುವುದನ್ನು ತಪ್ಪಿಸಲು ವೆಚ್ಚ ಭರಿಸುತ್ತಿದ್ದು, ಸಿಎಂ ಪರಿಹಾರ ನಿಧಿ ಖಾತೆಯಲ್ಲಿರುವ ಹಣವನ್ನು ಅವಶ್ಯಕ ತುರ್ತು ಸೇವೆಗಳಿಗೆ ಉಪಯೋಗಿಸುವ ಸಲುವಾಗಿ 'ಆಪತ್ ನಿಧಿಯಾಗಿ ಕಾಯ್ದಿರಿಸಲಾಗಿದೆ' ಎಂದು ಸ್ಪಷನೆ ನೀಡಲಾಗಿದೆ.
ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ತುರ್ತು ಅಗತ್ಯಗಳಿಗಾಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿದ ಸರಕಾರ ಆ ಮೊತ್ತದಲ್ಲಿ ಒಂದು ನಯಾಪೈಸೆಯನ್ನು ಘೋಷಿತ ಉದ್ದೇಶಕ್ಕೆ ವೆಚ್ಚ ಮಾಡದೆ 'ಆಪತ್ ನಿಧಿಯಾಗಿ' ಕಾಯ್ದಿರಿಸಲಾಗಿದೆ ಎಂದು ಹೇಳಿರುವುದು ಜನಸಾಮಾನ್ಯರಿಗೆ ವಂಚನೆ ಮಾಡಿದಂತಾಗಿದೆ" ಎಂದು ತಾಹಿರ್ ಹುಸೇನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸೋಂಕು ತಡೆಗಟ್ಟಲು ತುರ್ತು ಅಗತ್ಯಕ್ಕೆ ಸಿಎಂ ಪರಿಹಾರ ನಿಧಿಗೆ ಸಾರ್ವಜನಿಕರಿಂದ ನೆರವು ಕೋರಿದ್ದು, ಸರಕಾರ ತುರ್ತು ಅವಶ್ಯಕತೆಗೆ ಮೊತ್ತವನ್ನು ಬಳಕೆ ಮಾಡದೆ, ಈ ಸಂದರ್ಭ ಮುಗಿದ ಬಳಿಕ ಆ ಮೊತ್ತವನ್ನು ಅನ್ಯ ಉದ್ದೇಶಕ್ಕೆ ಬಳಕೆ ಮಾಡುವುದು ಅರ್ಥಹೀನ. ಸಂಗ್ರಹಿಸಿರುವ ಅನುದಾನವನ್ನು ಸಮಯಕ್ಕೆ ಸರಿಯಾಗಿ, ಸಮಪರ್ಕ ರೀತಿಯಲ್ಲಿ ಬಳಕೆ ಮಾಡದಿದ್ದರೆ ಕೋರ್ಟ್ ಮೆಟ್ಟಿಲೇರುವ ಮೂಲಕ ಮತ್ತೊಂದು ಹಂತದ ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದು ತಾಹೀರ್ ಹುಸೇನ್ ಎಚ್ಚರಿಕೆ ನೀಡಿದ್ದಾರೆ.