ಸದಾ ಬಡವರ ಉತ್ತೇಜನಕ್ಕಾಗಿ ಆಡಳಿತ ನಡೆಸುತ್ತೇವೆ, 200 ಯುನಿಟ್ ವಿದ್ಯುತ್ ಫ್ರೀಯಾಗಿ ನೀಡುತ್ತೇವೆ ಎಂದು ಘೋಷಣೆ ಮಾಡಿದ್ದ ಸರ್ಕಾರ, ಈಗ ಅದೇ ಕರೆಂಟ್ ಬಿಲ್ ಮೂಲಕ ಗ್ರಾಹಕರಿಗೆ ಬರೆ ಎಳೆಯೋಕೆ ಮುಂದಾದಂತೆ ಕಾಣುತ್ತಿದೆ. ಅಂದರೆ 2025-26ನೇ ಹಣಕಾಸು ವರ್ಷದಲ್ಲಿ, ಏಪ್ರಿಲ್ 1 ರಿಂದ ವಿದ್ಯುತ್ ಬಿಲ್ಗಳಲ್ಲಿ, ಹೆಚ್ಚುವರಿಯಾಗಿ ಸರ್ಚಾರ್ಜ್ ಪಾವತಿಸಬೇಕು. ಅಂದರೆ ಪ್ರತಿ ಯೂನಿಟ್ಗೆ 36 ಪೈಸೆ ಪಾವತಿಸಬೇಕಾಗುತ್ತದೆ. ಇನ್ನು ಈ ಸರ್ಚಾರ್ಜ್ ಹೆಚ್ಚಳ ಯಾಕೆ ಮಾಡುತ್ತಿರುವುದು ಗೊತ್ತಾ..? ಸರ್ಕಾರಿ ನೌಕರರಿಗೆ ಪಿಂಚಣಿ ಹಾಗೂ ಗ್ರಾಚುಟಿ ನೀಡಲು ಸರ್ಕಾರ ಮಾಡಿರುವ ಹಣ ಪೀಕುವ ತಂತ್ರ ಎನ್ನಬಹುದು.

ಹೌದು, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಇಂದು (ಮಾರ್ಚ್ 20)ರಂದು ಇಂಧನ ಪೂರೈಕೆ ಕಂಪನಿಗಳಿಗೆ, ಗ್ರಾಹಕರಿಂದ ಪಿಂಚಣಿ ಮತ್ತು ಗ್ರಾಚ್ಯುಟಿ ಕೊಡುಗೆಗಳ ಪಾಲನ್ನು ವಸೂಲಿ ಮಾಡುವ ಅವಕಾಶ ನೀಡಿದೆ. ಹಾಗೂ ಇದೊಂದು ಆದೇಶ ಎಂದರೂ ತಪ್ಪಾಗದು. ಇದಕ್ಕೆ ಅನುಮತಿ ನೀಡಿರುವ ಸರ್ಕಾರ ಕೂಡ ಆರ್ಥಿಕ ತಂತ್ರ ರೂಪಿಸಿದೆ ಎನ್ನಬಹುದು.
ಇನ್ನು 2026-27 ಮತ್ತು 2027-28ಕ್ಕೆ ಪಿಂಚಣಿ ಮತ್ತು ಗ್ರಾಚುಟಿ ಕೊಡುಗೆಗಳನ್ನು ಪರಿಷ್ಕರಣೆ ಮಾಡಲಾಗುತ್ತದೆ. ಅಲ್ಲಿ ಗ್ರಾಹಕರು ಕ್ರಮವಾಗಿ 35 ಪೈಸೆ ಮತ್ತು 34 ಪೈಸೆ ಪಾವತಿಸುವಂತಾಗುತ್ತದೆ. ಹೆಚ್ಚುವರಿಯಾಗಿ 36 ಪೈಸೆ ಪಾವತಿಸಿದರೆ ಶೇ. 9 ರಷ್ಟು ವಿದ್ಯುತ್ ತೆರಿಗೆ ಬೀಳಲಿದೆ ಎಂದು ತಜ್ಞರು ಹೇಳಿದ್ದಾರೆ.
ಇನ್ನು 5 ಕಿಲೋವ್ಯಾಟ್ ಶುಲ್ಕದೊಂದಿಗೆ 250 ಯೂನಿಟ್ಗಳನ್ನು ಬಳಸುವ ಗ್ರಾಹಕರು, ಮೊದಲು ವಿದ್ಯುತ್ ಬಿಲ್ ಪಾವತಿಸುತ್ತಿದ್ದದ್ದು 2,207.75 ರೂ.. ಆದರೆ ಇನ್ನುಮುಂದೆ ಈ ಹೊಸ ನಿಯಮದ ಪ್ರಕಾರ ಅವರು ಪಾವತಿಸಬೇಕಾದ ಮೊತ್ತ 2,305.85 ರೂ. ಈ ವಿದ್ಯುತ್ ಬಿಲ್ನಲ್ಲಿ ಇಂಧನ ಹೊಂದಾಣಿಕೆ ಶುಲ್ಕಗಳು ಕೂಡ ಸೇರಿವೆ. ಗೃಹ ಜ್ಯೋತಿ ಗ್ರಾಹಕರ ವಿಷಯದಲ್ಲಿ, ಈ ಹೆಚ್ಚುವರಿ ಆರ್ಥಿಕ ಹೊರೆಯನ್ನು ಸರ್ಕಾರಕ್ಕೆ ಮಾಸಿಕ ಸಬ್ಸಿಡಿ ಮೊತ್ತವನ್ನು ESCOMS ಗೆ ಪಾವತಿಸಲು ವರ್ಗಾಯಿಸಲಾಗುತ್ತದೆ ಎನ್ನಲಾಗಿದೆ.
ಇನ್ನು ಈ ಹೊಸ ಶುಲ್ಕದ ಪ್ರಕಾರ, 36 ಪೈಸೆ ಗ್ರಾಹಕರ ಮೇಲೆ ಹೆಚ್ಚುವರಿ ಹೊರೆಯಾಗಲಿದೆ ಎಂದು ಎಫ್ಕೆಸಿಸಿಐನ ಇಂಧನ ಸಮಿತಿಯ ಸಲಹೆಗಾರ ಎಂ.ಜಿ. ಪ್ರಭಾಕರ್ ಅವರು ಕೂಡ ತಿಳಿಸಿದ್ದಾರೆ. ಅಂದರೆ ಈ 36 ಪೈಸೆಯಿಂದ ಶೇ. 9 ರಷ್ಟು ವಿದ್ಯುತ್ ತೆರಿಗೆಯೂ ಬರುತ್ತದೆ. ಇದು ಗ್ರಾಹಕರ ಮೇಲೆ ಹೆಚ್ಚುವರಿ ಹೊರೆಯಾಗುತ್ತದೆ. ಅಲ್ಲದೇ ಮುಂದಿನ ಮೂರು ವರ್ಷಗಳವರೆಗೆ, ಗ್ರಾಹಕರು ವಿದ್ಯುತ್ ಬಳಕೆ ಶುಲ್ಕಗಳ ಜೊತೆಗೆ ಬಾಕಿ ಬಾಕಿ ಮತ್ತು ಹೆಚ್ಚುವರಿ ಪಿ & ಜಿ ಕೊಡುಗೆಗಳನ್ನು ಪಾವತಿಸಬೇಕಾಗುತ್ತದೆ ಎಂದಿದ್ದಾರೆ.
ಇತ್ತ ಕೆಇಆರ್ಸಿ ಅಧ್ಯಕ್ಷ ಪಿ.ರವಿ ಕುಮಾರ್ ಅವರು, ಈ 36 ಪೈಸೆ ಸರ್ಚಾರ್ಜ್ ಘೋಷಿಸಲಿರುವ ವಿದ್ಯುತ್ ಸುಂಕ ಪರಿಷ್ಕರಣೆಗಿಂತ ಭಿನ್ನವಾಗಿದೆ. ಈ ನಿಟ್ಟಿನಲ್ಲಿ ಕೆಇಆರ್ಸಿ ಕರ್ನಾಟಕ ಹೈಕೋರ್ಟ್ನ ಆದೇಶವನ್ನು ಅನುಸರಿಸಿದೆ. ಎಂದಿದ್ದಾರೆ. ಇನ್ನು ಎಫ್ಕೆಸಿಸಿಐ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯವು ಮಾರ್ಚ್ 25, 2023 ರಂದು ಆದೇಶ ಹೊರಡಿಸಿ, ಕೆಇಆರ್ಸಿಯನ್ನು ಗ್ರಾಹಕ ಸುಂಕದಲ್ಲಿ ಸೇರಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಆದೇಶಿಸಿತು.
ಅಂದಹಾಗೆ 2006ನೇ ವರ್ಷದಲ್ಲಿ ನೌಕರರ ಸಂಘ ಮತ್ತು ರಾಜ್ಯ ಸರ್ಕಾರ ಮತ್ತು ಕೆಪಿಟಿಸಿಎಲ್ ಮತ್ತು ಎಸ್ಕಾಮ್ಗಳ ನಡುವೆ ಹಣಕಾಸು ನಿರ್ವಹಣೆಯ ಕುರಿತು ತ್ರಿಪಕ್ಷೀಯ ಒಪ್ಪಂದಕ್ಕೆ ಬರಲಾಯಿತು. ಅಂದರೆ ಸಂಗ್ರಹಿಸಿದ ಮೊತ್ತದ ಮೂರನೇ ಒಂದು ಭಾಗವನ್ನು ಪಿಂಚಣಿ ಮತ್ತು ಗ್ರಾಚುಟಿಗೆ ಕೊಡುಗೆ ನೀಡಬೇಕು ಎಂಬ ಒಪ್ಪಂದಕ್ಕೆ ಒಪ್ಪಿಗೆ ಕೂಡ ಪಡೆದಿದ್ದರು. ಅದರಂತೆ ಜನವರಿ 1, 2022 ರಂದು, ಸರ್ಕಾರವು ವಿದ್ಯುತ್ ವಲಯದ ನಿರ್ವಹಣೆಗೆ ತನ್ನ ಮೂರನೇ ಒಂದು ಭಾಗದಷ್ಟು ಕೊಡುಗೆಯನ್ನು ಗ್ರಾಹಕರಿಂದ ಸಂಗ್ರಹಿಸಬೇಕು ಎಂದು ನಿರ್ದೇಶನವನ್ನು ಹೊರಡಿಸಿತು.
ಅದೇನೇ ಆಗಲಿ ಈ ನಿರ್ಧಾರ ಸಾರ್ವಜನಿಕರಿಗೆ ಹೊರೆಯಾಗಲಿದೆ. ಇದನ್ನು ಸರ್ಕಾರದ ಆರ್ಥಿಕ ತಂತ್ರ ಎಂದರೂ ತಪ್ಪೇನಿಲ್ಲ. ಯಾಕೆಂದರೆ ಸರ್ಕಾರ ಪಿಂಚಣಿ ಮತ್ತು ಗ್ರಾಚುಟಿಗೆ ಹಣ ಮೀಸಲಿಡದೆ, ಅದನ್ನು ಜನತೆಗೇ ಹೊರೆಹಾಕುವ ಹೊಸ ವಿಧಾನವನ್ನು ಅನುಸರಿಸಿದೆ. ಪ್ರತ್ಯೇಕ ಬಜೆಟ್ ಮೀಸಲಿಡುವ ಬದಲು, ಜನರಿಂದಲೇ ವಸೂಲಿ ಮಾಡುತ್ತಿರುವುದು ಖಂಡನೀಯ ಅಂತಲೂ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.


Click it and Unblock the Notifications